Last Updated:
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕ್ಯಾಶ್ಲೆಸ್ ವ್ಯವಸ್ಥೆ ಜಾರಿಯಾಗಿದೆ. ಖೈದಿಗಳು ಬೆರಳಚ್ಚು ಅಥವಾ ಫೇಷಿಯಲ್ ರೆಕಗ್ನಿಷನ್ ಮೂಲಕ ಕ್ಯಾಂಟೀನ್ನಲ್ಲಿ ಖರೀದಿ ಮಾಡಲಿದ್ದು, ಹಣ ನೇರವಾಗಿ ಬ್ಯಾಂಕ್ ಖಾತೆಯಿಂದ ಕಡಿತವಾಗಲಿದೆ.
ಬೆಂಗಳೂರು: ರಾಜ್ಯದ ಜೈಲುಗಳಲ್ಲಿ, ವಿಶೇಷವಾಗಿ ಬೆಂಗಳೂರಿನ (Bengaluru) ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಮಹತ್ವದ ಬದಲಾವಣೆಯೊಂದು ಜಾರಿಗೆ ಬಂದಿದೆ. ಇನ್ಮುಂದೆ ಜೈಲು (Prison) ಕ್ಯಾಂಟೀನ್ಗಳಲ್ಲಿ ನಗದು ಹಣ (ಕ್ಯಾಶ್) ಬಳಸಲು ಅವಕಾಶ ಇರುವುದಿಲ್ಲ. ಜೈಲಿನೊಳಗಿನ ಹಣದ ವಹಿವಾಟಿನಲ್ಲಿ ಪಾರದರ್ಶಕತೆ ತರಲು ಹಾಗೂ ಅಕ್ರಮಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಸಂಪೂರ್ಣ ಕ್ಯಾಶ್ಲೆಸ್ ವ್ಯವಸ್ಥೆ ಜಾರಿಗೊಳಿಸಿದೆ.
ಜೈಲಿನೊಳಗೆ ಅಕ್ರಮ ಹಣದ ವಹಿವಾಟು ನಡೆಯುತ್ತಿದೆ ಎಂಬ ಆರೋಪಗಳು ಹಾಗೂ ಖೈದಿಗಳನ್ನು ಭೇಟಿ ಮಾಡಲು ಬರುವ ಕುಟುಂಬಸ್ಥರು ನೀಡುವ ಹಣ ದುರ್ಬಳಕೆಯಾಗುತ್ತಿದೆ ಎಂಬ ದೂರುಗಳು ಹಲವು ಬಾರಿ ಕೇಳಿಬಂದಿದ್ದವು. ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಿ ಪ್ರತಿಯೊಂದು ವಹಿವಾಟನ್ನೂ ಪಾರದರ್ಶಕಗೊಳಿಸುವ ಉದ್ದೇಶದಿಂದ ಕಾರಾಗೃಹ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ಈ ಹೊಸ ವ್ಯವಸ್ಥೆಯನ್ನು ಜಾರಿಗೆ ತಂದಿದ್ದಾರೆ.
ಖೈದಿಗಳು ಇನ್ನು ನಗದು ಹಣ ಬಳಸುವುದಿಲ್ಲ. ಹಾಗೆಯೇ PhonePe, Google Pay ಅಥವಾ ATM ಕಾರ್ಡ್ ಬಳಸುವ ಅವಕಾಶವೂ ಇರುವುದಿಲ್ಲ. ಅದರ ಬದಲಿಗೆ ಡಿಜಿಟಲ್ ಗುರುತಿನ ಆಧಾರಿತ ವ್ಯವಸ್ಥೆ ಜಾರಿಯಾಗಲಿದೆ.
- ಪ್ರತಿ ಖೈದಿಗೂ ಬ್ಯಾಂಕ್ ಖಾತೆ: ಜೈಲಿನಲ್ಲಿರುವ ಎಲ್ಲಾ ಖೈದಿಗಳಿಗೆ ಬ್ಯಾಂಕ್ ಖಾತೆ ತೆರೆಯಲಾಗಿದೆ. ಕುಟುಂಬಸ್ಥರು ನೇರವಾಗಿ ಆ ಖಾತೆಗೆ ಹಣ ಜಮೆ ಮಾಡಬಹುದು. ಜೈಲಿನೊಳಗೆ ಶ್ರಮದಾನ ಮಾಡಿ ಗಳಿಸುವ ಹಣವೂ ಇದೇ ಖಾತೆಗೆ ಸೇರುತ್ತದೆ.
