Last Updated:
Gujarat: ಗುಜರಾತ್ನ ಮೆಹ್ಸಾನಾದ ನುಗರ್ ಗ್ರಾಮದ ಪಾಟೀದಾರ್ ಜ್ಯೂಸ್ ಸೆಂಟರ್ ಮೇಲೆ ಆಹಾರ ಇಲಾಖೆ ದಾಳಿ ನಡೆಸಿ 2025 ಕೆಜಿ ಹುಳು ತಿಂದ ಕೊಳೆತ ಮಾವು ಮತ್ತು 230 ಕೆಜಿ ಸಿದ್ಧ ಮಾವಿನ ರಸವನ್ನು ವಶಪಡಿಸಿಕೊಂಡು ನಾಶಪಡಿಸಿದೆ. ಆಹಾರ ಅಧಿಕಾರಿ ವಿ ಜೆ ಚೌಧರಿ ನೇತೃತ್ವದ ಕಾರ್ಯಾಚರಣೆಯ ಸಂಪೂರ್ಣ ವಿವರ.
ಮೆಹ್ಸಾನಾ (ಗುಜರಾತ್): ಬೇಸಿಗೆ ಬಂದ್ರೆ ಸಾಕು, ಮಾವಿನ ಹಣ್ಣಿನ ಜ್ಯೂಸ್ (Mango Juice) ಕುಡಿಯದವರೇ ಇಲ್ಲ! ಆದರೆ ಆ ಸಿಹಿ ರುಚಿಯ ಹಿಂದೆ ಏನಿರಬಹುದು ಅಂತ ತಿಳಿದ್ರೆ ಗಂಟಲು ಒಣಗಿ ಹೋಗುತ್ತೆ. ಯಾಕಂದ್ರೆ, ಗುಜರಾತ್ (Gujarat) ಮೆಹ್ಸಾನಾದ (Mehsana) ನುಗರದ ಪ್ರಸಿದ್ಧ ‘ಪಾಟೀದಾರ್ ಜ್ಯೂಸ್ ಸೆಂಟರ್’ (Patidar Juice Center) ಗೋಡೌನ್ ಮೇಲೆ ಆಹಾರ ಇಲಾಖೆ ದಾಳಿ ನಡೆಸಿದಾಗ ಬೆಚ್ಚಿಬೀಳಿಸುವ ಸತ್ಯ ಬಯಲಾಯಿತು. ಅದುವೇ, ಕೀಟಗಳು ತುಂಬಿದ ಕೊಳೆತ ಮಾವು, ಕೆಟ್ಟ ಮಾವಿನ ಹಣ್ಣಿನ ರಸದ ಟ್ಯಾಂಕ್ಗಳೇ ತುಂಬಿದ್ದವು. ಅದರಂತೆ, ಲಾಭದ ಆಸೆಗೆ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಿದ ಈ ಘಟನೆ, ಪ್ಯಾಕೇಜ್ಡ್ ಮ್ಯಾಂಗೋ ಪಲ್ಪ್ನ ಸುರಕ್ಷತೆ ಬಗ್ಗೆ ದೊಡ್ಡ ಪ್ರಶ್ನೆ ಎಬ್ಬಿಸಿದೆ. ಆ ಕುರಿತ ವರದಿ ಇಲ್ಲಿದೆ…
ಪಾಟೀದಾರ್ ಜ್ಯೂಸ್ ಸೆಂಟರ್ನ ಗೋದಾಮಿನಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಮತ್ತು ಕೊಳೆತು ನಾರುತ್ತಿದ್ದ ಮಾವಿನ ಹಣ್ಣುಗಳಿಂದ ರಸವನ್ನು ತಯಾರಿಸಿ ಮಾರುಕಟ್ಟೆಗೆ ಸಪ್ಲೈ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಆಹಾರ ಸುರಕ್ಷತಾ ಇಲಾಖೆಗೆ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಆಹಾರ ಸುರಕ್ಷತಾ ಅಧಿಕಾರಿ ವಿ. ಜೆ. ಚೌಧರಿ ನೇತೃತ್ವದ ವಿಶೇಷ ತಂಡವು ನುಗರ್ ಗ್ರಾಮದ ಬಳಿಯಿರುವ ಗೋಡೌನ್ ಮೇಲೆ ಸಡನ್ ರೈಡ್ ಮಾಡಿತು. ಅದರಂತೆ, ಅಲ್ಲಿ ರಸ ತೆಗೆಯಲು ಸಂಗ್ರಹಿಸಿಡಲಾಗಿದ್ದ ಹಣ್ಣುಗಳ ಸ್ಥಿತಿಯನ್ನು ಕಂಡು ಸ್ವತಃ ತನಿಖಾಧಿಕಾರಿಗಳೇ ಒಂದು ಕ್ಷಣ ದಿಗ್ಭ್ರಮೆಗೊಂಡರು.
