Last Updated:
ಕಡಪದ ಪಿ. ರಾಮಮೋಹನ್ ರಾಜು, ಕ್ಯಾನ್ಸರ್ನಿಂದ 2011ರಲ್ಲಿ ಸತ್ತ ಪತ್ನಿ ರಾಜ್ಯಲಕ್ಷ್ಮಿ ಸಮಾಧಿ ಪಕ್ಕದಲ್ಲೇ 4 ಲಕ್ಷ ಖರ್ಚಿನಲ್ಲಿ ತಮ್ಮ ಸಮಾಧಿ ಕಟ್ಟಿಸಿ, ಸಾವಿನಲ್ಲೂ ಒಂದಾಗಲು ತಯಾರಿ ಮಾಡಿಕೊಂಡರು
ಕಡಪ, ಆಂಧ್ರಪ್ರದೇಶ: ಈಗಿನ ಕಾಲದಲ್ಲಿ ದಾಂಪತ್ಯ (marriage) ಅಂದ್ರೆ ಎಷ್ಟು ದಿನ ಇರುತ್ತೆ ಅನ್ನೋದೇ ಗೊತ್ತಿರಲ್ಲ ಎಂಬ ಪರಿಸ್ಥಿತಿ ಇದೆ. ಹಿಂದೆಲ್ಲ ಗಂಡ (husband) ಹೆಂಡತಿ (wife) ಅನ್ಯೋನ್ಯವಾಗಿ ಇರುತ್ತಾ, ನೂರಾರು ವರ್ಷ ಸುಖವಾಗಿ ಬಾಳುತ್ತಿದ್ದರು. ಆದರೆ ಇಂದು ಹಲವು ದಂಪತಿ ಡಿವೋರ್ಸ್ (divorce) ಗಾಳಕ್ಕೆ ಸಿಲುಕಿದ್ದಾರೆ. ವೈವಾಹಿಕ ಜೀವನದ ಪರಿಸ್ಥಿತಿ ಹೀಗಿರುವಾಗಲೂ ಇಲ್ಲೊಬ್ಬ ಗಂಡ, ತನ್ನ ಹೆಂಡತಿ ಸಮಾಧಿ (grave) ಪಕ್ಕದಲ್ಲೇ ತಮ್ಮ ಸಮಾಧಿ ನಿರ್ಮಿಸಿಕೊಂಡಿದ್ದಾರಂತೆ. ಈ ಮೂಲಕ ಸತ್ತಮೇಲೂ ತಮ್ಮ ಪ್ರೀತಿ ಶಾಶ್ವತ ಅಂತ ತೋರಿಸಿಕೊಂಡಿದ್ದಾರೆ.
ಈ ಕಥೆಯ ನಾಯಕ ಪಿ. ರಾಮಮೋಹನ್ ರಾಜು ಮತ್ತು ಅವರ ಪತ್ನಿ ರಾಜ್ಯಲಕ್ಷ್ಮಿ. ರಾಜು ಅವರು ಆಂಧ್ರಪ್ರದೇಶದ ಕಡಪ (YSR ಕಡಪ) ಜಿಲ್ಲೆಯ ಚಿನ್ನ ಚೌಕ್ ಸಹಕಾರಿ ಕಾಲೋನಿಯ ನಿವಾಸಿಗಳು. ಅವರ ಕಥೆ ಅಪರಿಮಿತ ಪ್ರೀತಿ ಮತ್ತು ಜೀವನದ ನಂತರದ ಬಂಧನದ ಸಂಕೇತವಾಗಿ ವೈರಲ್ ಆಗಿದೆ.
