Last Updated:
ಪುಣೆಯಲ್ಲಿ ನಡೆದ ಕೇತನ್ ಅಗರ್ವಾಲ್ ಕೊಲೆ ಪ್ರಕರಣ ಇದೀಗ ದೇಶಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಪೊಲೀಸರು ಕೇತನ್ ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ನನ್ನು ಬಂಧಿಸಿ ತೀವ್ರ ವಿಚಾರಣೆ ನಡೆಸುತ್ತಿದ್ದು, ತನಿಖೆಯಲ್ಲಿ ಕೆಲವು ಸ್ಫೋಟಕ ಮಾಹಿತಿಗಳು ಹೊರಬರುತ್ತಿವೆ.
ಪುಣೆಯ ಗಹುಂಜೆ ಪ್ರದೇಶದ 26 ವರ್ಷದ ಉದ್ಯಮಿ ಕೇತನ್ (Ketan Agarwal) ವಿಶಾಲ್ ಅಗರ್ವಾಲ್ ಕೇಸ್ ರೋಚಕ ಹಂತಕ್ಕೆ ತಲುಪಿದೆ. ಮೊದಲಿಗೆ ಸಾಮಾನ್ಯ ಅಪಘಾತ ಎಂದು ಬಿಂಬಿತವಾಗಿದ್ದ ಕೇಸ್ ಇದೀಗ ಯಾವ ಮಟ್ಟಿಗೆ ಪ್ಲಾನ್ ಮಾಡಲಾಗಿತ್ತು ಎಂಬುದನ್ನು ಒಂದೊಂದಾಗಿ ಬಿಚ್ಚಿಡುತ್ತಿದೆ. ಕೇತನ್ ಭಾವಿ ಪತ್ನಿ ಸಿಯಾ (Siya) ಮತ್ತು ಆಕೆಯ ಪ್ರಿಯಕರ ಚೇತನ್ (Chethan) ಸೇರಿ ಮಾಡಿದ್ದ ಪ್ಲಾನ್ ಎಲ್ಲವೂ ಒಂದೊಂದಾಗಿ ಬಯಲಾಗುತ್ತಿದೆ. ಅವರು ಮಾಡಿದ ತಪ್ಪುಗಳು ಕೊಲೆಯ ರಹಸ್ಯವನ್ನು ಬಯಲು ಮಾಡಿದೆ.
ಜೂನ್ 18 ರಂದು ಲೋಹಗಢ ಕೋಟೆಯ ಆಳವಾದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದ್ದ ಕೇತನ್ ಸಾವು ಭಯಾನಕ ಕೊಲೆಯಾಗಿ ಬಯಲಾಗಿದೆ. ಕೇತನ್ ಅವರ ನಿಶ್ಚಿತಾರ್ಥ ಪತ್ನಿ ಸಿಯಾ ಗೋಯಲ್ (20) ಮತ್ತು ಅವಳ ಪ್ರೇಮಿ ಚೇತನ್ ಚೌಧರಿ (22) ಈ ಪಿತೂರಿಯ ಹಿಂದಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಕೇತನ್ ಕೊಲೆ ಮಾಡಲು ಸಿಯಾ ಮತ್ತು ಆಕೆಯ ಪ್ರಿಯಕರ ಚೇತನ್ ಮಾಡಿದ ಕೆಲಸ ಪೊಲೀಸರ ಮುಂದೆ ಬಯಲಾಗಿದೆ. ಅವರು ಮಾಡಿದ ಈ ಕೆಲ ತಪ್ಪುಗಳಿಂದ ಸಾಕ್ಷಿ ಸಮೇತ ಪೊಲೀಸರ ಮುಂದೆ ಲಾಕ್ ಆಗಿದ್ದಾರೆ. ಸದ್ಯ ಇಬ್ಬರು ಆರೋಪಿಗಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮಾಡುತ್ತಿದ್ದಾರೆ. ಇನ್ನೂ ಸ್ಫೋಟಕ ವಿಚಾರಗಳು ಬಯಲಾಗುವ ಸಾಧ್ಯತೆ ಇದೆ. ಹಾಗಾದ್ರೆ ಇವರು ಕೊಲೆಗೆ ಮಾಡಿದ್ದ ಪ್ಲಾನ್ ಏನು? ಪೊಲೀಸರಿಗೆ ಸಿಕ್ಕಿಬಿದ್ದದ್ದು ಹೇಗೆ? ಇಲ್ಲಿದೆ ನೋಡಿ.
