Last Updated:
RSS Worker: ನಾರಾಯಣ್ ಅವರ ಮರಣದ ನಂತರ ಪೊಲೀಸರು ಕುಟುಂಬದವರಿಗೆ ತಿಳಿಸಿದರು. ಆದರೂ ಯಾರೂ ಶವವನ್ನು ಪಡೆಯಲು ಬರಲಿಲ್ಲ. ಬದಲಿಗೆ ಇಬ್ಬರು ಹೆಂಡತಿಯರು, ಮಕ್ಕಳು ಮತ್ತು ಸಹೋದರಿ ಲಿಖಿತ ಒಪ್ಪಿಗೆ ನೀಡಿ ಇರ್ಫಾನಾ ಅವರಿಗೆ ಶವವನ್ನು ಒಪ್ಪಿಸಿದರು.
ಕಾಸರಗೋಡು, ಕೇರಳಂ: ಹಿಂದೂ (Hindu), ಮುಸ್ಲಿಂ (Muslim), ಆರ್ಎಸ್ಎಸ್ (RSS) ಅಂತೆಲ್ಲ ಜಗಳವಾಡುವ ಈ ದಿನಗಳಲ್ಲಿ ಕೇರಳಂ (Keralam) ರಾಜ್ಯದ ಕಾಸರಗೋಡಿನಲ್ಲಿ (Kasaragod) ಧಾರ್ಮಿಕ ಸ್ನೇಹ ಸೌಹಾರ್ದತೆಯ ಮಾದರಿ ಘಟನೆಯೊಂದು ನಡೆದಿದೆ. ಮಾಜಿ ಆರ್ಎಸ್ಎಸ್ ಕಾರ್ಯಕರ್ತನೊಬ್ಬನ (RSS worker) ಅಂತಿಮ ಸಂಸ್ಕಾರವನ್ನು ಮುಸ್ಲಿಂ ಮಹಿಳೆಯೊಬ್ಬರು (Muslim woman) ಮಾಡಿದ್ದಾರೆ. ಈ ಮೂಲಕ ಸಾವನ್ನಪ್ಪಿದ ವ್ಯಕ್ತಿಗೆ ಅಂತಿಮ ಗೌರವ ಸೂಚಿಸಿ, ಕಳಿಸಿ ಕೊಡುವುದಕ್ಕೆ ಯಾವುದೇ ಜಾತಿ, ಧರ್ಮ, ಸಂಘಟನೆ ಬೇಧಭಾವವಿಲ್ಲ ಅಂತ ನಿರೂಪಿಸಿದ್ದಾರೆ.
64 ವರ್ಷದ ನಾರಾಯಣ ತೊಟ್ಟತೋಡಿ ಎಂಬುವರು ಮೀಂಜ ಗ್ರಾಮ ಪಂಚಾಯತ್ನ ಚಿಗುರುಪಾಡೆ ನಿವಾಸಿಯಾಗಿದ್ದರು. ಇವರು ಬಾಯಿ ಕ್ಯಾನ್ಸರ್ನಿಂದ ಬಳಲುತ್ತಿದ್ದರು. ಕೊಝಿಕೋಡ್ ಮೆಡಿಕಲ್ ಕಾಲೇಜ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಗುರುವಾರ ರಾತ್ರಿ ನಿಧನರಾದರು. ಅವರು ದಿನಕೂಲಿ ಕಾರ್ಮಿಕರಾಗಿದ್ದು, ಸುಮಾರು 20 ವರ್ಷಗಳ ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಸಕ್ರಿಯ ಕಾರ್ಯಕರ್ತರಾಗಿದ್ದರಂತೆ.
ಒಂದು ತಿಂಗಳ ಹಿಂದೆ ತಮ್ಮ ಹಳ್ಳಿಯಲ್ಲಿ ಇದ್ದ ಅಂಗಡಿಯ ಮುಂದೆ ಸಾವಿನ ದಡದಲ್ಲಿದ್ದ ನಾರಾಯಣರನ್ನು ಕಂಡು, ಮೀಂಜ ಪಂಚಾಯತ್ ಸದಸ್ಯ ಶರೀಫ್ ಚಿನಾಲ್ ಅವರು ಇರ್ಫಾನಾ ಇಕ್ಬಾಲ್ ಎಂಬ ಮಹಿಳಾ ನಾಯಕಿಯಲ್ಲಿ ಸಹಾಯ ಕೇಳಿದ್ದರು. ಇರ್ಫಾನಾ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯೆಯಾಗಿದ್ದು, ಉಪ್ಪಳದಲ್ಲಿ ಶೇಖ್ ಝಾಯೆದ್ ಎಂಬ ವೃದ್ಧಾಶ್ರಮ ನಡೆಸುತ್ತಿದ್ದಾರೆ.

