Last Updated:
ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ 2-1 ಅಂತರದಿಂದ ಕೈಚೆಲ್ಲಿತ್ತು. ಇದಾದ ಬಳಿಕ ಮಾತನಾಡಿದ ಸ್ಮೃತಿ ಮಂಧಾನ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣಗಳನ್ನು ಕೊಟ್ಟರು.
ಇಂಗ್ಲೆಂಡ್ (England) ಮತ್ತು ಭಾರತ (India) ಮಹಿಳಾ ತಂಡಗಳ (Teams) ನಡುವಿನ ಟಿ20 ಸರಣಿ (Series) ಮುಕ್ತಾಯವಾಗಿದೆ. ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 6 ವಿಕೆಟ್ನಿಂದ ಸೋಲಿಸಿದೆ. ಈ ಮೂಲಕ ಇಂಗ್ಲೆಂಡ್ ವನಿತೆಯರ ತಂಡ ಟಿ20 ಸರಣಿಯನ್ನು 2-1 ಅಂತರದಿಂದ ವಶಮಾಡಿಕೊಂಡಿದೆ. ಪಂದ್ಯ ಮುಗಿದ ಬಳಿಕ ಮಾತಾನಾಡಿದ ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧಾನ (Smriti Mandhana) ಪಂದ್ಯದ ಸೋಲಿಗೆ ಮುಖ್ಯವಾದ ಕಾರಣವನ್ನು ತಿಳಿಸಿದರು.
ಸೋಲಿನ ಬಳಿಕ ಮಾತಾನಾಡಿದ ಭಾರತ ತಂಡದ ಉಪನಾಯಕಿ ಸ್ಮೃತಿ ಮಂಧಾನ, ಇಂಗ್ಲೆಂಡ್ ವಿರುದ್ಧ 6 ವಿಕೆಟ್ನಿಂದ ಸೋಲಲು ನಾವು ಹೆಚ್ಚು ಡಾಟ್ ಬಾಲ್ ಹಾಕಲು ವಿಫಲವಾಗಿದ್ದೆ ಕಾರಣ ಎಂದು ಹೇಳಿದರು. ಅದೇ ರೀತಿ ಮುಂಬರಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಈ ರೀತಿಯ ತಪ್ಪುಗಳು ಮತ್ತೆ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದರು.
ಇಂಗ್ಲೆಂಡ್ ವಿರುದ್ಧದ ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ತಂಡವು ಅಂತಿಮವಾಗಿ 2-1 ಅಂತರದಿಂದ ಸರಣಿ ಸೋಲು ಕಂಡಿದ್ದು, ಐಸಿಸಿ ಟೂರ್ನಿಯ ಸಿದ್ಧತೆಗೆ ಸ್ವಲ್ಪ ಹಿನ್ನಡೆಯಾದಂತಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರೋ ಸ್ಮೃತಿ ಮಂಧಾನ, “ನಾವು ಬೌಲಿಂಗ್ನಲ್ಲಿ ಅತ್ಯುತ್ತಮ ಆರಂಭವನ್ನು ಪಡೆದುಕೊಂಡಿದ್ವಿ. ಎದುರಾಳಿ ತಂಡವನ್ನು 35 ರನ್ಗಳಿಗೆ 3 ವಿಕೆಟ್ ಕಳೆದುಕೊಳ್ಳುವಂತೆ ಮಾಡಿದ್ದೆವು. ಆದರೆ, ಇದಾದ ನಂತರ ಇಂಗ್ಲೆಂಡ್ ಆಟಗಾರ್ತಿಯರು ಕಟ್ಟಿದ ಜೊತೆಯಾಟದ ಬಗ್ಗೆ ನಾನು ಏನನ್ನೂ ಹೇಳುವುದಿಲ್ಲ. ಅವರು ನಿಜಕ್ಕೂ ಅತ್ಯುತ್ತಮವಾದ ಕ್ರಿಕೆಟಿಂಗ್ ಶಾಟ್ಗಳನ್ನು ಆಡಿದರು” ಎಂದು ಇಂಗ್ಲೆಂಡ್ ಆಟವನ್ನು ಮೆಚ್ಚಿದರು.
