ಹೌದು, ಮುಂಗಾರು ಮಳೆಯ ಅಬ್ಬರ ಶುರುವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ನೈರುತ್ಯ ರೈಲ್ವೆ (SWR) ಕೊಂಕಣ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಳಾಪಟ್ಟಿಯಲ್ಲಿ ಭಾರೀ ಬದಲಾವಣೆ ಮಾಡಿದೆ. ಮಳೆಗಾಲದಲ್ಲಿ ರೈಲುಗಳು ನಿಧಾನಗತಿಯಲ್ಲಿ ಚಲಿಸಬೇಕಾದ ಅನಿವಾರ್ಯತೆ ಇರುವುದರಿಂದ ಈ ಹೊಸ ‘ಮುಂಗಾರು ವೇಳಾಪಟ್ಟಿ’ಯನ್ನು (Monsoon Time Table) ಜಾರಿಗೆ ತರಲಾಗಿದೆ.
ರೈಲ್ವೆ ಇಲಾಖೆಯ ಪ್ರಕಟಣೆಯ ಪ್ರಕಾರ, ಜೂನ್ 15, 2026 ರಿಂದ ಅಕ್ಟೋಬರ್ 20, 2026 ರವರೆಗೆ ಈ ಹೊಸ ಮುಂಗಾರು ವೇಳಾಪಟ್ಟಿ ಚಾಲ್ತಿಯಲ್ಲಿರಲಿದೆ. ಜೂನ್ 15ರಂದು ಮತ್ತು ಆ ನಂತರ ಹೊರಡುವ ರೈಲುಗಳಿಗೆ ಈ ಹೊಸ ಸಮಯ ಅನ್ವಯವಾಗಲಿದೆ.
ಕರಾವಳಿ ಮತ್ತು ಕೊಂಕಣ ಮಾರ್ಗವಾಗಿ ಸಂಚರಿಸುವ ಈ ಕೆಳಗಿನ ಪ್ರಮುಖ ರೈಲುಗಳ ಸಮಯ ಬದಲಾಗಿದೆ
ರೈಲು ಸಂಖ್ಯೆ 16595/16596: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KSR) ಬೆಂಗಳೂರು – ಕಾರವಾರ – KSR ಬೆಂಗಳೂರು ಪ್ರತಿದಿನದ ಎಕ್ಸ್ಪ್ರೆಸ್ (ಪಂಚಗಂಗಾ ಎಕ್ಸ್ಪ್ರೆಸ್). ರೈಲು ಸಂಖ್ಯೆ 16585/16586: ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ (SMVT) ಬೆಂಗಳೂರು – ಮುರುಡೇಶ್ವರ – SMVT ಬೆಂಗಳೂರು ಪ್ರತಿದಿನದ ಎಕ್ಸ್ಪ್ರೆಸ್. ರೈಲು ಸಂಖ್ಯೆ 16515/16516: ಯಶವಂತಪುರ – ಕಾರವಾರ – ಯಶವಂತಪುರ ವಾರಕ್ಕೆ ಮೂರು ದಿನದ ಎಕ್ಸ್ಪ್ರೆಸ್. ರೈಲು ಸಂಖ್ಯೆ 12741/12742: ವಾಸ್ಕೋ ಡಾ ಗಾಮ – ಪಾಟ್ನಾ – ವಾಸ್ಕೋ ಡಾ ಗಾಮ ಸಾಪ್ತಾಹಿಕ ಸೂಪರ್ಫಾಸ್ಟ್ ಎಕ್ಸ್ಪ್ರೆಸ್. ರೈಲು ಸಂಖ್ಯೆ 11097/11098: ಪುಣೆ – ಎರ್ನಾಕುಲಂ – ಪುಣೆ ಸಾಪ್ತಾಹಿಕ ಎಕ್ಸ್ಪ್ರೆಸ್.
ಪಾಟ್ನಾದಿಂದ ವಾಸ್ಕೋಡಗಾಮಾ ಗೆ ಆಗಮಿಸುವ ರೈಲು ಸಾಮಾನ್ಯವಾಗಿ ತಲುಪುವುದಕ್ಕಿಂತ 30-45 ನಿಮಿಷ ತಡ ಮಾಡಲಿದೆ. ಇದು ಪನ್ವೇಲ್, ಚಿಪ್ಲುನ್, ರತ್ನಗಿರಿ, ಸಾವಂತವಾಡಿ, ಟಿವಿನ್, ಮಡಗಾಂವ್ನಲ್ಲಿ ನಿಧಾನ ಸಂಚಾರ ಮಾಡಲಿದೆ.
ಕಾರವಾರ-ಯಶವಂತಪುರ ಎಕ್ಸ್ಪ್ರೆಸ್ ರೈಲು ಈ ಸಮಯದಲ್ಲಿ 30 ನಿಮಿಷದಿಂದ 2 ತಾಸು ತಡವಾಗಲಿದೆ. ಅದರಲ್ಲೂ ಮುಖ್ಯವಾಗಿ ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಸೂರತ್ಕಲ್ ವಿಭಾಗದಲ್ಲಿ ರೈಲು ಆಮೆಗತಿಯಲ್ಲಿ ಸಾಗಲಿದೆ!
ಕರಾವಳಿ ಜನರ ಜೀವನಾಡಿಯಾಗಿರುವ ‘ಪಂಚಗಂಗಾ’ ಕೂಡ ಸಾಮಾನ್ಯ ವೇಳಾಪಟ್ಟಿಗಿಂತ 2 ತಾಸು ತಡವಾಗಲಿದೆ. ಅದರಲ್ಲೂ ಮುಖ್ಯವಾಗಿ ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ, ಮುರ್ಡೇಶ್ವರ, ಭಟ್ಕಳ, ಬೈಂದೂರು, ಕುಂದಾಪುರ, ಉಡುಪಿ, ಸೂರತ್ಕಲ್ ಭಾಗದಲ್ಲಿ ತಲಾ 20-45 ನಿಮಿಷ ತಡವಾಗಲಿದೆ.
ಪುಣೆ-ಎರ್ನಾಕುಲಂ ರೈಲು ಸಂಚಾರದಲ್ಲಿ 2 ತಾಸು ತಡ ಉಂಟಾಗಲಿದ್ದು, ಮಡಗಾಂವ್, ಕಾರವಾರ, ಗೋಕರ್ಣ ಪ್ರದೇಶದ ಪ್ರಯಾಣವೇ ಹೆಚ್ಚು ಪ್ರಭಾವಿತವಾಗಲಿದೆ. ಕೊನೆಗೆ ಎಲ್ಲರ ಫೇವರೇಟ್ ಮತ್ಸ್ಯಗಂಧ ಕೂಡ ಸಾಮಾನ್ಯಕ್ಕಿಂತ 2 ತಾಸು ತಡವಾಗಲಿದ್ದು, ಉಡುಪಿ ಮಾರ್ಗದಲ್ಲಿ ಅತ್ಯಂತ ನಿಧಾನವಾಗಿ ಕ್ರಮಿಸಲಿದೆ.












