Last Updated:
ಬೆಂಗಳೂರು ಕೆ.ಆರ್ ಮಾರುಕಟ್ಟೆ ಹತ್ತಿರದ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆ, ಇಂಡೋ ಇಸ್ಲಾಮಿಕ್ ಶೈಲಿ, ವಸ್ತುಸಂಗ್ರಹಾಲಯ, ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ ಪ್ರವಾಸಿಗರ ಆಕರ್ಷಣೆಯಾಗಿದೆ.
ಬೆಂಗಳೂರಿನ ಕೆ.ಆರ್. ಮಾರುಕಟ್ಟೆಯ (Bengaluru KR Market) ಹತ್ತಿರವಿರುವ ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಯು ನಗರದ (Tipu Sultan Summer Palace) ಪ್ರಮುಖ ಐತಿಹಾಸಿಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಸುತ್ತಲೂ ಸದಾ ವಾಹನಗಳ ಟ್ರಾಫಿಕ್, ವ್ಯಾಪಾರಿಗಳ ಗದ್ದಲ ಮತ್ತು ಮೆಟ್ರೋ ರೈಲಿನ ಸದ್ದು (Namma Metro) ಇರುತ್ತದೆ. ಆದರೆ, ಈ ಅರಮನೆಯ ಆವರಣದೊಳಗೆ ಕಾಲಿಡುತ್ತಿದ್ದಂತೆ ಒಂದು ರೀತಿಯ ಪ್ರಶಾಂತತೆ ಸಿಗುತ್ತದೆ. ಪ್ರಮುಖವಾಗಿ ತೇಗದ ಮರದಿಂದಲೇ ನಿರ್ಮಿಸಲಾದ ಈ ಸುಂದರ ಅರಮನೆಯು ನಮ್ಮನ್ನು ನೇರವಾಗಿ 18ನೇ ಶತಮಾನದ ಮೈಸೂರು ಸಾಮ್ರಾಜ್ಯದ (Mysuru Kings) ಕಾಲಕ್ಕೆ ಕರೆದೊಯ್ಯುತ್ತದೆ. ಸಿಲಿಕಾನ್ ಸಿಟಿಯ ಕಾಂಕ್ರೀಟ್ ಕಟ್ಟಡಗಳ ನಡುವೆ ಈ ಅಪರೂಪದ ಮರದ ಅರಮನೆಯ ಒಂದು ಕಿರು ಪರಿಚಯ ಇಲ್ಲಿದೆ.
ಅರಮನೆಯ ಆವರಣ ಪ್ರವೇಶಿಸುತ್ತಿದ್ದಂತೆ ಮೊದಲು ನಮ್ಮನ್ನು ಸೆಳೆಯುವುದು ಅದರ ಭವ್ಯವಾದ ಮುಂಭಾಗ. ಕಲ್ಲು ಅಥವಾ ಸಿಮೆಂಟ್ ಕಟ್ಟಡಗಳನ್ನು ನೋಡಿ ರೂಢಿಯಾದ ನಮಗೆ, ಸಂಪೂರ್ಣವಾಗಿ ತೇಗದ ಮರದಿಂದ ನಿರ್ಮಿಸಲಾದ ಈ ಎರಡು ಅಂತಸ್ತಿನ ಅರಮನೆ ಅಚ್ಚರಿ ಮೂಡಿಸುತ್ತದೆ. ಇಂಡೋ-ಇಸ್ಲಾಮಿಕ್ ಶೈಲಿಯಲ್ಲಿ ಕೆತ್ತಲಾದ ಬೃಹತ್ ಸ್ತಂಭಗಳು ಮತ್ತು ಸುಂದರ ಕಮಾನುಗಳು ರಜಪೂತ ಮತ್ತು ಮೊಘಲ್ ಸಂಸ್ಕೃತಿಯ ಸಮ್ಮಿಲನದಂತೆ ಕಾಣುತ್ತವೆ. ಮರದ ಕಂಬಗಳ ಮೇಲೆ ಬಿಡಿಸಲಾದ ಹೂವಿನ ವಿನ್ಯಾಸಗಳನ್ನು ಕೈಯಿಂದ ಮುಟ್ಟಿ ಅನುಭವಿಸುವುದೇ ಒಂದು ರೋಮಾಂಚನ. ಅಂದಿನ ಕಾಲದಲ್ಲಿ ಇದನ್ನು ‘ರಶ್ಕ್-ಎ-ಜನ್ನತ್’ (ಸ್ವರೂಪದಲ್ಲಿ ಸ್ವರ್ಗದಂತೆ ಇರುವ ತಾಣ) ಎಂದು ಕರೆಯುತ್ತಿದ್ದರು.
ಮೆಟ್ಟಿಲುಗಳನ್ನು ಹತ್ತಿ ಮೇಲಿನ ಅಂತಸ್ತಿಗೆ ಹೋದಾಗ ವಿಶಾಲವಾದ ದರ್ಬಾರ್ ಹಾಲ್ ನಮ್ಮನ್ನು ಸ್ವಾಗತಿಸುತ್ತದೆ. ಎರಡು ಬದಿಯ ಬಾಲ್ಕನಿಗಳಲ್ಲಿ ನಿಂತು ನೋಡಿದಾಗ, ಅಂದು ಟಿಪ್ಪು ಸುಲ್ತಾನ್ ತನ್ನ ಮಂತ್ರಿಗಳೊಂದಿಗೆ ಕುಳಿತು ಪ್ರಜೆಗಳ ಅಹವಾಲು ಆಲಿಸುತ್ತಿದ್ದ ದೃಶ್ಯ ಕಣ್ಣಮುಂದೆ ಸುಳಿದುಹೋಗುತ್ತದೆ. ಇಲ್ಲಿನ ಗೋಡೆಗಳ ಮೇಲಿನ ಬಣ್ಣಗಳು ಕೊಂಚ ಮಸುಕಾಗಿದ್ದರೂ, ಅಂದಿನ ಕಾಲದ ರಾಜವೈಭೋಗದ ಕಥೆಯನ್ನು ಇಂದಿಗೂ ಸಾರುತ್ತಿವೆ.