ಆರಂಭಿಕ ಆಘಾತದ ನಡುವೆಯು 4ನೇ ವಿಕೆಟ್ಗೆ ಜೊತೆಯಾದ ಆಲಿಸ್ ಕ್ಯಾಪ್ಸೆ (82) ಮತ್ತು ಹೀದರ್ ನೈಟ್ ಅವರ ಅಜೇಯ 70 ರನ್ಗಳ ನೆರವಿನಿಂದ ಇಂಗ್ಲೆಂಡ್ ತಂಡ 180 ರನ್ಗಳ ಗುರಿ ಮುಟ್ಟುವಲ್ಲಿ ಯಶಸ್ವಿಯಾಯಿತು.ನಾವು ಕೆಲವು ಡಾಟ್ಬಾಲ್ನೊಂದಿಗೆ ತಂಡದ ಮೇಲೆ ಪರಿಣಾಮ ಬೀರಬೇಕೆಂದುಕೊಂಡಿದ್ದೆವು. ಆದರೇ ಡಾಟ್ ಬಾಲ್ಗಳನ್ನು ಹಾಕಲು ಸಾಧ್ಯವಾಗದಿದ್ದರಿಂದ ಪಂದ್ಯವನ್ನು ಸೋಲಬೇಕಾಯಿತು. ನಾವು ಈ ಪಂದ್ಯವನ್ನು ಗಮನದಲ್ಲಿಟ್ಟುಕೊಂಡು. ಇದೇ ರೀತಿ ತಪ್ಪನ್ನು ಮುಂಬರಲಿರುವ ವಿಶ್ವಕಪ್ನಲ್ಲಿ ಮರುಕಳಿಸದಂತೆ ನೋಡಿಕೊಳ್ಳುತ್ತೇವೆ ಎಂದು ಸ್ಮೃತಿ ಮಂಧಾನ ಭರವಸೆಯ ಮಾತುಗಳನ್ನು ಆಡಿದರು.
ಸರಣಿಯ ಸೋಲನ್ನು ಹೊರತು ಪಡಿಸಿ ನಾಯಕಿ ಹರ್ಮನ್ಪ್ರೀತ್ ಕೌರ್ ಅವರು ತಮ್ಮ ಫಾರ್ಮ್ಗೆ ಮರಳಿರುವುದನ್ನು ಶ್ಲಾಘಿಸಿದರು. ಹರ್ಮನ್ಪ್ರೀತ್ ಅವರು 40 ಎಸೆತಗಳಲ್ಲಿ 56 ರನ್ ಸಿಡಿಸಿದ್ದರಿಂದ ಭಾರತ 180 ರನ್ ಪೇರಿಸುವಲ್ಲಿ ಯಶಸ್ವಿಯಾಯಿತು. ಒತ್ತಡದ ನಡುವೆಯೂ ಅವರು ಆಡಿದ ಇನ್ನಿಂಗ್ಸ್ ಮೆಚ್ಚುವಂತದ್ದು. ಎಲ್ಲರೂ ಉತ್ತಮ ಫಾರ್ಮ್ನಲ್ಲಿದ್ದಾರೆ. ಮುಖ್ಯವಾಗಿ ಹರ್ಮನ್ ಮತ್ತು ಜೆಮಿಮಾ ರೋಡ್ರಿಗಸ್ ಅವರ ಆಟ ನಿಜಕ್ಕೂ ನಾನ್ ಸ್ಟ್ರೈಕರ್ ಎಂಡ್ನಲ್ಲಿ ನೋಡಲು ತುಂಬಾ ಸುಂದರವಾಗಿರುತ್ತದೆ. ಇದು ಮುಂಬರಲಿರುವ ವಿಶ್ವಕಪ್ಗೆ ಉತ್ತಮ ಸಂಕೇತ ಎಂದೆನಿಸುತ್ತದೆ ಎಂದು ಹೇಳಿದರು.
