Last Updated:
ಎನ್ಸಿಆರ್ಬಿ ವರದಿ ಪ್ರಕಾರ 2024ರಲ್ಲಿ ಕರ್ನಾಟಕ ರಸ್ತೆ ಅಪಘಾತಗಳಲ್ಲಿ ದೇಶದಲ್ಲಿ 4ನೇ ಸ್ಥಾನ, 43,062 ಅಪಘಾತ, 12,339 ಸಾವು, ಇದಕ್ಕೆ ಮುಖ್ಯ ಕಾರಣ ಅತಿವೇಗ ಮತ್ತು ಅಜಾಗರೂಕ ಚಾಲನೆ
ಬೆಂಗಳೂರು: ರಾಜ್ಯದ ರಸ್ತೆಗಳು (Road) ರಕ್ತಸಿಕ್ತವಾಗುತ್ತಿವೆ. ಅತಿವೇಗ ಮತ್ತು ಅಜಾಗರೂಕತೆ ವಾಹನ ಸವಾರರ ಪಾಲಿಗೆ ಮೃತ್ಯುಪಾಶವಾಗಿ ಪರಿಣಮಿಸುತ್ತಿದೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ಬಿಡುಗಡೆ ಮಾಡಿರುವ “ಭಾರತದಲ್ಲಿ ಅಪಘಾತ ಮತ್ತು ಆತ್ಮಹತ್ಯಾ ಸಾವುಗಳು 2024” ವರದಿ ಬೆಚ್ಚಿಬೀಳಿಸುವಂತಿದೆ. ದೇಶದಲ್ಲೇ ಅತಿ ಹೆಚ್ಚು ರಸ್ತೆ ಅಪಘಾತ ಸಂಭವಿಸುವ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ 4ನೇ ಸ್ಥಾನಕ್ಕೆ ಏರಿದೆ.
ಅಂಕಿ-ಅಂಶಗಳ ವಿಷಯಕ್ಕೆ ಬಂದರೆ ದೇಶಾದ್ಯಂತ 2024 ರಲ್ಲಿ ಒಟ್ಟು 4,67,967 ರಸ್ತೆ ಅಪಘಾತಗಳು ಸಂಭವಿಸಿ 1,75,142 ಮಂದಿ ಅಸುನೀಗಿದ್ದಾರೆ. ಅಂದರೆ ದಿನಕ್ಕೆ ಸರಾಸರಿ 480 ರಿಂದ 546 ಮಂದಿ ರಸ್ತೆ ಅಪಘಾತಗಳಲ್ಲಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಈ ಪಟ್ಟಿಯಲ್ಲಿ ತಮಿಳುನಾಡು 67,526 ಅಪಘಾತಗಳೊಂದಿಗೆ ಮೊದಲ ಸ್ಥಾನದಲ್ಲಿದ್ದರೆ, ಮಧ್ಯಪ್ರದೇಶ 55,711 ಮತ್ತು ಕೇರಳ 46,591 ಅಪಘಾತಗಳೊಂದಿಗೆ ನಂತರದ ಸ್ಥಾನಗಳಲ್ಲಿವೆ. ಕರ್ನಾಟಕದಲ್ಲಿ ಒಂದೇ ವರ್ಷದಲ್ಲಿ 43,062 ಅಪಘಾತಗಳು ನಡೆದಿದ್ದು 12,339 ಮಂದಿ ಅಸುನೀಗಿದ್ದಾರೆ ಮತ್ತು ಸುಮಾರು 52,591 ಮಂದಿ ಗಾಯಗೊಂಡಿದ್ದಾರೆ.
