Last Updated:
ಬೆಂಗಳೂರು ಐಒಸಿ ಜಂಕ್ಷನ್ ಹಳೆಯ ಫ್ಲೈಓವರ್ ತೆರವು, ಬಿ ಸ್ಮೈಲ್ ನಿಂದ ಹೊಸ ಮೇಲ್ಸೇತುವೆ ನಿರ್ಮಾಣಕ್ಕೆ ಸಿದ್ಧತೆ. ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಸಂಪರ್ಕ ಸುಧಾರಣೆ, ತಾತ್ಕಾಲಿಕ ಟ್ರಾಫಿಕ್ ದಟ್ಟಣೆ ನಿರೀಕ್ಷೆ ಮಾಡಲಾಗಿದೆ.
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Silicon City Bengaluru) ಟ್ರಾಫಿಕ್ ಸಮಸ್ಯೆ (Traffic Problem) ಕಡಿಮೆ ಮಾಡಲು, ಸುಗಮ ಸಂಚಾರವನ್ನು ಖಚಿತಪಡಿಸಿಕೊಳ್ಳಲು ನಗರದ ಪ್ರಮುಖ ಮೇಲ್ಸೇತುವೆಯನ್ನು ತೆರವು ಮಾಡಲು ಅಧಿಕಾರಿಗಳು ಮುಂದಾಗಿದ್ದಾರೆ. ಹೌದು, ಬೆಂಗಳೂರಿನ ಐಒಸಿ ಜಂಕ್ಷನ್ (IOC Junction Flyover) ಅನ್ನು ತೆರವು ಮಾಡಲು ಯೋಜನೆ ರೂಪಿಸಲಾಗಿದ್ದು, ಇದರಿಂದ ಆ ಭಾಗದಲ್ಲಿ ಟ್ರಾಫಿಕ್ ಸಮಸ್ಯೆ ಎದುರಾಗಲಿದ್ದು, ಈ ಹಿನ್ನೆಲೆಯಲ್ಲಿ ವಾಹನ ಸವಾರರಿಗೆ ಪರ್ಯಾಯ ಮಾರ್ಗಗಳನ್ನು (Traffic Advisory) ಬಳಕೆ ಮಾಡಲು ಸಲಹೆ ನೀಡಿದ್ದಾರೆ.
ಈಗ ಇರುವ ಮೇಲ್ಸೇತುವೆಯನ್ನ ಎರಡು ದಶಕಗಳ ಹಿಂದೆ ರೈಲ್ವೆ ಇಲಾಖೆ ನಿರ್ಮಾಣ ಮಾಡಿತ್ತು. ಆದರೆ ಬೆಂಗಳೂರಿನ ಟ್ರಾಫಿಕ್ ಹೆಚ್ಚಳ ಹಾಗೂ ಆಧುನಿಕ ಸಂಚಾರ ಬೇಡಿಕೆಗಳಿಗೆ ಈ ಮೇಲ್ಸೇತುವೆ ಸಾಕಾದ ಕಾರಣ ಹೊಸ ಮೇಲ್ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಹೊಸ ಮೇಲ್ಸೇತುವೆ ನಿರ್ಮಾಣ ಮಾಡೋದರಿಂದ ಸರ್ ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಗೆ ಹೋಗುವ ಪ್ರಯಾಣಿಕರಿಗೆ ಅನುಕೂಲ ಆಗಲಿದೆ.
ಅಲ್ಲದೇ, ಹೊಸ ಮೇಲ್ಸೇತುವೆ ವೃತ್ತಾಕಾರದ ಎತ್ತರದ ರೋಟರಿಯನ್ನು ಹೊಂದಿರಲಿದೆ ಇದು ಉತ್ತರ ಭಾಗದಲ್ಲಿ ಕಮ್ಮನಹಳ್ಳಿ, ಪಶ್ಚಿಮದಲ್ಲಿ ಮಾರುತಿ ಸೇವಾ ನಗರ, ಪೂರ್ವದಲ್ಲಿ ಬಾಣಸವಾಡಿ ಮತ್ತು ದಕ್ಷಿಣ ಭಾಗದಲ್ಲಿ ಬೈಯಪ್ಪನಹಳ್ಳಿ ಕಡೆಗೆ ಇಳಿಜಾರುಗಳನ್ನು ಹೊಂದಿರಲಿದೆ. ಇದರಿಂದ ಇಂದಿರಾನಗರ, ಫ್ರೇಸರ್ ಟೌನ್ ಮತ್ತು ಕಮ್ಮನಹಳ್ಳಿ ಕಡೆಗೆ ಪ್ರಯಾಣ ಮಾಡುವ ವಾಹನ ಸವಾರರಿಗೆ ಅನುಕೂಲ ಆಗಲಿದೆ.