ಅವರನ್ನು ವೃದ್ಧಾಶ್ರಮಕ್ಕೆ ಕರೆತಂದಾಗ, ಅವರ ದೇಹದಲ್ಲಿ ಮೂಳೆಗಳು ಕಾಣುವಷ್ಟು ಸ್ಥಿತಿ ಇತ್ತು. ಏಳು ದಿನಗಳಿಂದ ಊಟವಿಲ್ಲ ಎಂದು ನಾರಾಯಣ ಹೇಳಿದರು. ಬಾಯಿ ಕ್ಯಾನ್ಸರ್ ಮುಂದುವರಿದ ಸ್ಥಿತಿಯಲ್ಲಿತ್ತು. ಶೇಖ್ ಝಾಯೆದ್ ಫೌಂಡೇಶನ್ನ ಸ್ವಯಂಸೇವಕರು ಅವರನ್ನು ಸ್ವಚ್ಛಗೊಳಿಸಿ, ಶುಶ್ರೂಷೆ ಮಾಡಿದರು. ಇರ್ಫಾನಾ ಅವರು ಜಿಲ್ಲಾ ಕಲೆಕ್ಟರ್ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ತಿಳಿಸಿ, ನಾರಾಯಣರನ್ನು ಕನ್ನೂರು ಮೆಡಿಕಲ್ ಕಾಲೇಜ್ಗೆ ಸ್ಥಳಾಂತರಿಸಲು ಪ್ರಯತ್ನಿಸಿದರು.
ಆದರೆ ಬೆಡ್ ಇಲ್ಲದ ಕಾರಣ ಕೊಝಿಕೋಡ್ ಮೆಡಿಕಲ್ ಕಾಲೇಜ್ಗೆ ಕರೆದೊಯ್ದರು. ಚಿಕಿತ್ಸೆಯ ಸಮಯದಲ್ಲಿ ಅವರ ಸಹೋದರಿ ಕಮಲಾ ಮತ್ತು ಇಬ್ಬರು ಹೆಂಡತಿಯರನ್ನು ಸಂಪರ್ಕಿಸಿದರು. ಆದರೆ ಯಾರೂ ಅವರನ್ನು ನೋಡಿಕೊಳ್ಳಲು ಒಪ್ಪಲಿಲ್ಲ. ನಾರಾಯಣ್ ಅವರ ಮರಣದ ನಂತರ ಪೊಲೀಸರು ಕುಟುಂಬದವರಿಗೆ ತಿಳಿಸಿದರು. ಆದರೂ ಯಾರೂ ಶವವನ್ನು ಪಡೆಯಲು ಬರಲಿಲ್ಲ. ಬದಲಿಗೆ ಇಬ್ಬರು ಹೆಂಡತಿಯರು, ಮಕ್ಕಳು ಮತ್ತು ಸಹೋದರಿ ಲಿಖಿತ ಒಪ್ಪಿಗೆ ನೀಡಿ ಇರ್ಫಾನಾ ಅವರಿಗೆ ಶವವನ್ನು ಒಪ್ಪಿಸಿದರು.
ಈ ವೇಳೆ ಎದೆಗುಂದದ ಇರ್ಫಾನಾ, ನಾರಾಯಣ ಅವರ ಮಗಳ ಸ್ಥಾನದಲ್ಲಿ ನಿಂತು, ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಕ್ರಿಯೆ ಮಾಡಿ ಅಗ್ನಿ ಸಂಸ್ಕಾರ ಮಾಡಿದರು. ಈ ವೇಳೆ ಇರ್ಫಾನಾ ಬೆಂಬಲಿಗರು ಸಹಾಯ ಮಾಡಿದರು. ಸದ್ಯ ಇರ್ಫಾನಾ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ ಅಂತ onmanorama ವರದಿ ಮಾಡಿದೆ.













