Last Updated:
ಐರ್ಲೆಂಡ್ ವಿರುದ್ಧದ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ ಸೋಲಿನ ಬಳಿಕ ತಂಡದ ಆಯ್ಕೆ ಮತ್ತು ಆಟಗಾರರ ಬಳಕೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಕೊಂಡಿದೆ.
ಐರ್ಲೆಂಡ್ (Ireland) ವಿರುದ್ಧದ ಟಿ20ಐ ಸರಣಿಯ ಮೊದಲ ಪಂದ್ಯದಲ್ಲಿ ಟೀಮ್ ಇಂಡಿಯಾ (Team India) 34 ರನ್ಗಳ ಹೀನಾಯ ಸೋಲನ್ನು ಅನುಭವಿಸಿತು. ಈ ಸೋಲು ಬ್ಯಾಟಿಂಗ್ನ ಕಳಪೆ ಪ್ರದರ್ಶನದಿಂದ ಮಾತ್ರವಲ್ಲ, ತಂಡದ ಆಯ್ಕೆ ಮತ್ತು ಆಟಗಾರರ ಬಳಕೆಯ ಬಗ್ಗೆ ಹಲವಾರು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇವರಲ್ಲಿ ಪ್ರಮುಖರು ವಾಷಿಂಗ್ಟನ್ ಸುಂದರ್ (Washington Sundar). ಭಾರತ ಟಿ20ಐ ತಂಡದಲ್ಲಿ ಅವರ ಪಾತ್ರದ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ.
ಕೆಲವೊಮ್ಮೆ ವಾಷಿಂಗ್ಟನ್ ಸುಂದರ್ ಅವರನ್ನು ಸ್ಪಿನ್ನರ್ ಎಂದು ಕರೆಯಲಾಗುತ್ತದೆ. ಕೆಲವೊಮ್ಮೆ ಅವರನ್ನು ಆಲ್ರೌಂಡರ್ ಆಗಿ ನೋಡಲಾಗುತ್ತದೆ. ಬೆಲ್ಫಾಸ್ಟ್ನಲ್ಲಿ ಇದೇ ರೀತಿಯ ಸನ್ನಿವೇಶವು ತೆರೆದುಕೊಂಡಿತು. ಹೀಗಾಗಿ ಅಭಿಮಾನಿಗಳು ಮತ್ತು ಕ್ರಿಕೆಟ್ ತಜ್ಞರು ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ನಾಯಕ ಶ್ರೇಯಸ್ ಅಯ್ಯರ್ ಅವರ ತಂತ್ರವನ್ನು ಪ್ರಶ್ನಿಸಲು ಕಾರಣವಾಯಿತು.
ಪಂದ್ಯಕ್ಕೂ ಮುನ್ನ ನಾಯಕ ಶ್ರೇಯಸ್ ಅಯ್ಯರ್, ಭಾರತ ತಂಡವು ಇಬ್ಬರು ಸ್ಪಿನ್ನರ್ಗಳು, ಮೂವರು ವೇಗಿಗಳು ಮತ್ತು ಒಬ್ಬ ಆಲ್ರೌಂಡರ್ ಅನ್ನು ಕಣಕ್ಕಿಳಿಸಲಿದೆ ಎಂದು ಸ್ಪಷ್ಟವಾಗಿ ಹೇಳಿದ್ದರು. ಆದರೆ ಪಂದ್ಯ ಪ್ರಾರಂಭವಾದ ತಕ್ಷಣ ಪರಿಸ್ಥಿತಿ ಬದಲಾಯಿತು. ಅಕ್ಷರ್ ಪಟೇಲ್ ತಮ್ಮ ಪೂರ್ಣ ನಾಲ್ಕು ಓವರ್ಗಳನ್ನು ಬೌಲ್ ಮಾಡಿದರು.
ಬೆಲ್ಫಾಸ್ಟ್ ಪಿಚ್ ವೇಗದ ಬೌಲರ್ಗಳಿಗೆ ಸಹಾಯ ಮಾಡುತ್ತಿತ್ತು. ಹರ್ಷಿತ್ ರಾಣಾ, ಅರ್ಷದೀಪ್ ಸಿಂಗ್, ಪ್ರಸಿದ್ಧ್ ಕೃಷ್ಣ ಮತ್ತು ಶಿವಂ ದುಬೆ ಅವರಿಗೆ ಹೆಚ್ಚಿನ ಓವರ್ಗಳು ಸಿಗುವುದು ಸಹಜ. ಆದರೆ ಪ್ರಶ್ನೆಯೆಂದರೆ, ಪರಿಸ್ಥಿತಿಗಳು ವೇಗದ ಬೌಲರ್ಗಳ ಪರವಾಗಿ ಸಂಪೂರ್ಣವಾಗಿ ಇದ್ದಾಗ, ವಾಷಿಂಗ್ಟನ್ ಸುಂದರ್ ಕೇವಲ ಒಂದು ಓವರ್ ಮಾತ್ರ ಬೌಲಿಂಗ್ ಮಾಡಿದರು. ಇಂತಹ ಸಂದರ್ಭದಲ್ಲಿ ಅವರನ್ನು ಆಡುವ ಹನ್ನೊಂದರ ಬಳಗದಲ್ಲಿ ಸೇರಿಸುವುದರ ಹಿಂದಿನ ತರ್ಕವೇನು? ಎಂಬ ಪ್ರಶ್ನೆಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ಸ್ ಕೇಳುತ್ತಿದ್ದಾರೆ.