ಲೋಹಗಢ ಕೋಟೆಯ ಟಿಕೆಟ್ ಕೌಂಟರ್ ಸಿಸಿಟಿವಿ ದೃಶ್ಯಗಳು ಪ್ರಕರಣ ಬಯಲು ಮಾಡುವಲ್ಲಿ ನಿರ್ಣಾಯಕವಾಯಿತು. ಜೂನ್ 18 ರಂದು ಬಿಸಿಲು 33 ಡಿಗ್ರಿ ಸೆಲ್ಸಿಯಸ್ ಇತ್ತು. ಆದರೆ ಒಬ್ಬ ಯುವಕ ಶಾರ್ಟ್ಸ್ ಮೇಲೆ ದಪ್ಪ ಹೂಡಿ ಧರಿಸಿ, ಕ್ಯಾಪ್ ಮತ್ತು ಹೆಡ್ಫೋನ್ ಹಾಕಿಕೊಂಡು ಕೇತನ್-ಸಿಯಾ ಹಿಂದೆ ನಡೆಯುತ್ತಿದ್ದದ್ದು ಕಂಡುಬಂದಿದೆ. ಸಿಯಾ ಹಿಂತಿರುಗಿ ನೋಡಿದಾಗ ಆತ ಕುಳಿತುಕೊಳ್ಳುವ ಪ್ರಯತ್ನ ಮಾಡಿದ್ದು ದೃಶ್ಯಗಳಲ್ಲಿ ಸ್ಪಷ್ಟವಾಗಿದೆ. ಈ ವಿಚಿತ್ರ ವರ್ತನೆಯಿಂದ ಪೊಲೀಸರ ಅನುಮಾನ ಹೆಚ್ಚಾಯಿತು.
ನಿಶ್ಚಿತಾರ್ಥದ ನಂತರ ಸಿಯಾ ಕೇತನ್ ಮೇಲೆ ಲೋಹಗಢ ಕೋಟೆಗೆ ಹೋಗುವ ಬಗ್ಗೆ ಒತ್ತಾಯ ಹೆಚ್ಚು ಮಾಡಿದ್ದಳು. ಕೇವಲ 15 ದಿನಗಳಲ್ಲಿ ನಾಲ್ಕು ಬಾರಿ ಕರೆದೊಯ್ದಿದ್ದಳು. ಮೇ 31ರಂದು ಮೊದಲ ಬಾರಿ, ಜೂನ್ 4ರಂದು ಎರಡನೇ ಬಾರಿ. ಜೂನ್ 14ರಂದು ಮೂರನೇ ಬಾರಿ ಕರೆದೊಯ್ದಾಗ ಸಿಯಾ ಕೇತನ್ ನನ್ನು ಬೆಟ್ಟದಿಂದ ತಳ್ಳಲು ಪ್ರಯತ್ನಿಸಿದಳು ಎಂದು ತಿಳಿದುಬಂದಿದ್ದು, ಆಗ ಕೇತನ್ ಪೊದೆ ಹಿಡಿದು ತಪ್ಪಿಸಿಕೊಂಡಿದ್ದಾನೆ ಎಂದು ಗೊತ್ತಾಗಿದೆ. ಯಾಕೆ ತಳ್ಳಿದ್ದು ಎಂದು ಪ್ರಶ್ನಿಸಿದಾಗ ‘ಹಾವು ಇತ್ತು, ನಿನ್ನನ್ನು ರಕ್ಷಿಸಿದೆ’ ಎಂದು ಸಿಯಾ ಸುಳ್ಳು ಹೇಳಿದ್ದಳು ಎಂಬುದು ಬೆಳಕಿಗೆ ಬಂದಿದೆ.
ಕೇತನ್ ಮತ್ತು ಸಿಯಾ ಅವರ ಪ್ರೀ- ವೆಡ್ಡಿಂಗ್ ಫೋಟೋಶೂಟ್ ಇಂಡೋನೇಷ್ಯಾದ ಬಾಲಿಯಲ್ಲಿ ಆಗಬೇಕಿತ್ತು. ಆದರೆ ಪ್ರವಾಸಕ್ಕೆ ಹೋಗುವ ಮುನ್ನ ಕೇತನ್ ಅವರ ಪಾಸ್ಪೋರ್ಟ್ ನಿಗೂಢವಾಗಿ ಕಾಣೆಯಾಯಿತು. ಇದರಿಂದ ಆತ ವಿಮಾನ ನಿಲ್ದಾಣದಿಂದ ಹಿಂದಿರುಗಬೇಕಾಯಿತು. ಪೊಲೀಸರ ಪ್ರಕಾರ, ಸಿಯಾ ಕೇತನ್ ನನ್ನು ಭಾರತದಲ್ಲೇ ಇರಿಸಿ ಕೊಲ್ಲುವ ಉದ್ದೇಶದಿಂದ ಪಾಸ್ಪೋರ್ಟ್ ಮರೆಮಾಡಿದ್ದಳು. ನವೆಂಬರ್ನಲ್ಲಿ ಉದಯಪುರದಲ್ಲಿ ಮದುವೆ ನಿಶ್ಚಯವಾಗಿತ್ತು ಎಂದು ತಿಳಿದುಬಂದಿದೆ.
