Last Updated:
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಆಯ್ಕೆ ಸಮಿತಿಯು ಈ ಸರಣಿಯ ನಂತರ ರೋಹಿತ್ ಶರ್ಮಾ ಅವರನ್ನ ತಂಡದಿಂದ ಕೈಬಿಡುವ ಬಗ್ಗೆ ಯೋಚಿಸುತ್ತಿರುವುದಾಗಿ ರೋಹಿತ್ ಶರ್ಮಾ ಅವರಿಗೆ ಸ್ಪಷ್ಟಪಡಿಸಿದೆ ಎಂದು ತಿಳಿದುಬಂದಿದೆ.
ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ಜುಲೈ 19 ರಂದು ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯ ನಡೆಯಲಿದೆ. ಸರಣಿಯ ಈ ಅಂತಿಮ ಪಂದ್ಯವು ರೋಹಿತ್ ಶರ್ಮಾ ಅವರ ಏಕದಿನ ವೃತ್ತಿಜೀವನದ ಕೊನೆಯ ಪಂದ್ಯವಾಗಬಹುದು ಎಂದು ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಶುರುವಾಗಿದೆ. ಕಳೆದ ವಾರ, ಆಯ್ಕೆ ಸಮಿತಿಯು ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಸಮ್ಮುಖದಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಮಾತನಾಡಿ ಭಾರತ ತಂಡದ ಭವಿಷ್ಯದ ಮಾರ್ಗಸೂಚಿಯನ್ನು ಅವರಿಗೆ ಪ್ರಸ್ತುತಪಡಿಸಿದೆ ಎಂದು ವರದಿಗಳಿಂದ ತಿಳಿದುಬಂದಿದೆ. ಮ್ಯಾನೇಜ್ಮೆಂಟ್ 2027ರ 50 ಓವರ್ಗಳ ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಸಿದ್ಧಪಡಿಸಲು ಬಯಸಿದೆ. ಇದರಲ್ಲಿ ಯಶಸ್ವಿ ಜೈಸ್ವಾಲ್ನಂತಹ ಯುವ ಆಟಗಾರರು ಬಹಳ ಸಮಯದಿಂದ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. 2027ರ ವಿಶ್ವಕಪ್ ಯೋಜನೆಗಳಲ್ಲಿ ರೋಹಿತ್ ಶರ್ಮಾ ಅವರನ್ನು ಸೇರಿಸಲಾಗಿಲ್ಲ ಎಂದು ಆಯ್ಕೆದಾರರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ (ಬಿಸಿಸಿಐ) ಹಿರಿಯ ಆಯ್ಕೆ ಸಮಿತಿಯು ಈ ಸರಣಿಯ ನಂತರ ರೋಹಿತ್ ಶರ್ಮಾ ಅವರನ್ನ ತಂಡದಿಂದ ಕೈಬಿಡುವ ಬಗ್ಗೆ ಯೋಚಿಸುತ್ತಿರುವುದಾಗಿ ರೋಹಿತ್ ಶರ್ಮಾ ಅವರಿಗೆ ಸ್ಪಷ್ಟಪಡಿಸಿದೆ ಎಂದು ದಿ ಇಂಡಿಯನ್ ಎಕ್ಸ್ಪ್ರೆಸ್ನ ವರದಿ ಮಾಡಿದೆ. ಮಂಡಳಿಯ ಹಿರಿಯ ಮೂಲವೊಂದು ಇದನ್ನು ದೃಢಪಡಿಸಿದ್ದು, ಇಂಗ್ಲೆಂಡ್ ಪ್ರವಾಸದ ನಂತರ ರೋಹಿತ್ ಶರ್ಮಾ ತಮ್ಮ ಯೋಜನೆಗಳ ಭಾಗವಾಗಲ್ಲ ಮತ್ತು ಈ ಸರಣಿಯ ನಂತರ ತಂಡವು ಅವರನ್ನ ಬಿಟ್ಟು ಮುಂದುವರಿಯಲಿದೆ ಎಂದು ಆಯ್ಕೆದಾರರು ಸ್ಪಷ್ಟವಾಗಿ ತಿಳಿಸಿದ್ದಾರೆ. ಇದೀಗ ರೋಹಿತ್ ಶರ್ಮಾ ತಮ್ಮ ಭವಿಷ್ಯವನ್ನು ಹೇಗೆ ಘೋಷಿಸಬೇಕೆಂದು ಅವರಿಗೆ ನಿರ್ಧಾರವನ್ನ ಬಿಟ್ಟಿದ್ದಾರೆ. ಇಂಗ್ಲೆಂಡ್ ಸರಣಿಯ ಸಮಯದಲ್ಲಿಯೇ ರೋಹಿತ್ ಶರ್ಮಾಗೆ ಈ ವಿಚಾರವನ್ನ ತಿಳಿಸಲಾಗಿದೆ ಎಂದು ತಿಳಿದುಬಂದಿದೆ.
