Last Updated:
ಸರ್ಕಾರದ ಆದೇಶದಲ್ಲಿ ಮಧ್ಯರಾತ್ರಿ 3.30ರವರೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಮಾತ್ರ ಆಹಾರ ಪೂರೈಕೆಗೆ ಅವಕಾಶ ನೀಡಲಾಗಿದೆ. ಆದರೆ, ಯಾವುದೇ ಪಬ್ ಹಾಗೂ ಬಾರ್ಗಳನ್ನು ತೆರೆಯಲು ಅವಕಾಶ ನೀಡಲಾಗಿಲ್ಲ. ರೆಸ್ಟೋರೆಂಟ್ಗಳಲ್ಲಿ ಫುಟ್ ಬಾಲ್ ಪಂದ್ಯವನ್ನು ನೇರ ಪ್ರಸಾರ ಮಾಡಬಹುದು.
ಫಿಫಾ ವಿಶ್ವಕಪ್ (FIFA World Cup) ಸೆಮಿಫೈನಲ್ ಹಂತಕ್ಕೆ ಕಾಲಿಟ್ಟಿದೆ. ನಾಲ್ಕು ಬಲಿಷ್ಠ ತಂಡಗಳು ಟ್ರೋಫಿಗಾಗಿ ಸೆಣಸಾಡಲಿವೆ. ವಿಶ್ವದಾದ್ಯಂತ ಈ ಹೈವೋಲ್ಟೇಜ್ ಪಂದ್ಯಗಳಿಗಾಗಿ ನೂರಾರು ಕೋಟಿ ಫುಟ್ಬಾಲ್ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಈ ಫಿಫಾ ಕ್ರೇಜ್ ಭಾರತದಲ್ಲೂ ಏನು ಕಡಿಮೆ ಇಲ್ಲ. ಭಾರತೀಯ ಕಾಲಮಾನದಲ್ಲಿ ಮಧ್ಯರಾತ್ರಿ, ಮುಂಜಾನೆ ಪಂದ್ಯಗಳು ಆರಂಭವಾದರೂ, ಅವುಗಳನ್ನ ನಿದ್ದೆಗೆಟ್ಟು ನೋಡುವವರಿದ್ದಾರೆ. ಹಾಗಾಗಿ ಕರ್ನಾಟಕ ಸರ್ಕಾರವು ಫುಟ್ಬಾಲ್ ಅಭಿಮಾನಿಗಳಿಗಾಗಿ ವಿಶೇಷ ಕೊಡುಗೆ ನೀಡಿದೆ. ಬೆಂಗಳೂರಿನ ರೆಸ್ಟೋರೆಂಟ್ಗಳಿಗೆ ಫಿಫಾ ವಿಶ್ವಕಪ್ 2026 ನಾಕೌಟ್ ಪಂದ್ಯಗಳ ಪ್ರಸಾರಕ್ಕಾಗಿ ವಿಶೇಷ ಅನುಮತಿ ನೀಡಿದೆ. ಆಯ್ದ ದಿನಗಳಲ್ಲಿ ರೆಸ್ಟೋರೆಂಟ್ಗಳು ಬೆಳಗ್ಗೆ ಜಾವ 3.30ರವರೆಗೆ ತಮ್ಮ ಸೇವೆಗಳನ್ನು ನೀಡಬಹುದು ಎಂದು ಘೋಷಿಸಿದೆ. ಇದು ರಾಷ್ಟ್ರೀಯ ರೆಸ್ಟೋರೆಂಟ್ ಅಸೋಸಿಯೇಷನ್ ಆಫ್ ಇಂಡಿಯಾ ಮನವಿಯ ನಂತರ ತೆಗೆದುಕೊಂಡಿರುವ ನಿರ್ಧಾರವಾಗಿದೆ. ಸಾರ್ವಜನಿಕ ಸುರಕ್ಷತೆ ಮತ್ತು ಕಾನೂನು ಸುವ್ಯವಸ್ಥೆಗೆ ಯಾವುದೇ ಹಾನಿಯಾಗಬಾರದೆಂದು ಸರ್ಕಾರ ಎಚ್ಚರಿಕೆ ವಹಿಸಿದೆ.
