Last Updated:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2026-27rರ ಡೊಮೆಸ್ಟಿಕ್ ಸೀಸನ್ ಆರಂಭಕ್ಕೂ ಮುನ್ನ ತನ್ನ ಕ್ರಿಕೆಟ್ ನಿಯಮಗಳಲ್ಲಿ ಹಲವಾರು ಮಹತ್ವದ ಬದಲಾವಣೆಗಳನ್ನು ಮಾಡಿದೆ.
2026-27ರ ದೇಶೀಯ ಕ್ರಿಕೆಟ್ ಋತುವಿಗೆ ಮುಂಚಿತವಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ತನ್ನ ಆಟದ ನಿಯಮಗಳಲ್ಲಿ ಹಲವು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಇದರಲ್ಲಿ ಪ್ರಮುಖ ಬದಲಾವಣೆಯೆಂದರೆ ಬೌಲರ್ ಉದ್ದೇಶಪೂರ್ವಕವಾಗಿ ‘ಫ್ರಂಟ್-ಫೂಟ್ ನೋ-ಬಾಲ್’ ಎಸೆದರೆ ಅಥವಾ ಅವರ ಕಾಲನ್ನ ನಿಗದಿತ ಪ್ರದೇಶದಿಂದ ಹೊರಗಿಟ್ಟು ಚೆಂಡನ್ನು ಎಸೆದರೆ ಆ ಬೌಲರ್ಅನ್ನು ಇಡೀ ಪಂದ್ಯಕ್ಕೆ ಅಮಾನತುಗೊಳಿಸಲು ನಿಯಮದಲ್ಲಿ ಬದಲಾವಣೆ ತರಲಾಗಿದೆ.
ಹಿಂದೆ ಅಂತಹ ಸಂದರ್ಭದಲ್ಲಿ ಬೌಲರ್ ಅನ್ನು ಆಯಾ ಇನ್ನಿಂಗ್ಸ್ಗೆ ಮಾತ್ರ ಬೌಲಿಂಗ್ ಮಾಡುವುದನ್ನು ನಿಷೇಧಿಸಲಾಗುತ್ತಿತ್ತು. ಆದರೆ ಈಗ ಹೊಸ ನಿಯಮದ ಪ್ರಕಾರ ಆ ಬೌಲರ್ ಅನ್ನು ಆ ಇನ್ನಿಂಗ್ಸ್ಗೆ ಮಾತ್ರವಲ್ಲದೆ, ಪಂದ್ಯದ ಉಳಿದ ಭಾಗದಲ್ಲೂ ಬೌಲಿಂಗ್ ಮಾಡುವುದನ್ನು ನಿಷೇಧಿಸಲಾಗುತ್ತದೆ. ಆನ್-ಫೀಲ್ಡ್ ಅಂಪೈರ್ಗಳು ನಿಯಮ 41.8ರ ಅಡಿಯಲ್ಲಿ ಇಡೀ ಪಂದ್ಯಕ್ಕೆ ಅಮಾನತುಗೊಳಿಸಬೇಕೆ ಎಂದು ನಿರ್ಧರಿಸುತ್ತಾರೆ. ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ಸೂಚಿಸಿದ ಈ ಬದಲಾವಣೆಗಳನ್ನು ಬಿಸಿಸಿಐ ಎಲ್ಲಾ ರಾಜ್ಯ ಕ್ರಿಕೆಟ್ ಸಂಘಗಳೊಂದಿಗೆ ಹಂಚಿಕೊಂಡಿದೆ.
ಮತ್ತೊಂದು ಪ್ರಮುಖ ಬದಲಾವಣೆ ದಿನದ ಆಟದ ಅಂತ್ಯಕ್ಕೆ ಸಂಬಂಧಿಸಿದೆ. ಹೊಸ ನಿಯಮದ ಪ್ರಕಾರ, ದಿನದ ಕೊನೆಯ ಓವರ್ನಲ್ಲಿ ವಿಕೆಟ್ ಬಿದ್ದರೆ ಆ ಓವರ್ ಪೂರ್ಣಗೊಳಿಸಲೇಬೇಕು. ಹಿಂದೆ ಅಂತಿಮ ಓವರ್ನಲ್ಲಿ ವಿಕೆಟ್ ಬಿದ್ದರೆ ತಕ್ಷಣವೇ ಸ್ಟಂಪ್ಸ್ ಎಂದು ಘೋಷಿಸಲಾಗುತ್ತಿತ್ತು. ಇದು ಬೌಲಿಂಗ್ ತಂಡಕ್ಕೆ ಅನ್ಯಾಯ ಎಂದು ಭಾವಿಸಿದೆ. ಎಂಸಿಸಿ ಕಾನೂನು 12.5.2 ದಿನದ ಕೊನೆಯಲ್ಲಿ ಹೊಸ ಬ್ಯಾಟ್ಸ್ಮನ್ ಕ್ರೀಸ್ಗೆ ಬರುವುದನ್ನು ಹಿಂದಿನ ನಿಯಮ ತಡೆಯುತ್ತದೆ ಎಂದು ನಂಬಿತ್ತು. ಈ ಕಾರಣಕ್ಕಾಗಿ ನಿಯಮವನ್ನು ತಿದ್ದುಪಡಿ ಮಾಡಲಾಗಿದ್ದು, ಕೇವಲ 2 ಅಥವಾ 3 ಎಸೆತಗಳಿದ್ದರೂ ಹೊಸ ಬ್ಯಾಟರ್ ಬರಲೇಬೇಕೆಂದು ನಿಯಮ ತಿದ್ದುಪಡಿ ಮಾಡಲಾಗಿದೆ.
