Last Updated:
ತೆಲಂಗಾಣದ ಭಾರತೀಯ ಎಂಜಿನಿಯರ್ ಒಬ್ಬ ಮದುವೆಯಾದ ನಾಲ್ಕೇ ತಿಂಗಳಿಗೆ ತನ್ನ ಪತ್ನಿಯನ್ನು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಅಮೆರಿಕದಲ್ಲಿ ತನ್ನ ಹೆಂಡತಿಯನ್ನು ಕೊಂದು ಆಕೆಯ ಮೃತದೇಹದ ಫೋಟೋವನ್ನು ತನ್ನ ಗೆಳತಿಗೆ ಕಳುಹಿಸಿದ್ದಾನೆ ಎಂದು ವರದಿಯಾಗಿದೆ.
ತೆಲಂಗಾಣದ ಭಾರತೀಯ ಎಂಜಿನಿಯರ್ (Indian Engineer) ಒಬ್ಬ ಮದುವೆಯಾದ (Marriage) ನಾಲ್ಕೇ ತಿಂಗಳಿಗೆ ತನ್ನ ಪತ್ನಿಯನ್ನು ಕೊಲೆ ಮಾಡಿದ್ದಾನೆ (Murder Case) ಎಂದು ಆರೋಪ ಕೇಳಿಬಂದಿದೆ. ಅಮೆರಿಕದ ವಾಷಿಂಗ್ಟನ್ ರಾಜ್ಯದಲ್ಲಿ ತೆಲಂಗಾಣದ 30 ವರ್ಷದ ಸಾಫ್ಟ್ವೇರ್ ಎಂಜಿನಿಯರ್ (Software Engineer) ತನ್ನ 27 ವರ್ಷದ ಪತ್ನಿಯನ್ನು ಕೊಂದ ಆರೋಪ ಎದುರಿಸುತ್ತಿದ್ದಾನೆ. ಆರೋಪಿ ಅವಿನಾಶ್ ನಾರ್ನೆ ತನ್ನ ಹೆಂಡತಿ ರಾಜಿತಾ ಸಬ್ಬಿನೇನಿ ಅವರನ್ನು ಕತ್ತು ಹಿಸುಕಿ ಕೊಂದಿದ್ದಾನೆ ಎಂದು ಹೇಳಲಾಗಿದೆ, ಅಲ್ಲದೇ ಮೃತದೇಹದ ಫೋಟೋವನ್ನು ಗೆಳತಿಗೆ ಕಳಿಸಿರುವ ಆರೋಪ ಇದೆ.
ಹೌದು, ಆರೋಪಿ ಅವಿನಾಶ್ ನಾರ್ನೆ ತನ್ನ ಹೆಂಡತಿ ರಾಜಿತಾ ಸಬ್ಬಿನೇನಿ ಅವರನ್ನು ಕತ್ತು ಹಿಸುಕಿ ಕೊಂದು ನಂತರ ಆಕೆಯ ಮೃತದೇಹದ ಫೋಟೋವನ್ನು ಭಾರತದಲ್ಲಿರುವ ತನ್ನ ಗೆಳತಿಗೆ ಕಳುಹಿಸಿದ್ದಾನೆ ಎಂದು ನ್ಯಾಯಾಲಯದ ದಾಖಲೆಗಳನ್ನು ಉಲ್ಲೇಖಿಸಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ ಎಂದು ನ್ಯೂಸ್ 18 ಇಂಗ್ಲಿಷ್ ಸುದ್ದಿ ಮಾಡಿದೆ.
ಈ ಘಟನೆ ಅಕ್ಟೋಬರ್ 27, 2025ರಂದು ಬೆಲ್ಲೆವ್ಯೂನಲ್ಲಿರುವ ವುಡ್ಲ್ಯಾಂಡ್ ಕಾಮನ್ಸ್ ಅಪಾರ್ಟ್ಮೆಂಟ್ನಲ್ಲಿ ನಡೆದಿತ್ತು. ಅವಿನಾಶ್ 911ಗೆ ಕರೆ ಮಾಡಿ ತನ್ನ ಹೆಂಡತಿ ಸ್ನಾನಗೃಹದಲ್ಲಿ ಲಾಕ್ ಆಗಿದ್ದಾಳೆ ಮತ್ತು ಪ್ರತಿಕ್ರಿಯೆ ನೀಡುತ್ತಿಲ್ಲ ಎಂದು ತಿಳಿಸಿದ್ದಾನೆ. ಪೊಲೀಸರು ಸ್ಥಳಕ್ಕೆ ಬಂದ ನಂತರ ಸ್ನಾನಗೃಹ ಓಪನ್ ಮಾಡಿದ ಮೇಲೆ ನೆಲದ ಮೇಲೆ ರಾಜಿತಾ ಬಿದ್ದಿರುವುದನ್ನು ಕಂಡಿದ್ದಾರೆ. ಆಕೆಯನ್ನು ಉಳಿಸಲು ಪ್ರಯತ್ನ ಪಟ್ಟರು ಸಹ ವಿಫಲವಾಗಿ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು.
