ಮುಂಬೈನ ಮಂಖುರ್ಡ್ನ ಜನತಾ ನಗರ ಪ್ರದೇಶದಲ್ಲಿ ಹಳೆಯ ಮೂರು ಅಂತಸ್ತಿನ ಕಟ್ಟಡದ ಒಂದು ಭಾಗ ಕುಸಿದು ಕನಿಷ್ಠ ಆರು ಜನರು ಸಾವನ್ನಪ್ಪಿದ್ದಾರೆ. ಈ ಘಟನೆಯಲ್ಲಿ ಒಬ್ಬರು ಗಾಯಗೊಂಡಿದ್ದಾರೆ ಅಂತ ನ್ಯೂಸ್ 18 ವರದಿ ಮಾಡಿದೆ.
ಜನತಾ ನಗರದ ಹನುಮಾನ್ ದೇವಸ್ಥಾನದ ಹಿಂದೆ ರಾತ್ರಿ 8.30 ರ ಸುಮಾರಿಗೆ ಈ ಘಟನೆ ನಡೆದಿದ್ದು, ಕಟ್ಟಡ ಸಂಖ್ಯೆ 5 ರ ಎರಡರಿಂದ ಮೂರು ವಸತಿ ಘಟಕಗಳನ್ನು ಒಳಗೊಂಡಿರುವ ಒಂದು ಭಾಗವು ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ. ಪರಿಣಾಮ 6 ಮಂದಿ ಸಾವನ್ನಪ್ಪಿದ್ದಾರೆ.
ಮುಂಬೈನಲ್ಲಿ ಈಗ ಮಾನ್ಸೂನ್ ಪೂರ್ಣ ಪ್ರಮಾಣದಲ್ಲಿ ಆರಂಭವಾಗಿದ್ದು, ಹವಾಮಾನ ವೈಪರೀತ್ಯವು ಮಹಾನಗರದ ವೇಗಕ್ಕೆ ಮತ್ತೊಮ್ಮೆ ಬ್ರೇಕ್ ಹಾಕಿದೆ. ಭಾರತ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಆರೆಂಜ್ ಅಲರ್ಟ್ ನೀಡಿದೆ. ಈ ಹಿನ್ನೆಲೆಯಲ್ಲಿ ಮುಂಬೈ, ಥಾಣೆ ಮತ್ತು ಪಾಲ್ಘರ್ನಲ್ಲಿರುವ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಪುರಸಭೆ ನಡೆಸುವ ಶಾಲೆಗಳು ಮತ್ತು ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹವಾಮಾನ ಇಲಾಖೆಯು ಭಾರೀ ಗಾಳಿ ಮಳೆಯ ಮುನ್ಸೂಚನೆ ನೀಡಿದ್ದು, ಲಕ್ಷಾಂತರ ವಿದ್ಯಾರ್ಥಿಗಳ ಸುರಕ್ಷತೆಯನ್ನು ಪ್ರಮುಖ ಆದ್ಯತೆಯನ್ನಾಗಿ ಮಾಡಿದೆ. ಬೃಹನ್ ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ನಾಗರಿಕರು ತಮ್ಮ ಮನೆಗಳಿಂದ ತೀರಾ ಅಗತ್ಯವಿದ್ದಾಗ ಮಾತ್ರ ಹೊರಗೆ ಹೋಗಬೇಕೆಂದು ಮತ್ತು ಆಡಳಿತ ಹೊರಡಿಸಿದ ಮಾರ್ಗಸೂಚಿಗಳನ್ನು ಅನುಸರಿಸಬೇಕೆಂದು ಮನವಿ ಮಾಡಿದೆ. ಆದಾಗ್ಯೂ, ಸರ್ಕಾರಿ ಮತ್ತು ಖಾಸಗಿ ಕಚೇರಿಗಳು ಎಂದಿನಂತೆ ತೆರೆದಿರುತ್ತವೆ.