ಕೇತನ್ ಅಂತ್ಯಕ್ರಿಯೆಯ ನಾಲ್ಕು ದಿನಗಳ ನಂತರ ಸಿಯಾ ಸಂತಾಪ ಸೂಚಿಸಲು ಮನೆಗೆ ಬಂದಾಗ, ಸಹೋದರಿ ಸಂಜನಾ ಅವಳನ್ನು ತೀಕ್ಷ್ಣ ಪ್ರಶ್ನೆಗಳನ್ನು ಕೇಳಿದ್ದಾರೆ. ಸಿಯಾ ನೀಡಿದ ಉತ್ತರಗಳು ತುಂಬಾ ವ್ಯತ್ಯಾಸವಾಗಿತ್ತು. ಇದರಿಂದ ಅನುಮಾನ ಬಂದ ಸಂಜನಾ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು ಫೋನ್ ದತ್ತಾಂಶ ಪರಿಶೀಲಿಸಿದಾಗ ಆಘಾತಕಾರಿ ಸತ್ಯ ಬಯಲಾಯಿತು. ಸಿಯಾ ಮತ್ತು ಚೇತನ್ ನಡುವೆ ಕಳೆದ ಆರು ತಿಂಗಳಲ್ಲಿ 2004 ಕರೆಗಳು, ಒಟ್ಟು 238 ಗಂಟೆಗಳ ಸಂಭಾಷಣೆ ನಡೆದಿತ್ತು. ಕೊಲೆಯ ದಿನಗಳಲ್ಲಿ ಅವರು ರಾತ್ರಿ ಇಡೀ ವೀಡಿಯೋ ಕರೆಗಳಲ್ಲಿ ಯೋಜನೆ ಹಾಕಿದ್ದು ಬಯಲಾಗಿದೆ.
ಚೇತನ್ ಜೂನ್ 18ರಂದು ಬೆಳಿಗ್ಗೆ 7 ರಿಂದ ಸಂಜೆ 5:40ರವರೆಗೆ ತನ್ನ ಫೋನ್ ಇಂಟರ್ನೆಟ್ ಸಂಪೂರ್ಣ ಆಫ್ ಮಾಡಿದ್ದ. ತನ್ನ ಫೋನ್ ಅಂಗಡಿಯಲ್ಲೇ ಬಿಟ್ಟು, ಉದ್ಯೋಗಿಯ ಫೋನ್ ಬಳಸಿ ಕೋಟೆಗೆ ಹೋಗಿದ್ದ. ಆದರೆ ಸಿಸಿಟಿವಿ, ಫೋನ್ ಸ್ಥಳ ಮತ್ತು ಇತರ ಪುರಾವೆಗಳು ಅವನನ್ನು ಸುಲಭವಾಗಿ ಗುರುತಿಸಿದ್ದಾರೆ.
ಈ ಪ್ರಕರಣ ಪ್ರೀತಿ, ವಂಚನೆ ಮತ್ತು ಕುಟುಂಬ ಗೌರವದ ಹೆಸರಿನಲ್ಲಿ ನಡೆಯುವ ಅಪರಾಧಗಳ ಭಯಾನಕ ಮುಖವನ್ನು ತೋರಿಸುತ್ತಿದೆ. ಡಿಜಿಟಲ್ ಪುರಾವೆಗಳು ಮತ್ತು ಸಿಸಿಟಿವಿ ಇಂದು ಅಪರಾಧಿಗಳನ್ನು ಹೇಗೆ ಬಯಲು ಮಾಡುತ್ತವೆ ಎಂಬುದಕ್ಕೆ ಇದು ಉದಾಹರಣೆಯಾಗಿದೆ.
Pune,Maharashtra
Jun 24, 2026 11:47 AM IST