ಜೂನ್ 14 ರಂದು ಬರ್ಮಿಂಗ್ಹ್ಯಾಮ್ನಲ್ಲಿ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದ ಮೂಲಕ ಭಾರತ ತಂಡ ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಸುತ್ತ ಸೃಷ್ಟಿಯಾಗಿರುವ ಅತಿಯಾದ ಹೈಪ್ ಬಗ್ಗೆ ಮಾತನಾಡಿದ ಸ್ಮೃತಿ ಮಂಧಾನ, ಈ ಹೈಪ್ ಅನ್ನು ಒಪ್ಪಲು ನಿರಾಕರಿಸಿದ್ದಾರೆ. ತಮ್ಮ ತಂಡ ಕೇವಲ ಒಂದು ಪಂದ್ಯದ ಕಡೆಗೆ ಮಾತ್ರ ಗಮನ ಹರಿಸದೆ, ಇಡೀ ವಿಶ್ವಕಪ್ ಟೂರ್ನಿಯ ಮೇಲೆ ಗಮನ ಕೇಂದ್ರೀಕರಿಸುವುದು ಮುಖ್ಯ ಎಂದು ಸ್ಪಷ್ಟಪಡಿಸಿದರು.
ಈ ಹಿಂದಿನ ಅನುಭವವನ್ನು ನೆನಪಿಸಿಕೊಂಡ ಮಂಧಾನ, ನಾವು 2022 ರಲ್ಲಿ ಬರ್ಮಿಂಗ್ಹ್ಯಾಮ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯವನ್ನು ಆಡಿದ್ದೆವು. ಆಗ ಸ್ಟೇಡಿಯಂ ಸಂಪೂರ್ಣ ಹೌಸ್ಫುಲ್ ಆಗಿತ್ತು. ನಾವು ಕೇವಲ ಭಾರತ-ಪಾಕಿಸ್ತಾನ ಪಂದ್ಯವನ್ನಷ್ಟೇ ದೊಡ್ಡದು ಮಾಡದೆ, ಇಡೀ ಟಿ20 ವಿಶ್ವಕಪ್ ಟೂರ್ನಿಯನ್ನು ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಬೇಕಾದ ಅಗತ್ಯವಿದೆ. ನಮಗೆ ಕೇವಲ ಒಂದು ಪಂದ್ಯದ ಹೈಪ್ ಬೇಡ ಎಂದು ತಿಳಿಸಿದರು.
ಭಾರತ ಮತ್ತು ಪಾಕಿಸ್ತಾನ ಪಂದ್ಯದ ಬಗ್ಗೆ ಈಗಾಗಲೇ ಜಗತ್ತಿನಾದ್ಯಂತ ಸಾಕಷ್ಟು ಕ್ರೇಜ್ ಸೃಷ್ಟಿಯಾಗಿದೆ. ಹೀಗಾಗಿ ಪಂದ್ಯವನ್ನು ನೋಡಲು ಮತ್ತು ತಂಡಕ್ಕೆ ಬೆಂಬಲ ನೀಡಲು ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಮೈದಾನಕ್ಕೆ ಬರುತ್ತಾರೆ ಎಂಬ ನಂಬಿಕೆ ತಮಗಿದೆ. ಅಲ್ಲದೆ, ಮೈದಾನಕ್ಕೆ ಬರುವ ಕ್ರೀಡಾ ಪ್ರೇಮಿಗಳ ಮುಂದೆ ತಮ್ಮ ತಂಡ ಅತ್ಯುತ್ತಮ ಪ್ರದರ್ಶನ ನೀಡಲಿದ್ದು, ಎಲ್ಲರನ್ನೂ ರಂಜಿಸಲಿದೆ ಎಂಬ ಆಶಯವನ್ನು ಎಂದು ಮಂಧಾನ ವಿಶ್ವಾಸ ವ್ಯಕ್ತಪಡಿಸಿದರು.
IND vs ENG: ಇಂಗ್ಲೆಂಡ್ ವಿರುದ್ಧ ಮಾಡಿದ ತಪ್ಪುಗಳನ್ನು ವಿಶ್ವಕಪ್ನಲ್ಲಿ ಮಾಡುವುದಿಲ್ಲ! ಟಿ20 ಸರಣಿ ಸೋಲಿಗೆ ಮಂಧಾನ ಕೊಟ್ಟ ಕಾರಣವಿದು