ರೋಹಿತ್ ಶರ್ಮಾ ಈಗಾಗಲೇ ಆಟದ ಎರಡು ಸ್ವರೂಪಗಳಿಂದ ನಿವೃತ್ತರಾಗಿದ್ದಾರೆ. ಭಾರತವನ್ನು ಟಿ20 ವಿಶ್ವಕಪ್ ಪ್ರಶಸ್ತಿಗೆ ಕೊಂಡೊಯ್ದ ಕೆಲವೇ ಗಂಟೆಗಳ ನಂತರ, ಜೂನ್ 29, 2024 ರಂದು ಅವರು ಟಿ20 ಅಂತರರಾಷ್ಟ್ರೀಯ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು. ನಂತರ ಕಳೆದ ವರ್ಷ ಮೇ 7, 2025 ರಂದು ಇಂಗ್ಲೆಂಡ್ ಪ್ರವಾಸಕ್ಕೆ ಹೊರಡುವ ಮೊದಲು, ಅವರು ಇನ್ಸ್ಟಾಗ್ರಾಮ್ ಮೂಲಕ ಟೆಸ್ಟ್ ಕ್ರಿಕೆಟ್ನಿಂದಲೂ ನಿವೃತ್ತಿ ಘೋಷಿಸಿದ್ದರು.
ರೋಹಿತ್ ಟೆಸ್ಟ್ ಕ್ರಿಕೆಟ್ನಿಂದ ನಿವೃತ್ತರಾದಾಗಿನಿಂದ, ಆಯ್ಕೆ ಸಮಿತಿ ಮತ್ತು ತಂಡದ ಆಡಳಿತ ಮಂಡಳಿಯು ಭಾರತೀಯ ಕ್ರಿಕೆಟ್ನ ಭವಿಷ್ಯವನ್ನು ರೂಪಿಸಲು ಮತ್ತು ಯುವ ಆಟಗಾರರನ್ನು ಸಿದ್ಧಪಡಿಸಲು ಕೆಲಸ ಮಾಡುತ್ತಿದೆ. ಈ ಕಠಿಣ ನಿರ್ಧಾರಕ್ಕೆ ಒಂದು ಕಾರಣವೆಂದರೆ ಯಶಸ್ವಿ ಜೈಸ್ವಾಲ್ರಂತಹ ಫಾರ್ಮ್ನಲ್ಲಿರುವ ಆಟಗಾರರು ನಿರಂತರವಾಗಿ ಶತಕಗಳನ್ನು ಗಳಿಸಿದರೂ ಬೆಂಚ್ನಲ್ಲಿ ಕುಳಿತುಕೊಳ್ಳುವಂತಾಗಿದೆ. ಈ ಭವಿಷ್ಯದ ತಯಾರಿಯ ಭಾಗವಾಗಿ, ಆಯ್ಕೆ ಸಮಿತಿಯು ಕಳೆದ ವರ್ಷ ರೋಹಿತ್ ಅವರಿಂದ ಏಕದಿನ ನಾಯಕತ್ವ ಹಿಂಪಡೆದು ಶುಭಮನ್ ಗಿಲ್ಗೆ ವಹಿಸಿತ್ತು.
ಈ ಇಂಗ್ಲೆಂಡ್ ಪ್ರವಾಸದಲ್ಲಿ ಅವರು ರನ್ ಗಳಿಸುತ್ತಿಲ್ಲ. ಸರಣಿಯ ಆರಂಭಿಕ ಪಂದ್ಯಗಳಲ್ಲಿ, ಅವರು ಕ್ರಮವಾಗಿ 11 ಮತ್ತು 26 ರನ್ಗಳ ಸಣ್ಣ ಮೊತ್ತಕ್ಕೆ ವಿಕೆಟ್ ಒಪ್ಪಿಸಿದ್ದಾರೆ. ಕಾರ್ಡಿಫ್ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ, ರೋಹಿತ್ ಚೆಂಡನ್ನು ಟೈಮಿಂಗ್ ಮಾಡಲು ಹೆಣಗಾಡುತ್ತಿದ್ದರು ಎಂಬುದು ಸ್ಪಷ್ಟವಾಗಿ ಕಾಣುತ್ತಿತ್ತು. ಈಗ ಎಲ್ಲರ ಕಣ್ಣುಗಳು ಜುಲೈ 19ರಂದು ಲಾರ್ಡ್ಸ್ನಲ್ಲಿ ನಡೆಯಲಿರುವ ಪಂದ್ಯದತ್ತ ನೆಟ್ಟಿದೆ. ಲೆಜೆಂಡರಿ ಬ್ಯಾಟ್ಸ್ಮನ್ ಐತಿಹಾಸಿಕ ಪಿಚ್ನಲ್ಲಿ ಸ್ಮರಣೀಯ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಶ್ರೇಷ್ಠ ಏಕದಿನ ವೃತ್ತಿಜೀವನಕ್ಕೆ ವಿದಾಯ ಹೇಳುತ್ತಾರೋ ಇಲ್ಲವೋ ಎಂಬುದು ಕುತೂಹಲಕಾರಿಯಾಗಿದೆ.
Rohit Sharma: ರೋಹಿತ್ ಫ್ಯಾನ್ಸ್ಗೆ ಬಿಗ್ ಶಾಕ್! ಲಾರ್ಡ್ಸ್ನಲ್ಲಿ ಹಿಟ್ಮ್ಯಾನ್ ನಿವೃತ್ತಿ? 3ನೇ ಏಕದಿನ ಪಂದ್ಯಕ್ಕೂ ಹೊರಬಿತ್ತು ಆಘಾತಕಾರಿ ಮಾಹಿತಿ














