Pawan Kalyan: ಬಂದೂಕು ಹಿಡಿದು, ನಕ್ಸಲ್ ಆಗ್ತಿದ್ರಾ ಪವನ್ ಕಲ್ಯಾಣ್? ‘ಪವರ್ ಸ್ಟಾರ್’ರನ್ನು ತಡೆದು ನಿಲ್ಲಿಸಿದ್ದು ಯಾರು? | | ACTPnews

News18


Last Updated:

1980ರ ದಶಕದಲ್ಲಿದ್ದ ಜಾಗತಿಕ ಅಶಾಂತಿ ಮತ್ತು ಅನ್ಯಾಯಗಳು ತಮ್ಮಲ್ಲಿ ತೀವ್ರ ಕೋಪವನ್ನು ಉಂಟು ಮಾಡಿದ್ದವು ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಅಮೆರಿಕ-ರಷ್ಯಾ ನಡುವಿನ ಶೀತಲ ಸಮರ, ಭಾರತದಲ್ಲಿ ತಲ್ಲಣ ಮೂಡಿಸಿದ್ದ ಖಲಿಸ್ತಾನಿ ಉಗ್ರಗಾಮಿತ್ವ ಹಾಗೂ ನೆರೆಯ ಶ್ರೀಲಂಕಾದ ಎಲ್‌ಟಿಟಿಇ (LTTE) ಚಳುವಳಿಯ ಪರಿಣಾಮಗಳು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದ್ದವಂತೆ.

News18
News18

ಆಂಧ್ರಪ್ರದೇಶದ ಉಪಮುಖ್ಯಮಂತ್ರಿ (Andhra Pradesh DCM) ಹಾಗೂ ತೆಲುಗು ಸ್ಟಾರ್ ನಟ ಪವನ್ ಕಲ್ಯಾಣ್ (Pawan Kalyan) ಅವರು ಚಿತ್ರರಂಗಕ್ಕೆ ಬರುವ ಮುನ್ನ ಸಂಪೂರ್ಣ ಬೇರೆಯದೇ ವೃತ್ತಿ ಮಾರ್ಗವನ್ನು ಆಯ್ದುಕೊಳ್ಳಲು ಯೋಚಿಸಿ, ನಕ್ಸಲೈಟ್ ಆಗಬೇಕೆಂದುಕೊಂಡು ಕೆಲವು ಸಾರ್ವಜನಿಕ ಸಭೆಗಳಲ್ಲಿ ಭಾಗವಹಿಸುತ್ತಿದ್ದರಂತೆ. ಇನ್ನೇನು ಅದರಲ್ಲೇ ತಮ್ಮನ್ನು ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಳ್ಳುತ್ತಾರೆ ಎನ್ನುವಷ್ಟರಲ್ಲೇ ಅವರ ಅಣ್ಣ ಚಿರಂಜೀವಿ (Megastar Chiranjeevi) ಅವರು ತಡೆದು ಚಿತ್ರರಂಗದತ್ತ ಮುಖ ಮಾಡುವಂತೆ ಮಾಡಿದರು ಎಂದು ಸ್ಮಿತಾ ಪ್ರಕಾಶ್ ಅವರ ಜೊತೆಗಿನ ಪಾಡ್‌ಕ್ಯಾಸ್ಟ್‌ನಲ್ಲಿ ಹಂಚಿಕೊಂಡಿದ್ದಾರೆ.

17ರ ಹರೆಯದಲ್ಲಿ ನಕ್ಸಲ್ ಆಗಲು ಬಯಸಿದ್ದ ಪವನ್ ಕಲ್ಯಾಣ್

ಸ್ಮಿತಾ ಪ್ರಕಾಶ್ ಅವರೊಂದಿಗಿನ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಹದಿಹರೆಯದ ದಿನಗಳನ್ನು ನೆನಪಿಸಿಕೊಂಡ ಪವನ್ ಕಲ್ಯಾಣ್, 1980ರ ದಶಕದಲ್ಲಿದ್ದ ಜಾಗತಿಕ ಅಶಾಂತಿ ಮತ್ತು ಅನ್ಯಾಯಗಳು ತಮ್ಮಲ್ಲಿ ತೀವ್ರ ಕೋಪವನ್ನು ಉಂಟು ಮಾಡಿದ್ದವು ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದ ವರ್ಣಭೇದ ನೀತಿ, ಅಮೆರಿಕ-ರಷ್ಯಾ ನಡುವಿನ ಶೀತಲ ಸಮರ, ಭಾರತದಲ್ಲಿ ತಲ್ಲಣ ಮೂಡಿಸಿದ್ದ ಖಲಿಸ್ತಾನಿ ಉಗ್ರಗಾಮಿತ್ವ ಹಾಗೂ ನೆರೆಯ ಶ್ರೀಲಂಕಾದ ಎಲ್‌ಟಿಟಿಇ (LTTE) ಚಳುವಳಿಯ ಪರಿಣಾಮಗಳು ಅವರ ಮನಸ್ಸಿನ ಮೇಲೆ ಆಳವಾದ ಪ್ರಭಾವ ಬೀರಿದ್ದವು.