ಅರಮನೆಯ ಕೆಳಮಹಡಿಯ ಕೋಣೆಗಳನ್ನು ಈಗ ಒಂದು ಸುಂದರ ವಸ್ತುಸಂಗ್ರಹಾಲಯವನ್ನಾಗಿ ಮಾಡಲಾಗಿದೆ. ಅಲ್ಲಿ ಹೆಜ್ಜೆ ಇಡುತ್ತಿದ್ದಂತೆ ಯುದ್ಧದ ದಿನಗಳ ತೀವ್ರತೆ ನಮಗೆ ಅರಿವಾಗುತ್ತದೆ. ಟಿಪ್ಪು ಸುಲ್ತಾನ್ ಮತ್ತು ಹೈದರ್ ಅಲಿ ಬಳಸುತ್ತಿದ್ದ ಅಂದಿನ ಕಾಲದ ನಾಣ್ಯಗಳು, ಪರ್ಷಿಯನ್ ಭಾಷೆಯ ಶಾಸನಗಳು ಇತಿಹಾಸದ ಆಸಕ್ತರನ್ನು ಮಂತ್ರಮುಗ್ಧರನ್ನಾಗಿಸುತ್ತವೆ.
ಟಿಪ್ಪು ಬೇಸಿಗೆಯ ಅರಮನೆಯು ಈಗ ಪುರಾತತ್ವ ಇಲಾಖೆಯ ಅಧೀನದಲ್ಲಿರುವುದರಿಂದ ಅರಮನೆಯನ್ನು ಪ್ರವೇಶಿಸಲು ಟಿಕೆಟನ್ನು ಖರೀದಿಮಾಡಬೇಕು. ಟಿಕೆಟನ್ನು ಖರೀದಿ ಮಾಡಲು ಪ್ರವೇಶ ದ್ವಾರದಲ್ಲಿ ಒಂದು ಕ್ಯೂ.ಆರ್. ಕೋಡನ್ನು ಇರಿಸಿರುತ್ತಾರೆ. ಆ ಕ್ಯೂ.ಆರ್. ಕೋಡ್ ಸ್ಕ್ಯಾನ್ ಮಾಡಿ ಆನ್ಲೈನ್ ಮೂಲಕ ಟಿಕೆಟ್ ಬುಕ್ ಮಾಡಿಕೊಳ್ಳಬೇಕಾಗುತ್ತದೆ. ಭಾರತೀಯರಿಗೆ ಟಿಕೆಟ್ ದರವನ್ನು 20 ರೂಪಾಯಿ ಮತ್ತು ವಿದೇಶಿ ಪ್ರವಾಸಿಗರಿಗೆ 200 ರೂಪಾಯಿಗಳನ್ನು ನಿಗದಿ ಮಾಡಲಾಗಿದೆ.
ಅರಮನೆಯ ಪಕ್ಕದಲ್ಲೇ ಇರುವ ಮತ್ತೊಂದು ಐತಿಹಾಸಿಕ ಮತ್ತು ಧಾರ್ಮಿಕ ಪ್ರಮುಖ ತಾಣವೆಂದರೆ “ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಸ್ಥಾನ”. ಈ ದೇವಸ್ಥಾನವು ಅಂದಿನ ಬೆಂಗಳೂರು ಕೋಟೆಯ ಆವರಣದಲ್ಲೇ ಇದ್ದಿದ್ದರಿಂದ ಇದಕ್ಕೆ “ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನ” ಎಂಬ ಹೆಸರು ಬಂದಿದೆ. ಟಿಪ್ಪು ಸುಲ್ತಾನ್ ಕಾಲದ ಯುದ್ಧಗಳ ಸಂದರ್ಭದಲ್ಲಿ ಈ ದೇವಾಲಯದ ಗೋಡೆಗಳಿಗೆ ಹಾನಿಯಾಗಿದ್ದ ಕುರುಹುಗಳನ್ನು ಇಂದಿಗೂ ಕಾಣಬಹುದು. ನೀವು ಟಿಪ್ಪು ಸುಲ್ತಾನ್ ಬೇಸಿಗೆ ಅರಮನೆಗೆ ಭೇಟಿ ನೀಡಿದಾಗ, ಅದರ ಪಕ್ಕದಲ್ಲೇ ಕೃಷ್ಣ ರಾಜೇಂದ್ರ (ಕೆ.ಆರ್) ರಸ್ತೆಯಲ್ಲಿರುವ ಈ ಶಾಂತಿಯುತ ಹಾಗೂ ಐತಿಹಾಸಿಕ ಕೋಟೆ ವೆಂಕಟರಮಣ ಸ್ವಾಮಿ ದೇವಸ್ಥಾನಕ್ಕೂ ತಪ್ಪದೇ ಭೇಟಿ ನೀಡಿ ಸ್ವಾಮಿಯ ಆಶೀರ್ವಾದ ಪಡೆಯಬಹುದು.
Bangalore [Bangalore],Bangalore,Karnataka