ಶವಪರೀಕ್ಷೆಯಲ್ಲಿ ರಾಜಿತಾ ಕತ್ತು ಹಿಸುಕಿದ್ದಕ್ಕೆ ಉಸಿರುಕಟ್ಟಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಪ್ರಕರಣವನ್ನು ಅನುಮಾನಾಸ್ಪದ ಸಾವಿನಿಂದ ಕೊಲೆಗೆ ಬದಲಾಯಿಸಲಾಗಿದೆ.
ನ್ಯಾಯಾಲಯದ ದಾಖಲೆಗಳ ಪ್ರಕಾರ, ಅವಿನಾಶ್ ಕೊಲೆಯಾದ ಕೂಡಲೇ ಭಾರತದಲ್ಲಿರುವ ತನ್ನ ಗೆಳತಿಯೊಂದಿಗೆ ಸಂಪರ್ಕದಲ್ಲಿದ್ದ. ರಾಜಿತಾ ಅವರ ಮೃತದೇಹದ ಫೋಟೋವನ್ನು ಆಕೆಗೆ ಕಳುಹಿಸಿದ್ದಾನೆ. ಕೊಲೆಯ ದಿನವೇ ಆಕೆಯೊಂದಿಗೆ ನಾಲ್ಕಾರು ಬಾರಿ ಮಾತನಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಪ್ರಸ್ತುತ ಅವಿನಾಶ್ ಕಿಂಗ್ ಕೌಂಟಿ ಜೈಲಿನಲ್ಲಿ ಬಂಧನದಲ್ಲಿದ್ದಾನೆ. ಅವಿನಾಶ್ ತನಿಖಾಧಿಕಾರಿಗಳಿಗೆ ‘ನಾನು ಮನೆಗೆ ಬಂದ ಮೇಲೆ ಇದು ನನಗೆ ಗೊತ್ತಾಯಿತು’ ಎಂದು ಹೇಳಿದ್ದಾನೆ. ಆದರೆ ಪ್ರಾಸಿಕ್ಯೂಟರ್ಗಳು ಡಿಜಿಟಲ್ ಪುರಾವೆಗಳು ಅವನನ್ನು ಪೂರ್ವನಿಯೋಜಿತ ಕೊಲೆಗೆ ಸಂಪರ್ಕಿಸುತ್ತವೆ ಎಂದು ಆರೋಪಿಸಿದ್ದಾರೆ.
ಈ ಘಟನೆ ಅಮೆರಿಕದಲ್ಲಿ ವಾಸಿಸುತ್ತಿರುವ ಭಾರತೀಯ ಯುವಕ-ಯುವತಿಯರ ನಡುವಿನ ವೈಯಕ್ತಿಕ ಸಂಬಂಧಗಳಲ್ಲಿ ಉಂಟಾಗುವ ಸಮಸ್ಯೆಗಳ ಬಗ್ಗೆ ಪುನಃ ಚರ್ಚೆಗೆ ಕಾರಣವಾಗಿದೆ. ತೆಲಂಗಾಣದ ವ್ಯಕ್ತಿಯೊಬ್ಬ ಈ ಕೊಲೆ ಪ್ರಕರಣದಲ್ಲಿ ತೊಡಗಿರುವುದು ಭಾರತೀಯ ಸಮುದಾಯದಲ್ಲಿ ಆಘಾತವನ್ನುಂಟುಮಾಡಿದೆ. ಪ್ರಕರಣದ ವಿಚಾರಣೆ ಇನ್ನೂ ಮುಂದುವರಿದಿದೆ. ನ್ಯಾಯಾಲಯವು ಎಲ್ಲಾ ಡಿಜಿಟಲ್ ಮತ್ತು ಇತರ ಪುರಾವೆಗಳನ್ನು ಪರಿಶೀಲಿಸುತ್ತಿದೆ. ಅವಿನಾಶ್ ನಾರ್ನೆ ತನ್ನ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾನೆ.