1978ರಲ್ಲಿ ಅವರಿಬ್ಬರ ವಿವಾಹವಾಯಿತು. ಮೂವತ್ತು ವರ್ಷಗಳಿಗೂ ಹೆಚ್ಚು ಸುಖಮಯ ದಾಂಪತ್ಯ ಜೀವನ ನಡೆಸಿದರು. ರಾಮಮೋಹನ್ ರಾಜು ನಿವೃತ್ತ ಸರ್ಕಾರಿ ಅಧಿಕಾರಿ. ಪ್ರಾವಿಡೆಂಟ್ ಫಂಡ್ (PF) ಕಚೇರಿಯಲ್ಲಿ ಕೆಲಸ ಮಾಡಿ 2016ರಲ್ಲಿ ನಿವೃತ್ತರಾದರು. ಅವರು ತಮ್ಮ ಪತ್ನಿಯ ಸಮಾಧಿಯ ಪಕ್ಕದಲ್ಲೇ ತಮಗೂ ಸಮಾಧಿ ನಿರ್ಮಿಸಿಕೊಂಡಿದ್ದಾರೆ. ಇದಕ್ಕಾಗಿ ಸುಮಾರು 4 ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
ಅವರ ಪತ್ನಿ ರಾಜ್ಯಲಕ್ಷ್ಮಿ ಆಂಧ್ರಪ್ರದೇಶ ವೈದ್ಯಕೀಯ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2011ರಲ್ಲಿ ಕ್ಯಾನ್ಸರ್ನಿಂದ ನಿಧನರಾದರು. ಈ ದಂಪತಿ ನಾಲ್ಕು ಪುತ್ರಿಯರನ್ನು ಸಾಕಿದರು. ಎಲ್ಲರೂ ಉನ್ನತ ಶಿಕ್ಷಣ ಪಡೆದು ಉತ್ತಮವಾಗಿ ನೆಲೆಗೊಂಡಿದ್ದಾರೆ. ಇನ್ನು ರಾಜ್ಯಲಕ್ಷ್ಮಿ ಅವರ ಅಂತ್ಯಕ್ರಿಯೆಯಲ್ಲಿ ಪುತ್ರಿಯರೇ ಪಾರ್ಥಿವ ಶರೀರ ಹೊತ್ತುಕೊಂಡು ಕಾರ್ಯಕ್ರಮ ನಡೆಸಿದ್ದು ವಿಶೇಷವಾಗಿ ಗಮನ ಸೆಳೆದಿತ್ತು.
ರಾಜ್ಯಲಕ್ಷ್ಮಿ ಅವರ ನಿಧನದ ನಂತರ ರಾಮಮೋಹನ್ ರಾಜು ಅವರು ಮಸಪೇಟಾ ಹಿಂದೂ ಸ್ಮಶಾನದಲ್ಲಿ ಪತ್ನಿಯ ಸಮಾಧಿಯ ಪಕ್ಕದಲ್ಲಿ ಜಾಗ ಕಾಯ್ದಿರಿಸಿ, ಸ್ವತಃ ಮೇಲ್ವಿಚಾರಣೆ ನಡೆಸಿ ಸಮಾಧಿ ನಿರ್ಮಿಸಿಕೊಂಡಿದ್ದಾರೆ. ಇದು ಅವರ ಅಪರಿಮಿತ ಪ್ರೀತಿ ಮತ್ತು “ಸಾವಿನಲ್ಲೂ ಒಂದಾಗಬೇಕು” ಎಂಬ ಬಯಕೆಯನ್ನು ಪ್ರತಿಬಿಂಬಿಸುತ್ತದೆ.
ಅವರು ತಮ್ಮ ಅಂತ್ಯಕ್ರಿಯೆಗೆಂದು ಪೆನ್ಷನ್ ಉಳಿತಾಯದಿಂದ ಸುಮಾರು 4 ಲಕ್ಷ ರೂಪಾಯಿಗಳನ್ನು ತಮ್ಮ ಪುತ್ರಿಯರಿಗೆ ನೀಡಿದ್ದಾರೆ. ಎರಡು ಸ್ನೇಹಿತರಿಗೆ ಪ್ರತ್ಯೇಕವಾಗಿ 50,000 ರೂ. ನೀಡಿ, “ದುಃಖದಲ್ಲಿ ಅಲ್ಲ, ಶಾಂತಿಯುತವಾಗಿ ಜೀವನದ ಆಚರಣೆಯಂತೆ” ನಡೆಸುವಂತೆ ಹೇಳಿದ್ದಾರೆ. “ನಾವು ದಶಕಗಳ ಕಾಲ ಸುಖವಾಗಿ ಜೀವಿಸಿದ್ದೇವೆ. ಆಕೆ ಹೋದ ನಂತರ ಎಂದೆಂದೂ ಆಕೆಯ ಪಕ್ಕದಲ್ಲೇ ಇರಬೇಕು ಎಂದು ಅನಿಸಿತು” ಎಂದು ಅವರು ಹೇಳಿದ್ದಾರೆ.
Kadapa (Cuddapah),Y.S.R.,Andhra Pradesh
May 20, 2026 10:50 PM IST