ಹೌದು, ಅಧಿಕಾರಿಗಳ ತಂಡ ಪಾಟೀದಾರ್ ಜ್ಯೂಸ್ ಸೆಂಟರ್ ಪ್ರವೇಶಿಸಿ ಅಲ್ಲಿ ಗೋಡೌನ್ನಲ್ಲಿ ಇಡಲಾಗಿದ್ದ ಮಾವಿನ ಹಣ್ಣುಗಳನ್ನು ಪರಿಶೀಲಿಸಿದಾಗ ಸ್ವತಃ ಅಧಿಕಾರಿಗಳೇ ದಂಗಾಗುವಂತಹ ಆಘಾತಕಾರಿ ದೃಶ್ಯ ಕಂಡುಬಂದಿದೆ. ಅದರಂತೆ, ಜ್ಯೂಸ್ ಮಾಡಲು ಇರಿಸಲಾಗಿದ್ದ ಮಾವಿನ ಹಣ್ಣುಗಳು ಸಂಪೂರ್ಣವಾಗಿ ಕೊಳೆತು ವಾಸನೆ ಬೀರಲಾರಂಭಿಸಿದ್ದವು.
ಅಷ್ಟೇ ಅಲ್ಲದೆ, ಹಣ್ಣಿನೊಳಗೆ ಜೀವಂತ ಹುಳುಗಳು ಹರಿದಾಡುತ್ತಿದ್ದದ್ದು ತಪಾಸಣೆ ವೇಳೆ ಸ್ಪಷ್ಟವಾಗಿ ಕಂಡುಬಂದಿದೆ. ಇಂತಹ ಅತ್ಯಂತ ಕಳಪೆ ಗುಣಮಟ್ಟದ ಹಾಗೂ ಮನುಷ್ಯರು ತಿನ್ನಲು ಯಾವುದೇ ಕಾರಣಕ್ಕೂ ಯೋಗ್ಯವಲ್ಲದ ಸುಮಾರು 2025 ಕೆಜಿಯಷ್ಟು ಮಾವಿನ ಹಣ್ಣುಗಳನ್ನು ಅಧಿಕಾರಿಗಳು ತಕ್ಷಣವೇ ವಶಕ್ಕೆ ಪಡೆದರು. ಅದರಂತೆ, ಕೇವಲ ಹಣ ಮಾಡುವ ಉದ್ದೇಶದಿಂದ ಸಾರ್ವಜನಿಕರ ಆರೋಗ್ಯದ ಜೊತೆ ಆಟವಾಡುತ್ತಿದ್ದ ಜ್ಯೂಸ್ ಸೆಂಟರ್ ಮಾಲೀಕರ ವಿರುದ್ಧ ಆಡಳಿತ ಕಠಿಣ ಕ್ರಮಕ್ಕೆ ಮುಂದಾಗಿದೆ.
ಮಾಧ್ಯಮ ವರದಿಗಳ ಪ್ರಕಾರ, ದಾಳಿಯ ವೇಳೆ ಕೇವಲ ಕಚ್ಚಾ ಹಣ್ಣು ಮಾತ್ರವಲ್ಲ, ಈಗಾಗಲೇ ತಯಾರಿಸಿ ಡ್ರಮ್ಗಳಲ್ಲಿ ಸಂಗ್ರಹಿಸಿಟ್ಟಿದ್ದ ಸುಮಾರು 230 ಕೆಜಿ ಮಾವಿನ ರಸವೂ ಪತ್ತೆಯಾಗಿದೆ. ಈ ರಸವನ್ನು ಯಾವುದೇ ಸ್ವಚ್ಛತೆಯಿಲ್ಲದ ಪಾತ್ರೆಗಳಲ್ಲಿ ಇಡಲಾಗಿತ್ತು ಮತ್ತು ಅದರ ಬಣ್ಣ ಹಾಗೂ ವಾಸನೆ ಬದಲಾಗಿತ್ತು. ಆಹಾರ ಸುರಕ್ಷತಾ ಮಾನದಂಡಗಳ ಪ್ರಕಾರ ಇದು ವಿಷಕಾರಿ ಎಂದು ಅಧಿಕಾರಿಗಳು ಹೇಳಿದ್ದಾರೆ. ಇಂತಹ ರಸ ಕುಡಿದರೆ ವಾಂತಿ, ಭೇದಿ, ಫುಡ್ ಪಾಯ್ಸನ್ ಮತ್ತು ದೀರ್ಘಕಾಲದ ಹೊಟ್ಟೆ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಹೆಚ್ಚು.
ಮುಂದುವರೆದು, ಆಹಾರ ಅಧಿಕಾರಿ ವಿ ಜೆ ಚೌಧರಿ ಅವರ ಸೂಚನೆಯ ಮೇರೆಗೆ ತಂಡವು ಜೆಸಿಬಿ ಯಂತ್ರದ ಸಹಾಯದಿಂದ ದೊಡ್ಡ ಗುಂಡಿ ತೋಡಿತು. ವಶಪಡಿಸಿಕೊಂಡ 2025 ಕೆಜಿ ಕೊಳೆತ ಮಾವು ಮತ್ತು 230 ಕೆಜಿ ರಸವನ್ನು ಅದರಲ್ಲಿ ಹಾಕಿ ರಾಸಾಯನಿಕ ಸಿಂಪಡಿಸಿ ಸಂಪೂರ್ಣ ನಾಶಪಡಿಸಲಾಯಿತು.
Jun 02, 2026 11:28 PM IST