ಜಗತ್ತಿನ ಇಂತಹ ಪರಿಸ್ಥಿತಿಗಳಿಂದ ರೋಸಿಹೋಗಿದ್ದ ಅವರು, ಸಮಾಜದಲ್ಲಿ ಬದಲಾವಣೆ ತರಬೇಕೆಂಬ ಆಕ್ರೋಶದಿಂದಲೇ ಆರಂಭದಲ್ಲಿ ನಕ್ಸಲಿಸಂ ಸಿದ್ಧಾಂತಗಳತ್ತ ಆಕರ್ಷಿತರಾಗಿ ಕೆಲವು ಸಾರ್ವಜನಿಕ ಸಭೆಗಳಲ್ಲೂ ಭಾಗವಹಿಸಿದ್ದರು. ಆದರೆ ನಂತರ ಅವರ ಸಹೋದರ ಚಿರಂಜೀವಿ ಅವರು ಪವನ್ ಅವರನ್ನು ತಡೆದು ಆ ಮಾರ್ಗದಿಂದ ದೂರವಿಟ್ಟು ಚಿತ್ರರಂಗದ ಕಡೆಗೆ ಕರೆತಂದರು ಎಂದು ಹಂಚಿಕೊಂಡಿದ್ದಾರೆ.

ಹದಿಹರೆಯದಲ್ಲಿ ನಕ್ಸಲ್‌ ಆಗುವ ಆಸೆ

ನಾನು ಹದಿಹರೆಯದ ವಯಸ್ಸಿನಲ್ಲಿ ನಕ್ಸಲೈಟ್‌ಗಳಿಂದ ಬಹಳ ಪ್ರೇರೇಪಿತನಾಗಿದ್ದೆ. ಒಂದು ಸಮಯದಲಿ ನಾನು ಬಂದೂಕನ್ನು ಹಿಡಿದುಕೊಂಡು ನಕ್ಸಲ್ ಆಗಬೇಕೆಂದುಕೊಂಡಿದ್ದೆ, ಆದರೆ ಅಣ್ಣ ನನ್ನನ್ನು ತಡೆದು, ‘ಎಲ್ಲಿಂದ ನಿನಗೆ ಇಷ್ಟೊಂದು ಕೋಪ ಬರುತ್ತಿದೆ?’ ಎಂದು ಕೇಳಿದಾಗ ನಾನು ಅನ್ಯಾಯದ ಬಗ್ಗೆ ಮಾತನಾಡಿ, ‘ನಾವು ಇದನ್ನು ಮಾಡಬೇಕು, ಅದನ್ನು ಮಾಡಬೇಕು’ ಎಂದು ಹೇಳುತ್ತಿದ್ದೆ. ಅವರು ತುಂಬಾ ಚಿಂತಿತರಾಗಿ, ಕೊನೆಗೆ ನಾನು 17 ರಿಂದ 21 ವರ್ಷವಿರುವಾಗ ಇದು ನಿಂತಿತು ಎಂದು ಪವನ್ ಕಲ್ಯಾಣ್ ಹಂಚಿಕೊಂಡಿದ್ದಾರೆ.

ಅಣ್ಣನಿಂದ ಬದಲಾಯ್ತು ಜೀವನ

ಪವನ್ ಕಲ್ಯಾಣ್ ಅವರು ನಕ್ಸಲಿಸಂನ ಕಡೆಗೆ ಆಕರ್ಷಿತರಾಗಿದ್ದರು ಮತ್ತು ಇದೇ ಪರಿಹಾರ ಎಂದು ಭಾವಿಸಿದ್ದರು. ಯಾರೂ ಗುರುತಿಸದ ವಿದ್ಯಾರ್ಥಿಗಳೊಂದಿಗೆ ಜನಸಭೆಗಳಿಗೆ ಹಾಜರಾಗುತ್ತಿದ್ದರು. ಕಿರುಚಿತ್ರೋತ್ಸವಗಳಲ್ಲಿ ಭಾಗವಹಿಸಲು ಮತ್ತು ಸಾಕ್ಷ್ಯಚಿತ್ರಗಳನ್ನು ಮಾಡಲು ಮುಂಬೈಗೆ ಹೋಗುತ್ತಿದ್ದರು. ಈಗ ನಟ-ರಾಜಕಾರಣಿ ತಾನು ‘ಪ್ರಯೋಗ’ ಮಾಡುತ್ತಿದ್ದೇನೆ ಎಂದು ಒಪ್ಪಿಕೊಂಡರು. ಆದರೆ ಇದೆಲ್ಲದರ ಬಗ್ಗೆ ಅತೃಪ್ತಿ ಹೊಂದಿ, ಇದರಲ್ಲೇ ಸಿಕ್ಕಿಹಾಕಿಕೊಂಡಿದ್ದಾಗ ಮತ್ತು ಕೋಪಗೊಳ್ಳುತ್ತಿದ್ದಾಗ ನನ್ನ ಅಣ್ಣ ಇದರಿಂದ ಹೊರ ಬರಲು ಸಹಾಯ ಮಾಡಿದರು ಎಂದು ಹೇಳಿದರು.