ಮುಂಬೈ ಮತ್ತು ಅದರ ನೆರೆಯ ನಗರಗಳಲ್ಲಿ ರಾತ್ರಿಯಿಡೀ ಸುರಿದ ಧಾರಾಕಾರ ಮಳೆ ಭಾನುವಾರ ಬೆಳಿಗ್ಗೆ ಸ್ವಲ್ಪ ನಿಧಾನವಾಯಿತು. ಆದಾಗ್ಯೂ, ಭಾರತ ಹವಾಮಾನ ಇಲಾಖೆ (ಐಎಂಡಿ) ಕೆಲವು ಸ್ಥಳಗಳಲ್ಲಿ ನಿರಂತರ ಭಾರೀ ಮಳೆ ಮತ್ತು ಅತಿ ಹೆಚ್ಚು ಮಳೆಯಾಗುವ ಬಗ್ಗೆ ‘ರೆಡ್ ಅಲರ್ಟ್’ ಎಚ್ಚರಿಕೆ ನೀಡಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಹವಾಮಾನ ಇಲಾಖೆಯ ಮುನ್ಸೂಚನೆಯನ್ನು ಗಮನದಲ್ಲಿಟ್ಟುಕೊಂಡು, ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ (ಬಿಎಂಸಿ) ಜನರು ಜಾಗರೂಕರಾಗಿರಲು ಮತ್ತು ತೀರಾ ಅಗತ್ಯವಿದ್ದರೆ ಮಾತ್ರ ತಮ್ಮ ಮನೆಗಳಿಂದ ಹೊರಬರಲು ಮನವಿ ಮಾಡಿದೆ. ಕಳೆದ 24 ಗಂಟೆಗಳಲ್ಲಿ, ಮುಂಬೈನ ಅನೇಕ ಪ್ರದೇಶಗಳಲ್ಲಿ 200 ಮಿ.ಮೀ ಗಿಂತ ಹೆಚ್ಚು ಮಳೆ ದಾಖಲಾಗಿದ್ದರೆ, ಕೆಲವು ಸ್ಥಳಗಳಲ್ಲಿ 300 ಮಿ.ಮೀ ಗಿಂತ ಹೆಚ್ಚು ಮಳೆಯಾಗಿದೆ.
ಬಿಎಂಸಿ ಸಾರ್ವಜನಿಕರಿಗೆ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮತ್ತು ಯಾವುದೇ ತುರ್ತು ಸಂದರ್ಭದಲ್ಲಿ ತಕ್ಷಣದ ಸಹಾಯಕ್ಕಾಗಿ ಬಿಎಂಸಿ ಸಹಾಯವಾಣಿಯನ್ನು ಸಂಪರ್ಕಿಸುವಂತೆ ಮನವಿ ಮಾಡಿದೆ. ತಗ್ಗು ಪ್ರದೇಶ ಮತ್ತು ಕರಾವಳಿ ಪ್ರದೇಶಗಳಲ್ಲಿ ವಾಸಿಸುವ ಜನರು, ವಿಶೇಷವಾಗಿ ಜಾಗರೂಕರಾಗಿರಲು ಪುರಸಭೆ ಸೂಚಿಸಿದೆ. ಹವಾಮಾನ ಇಲಾಖೆಯ ಪ್ರಕಾರ, ಭಾನುವಾರ ಮಧ್ಯಾಹ್ನ 3:22 ಕ್ಕೆ 4.19 ಮೀಟರ್ ಎತ್ತರ ಅಲೆಗಳು ಮತ್ತು ಸೋಮವಾರ ಬೆಳಗಿನ ಜಾವ 3:41 ಕ್ಕೆ 3.51 ಮೀಟರ್ ಎತ್ತರ ಅಲೆಗಳು ಬೀಸುವ ನಿರೀಕ್ಷೆಯಿದೆ.
ನಗರದ ಹಲವಾರು ಪ್ರದೇಶಗಳಲ್ಲಿ 12 ಗಂಟೆಗಳಲ್ಲಿ ಸುಮಾರು 200 ಮಿಮೀ ಮಳೆಯಾಗಿದ್ದು, ತಗ್ಗು ಪ್ರದೇಶಗಳಲ್ಲಿ ನೀರು ನಿಂತಿದೆ. ಭಾರೀ ಮಳೆಯಿಂದಾಗಿ ರಸ್ತೆಗಳು ಕುಸಿದವು, ಮರಗಳು ಉರುಳಿದವು, ಮನೆಗಳು ಕುಸಿದವು ಮತ್ತು ರಸ್ತೆ ಮತ್ತು ರೈಲು ಸಂಚಾರ ತೀವ್ರವಾಗಿ ಅಸ್ತವ್ಯಸ್ತವಾಯಿತು. ಥಾಣೆ, ಪಾಲ್ಘರ್, ನವಿ ಮುಂಬೈ ಮತ್ತು ಪುಣೆ ಪ್ರದೇಶಗಳಲ್ಲಿ ನಿರಂತರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಭೂಕುಸಿತ ಮತ್ತು ನೀರು ಹರಿಯುವಿಕೆಯಿಂದಾಗಿ ಹಲವಾರು ರಸ್ತೆಗಳು ಮುಚ್ಚಿಹೋಗಿವೆ, ಪ್ರವಾಹ ಪೀಡಿತ ಪ್ರದೇಶಗಳಿಂದ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.