ಭಾರತದ ಸೋಲಿಗೆ ತಂಡದ ಬ್ಯಾಟಿಂಗ್ ದೊಡ್ಡ ಕಾರಣ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಇದರ ಜೊತೆಗೆ ವಾಷಿಂಗ್ಟನ್ ಸುಂದರ್ ಅವರನ್ನು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಬೌಲರ್ ಆಗಿ ವಿರಳವಾಗಿ ಬಳಸಲಾಗುತ್ತಿದೆ. ಇದರ ಬದಲು ಭಾರತ ತಂಡ ಹೆಚ್ಚುವರಿ ಬ್ಯಾಟ್ಸ್ಮನ್ನನ್ನು ಕಣಕ್ಕಿಳಿಸುವುದು ಬೆಸ್ಟ್ ಎಂಬುದು ಕ್ರಿಕೆಟ್ ಪಂಡಿತರ ಅಭಿಪ್ರಾಯ. ಭಾರತ ತಂಡಕ್ಕೆ ಹೆಚ್ಚುವರಿ ಬ್ಯಾಟ್ಸ್ಮನ್ ಆಗಿ ಆರ್ಸಿಬಿ ನಾಯಕ ರಜತ್ ಪಾಟೀದಾರ್ ಉತ್ತಮ ಆಯ್ಕೆಯಾಗಿದ್ದಾರೆ.
ರಜತ್ ಪಾಟೀದಾರ್ ನಾಯಕತ್ವದಲ್ಲಿ ಸತತ ಎರಡು ಬಾರಿ ಆರ್ಸಿಬಿ ತಂಡ ಐಪಿಎಲ್ ಪ್ರಶಸ್ತಿಯನ್ನು ಗೆದ್ದಿದೆ. ರಜತ್ ಪಾಟೀದಾರ್ ನಾಯಕತ್ವದಲ್ಲಿ ಮಾತ್ರವಲ್ಲದೆ, ಒಬ್ಬ ಅದ್ಭುತ ಬ್ಯಾಟ್ಸ್ಮನ್ ಆಗಿಯೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಪಾಟೀದಾರ್ ತಮ್ಮ ಸ್ಟೈಲಿಶ್ ಬ್ಯಾಟಿಂಗ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಐಪಿಎಲ್ 2026 ರಲ್ಲಿ ಪಾಟೀದಾರ್ 192.69ರ ಸ್ಟ್ರೈಕ್ ರೇಟ್ನಲ್ಲಿ 501 ರನ್ ಗಳಿಸಿದ್ದಾರೆ. ಪರಿಸ್ಥಿತಿಗೆ ಅನುಗುಣವಾಗಿ ತಮ್ಮ ಆಟದ ಮೊಮೆಂಟಮ್ ಬದಲಿಸುವ ಅದ್ಭುತ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಮಧ್ಯಮ ಓವರ್ಗಳಲ್ಲಿ ಅತ್ಯಂತ ಭಯಾನಕ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರಾಗಿರುವ ಪಾಟೀದಾರ್, ತಮ್ಮ ಮೊತ್ತದಲ್ಲಿ 30 ಬೌಂಡರಿಗಳು ಮತ್ತು 42 ಸಿಕ್ಸರ್ಗಳನ್ನು ಬಾರಿಸಿದ್ದಾರೆ. 12 ಮತ್ತು 16 ಓವರ್ಗಳ ನಡುವಿನ ಹಂತಕ್ಕೆ ಬಂದಾಗ, ಪಾಟೀದಾರ್ 108 ಎಸೆತಗಳಲ್ಲಿ 216.67ರ ಸ್ಟ್ರೈಕ್ ರೇಟ್ನಲ್ಲಿ 234 ರನ್ ಗಳಿಸಿದ್ದಾರೆ. ಕೊನೆಯ ನಾಲ್ಕು ಓವರ್ಗಳಲ್ಲಿ, ಅವರು ತಮ್ಮ ಸ್ಕೋರಿಂಗ್ ದರವನ್ನು ಇನ್ನಷ್ಟು ಹೆಚ್ಚಿಸಿಕೊಂಡು, 278.57ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ.
ಈಗಗಾಲೇ ಟೀಮ್ ಇಂಡಿಯಾದಲ್ಲಿ ಶಿವಂ ದುಬೆ ಮತ್ತು ಅಕ್ಸರ್ ಪಟೇಲ್ ಇಬ್ಬರು ಆಲ್ರೌಂಡರ್ ಇದ್ದಾರೆ. ಹೀಗಾಗಿ ವಾಷಿಂಗ್ಟನ್ ಸುಂದರ್ ಬದಲಿಗೆ ಹೆಚ್ಚುವರಿ ಬ್ಯಾಟ್ಸ್ಮನ್ ಆಗಿ ರಜತ್ ಪಾಟೀದಾರ್ ಅವರಿಗೆ ಟೀಮ್ ಇಂಡಿಯಾಕ್ಕೆ ಸೇರಿಸಿಕೊಳ್ಳಬೇಕು ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಮುಂದಿನ ಸರಣಿಗಳಲ್ಲಿ ಪಾಟೀದಾರ್ ಮೇಲೆ ಆಯ್ಕೆದಾರರು ಕೃಪೆ ತೋರಿಸುತ್ತಾರಾ? ಕಾದು ನೋಡಬೇಕಾಗಿದೆ.