ಕರ್ನಾಟಕದ ಅಪಘಾತ ಸಂಖ್ಯೆಯ ಏರಿಕೆ ಇನ್ನಷ್ಟು ಆತಂಕ ಮೂಡಿಸುತ್ತದೆ. 2020 ರಲ್ಲಿ 34,178 ಅಪಘಾತಗಳಲ್ಲಿ 9,760 ಸಾವುಗಳು ದಾಖಲಾಗಿದ್ದರೆ, 2023 ರ ವೇಳೆಗೆ ಅಪಘಾತಗಳ ಸಂಖ್ಯೆ 43,440 ಕ್ಕೆ ಮತ್ತು ಸಾವುಗಳ ಸಂಖ್ಯೆ 12,323 ಕ್ಕೆ ಏರಿಕೆಯಾಗಿದೆ. 2024 ರಲ್ಲಿ ಅಪಘಾತಗಳಲ್ಲಿ ಸ್ವಲ್ಪ ಕಡಿಮೆ (0.9%) ಕಂಡುಬಂದಿದ್ದರೂ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಳವಾಗಿದೆ.
ಈ ಭೀಕರ ಅಪಘಾತಗಳಿಗೆ ಮುಖ್ಯ ಕಾರಣ ಅತಿವೇಗ. ಕರ್ನಾಟಕದಲ್ಲಿ ಅತಿವೇಗದ ಚಾಲನೆಯಿಂದಲೇ 10,614 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ದೇಶ ಮಟ್ಟದಲ್ಲಿ 61.2% ಅಪಘಾತಗಳಿಗೆ ಅತಿವೇಗವೇ ಕಾರಣ. ಅಪಾಯಕಾರಿ ಮತ್ತು ಅಜಾಗರೂಕ ಚಾಲನೆ ಸುಮಾರು 26% ಅಪಘಾತಗಳಿಗೆ ಕಾರಣವಾಗಿದೆ. ರಾಷ್ಟ್ರೀಯ ಹೆದ್ದಾರಿಗಳಲ್ಲಿ 4,145 ಮಂದಿ ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ 108 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಕುಡಿದು ಚಾಲನೆ, ಮೊಬೈಲ್ ಬಳಕೆ ಮತ್ತು ರಾತ್ರಿ ಚಾಲನೆ ಕೂಡ ಪ್ರಮುಖ ಕಾರಣಗಳಾಗಿವೆ. ದೇಶ ಮಟ್ಟದಲ್ಲಿ ಎರಡು ಚಕ್ರದ ವಾಹನ ಸವಾರರು ಒಟ್ಟು ಸಾವಿನ 48.3% ಅಂದರೆ 84,599 ಸಾವುಗಳಿಗೆ ಕಾರಣವಾಗಿದ್ದಾರೆ — ಕರ್ನಾಟಕದಲ್ಲೂ ಇದೇ ಪ್ರವೃತ್ತಿ ಕಂಡುಬರುತ್ತಿದೆ.
ಬೆಂಗಳೂರು ದೇಶದ ಅತ್ಯಂತ ಅಪಾಯಕಾರಿ ನಗರಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದು 4,769 ಅಪಘಾತಗಳು ದಾಖಲಾಗಿವೆ. ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಹೈದರಾಬಾದ್ ರಾಷ್ಟ್ರೀಯ ಹೆದ್ದಾರಿಗಳು ವಿಶೇಷವಾಗಿ ಅಪಾಯಕಾರಿ ತಾಣಗಳಾಗಿ ಗುರುತಿಸಲ್ಪಟ್ಟಿವೆ. ಹೆಚ್ಚು ಬಲಿಯಾಗುತ್ತಿರುವವರು 18 ರಿಂದ 35 ವರ್ಷ ವಯಸ್ಸಿನ ಯುವಕರು, ಎರಡು ಚಕ್ರದ ಸವಾರರು ಮತ್ತು ಪಾದಚಾರಿಗಳು. ರಸ್ತೆ ಅಪಘಾತಗಳು ದೇಶದ GDP ಯ 3 ರಿಂದ 3.5% ನಷ್ಟು ಆರ್ಥಿಕ ನಷ್ಟ ತರುತ್ತಿವೆ.
ಗ್ರಾಮಮಟ್ಟದಲ್ಲೇ ಅತೀ ಹೆಚ್ಚು ಅಪಘಾತ!
Bangalore [Bangalore],Bangalore,Karnataka













