Last Updated:
ಹಿಂದಿನ ಜನ್ಮದಲ್ಲಿ ನಾನು ಭಾರತೀಯಳಾಗಿದ್ದೆ ಎಂದು ನನಗೆ ಅನಿಸುತ್ತದೆ ಎಂದು ಹಿಂದೂ ಸಂಸ್ಕೃತಿಯನ್ನು ಇಷ್ಟಪಡುವ ಮತ್ತು ಕುಂಭಮೇಳಕ್ಕೆ ಮೊದಲ ಬಾರಿಗೆ ಇಟಲಿಯಿಂದ ಭೇಟಿ ನೀಡಿದ ಎಮ್ಮಾ ಅವರು ಅಭಿಪ್ರಾಯಪಟ್ಟಿದ್ದಾರೆ.
ಪ್ರಯಾಗ್ರಾಜ್: ಐತಿಹಾಸಿಕ ಮಹಾ ಕುಂಭಮೇಳಕ್ಕೆ (Maha Kumbh Mela) ಪ್ರಯಾಗ್ರಾಜ್ (Prayagraj) ನಗರದಲ್ಲಿ ಚಾಲನೆ ದೊರೆತಿದೆ. 144 ವರ್ಷಗಳ ನಂತರ ಅಪರೂಪ ಘಳಿಗೆಯಲ್ಲಿ ನಡೆಯುತ್ತಿರುವ ಅತ್ಯಂತ ಅಪರೂಪದ ಕುಂಭಮೇಳ ಇದಾಗಿದ್ದು ಈ ಬಾರಿ ಮಹಾಕುಂಭ ಮೇಳ ವಿಶೆಷ ಎನಿಸಿಕೊಂಡಿದೆ. ಕುಂಭಮೇಳ ವಿಶ್ವದ ಅತಿದೊಡ್ಡ ಧಾರ್ಮಿಕ (the world’s largest religious festival) ಮತ್ತು ಸಾಂಸ್ಕೃತಿಕ ಸಭೆಯಾಗಿದ್ದು, ಇದನ್ನು ಪ್ರತಿ 12 ವರ್ಷಗಳಿಗೊಮ್ಮೆ ಭಾರತದ ನಾಲ್ಕು ಪವಿತ್ರ ಸ್ಥಳಗಳಲ್ಲಿ ಒಂದಾದ ಪ್ರಯಾಗ್ರಾಜ್, ಹರಿದ್ವಾರ, ಉಜ್ಜಯಿನಿ ಅಥವಾ ನಾಸಿಕ್ ಹೀಗೆ ನಡೆಸಲಾಗುತ್ತದೆ. ಈ ವರ್ಷ ಉತ್ತರ ಪ್ರದೇಶದ ಪ್ರಯಾಗ್ರಾಜ್ನಲ್ಲಿ ಕುಂಭಮೇಳ ನಡೆಯುತ್ತಿದೆ.
ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮವಾದ ತ್ರಿವೇಣಿ ಸಂಗಮದಲ್ಲಿ ಸ್ನಾನ ಮಾಡಲು ಪ್ರಪಂಚದಾದ್ಯಂತದ ಲಕ್ಷಾಂತರ ಭಕ್ತರು ಈ ಪವಿತ್ರ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸುತ್ತಿದ್ದಾರೆ. ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪಗಳು ಕಳೆದು ಮೋಕ್ಷ ಸಿಗುತ್ತದೆ ಎಂದು ನಂಬಲಾಗಿದೆ. 44 ದಿನಗಳ ಕಾಲ ನಡೆಯುವ ಮಹಾ ಕುಂಭಮೇಳ ಇಂದು 2025 ಜನವರಿ 13 ರಂದು ಪ್ರಾರಂಭವಾಗಿ ಫೆಬ್ರವರಿ 26 ರಂದು ಮಹಾ ಶಿವರಾತ್ರಿಯಂದು ಮುಕ್ತಾಯಗೊಳ್ಳುತ್ತದೆ.