ಫಿಫಾ ವಿಶ್ವಕಪ್ ಪಂದ್ಯಗಳು ರಾತ್ರಿ ಹೊತ್ತಿನಲ್ಲಿ ನಡೆಯುವುದರಿಂದ ಅಭಿಮಾನಿಗಳು ಪಂದ್ಯಗಳನ್ನು ವೀಕ್ಷಿಸಲು ರೆಸ್ಟೋರೆಂಟ್ಗಳಲ್ಲಿ ತೀವ್ರ ಬೇಡಿಕೆ ಇದೆ. ಈ ಹಿನ್ನೆಲೆಯಲ್ಲಿ ರೆಸ್ಟೋರೆಂಟ್ ಮಾಲೀಕರು ಸರ್ಕಾರಕ್ಕೆ ಹೆಚ್ಚು ಸಮಯ ತೆಗೆದಿರುವುದಕ್ಕೆ ಮನವಿ ಸಲ್ಲಿಸಿದ್ದರು. ಸಿಎಂ ಡಿಕೆ ಶಿವಕುಮಾರ್ ಈ ಮನವಿಯನ್ನು ಪರಿಗಣಿಸಿ ವಿಶೇಷ ಅನುಮತಿ ನೀಡಿದೆ. ಇದರಿಂದ ಬೆಂಗಳೂರು ನಗರದ ರೆಸ್ಟೋರೆಂಟ್ ಉದ್ಯಮಕ್ಕೆ ಉತ್ತೇಜನ ಸಿಗುವ ಸಾಧ್ಯತೆಯಿದೆ.
ಈ ಕುರಿತು ಎಕ್ಸ್ (X) ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, “ಫುಟ್ಬಾಲ್ ಜಗತ್ತಿನಾದ್ಯಂತ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದೆ. ಕ್ರೀಡಾಭಿಮಾನಿಗಳ ಉತ್ಸಾಹವನ್ನು ಪರಿಗಣಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಆದರೆ ಸಾರ್ವಜನಿಕ ಸುರಕ್ಷತೆ, ಕಾನೂನು ಸುವ್ಯವಸ್ಥೆ ಮತ್ತು ನಾಗರಿಕರ ನೆಮ್ಮದಿಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡಿದೆ. ಅಭಿಮಾನಿಗಳು ಜವಾಬ್ದಾರಿಯಿಂದ ಪಂದ್ಯಗಳನ್ನು ಆನಂದಿಸಬೇಕು ಮತ್ತು ಭದ್ರತಾ ಸಿಬ್ಬಂದಿಗೆ ಪೂರ್ಣ ಸಹಕಾರ ನೀಡಬೇಕು” ಎಂದು ವಿನಂತಿಸಿದ್ದಾರೆ
ಈ ಅನುಮತಿ ಕೇವಲ ಆಯ್ದ ದಿನಗಳಿಗೆ ಮಾತ್ರ ಅನ್ವಯವಾಗುತ್ತದೆ. ಪಂದ್ಯಗಳು ನಡೆಯುವ ರಾತ್ರಿ ಸಮಯಕ್ಕೆ ಸೀಮಿತವಾಗಿರುತ್ತದೆ. ರೆಸ್ಟೋರೆಂಟ್ಗಳು ಕಾನೂನು ವ್ಯವಸ್ಥೆಯನ್ನು ಕಾಯ್ದುಕೊಳ್ಳಬೇಕು. ಯಾವುದೇ ಅನುಚಿತ ಘಟನೆಗಳು ನಡೆದರೆ ಅನುಮತಿಯನ್ನು ರದ್ದುಗೊಳಿಸುವ ಸಾಧ್ಯತೆಯಿದೆ. ಸರ್ಕಾರವು ಸಾರ್ವಜನಿಕ ಸುರಕ್ಷತೆಯನ್ನು ಪ್ರಮುಖ ಆದ್ಯತೆಯಾಗಿ ಪರಿಗಣಿಸಿದೆ.