ಹೆಚ್ಚುವರಿಯಾಗಿ, ಪಂದ್ಯದ ಕೊನೆಯ ಇನ್ನಿಂಗ್ಸ್ನಲ್ಲಿ ಯಾವುದೇ ತಂಡವು ಇನ್ನಿಂಗ್ಸ್ ಅನ್ನು ಡಿಕ್ಲೇರ್ ಘೋಷಿಸಲು ಅಥವಾ ಬಿಟ್ಟುಕೊಡಲು ಸಾಧ್ಯವಾಗುವುದಿಲ್ಲ. ಆಟದ ಉತ್ಸಾಹಕ್ಕೆ ಹೊಂದಿಕೆಯಾಗದ ಕೃತಕ ಫಲಿತಾಂಶಗಳನ್ನು ಸಾಧಿಸಲು ಈ ನಿಬಂಧನೆಯನ್ನು ಬಳಸಲಾಗುತ್ತಿತ್ತು ಈ ಕಾರಣಕ್ಕಾಗಿ ಕಾನೂನು 15.2ಕ್ಕೆ ಬದಲಾವಣೆ ಮಾಡಲಾಗಿದೆ.
ಕೆಲವು ತಂಡಗಳು ಪಂದ್ಯದ ಕೊನೆಯ ಇನ್ನಿಂಗ್ಸ್ನಲ್ಲಿ (4ನೇ ಇನ್ನಿಂಗ್ಸ್) ಕೃತಕವಾಗಿ ಫಲಿತಾಂಶ ತರಲು (ಉದಾಹರಣೆಗೆ ಎದುರಾಳಿ ತಂಡಕ್ಕೆ ಸುಲಭವಾಗಿ ರನ್ ಗಳಿಸಲು ಬಿಟ್ಟು ಪಂದ್ಯ ಬೇಗ ಮುಗಿಸುವುದು) ಈ ನಿಯಮವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದವು.ಆದರೆ ಹೊಸ ನಿಯಮದ ಪ್ರಕಾರ ಪಂದ್ಯದ ಕೊನೆಯ ಇನ್ನಿಂಗ್ಸ್ನಲ್ಲಿ ಯಾವುದೇ ತಂಡವು ತನ್ನ ಇನ್ನಿಂಗ್ಸ್ ಅನ್ನು ಡಿಕ್ಲೇರ್ ಘೋಷಿಸಲು (Declare) ಅಥವಾ ಬಿಟ್ಟುಕೊಡಲು (Forfeit) ಅವಕಾಶವಿಲ್ಲ.ಪಂದ್ಯದ ಕೊನೆಯ ಇನ್ನಿಂಗ್ಸ್ನಲ್ಲಿ ಆಟಗಾರರು ಸಹಜವಾಗಿಯೇ ಆಡಬೇಕು. ಬ್ಯಾಟಿಂಗ್ ಮಾಡುವ ತಂಡದ ಎಲ್ಲಾ ವಿಕೆಟ್ಗಳು ಬೀಳುವವರೆಗೆ ಅಥವಾ ನಿಗದಿತ ಓವರ್ಗಳು/ಸಮಯ ಮುಗಿಯುವವರೆಗೆ ಪಂದ್ಯ ಮುಂದುವರಿಯುತ್ತದೆ.
ಏಕದಿನ ದೇಶೀಯ ಪಂದ್ಯಗಳಲ್ಲಿ ತಂಡದ ಮುಖ್ಯ ತರಬೇತುದಾರರಿಗೆ ಈಗ ‘ಡ್ರಿಂಕ್ಸ್ ಬ್ರೇಕ್’ ಸಮಯದಲ್ಲಿ ಮೈದಾನಕ್ಕೆ ಪ್ರವೇಶಿಸಲು ಅವಕಾಶ ನೀಡಲಾಗುವುದು. ಅಂತರರಾಷ್ಟ್ರೀಯ ಕ್ರಿಕೆಟ್ನಲ್ಲಿ ಇದೇ ರೀತಿಯ ನಿಯಮವನ್ನು ಜಾರಿಗೆ ತರಲು ಐಸಿಸಿ ಈಗಾಗಲೇ ಪ್ರಸ್ತಾಪಿಸಿದೆ.
