Last Updated:
ಬೆಂಗಳೂರಿನ 2ನೇ ವಿಮಾನ ನಿಲ್ದಾಣಕ್ಕೆ ತುಮಕೂರಿನ ಶಿರಾ ಪರಿಗಣಿಸಲು ಕೇಂದ್ರ ಸಚಿವ ವಿ. ಸೋಮಣ್ಣ ಮನವಿ. ಶಿರಾ ರಸ್ತೆ, ರೈಲು ಸಂಪರ್ಕ, ಕೈಗಾರಿಕಾ ಪ್ರದೇಶ ಹೊಂದಿದೆ.
ತುಮಕೂರು: ಬೆಂಗಳೂರಿನ ಎರಡನೇ ವಿಮಾನ ನಿಲ್ದಾಣ ನಿರ್ಮಾಣಕ್ಕೆ (International Airport) ತುಮಕೂರು ಜಿಲ್ಲೆಯ ಶಿರಾ (Tumakuru Sira) ಪ್ರದೇಶವನ್ನು ಪರಿಗಣಿಸುವಂತೆ ರೈಲ್ವೆ ಮತ್ತು ಜಲಶಕ್ತಿ ಕೇಂದ್ರ ಸಚಿವ ವಿ. ಸೋಮಣ್ಣ (V Somanna) ಅವರು, ಕೇಂದ್ರದ ನಾಗರಿಕ ವಿಮಾನಯಾನ ಸಚಿವ ಕೆ. ರಾಮಮೋಹನ್ ನಾಯ್ಡು ಅವರಿಗೆ ಮನವಿ ಮಾಡಿದ್ದಾರೆ.
ತುಮಕೂರು ಸಂಸದರಾಗಿರುವ ಸೋಮಣ್ಣ ಅವರು, ಈ ಕುರಿತಂತೆ ನಾಯ್ಡು ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ. ಶಿರಾದ ಆಯಕಟ್ಟಿನ ಸ್ಥಳದಲ್ಲಿದ್ದು, ರಸ್ತೆ ಮತ್ತು ರೈಲು ಸಂಪರ್ಕ, ಕೈಗಾರಿಕಾ ಪ್ರದೇಶ ಮತ್ತು ರಕ್ಷಣಾ ವ್ಯವಸ್ಥೆಯನ್ನು ಹೊಂದಿದೆ. ಇಲ್ಲಿ ಸಾಕಷ್ಟು ಭೂಮಿ ಮತ್ತು ಜಲ ಸಂಪನ್ಮೂಲಗಳು ಇವೆ. ಮಧ್ಯ ಮತ್ತು ಉತ್ತರ ಕರ್ನಾಟಕದ ಚುನಾಯಿತ ಜನಪ್ರತಿನಿಧಿಗಳು ಶಿರಾದಲ್ಲಿಯೇ ವಿಮಾನ ನಿಲ್ದಾಣ ಮಾಡಲು ಪ್ರಸ್ತಾಪಿಸಿದ್ದರು ಎಂದು ಸೋಮಣ್ಣ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಡಿಸಿಎಂ ಪರಮೇಶ್ವರ ಅವರು ಕೂಡ ತುಮಕೂರಿನ ಬಳಿಯೇ ಎರಡನೇ ವಿಮಾನ ನಿಲ್ದಾಣ ಮಾಡಲು ಒಲವು ವ್ಯಕ್ತಪಡಿಸಿದ್ದರು. ಇತ್ತ ತಾಂತ್ರಿಕ ತಂಡ ಈಗಾಗಲೇ ವಿಮಾನ ನಿಲ್ದಾಣಕ್ಕೆ ಎರಡು ಸ್ಥಳಗಳನ್ನು ಶಿಫಾರಸ್ಸು ಮಾಡಿದೆ. ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ. ತುಮಕೂರಿನಲ್ಲಿ ವಿಮಾನ ನಿಲ್ದಾಣ ಬಂದರೆ, ನನಗೆ ತುಂಬಾ ಸಂತಸವಾಗುತ್ತದೆ ಎಂದು ಡಿಸಿಎಂ ಪರಮೇಶ್ವರ್ ಹೇಳಿದ್ದರು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ತಾಂತ್ರಿಕ ಸಮಿತಿ ನೆಲಮಂಗಲದ ಕುಣಿಗಲ್ ರಸ್ತೆ ಮತ್ತು ಬಿಡದಿಯ ಸ್ಥಳಗಳನ್ನು ಗುರುತಿಸಿ ಶಿಫಾರಸ್ಸು ಮಾಡಿದೆ. ಡಿಜಿಸಿಎ ತಾಂತ್ರಿಕ ಮೌಲ್ಯಮಾಪನ ಪೂರ್ಣಗೊಳಿಸಿದ ನಂತರ ಅಂತಿಮ ನಿರ್ಧಾರವನ್ನು ಸರ್ಕಾರ ಕೈಗೊಳ್ಳಲಿದೆ. ಇತ್ತ ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಕೂಡ ಸರ್ಕಾರಕ್ಕೆ ಶಿರಾ ಬಳಿಯೇ ವಿಮಾನ ನಿಲ್ದಾಣ ಮಾಡಲು ಒತ್ತಾಯ ಮಾಡಿದ್ದರು.
Bangalore [Bangalore],Bangalore,Karnataka