ವಿಶೇಷವಾಗಿ ಹೊಸ ಯೋಜನೆಯಲ್ಲಿ ಮಾರುತಿ ಸೇವಾ ನಗರ ರಸ್ತೆಯಿಂದ 1.5 ಕಿಮೀ ಮೇಲ್ಸೇತುವೆ ಕೂಡ ಸೇರ್ಪಡೆ ಮಾಡಲಾಗಿದೆ. ಇದರಿಂದ ಸ್ಥಳೀಯರ ಸಂಚಾರಕ್ಕೆ ಅನುಕೂಲ ಆಗಲಿದ್ದು, ದೂರದ ಪ್ರಯಾಣಿಕರಿಗೂ ಟ್ರಾಫಿಕ್ ಕಿರಿಕಿರಿ ದೂರ ಆಗಲಿದೆ. ಬೆಂಗಳೂರು ಸ್ಮಾರ್ಟ್ ಇನ್ಪ್ರಾಸ್ಟ್ರಕ್ಚರ್ ಲಿಮಿಟೆಡ್ (ಬಿ-ಸ್ಮೈಲ್) ಸಂಸ್ಥೆ ನಿರ್ಮಾಣ ಮಾಡುತ್ತಿದ್ದು, ನಗರದ ಪ್ರಮುಖ ಪ್ರದೇಶದ ದೊಡ್ಡ ಟ್ರಾಫಿಕ್ ಸಮಸ್ಯೆಗೆ ಬ್ರೇಕ್ ಹಾಕುವ ನಿರೀಕ್ಷೆ ಇದೆ.
ಆದರೆ, ಸದ್ಯ ಇರುವ ಫ್ಲೈಓವರ್ ತೆರವು ಮಾಡುವ ಕಾರಣ, ದೊಡ್ಡ ಬಾಣಸವಾಡಿ ರಸ್ತೆ, ಬೈಯಪ್ಪನಹಳ್ಳಿ ರಸ್ತೆ, ಕಮ್ಮನಹಳ್ಳಿ ರಸ್ತೆ ಸೇರಿದಂತೆ ಇತರ ಪ್ರಮುಖ ಮಾರ್ಗಗಳಲ್ಲಿ ಭಾರೀ ಸಂಚಾರ ದಟ್ಟಣೆ ಉಂಟಾಗಲಿದೆ. ಈ ಕಾರಣದಿಂದ ಫ್ಲೈಓವರ್ ತೆರವು ಕಾಮಗಾರಿ ಆರಂಭ ಆಗುವ ಮುನ್ನವೇ ಹಲವು ಏಜೆನ್ಸಿಗಳೊಂದಿಗೆ ಸಮನ್ವಯ ನಡೆಸಿ ಸಮಗ್ರವಾಗಿ ಮಾರ್ಗ ಬದಲಾವಣೆ ಮಾಡಲು ಯೋಜನೆ ರೂಪಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಮಾರ್ಗದಲ್ಲಿ ಹೆಚ್ಚು ರೈಲ್ವೆ ಕಾರಿಡಾರ್ ಗಳು ಇರೋವುದರಿಂದ ಹೊಸ ಫ್ಲೈಓವರ್ ನಿರ್ಮಾಣ ಇಲ್ಲಿ ನಿರ್ಣಯಕ ಸ್ಥಾನವನ್ನು ಪಡೆದುಕೊಂಡಿದೆ.