“ಹಿಂದಿನ ಜನ್ಮದಲ್ಲಿ ನಾನು ಭಾರತೀಯಳಾಗಿದ್ದೆ ಎಂದು ನನಗೆ ಅನಿಸುತ್ತದೆ” ಎಂದು ಹಿಂದೂ ಸಂಸ್ಕೃತಿಯನ್ನು ಇಷ್ಟಪಡುವ ಮತ್ತು ಕುಂಭಮೇಳಕ್ಕೆ ಮೊದಲ ಬಾರಿಗೆ ಇಟಲಿಯಿಂದ ಭೇಟಿ ನೀಡಿದ ಎಮ್ಮಾ ಹೇಳಿದ್ದಾರೆ. ಇಟಲಿಯಿಂದ ಕುಂಭಮೇಳಕ್ಕೆ ಮೊದಲ ಬಾರಿಗೆ ಮೂವರು ಸ್ನೇಹಿತರು ಒಗ್ಗೂಡಿ ಬಂದಿದ್ದಾರೆ. ಅದರಲ್ಲಿ ಎಮ್ಮಾ ಎಂಬುವವರು ಮಾತನಾಡಿ “ಮಹಾ ಕುಂಭಕ್ಕೆ ನಾನು ಭೇಟಿ ನೀಡುತ್ತಿರುವುದು ಇದೇ ಮೊದಲು, ನಾನು ಯೋಗ ಶಿಕ್ಷಕಿ, ಮತ್ತು ನನ್ನ ಅನೇಕ ಸ್ನೇಹಿತರು ಭಾರತೀಯರು. ನಾನು ಭಾರತೀಯ ಸಂಸ್ಕೃತಿಯನ್ನು ತುಂಬಾ ಮೆಚ್ಚುತ್ತೇನೆ, ಮತ್ತು ನನ್ನ ಹಿಂದಿನ ಜನ್ಮದಲ್ಲಿ ನಾನು ಭಾರತೀಯನಾಗಿದ್ದೆ ಎಂಬ ಭಾವನೆ ನನಗಿದೆ.
ನನಗೆ ಭಾರತೀಯ ಸಂಗೀತ, ಭಜನೆಗಳು ಮತ್ತು ಕೀರ್ತನೆಗಳು ತುಂಬಾ ಇಷ್ಟ. ಇಲ್ಲಿ ಮಹಾ ಕುಂಭದಲ್ಲಿ ವ್ಯವಸ್ಥೆಗಳು ಅತ್ಯುತ್ತಮವಾಗಿವೆ” ಎಂದು ನದಿಯ ದಡದ ಶಿಬಿರದಲ್ಲಿ ತಂಗಿರುವ ಎಮ್ಮಾ ಹೇಳುತ್ತಾರೆ. “ನಾನು ಯೋಗ ಸಾಧಕ ಮತ್ತು ಭಾರತೀಯ ಸಂಸ್ಕೃತಿಯ ಬಗ್ಗೆ ಸ್ವಲ್ಪ ಜ್ಞಾನ ಹೊಂದಿದ್ದೇನೆ. ಕುಂಭಮೇಳವು ಸನಾತನ ಧರ್ಮದ ಅತಿದೊಡ್ಡ ಆಧ್ಯಾತ್ಮಿಕ ಕಾರ್ಯಕ್ರಮವಾಗಿದೆ ಮತ್ತು ಇದು ಇಲ್ಲಿಗೆ ನನ್ನ ಮೊದಲ ಭೇಟಿ. ನನ್ನ ಸ್ನೇಹಿತರು ಈ ಪ್ರವಾಸವನ್ನು ಯೋಜಿಸಿದಾಗ, ಕುಂಭಮೇಳ ಅನುಭವವನ್ನು ಪಡೆಯಲು ನಾನು ಅವರೊಂದಿಗೆ ಸೇರಲು ನಿರ್ಧರಿಸಿದೆ” ಎಂದು ಇಲಿಯಯ ಮತ್ತೊಬ್ಬ ಮಹಿಳೆ ಪಿಯೆಟ್ರೊ ಹೇಳುತ್ತಾರೆ.
ಟರ್ಕಿಶ್ ಪ್ರಜೆಯಾಗಿರುವ ಪಿನಾರ್ ಅನ್ನುವವರು ಕೂಡ, ಮೊದಲ ಬಾರಿಗೆ ಕುಂಭಮೇಳಕ್ಕೆ ಭೇಟಿ ನೀಡಿದ್ದು, ಹಣೆಯ ಮೇಲೆ ತಿಲಕ ಇಟ್ಟುಕೊಂಡು ಕುಂಭಮೇಳ ಸಮಾರಂಭವನ್ನು ಆನಂದಿಸುತ್ತಿದ್ದಾರೆ. ಅವರು ಗಂಗಾ ನದಿಯಲ್ಲಿ ಸ್ನಾನ ಮಾಡಿ ಅಲ್ಲಿನ ವಾತಾವರಣವನ್ನು “ದೈವಿಕ ಮತ್ತು ಭವ್ಯ” ಎಂದು ಬಣ್ಣಿಸಿದರು. “ಇದು ಮರೆಯಲಾಗದ ಅನುಭವ” ಎಂದು ಅವರು ಹೇಳಿದರು, ಈ ಭೇಟಿಯು ಅವರಿಗೆ ಭಾರತೀಯ ಸಂಪ್ರದಾಯಗಳ ಬಗ್ಗೆ ಆಳವಾದ ತಿಳುವಳಿಕೆಯನ್ನು ನೀಡಿತು ಎಂದು ಹೇಳಿದ್ದಾರೆ.
Allahabad,Uttar Pradesh
Jan 24, 2025 10:32 PM IST