- ಬೆರಳಚ್ಚು ಅಥವಾ ಮುಖ ಗುರುತಿಸುವಿಕೆ: ಕ್ಯಾಂಟೀನ್ನಲ್ಲಿ ಹಣ್ಣು, ಡ್ರೈ ಫ್ರೂಟ್ಸ್, ಬ್ರೆಡ್, ಬಿಸ್ಕೆಟ್, ಚಾಕೊಲೇಟ್, ಸೋಪು ಸೇರಿದಂತೆ ಅಗತ್ಯ ವಸ್ತುಗಳನ್ನು ಖರೀದಿಸುವಾಗ ಖೈದಿಗಳು ಬೆರಳಚ್ಚು ಅಥವಾ ಫೇಷಿಯಲ್ ರೆಕಗ್ನಿಷನ್ ಮೂಲಕ ತಮ್ಮ ಗುರುತನ್ನು ದೃಢೀಕರಿಸಬೇಕು.
- ನೇರವಾಗಿ ಖಾತೆಯಿಂದ ಹಣ ಕಡಿತ: ವಸ್ತು ಖರೀದಿಸಿದ ತಕ್ಷಣ ಸಂಬಂಧಿತ ಮೊತ್ತ ಖೈದಿಯ ಬ್ಯಾಂಕ್ ಖಾತೆಯಿಂದ ಕಾರಾಗೃಹ ಇಲಾಖೆಯ ಖಾತೆಗೆ ಸ್ವಯಂಚಾಲಿತವಾಗಿ ವರ್ಗಾವಣೆಯಾಗುತ್ತದೆ.
ಈ ವ್ಯವಸ್ಥೆಯಡಿ ಖೈದಿಗಳು ಮನಬಂದಂತೆ ಖರ್ಚು ಮಾಡಲು ಅವಕಾಶ ಇರುವುದಿಲ್ಲ. ಕ್ಯಾಂಟೀನ್ನಲ್ಲಿ ಖರೀದಿಗೆ ತಿಂಗಳಿಗೆ ಗರಿಷ್ಠ 5,000 ರೂ. ಮಿತಿಯನ್ನು ನಿಗದಿಪಡಿಸಲಾಗಿದೆ. ಖೈದಿಗಳ ಬ್ಯಾಂಕ್ ಪಾಸ್ಬುಕ್ಗಳು ಜೈಲು ಅಧಿಕಾರಿಗಳ ವಶದಲ್ಲೇ ಸುರಕ್ಷಿತವಾಗಿರುತ್ತವೆ.
“ಜೈಲು ಕ್ಯಾಂಟೀನ್ಗಳಲ್ಲಿ ಅಕ್ರಮ ಹಣದ ವಹಿವಾಟು ತಡೆಯಲು ಕ್ಯಾಶ್ಲೆಸ್ ವ್ಯವಸ್ಥೆ ಜಾರಿಗೊಳಿಸಲಾಗಿದೆ. ಖೈದಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದರಿಂದ ಪ್ರತಿಯೊಂದು ವಹಿವಾಟಿಗೂ ಸ್ಪಷ್ಟ ಲೆಕ್ಕ ಇರುತ್ತದೆ ಮತ್ತು ಅಕ್ರಮಗಳಿಗೆ ಅವಕಾಶ ಇರುವುದಿಲ್ಲ” ಎಂದು ರಾಜ್ಯ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಡಿಜಿಪಿ ಅಲೋಕ್ ಕುಮಾರ್ ತಿಳಿಸಿದ್ದಾರೆ.
ಮೊದಲು ಪರಪ್ಪನ ಅಗ್ರಹಾರದಲ್ಲಿ, ಬಳಿಕ ರಾಜ್ಯಾದ್ಯಂತ
Bangalore [Bangalore],Bangalore,Karnataka