ಬೆಂಗಳೂರು ನಗರವು ಫಿಫಾ ವಿಶ್ವಕಪ್ ಅಭಿಮಾನಿಗಳ ಕೇಂದ್ರವಾಗಿ ಮಾರ್ಪಡುತ್ತಿದೆ. ಈ ನಿರ್ಧಾರದಿಂದ ಅಭಿಮಾನಿಗಳು ರೆಸ್ಟೋರೆಂಟ್ಗಳಲ್ಲಿ ಪಂದ್ಯಗಳನ್ನು ಉತ್ಸಾಹದಿಂದ ವೀಕ್ಷಿಸಲು ಅನುಕೂಲವಾಗುತ್ತದೆ. ರೆಸ್ಟೋರೆಂಟ್ ಮಾಲೀಕರಿಗೆ ಇದು ಉತ್ತಮ ವ್ಯವಹಾರಾವಕಾಶವನ್ನು ಸೃಷ್ಟಿಸುತ್ತದೆ. ಆದರೆ ಎಲ್ಲಾ ಕ್ರಮಗಳನ್ನು ಕಾನೂನುಬದ್ಧವಾಗಿ ತೆಗೆದುಕೊಳ್ಳಬೇಕು.
ಬೆಂಗಳೂರು ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್ ಅವರು 1963ರ ಕರ್ನಾಟಕ ಪೊಲೀಸ್ ಕಾಯ್ದೆಯ ಸೆಕ್ಷನ್ 31(W) ಅಡಿಯಲ್ಲಿ ಈ ವಿಶೇಷ ಆದೇಶವನ್ನು ಹೊರಡಿಸಿದ್ದಾರೆ. ಬೆಂಗಳೂರು ಸಿಟಿ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಹೋಟೆಲ್ಗಳು, ರೆಸ್ಟೋರೆಂಟ್ಗಳು, ಪಬ್ ಮತ್ತು ಬಾರ್ಗಳಿಗೆ ಈ ವಿಸ್ತೃತ ಕಾಲಮಿತಿ ಅನ್ವಯಿಸುತ್ತದೆ.
ಸರ್ಕಾರದ ಆದೇಶದಲ್ಲಿ ಮಧ್ಯರಾತ್ರಿ 3.30ರವರೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ಮಾತ್ರ ಆಹಾರ ಪೂರೈಕೆಗೆ ಅವಕಾಶ ನೀಡಲಾಗಿದೆ. ಆದರೆ, ಯಾವುದೇ ಪಬ್ ಹಾಗೂ ಬಾರ್ಗಳನ್ನು ತೆರೆಯಲು ಅವಕಾಶ ನೀಡಲಾಗಿಲ್ಲ. ರೆಸ್ಟೋರೆಂಟ್ಗಳಲ್ಲಿ ಫುಟ್ ಬಾಲ್ ಪಂದ್ಯವನ್ನು ನೇರ ಪ್ರಸಾರ ಮಾಡಬಹುದು.
ಫಿಫಾ ವಿಶ್ವಕಪ್ನ ಪ್ರಮುಖ ಪಂದ್ಯಗಳು ನಡೆಯುವ ಈ ಕೆಳಗಿನ ಮೂರು ದಿನಗಳಂದು ಮಾತ್ರ ಈ ವಿನಾಯಿತಿ ಅನ್ವಯಿಸಲಿದೆ.
ಜುಲೈ 14 (ಮಂಗಳವಾರ): ಮೊದಲ ಸೆಮಿಫೈನಲ್ ಪಂದ್ಯ
ಜುಲೈ 15 (ಬುಧವಾರ): ಎರಡನೇ ಸೆಮಿಫೈನಲ್ ಪಂದ್ಯ
ಜುಲೈ 19 (ಭಾನುವಾರ): ಫೈನಲ್ ಪಂದ್ಯ