ಹೊಸ ನಿಯಮಗಳ ಅಡಿಯಲ್ಲಿ ವಿಕೆಟ್ ಕೀಪರ್ಗಳಿಗೂ ಸ್ವಲ್ಪ ಪರಿಹಾರ ಸಿಕ್ಕಿದೆ. ಈಗ ಅವರು ಚೆಂಡು ಬೌಲ್ ಮಾಡುವ ಕ್ಷಣದಲ್ಲಿ ಮಾತ್ರ ತಮ್ಮ ಕೈಗವಸುಗಳನ್ನು ಸ್ಟಂಪ್ಗಳ ಹಿಂದೆ ಇಡಬೇಕಾಗುತ್ತದೆ. ಹಿಂದೆ ಬೌಲರ್ ತನ್ನ ರನ್-ಅಪ್ ಆರಂಭಿಸಿದ ತಕ್ಷಣವೇ (ಅಂದರೆ ಬೌಲಿಂಗ್ ಮಾಡಲು ಓಡಲು ಶುರುಮಾಡಿದಾಗಿನಿಂದ) ವಿಕೆಟ್ ಕೀಪರ್ ತನ್ನ ಎರಡು ಕೈಗವಸುಗಳನ್ನು (Gloves) ಕಡ್ಡಾಯವಾಗಿ ಸ್ಟಂಪ್ಗಳ ಹಿಂದೆಯೇ ಇಟ್ಟಿರಬೇಕಿತ್ತು. ಕೀಪರ್ ಸ್ವಲ್ಪ ಮುಂಚಿತವಾಗಿ ಕೈಗಳನ್ನು ಅಕ್ಕಪಕ್ಕ ಚಲಿಸಿದರೆ ಅಥವಾ ಸ್ಟಂಪ್ಗಿಂತ ಮುಂದೆ ತಂದರೆ ಅದನ್ನು ನೋಬಾಲ್ ಎಂದು ಪರಿಗಣಿಸಲಾಗುತ್ತಿತ್ತು. ಆ ಎಸೆತದಲ್ಲಿ ಬ್ಯಾಟ್ಸ್ಮನ್ ಔಟ್ ಆಗಿದ್ದರೂ (ಉದಾಹರಣೆಗೆ ಸ್ಟಂಪಿಂಗ್ ಅಥವಾ ಕ್ಯಾಚ್) ಅದನ್ನು ಅಮಾನ್ಯ (Invalid) ಮಾಡಲಾಗುತ್ತಿತ್ತು. ಇದು ಕೀಪರ್ಗಳಿಗೆ ದೊಡ್ಡ ಹಿನ್ನಡೆಯಾಗಿತ್ತು.
ಈಗ ಹೊಸ ನಿಯಮದ ಪ್ರಕಾರ, ಬೌಲರ್ ಓಡಿ ಬರುವಾಗ ಕೀಪರ್ ಎಲ್ಲಿದ್ದಾರೆ ಎಂಬುದು ಮುಖ್ಯವಲ್ಲ. ಬೌಲರ್ ತನ್ನ ಕೈಯಿಂದ ಚೆಂಡನ್ನು ಎಸೆಯುವ ಆ ನಿರ್ದಿಷ್ಟ ಕ್ಷಣದಲ್ಲಿ (Moment of Delivery) ಮಾತ್ರ ಕೀಪರ್ ಕೈಗವಸುಗಳು ಸ್ಟಂಪ್ಗಳ ಹಿಂದೆ ಇರಬೇಕು.
ಮುಂದಿನ ತಿಂಗಳು ದುಲೀಪ್ ಟ್ರೋಫಿಯೊಂದಿಗೆ ಆರಂಭವಾಗಲಿರುವ ದೇಶೀಯ ಋತುವಿಗೆ ಮುಂಚಿತವಾಗಿ, ರಾಜ್ಯ ಕ್ರಿಕೆಟ್ ಸಂಘಗಳು ಹೊಸ ನಿಯಮಗಳ ಬಗ್ಗೆ ಅಂಪೈರ್ಗಳು ಮತ್ತು ಮ್ಯಾಚ್ ರೆಫರಿಗಳಿಗೆ ಮಾಹಿತಿ ನೀಡಲು ಪ್ರಾರಂಭಿಸಿವೆ. ಬಿಸಿಸಿಐ ಅಧಿಕಾರಿಯೊಬ್ಬರು ಹೇಳುವ ಪ್ರಕಾರ, “ನಿಯಮಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಒದಗಿಸುವ ಮೂಲಕ ಪಂದ್ಯದ ಅಧಿಕಾರಿಗಳಿಗೆ ಜಾಗೃತಿ ಕಾರ್ಯಕ್ರಮಗಳನ್ನು ಸಹ ನಡೆಸಲಾಗುವುದು. ದೇಶೀಯ ಋತು ಪ್ರಾರಂಭವಾಗಲು ಸುಮಾರು ಒಂದು ತಿಂಗಳು ಬಾಕಿ ಇರುವಾಗ, ಈ ಬದಲಾವಣೆಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸಾಕಷ್ಟು ಸಿದ್ಧತೆಗಳನ್ನು ಮಾಡಲಾಗುವುದು ಎಂದು ತಿಳಿಸಿದ್ದಾರೆ.
Jul 21, 2026 10:55 PM IST














