Last Updated:
ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸೌರ ಫಲಕಗಳನ್ನು ಅಳವಡಿಸುವಾಗ ಅನುಸರಿಸಲಾದ ಸುರಕ್ಷತಾ ಮಾನದಂಡಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ರಾಯ್ಪುರ: ಮನೆಯ ಮೇಲ್ಛಾವಣಿಯ ಮೇಲೆ ಅಳವಡಿಸುತ್ತಿದ್ದ ಸೌರ ಫಲಕವು ಆಕಸ್ಮಿಕವಾಗಿ ಹೈಟೆನ್ಷನ್ ವಿದ್ಯುತ್ ತಂತಿಗೆ ತಗುಲಿ ಇಬ್ಬರು ಕಾರ್ಮಿಕರು ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿರುವ ಘಟನೆ ಛತ್ತೀಸ್ಗಢದ ರಾಯ್ಪುರದಲ್ಲಿ ಇಂದು ನಡೆದಿದೆ.
ಪುರಾಣಿ ಬಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರೊಫೆಸರ್ ಕಾಲೋನಿಯಲ್ಲಿರುವ ಮನೆಯಲ್ಲಿ ಬೆಳಿಗ್ಗೆ 11 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಅಲ್ಲಿ ಮೂವರು ತಂತ್ರಜ್ಞರು ಸೌರ ಫಲಕಗಳನ್ನು ಅಳವಡಿಸುವ ಕೆಲಸದಲ್ಲಿ ತೊಡಗಿದ್ದರು. ಮೃತರನ್ನು ಪ್ರಮೋದ್ ಚಂದ್ರಕರ್ (25) ಮತ್ತು ಆಶಿಶ್ ಚಂದ್ರಕರ್ (19) ಎಂದು ಗುರುತಿಸಲಾಗಿದೆ.
ಪುರಾಣಿ ಬಸ್ತಿ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ವಿನಯ್ ಸಿಂಗ್ ಬಾಘೇಲ್ ಮಾತನಾಡಿ, ಪ್ರಾಥಮಿಕ ತನಿಖೆಯ ಪ್ರಕಾರ, ಮೇಲ್ಛಾವಣಿಯ ಅಂಚಿನಲ್ಲಿ ಇರಿಸಲಾಗಿದ್ದ ಸೌರ ಫಲಕವು ಆಕಸ್ಮಿಕವಾಗಿ ಕಟ್ಟಡದ ಹತ್ತಿರ ಹಾದುಹೋಗುತ್ತಿದ್ದ 11 ಕೆವಿ ಹೈಟೆನ್ಷನ್ ವಿದ್ಯುತ್ ಮಾರ್ಗಕ್ಕೆ ತಗುಲಿತು. ಇಬ್ಬರು ತಂತ್ರಜ್ಞರು ಫಲಕವನ್ನು ಮುಟ್ಟುತ್ತಿದ್ದಂತೆ ಅವರಿಗೆ ಮಾರಕ ವಿದ್ಯುತ್ ಪ್ರವಹಿಸಿ ನಿಧನ ಹೊಂದಿದರು. ಮೂರನೇ ಕೆಲಸಗಾರ ಬದುಕುಳಿದರು ಎಂದು ತಿಳಿದು ಬಂದಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಬಘೇಲ್ ಮತ್ತು ಪುರಾಣಿ ಬಸ್ತಿ ಪೊಲೀಸ್ ಠಾಣೆಯ ಇತರ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದರು. ಇಬ್ಬರು ಕಾರ್ಮಿಕರ ಶವಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಯಿತು. ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸೌರ ಫಲಕಗಳನ್ನು ಅಳವಡಿಸುವಾಗ ಅನುಸರಿಸಲಾದ ಸುರಕ್ಷತಾ ಮಾನದಂಡಗಳ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬಘೇಲ್ ಹೇಳಿದರು. ಘಟನೆಯ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.
ಈ ವರ್ಷದ ಏಪ್ರಿಲ್ನಲ್ಲಿ, ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ಕಬ್ಬಿಣದ ಪೈಪ್ನಿಂದ ಕೋತಿಯನ್ನು ಬೆನ್ನಟ್ಟುವಾಗ ರೆಸಾರ್ಟ್ ಉದ್ಯೋಗಿಯೊಬ್ಬರು ಹೈಟೆನ್ಷನ್ ತಂತಿ ಸ್ಪರ್ಶಿಸಿ ವಿದ್ಯುತ್ ಸ್ಪರ್ಶಿಸಿ ಸಾವನ್ನಪ್ಪಿದ್ದರು.
ಕೋತಿಯನ್ನು ಹೆದರಿಸಲು ರಾಡ್ ಅನ್ನು ಎತ್ತಿದಾಗ, ಅದು ರೆಸಾರ್ಟ್ನ ಛಾವಣಿಯ ಮೇಲೆ ಹಾದುಹೋಗುವ ಹೈ-ವೋಲ್ಟೇಜ್ ವಿದ್ಯುತ್ ತಂತಿಗೆ ತಗುಲಿ ಘಟನೆ ನಡೆದಿತ್ತು.
Raipur,Chhattisgarh