ಒಂದು ಪ್ರಶ್ನೆಯಿಂದ ಬದಲಾಯ್ತು ಪವನ್‌ ಜೀವನ

ಈ ಸಮಯದಲ್ಲಿ ನನ್ನ ಸಹೋದರ ಚಿತ್ರರಂಗಕ್ಕೆ ಬಂದರು. ಅವರು ಒಂದೇ ಒಂದು ಮಾತು ಹೇಳಿದರು, ‘ನಿಮ್ಮ ಸಹೋದರ ಚಿರಂಜೀವಿ ಅಲ್ಲದಿದ್ದರೆ, ನಿನ್ನ ಕುಟುಂಬದ ಬಗ್ಗೆ ನಿನಗೆ ಜವಾಬ್ದಾರಿಗಳಿದ್ದರೆ. ನಿಮ್ಮ ಸಂಬಳ ಮತ್ತು ಕಠಿಣ ಪರಿಶ್ರಮದ ಆಧಾರದ ಮೇಲೆ ಯಾರಾದರೂ ನಿಮ್ಮ ಮೇಲೆ ಅವಲಂಬಿತರಾಗಿದ್ದರೆ. ನೀವು ಅದೇ ಕೆಲಸವನ್ನು ಮಾಡುತ್ತೀರಾ?’ ಎಂದು ಪ್ರಶ್ನಿಸಿದ್ದರು. ಆದರೆ ಅದಕ್ಕೆ ನನ್ನಲ್ಲಿ ಉತ್ತರವಿರಲಿಲ್ಲ, ನಾನು ಸುಮ್ಮನಿದ್ದೆ,’ ಎಂದು ಪವನ್ ಹೇಳಿದ್ದಾರೆ. ನಂತರ ನಟನಾ ತರಗತಿಗಳಿಗೆ ಹೋಗುವ ಮೊದಲು ಆಧ್ಯಾತ್ಮಿಕತೆಯತ್ತ ತಿರುಗಿದೆ ಎಂದು ಡಿಸಿಎಂ ಪವನ್ ಕಲ್ಯಾಣ್ ಪಾಡ್‌ಕ್ಯಾಸ್ಟ್‌ನಲ್ಲಿ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ.

ಪವನ್ ಕಲ್ಯಾಣ್ ವೃತ್ತಿಜೀವನ

1996ರಲ್ಲಿ “ಅಕ್ಕಡ ಅಮ್ಮೈ ಇಕ್ಕಡ ಅಬ್ಬೈ “ಎಂಬ ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದರು. 1998ರಲ್ಲಿ ಬಂದ “ತೊಲಿ ಪ್ರೇಮ” ಎಂಬ ಚಿತ್ರವು ಇವರ ಮೊದಲ ಸೂಪರ್ ಹಿಟ್ ಸಿನಿಮಾವಾಗಿದೆ. ಅವರು ಕೊನೆಯದಾಗಿ 2024ರಲ್ಲಿ ಹರಿ ಹರ ವೀರ ಮಲ್ಲು ಮತ್ತು ದೆ ಕಾಲ್ ಹಿಮ್ ಒಜಿ ಹಾಗೂ ಈ ವರ್ಷ ಉಸ್ತಾದ್ ಭಗತ್ ಸಿಂಗ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಆಂಧ್ರ ಪ್ರದೇಶ ಡಿಸಿಎಂ ಆಗಿರುವ ಪವನ್ ಕಲ್ಯಾಣ್ ಅವರು, ಮುಂದಿನ ದಿನಗಳಲ್ಲಿ ಸಿನಿಮಾ ರಂಗದಲ್ಲಿ ಮುಂದುವರಿಯುತ್ತಾರಾ ಎಂಬ ಬಗ್ಗೆ ಯಾವುದೇ ಸ್ಪಷ್ಟನೆ ನೀಡಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed