ಲಡಾಖ್​ನಲ್ಲಿ ಚೀನಾ ಮತ್ತೆ ಕಿತಾಪತಿ; ಪ್ರಧಾನಿ ಮೋದಿಯಿಂದ ನಿರಂತರ ಸಭೆ; ದಿಲ್ಲಿಗೆ ದೌಡಾಯಿಸಿದ ಲಡಾಖ್ ಉಪರಾಜ್ಯಪಾಲ | | ACTPnews

ಲಡಾಖ್​ನಲ್ಲಿ ಚೀನಾ ಮತ್ತೆ ಕಿತಾಪತಿ; ಪ್ರಧಾನಿ ಮೋದಿಯಿಂದ ನಿರಂತರ ಸಭೆ; ದಿಲ್ಲಿಗೆ ದೌಡಾಯಿಸಿದ ಲಡಾಖ್ ಉಪರಾಜ್ಯಪಾಲ |


Last Updated:

ಲಡಾಖ್ ಪೂರ್ವಭಾಗದ ಪ್ಯಾಂಗೋಂಗ್ ಸರೋವರದ ಬಳಿ ಅತಿಕ್ರಮ ಪ್ರವೇಶಕ್ಕೆ ಮುಂದಾದ ಚೀನೀ ಸೈನಿಕರನ್ನು ಭಾರತದ ಸೈನಿಕರು ಹಿಮ್ಮೆಟ್ಟಿಸಿದ್ದಾರೆ. ಲಡಾಖ್​ನ ಲೆಫ್ಟಿನೆಂಟ್ ಗವರ್ನರ್ ಮಾಥುರ್ ಅವರು ದಿಲ್ಲಿಗೆ ದೌಡಾಯಿಸಿ ಪರಿಸ್ಥಿತಿಯ ವರದಿ ನೀಡಿದ್ದಾರೆ.

ನವದೆಹಲಿ(ಆ. 31): ಲಡಾಖ್​ನ ಗಡಿಭಾಗದಲ್ಲಿ ಮತ್ತೆ ಅತಿಕ್ರಮಣಕ್ಕೆ ಚೀನಾ ಪ್ರಯತ್ನಿಸಿದ ಘಟನೆ ನಡೆಯುತ್ತಿದ್ದಂತೆಯೇ ಪ್ರಧಾನಿ ನರೇಂದ್ರ ಮೋದಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಲಡಾಖ್ ಕೇಂದ್ರಾಡಳಿತ ಪ್ರದೇಸದ ಉಪರಾಜ್ಯಪಾಲ ಆರ್.ಕೆ. ಮಾಥುರ್ ಅವರು ದೆಹಲಿ ಹೋಗಿ ಪರಿಸ್ಥಿತಿಯ ವರದಿ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಸಂಬಂಧಿಸಿದ ಅಧಿಕಾರಿಗಳ ಜೊತೆ ನಿರಂತರ ಸಭೆಗಳನ್ನ ನಡೆಸಿ ಲಡಾಖ್ ಸ್ಥಿತಿಯ ಮೇಲೆ ಒಂದು ಕಣ್ಣಿಟ್ಟಿದ್ದಾರೆ.

ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ಭಾರತದ ಭಾಗವನ್ನು ಅತಿಕ್ರಮಿಸಿ ಭಾರತೀಯ ಸೈನಿಕರ ಮೇಲೆಯೇ ಅಮಾನುಷ ಹಲ್ಲೆ ಎಸಗಿದ ಘಟನೆ ನಡೆದು ಎರಡು ತಿಂಗಳೂ ಕಳೆದಿಲ್ಲ ಅದಾಗಲೇ ಚೀನಾ ಮತ್ತೆ ಅತಿಕ್ರಮಣಕ್ಕೆ ಪ್ರಯತ್ನಿಸಿರುವ ವಿಚಾರ ಬೆಳಕಿಗೆ ಬಂದಿದೆ. ಗಾಲ್ವನ್ ಸಂಘರ್ಷದ ಬಳಿಕ ಎರಡೂ ಕಡೆಯವರು ಒಪ್ಪಿಕೊಂಡಿದ್ದ ಯಥಾಸ್ಥಿತಿಯನ್ನು ಚೀನಾ ಮುರಿದಿದೆ. ಆಗಸ್ಟ್ 29-30ರ ದಿನದಂದು, ಅಂದರೆ ಶುಕ್ರವಾರ ರಾತ್ರಿ ಪಾಂಗೋಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಚೀನಾದ ಪಿಎಲ್​ಎ ಸೈನಿಕರು ಅತಿಕ್ರಮಣಕ್ಕೆ ಮುಂದಾಗಿದ್ದರೆನ್ನಲಾಗಿದೆ. ಇದನ್ನು ಮೊದಲೇ ಊಹಿಸಿದ್ದ ಭಾರತದ ಭದ್ರತಾ ಪಡೆಗಳು ತತ್​ಕ್ಷಣವೇ ಜಾಗೃತಗೊಂಡು ಚೀನೀ ಸೈನಿಕರನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿಕೆ ನೀಡಿದೆ.

“ಪ್ಯಾಂಗೋಂಗ್ ಟ್ಸೋ ಸರೋವರದ ಭಾಗದಲ್ಲಿ ಚೀನೀ ಸೈನಿಕರಿಂದ ಈ ಚಟುವಟಿಕೆ ನಡೆಯಬಹುದು ಎಂದು ಭಾರತದ ಪಡೆಗಳು ಮೊದಲೇ ಅಂದಾಜು ಮಾಡಿದ್ದವು. ಹಾಗಾಗಿ, ನಮ್ಮ ಸೇನಾ ನಿಯೋಜನೆ ಹೆಚ್ಚಿಸಿದೆವು. ಗಡಿ ಯಥಾಸ್ಥಿತಿಯನ್ನು ಮಾರ್ಪಾಡು ಮಾಡುವ ಚೀನಾ ದುರುದ್ದೇಶವನ್ನು ವಿಫಲಗೊಳಿಸಲಾಯಿತು. ಮಾತುಕತೆ ಮೂಲಕ ಶಾಂತಿ ಕಾಪಾಡಲು ಭಾರತದ ಸೇನೆ ಬದ್ಧವಾಗಿದೆ. ಆದರೆ, ತನ್ನ ಭೂಪ್ರದೇಶದ ರಕ್ಷಣೆಗೂ ಅಷ್ಟೇ ಕಟಿಬದ್ಧವಾಗಿದೆ. ಚುಶುಲ್ ಪ್ರದೇಶದಲ್ಲಿ ಎರಡೂ ದೇಶಗಳ ಸೇನಾಪಡೆಗಳ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಫ್ಲಾಗ್ ಮೀಟಿಂಗ್ ನಡೆಯುತ್ತಿದ್ದು, ಇದರಲ್ಲಿ ಈ ವಿಚಾರಗಳನ್ನ ಚರ್ಚಿಸಲಾಗುತ್ತಿದೆ” ಎಂದು ಸರ್ಕಾರದ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಲಡಾಖ್​ನಲ್ಲಿರುವ ಭಾರತ ಮತ್ತು ಚೀನಾದ ವಾಸ್ತವ ಗಡಿ ನಿಯಂತ್ರಣ ರೇಖೆಯಲ್ಲಿ ಚೀನೀ ಸೈನಿಕರು ಕೆಲ ತಿಂಗಳ ಹಿಂದೆ ಅತಿಕ್ರಮಣ ಮಾಡಿದ್ದರು. ಪ್ಯಾಂಗೋಂಗ್ ಸರೋವರದ ಐದಾರು ಬೆಟ್ಟಗಳ ಶ್ರೇಣಿಗಳಿಗೆ ಅಕ್ರಮವಾಗಿ ಪ್ರವೇಶ ಮಾಡಿ ವಶದಲ್ಲಿಟ್ಟುಕೊಂಡಿದ್ದರು. ಭಾರತೀಯ ಸೈನಿಕರು ಪ್ರತಿರೋಧ ಒಡ್ಡಿದ ಪರಿಣಾಮ ಗಾಲ್ವನ್ ಕಣಿವೆಯಲ್ಲಿ ಪಿಎಲ್​ಎ ಸೈನಿಕರು ಅಮಾನಷವಾಗಿ ಹಲ್ಲೆ ಎಸಗಿದ್ದರು. ಈ ಘಟನೆಯಲ್ಲಿ ಎರಡೂ ಕಡೆಯ ಸೈನಿಕರಿಗೆ ಹಾನಿಯಾಗಿದೆ. 20 ಭಾರತೀಯ ಸೈನಿಕರು ಮೃತಪಟ್ಟಿದ್ದರು. ಆ ಬಳಿಕ ಎರಡೂ ಕಡೆಯ ಸೇನಾ ಪಡೆಗಳು ವಿವಿಧ ಹಂತಗಳಲ್ಲಿ ಮಾತುಕತೆ ನಡೆಸಿ ಗಡಿಯಲ್ಲಿ ಯಥಾಸ್ಥಿತಿ ಪಾಲಿಸುವ ನಿರ್ಧಾರಕ್ಕೆ ಬರಲಾಯಿತು. ಗಾಲ್ವನ್ ಕಣಿವೆಯಲ್ಲಿನ ಎಲ್ಲಾ ವಿವಾದಿತ ಸ್ಥಳಗಳಿಂದ ವಾಪಸ್ ಹೋಗುವುದೆಂಬ ಒಪ್ಪಂದಕ್ಕೆ ಬರಲಾಯಿತು.

ಆದರೆ, ಸರೋವರ ಬೆಟ್ಟ ಶ್ರೇಣಿಯ 4 ಮತ್ತು 8ನೇ ಫಿಂಗರ್ ಪ್ರದೇಶಗಳಿಂದ ಚೀನೀ ಸೈನಿಕರು ಕಾಲ್ತೆಗೆಯಲು ಮೀನಮೇಷ ಎಣಿಸುತ್ತಿದ್ದಾರೆ. ಭಾರತ ಈ ನಿಟ್ಟಿನಲ್ಲಿ ನಿರಂತರವಾಗಿ ಒತ್ತಡ ಹಾಕುತ್ತಲೇ ಇದೆ. ಈಗ ಚೀನಾದ ಪಿಎಲ್​ಎ ಸೈನಿಕರು ತಮ್ಮ ಹಳೆಯ ಚಾಳಿಯಂತೆ ಮತ್ತೊಮ್ಮೆ ಅತಿಕ್ರಮಣಕ್ಕೆ ಮುಂದಾಗಿದ್ದು ಗಮನಾರ್ಹ.

ಇದೇ ವೇಳೆ, ಚೀನೀ ಸೈನಿಕರು ಭಾರತದ ಪ್ರದೇಶಕ್ಕೆ ಕಾಲಿಟ್ಟರೆಂಬ ಆರೋಪವನ್ನು ಚೀನಾ ತಳ್ಳಿಹಾಕಿದೆ. ಚೀನಾದ ಗಡಿ ರಕ್ಷಣಾ ಪಡೆಗಳು ಎಲ್​ಎಸಿಯನ್ನು ಯಾವತ್ತೂ ದಾಟಿಲ್ಲ. ಗಡಿಯಲ್ಲಿನ ಸ್ಥಿತಿ ಬಗ್ಗೆ ಎರಡೂ ಕಡೆಯವರು ಪರಸ್ಪರ ಸಂವಹ ನಡೆಸಿದ್ದಾರೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಝಾವೋ ಲಿಜಿಯಾನ್ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports