Hubballi
lekhaka-Sandesh R Pawar
ಹುಬ್ಬಳ್ಳಿ, ಜುಲೈ 22: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲಿ ಅಸಮಾಧಾನ ಇದೆ ಯಾರ ಅಸಮಾಧಾನಗೊಂಡಿದ್ದಾರೆ. ಅದರ ಬಗ್ಗೆ ಏನು ಗೊತ್ತಿಲ್ಲ. ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ನಾಯಕತ್ವದಲ್ಲಿ ಬಹಳಷ್ಟು ಒಳ್ಳೆಯ ಸರ್ಕಾರದ ನಡೆಯುತ್ತಿದೆ. ಸದ್ಯ ಕಾಂಗ್ರೆಸ್ ಸರ್ಕಾರ ಬಹಳಷ್ಟು ಉತ್ತಮವಾಗಿ ಆಡಳಿತ ಮಾಡುತ್ತಿದೆ ಎಂದು ಮಾಜಿ ಸಿಎಂ ಹಾಗೂ ವಿಧಾನ ಪರಿಷತ್ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಎಲ್ಲಾ ಆಕಾಂಕ್ಷೆಗಳನ್ನು ಸಮಾಧಾನ ಮಾಡಲು ಎಲ್ಲಾ ಸಮಯದಲ್ಲಿ ಸಾಧ್ಯವಿಲ್ಲ. ಸಣ್ಣ ಪುಟ್ಟ ಅಸಮಾಧಾನಗಳಿದ್ದರೇ ಅದನ್ನು ಸಮಾಧಾನ ಮಾಡುವ ಶಕ್ತಿ ಕಾಂಗ್ರೆಸ್ ನಾಯಕರಿಗೆ ಇದೆ. ಅಸಮಾಧಾನ ಸರಿ ಮಾಡಿಕೊಂಡು ಉತ್ತಮ ಆಡಳಿತ ನೀಡುತ್ತೆವೆ ಎಂದರು.
ಮಣಿಪುರ ಗಲಭೆ ವಿಚಾರವಾಗಿ ಮಾತನಾಡಿದ ಅವರು, ಮಣಿಪುರದ ಗಲಭೆಗೆ ಮೂಲಭೂತ ಕಾರಣಗಳನ್ನು ಕೇಂದ್ರ ಸರ್ಕಾರ ಆರಂಭದಲ್ಲಿ ಹುಡುಕಬೇಕಿತ್ತು. ಆರಂಭದಲ್ಲಿಯೇ ಅಲ್ಲಿನ ರಾಜ್ಯ ಸರ್ಕಾರ ಗಲಭೆ ತಡೆಯಲು ವಿಫಲವಾಗಿದೆ ಇದರಲ್ಲಿ ಸಿಎಂ ವೈಫಲ್ಯಗಳು ಎದ್ದು ಕಾಣುತ್ತಿದೆ. ಈ ಸಮಯದಲ್ಲಿ ಕೇಂದ್ರ ಸರ್ಕಾರದ ಮಧ್ಯಸ್ಥಿಕೆ ವಹಿಸಬೇಕಿತ್ತು. ಆದರೆ ಇದು ಆಗದ ಹಿನ್ನಲೆಯಲ್ಲಿ ಈಗ ಅದು ವಿಕೋಪಕ್ಕೆ ಹೋಗಿದೆ. ಅಲ್ಲಿನ ಜನತೆ ಸಿಎಂ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ. ಅಲ್ಲಿನ ಸಿಎಂ ಗಲಭೆಯ ನೈತಿಕ ಹೊಣೆ ಹೊತ್ತು ತಕ್ಷಣವೇ ಸಿಎಂ ರಾಜಿನಾಮೆ ನೀಡಬೇಕಿತ್ತು ಎಂದು ಅವರು ಹೇಳಿದರು.
ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಬರಬೇಕಿದೆ. ಮಹಿಳೆಯರ ನಗ್ನ ಮೆರವಣಿಗೆ ಪೈಶಾಚಿಕ ಕೃತ್ಯ ಇದನ್ನು ನಾನು ತೀವ್ರವಾಗಿ ಖಂಡಿಸಿತ್ತೆನೆ. ಕೇಂದ್ರ ಸರ್ಕಾರ ಬರಿ ಬಾಯಿ ಮಾತಿನಲ್ಲಿ ಕಠಿಣ ಕ್ರಮ ಅನ್ನಬಾರದು ಇದು ಕಾರ್ಯರೂಪಕ್ಕೆ ಬರಬೇಕು ಎಂದು ಕೇಂದ್ರಕ್ಕೆ ಸೂಚನೆ ನೀಡಿದರು.
ವಿಪಕ್ಷ ನಾಯಕನ ಆಯ್ಕೆ ವಿಚಾರವಾಗಿ ಮಾತನಾಡಿದ ಅವರು, ರಾಜ್ಯ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ಕಪಿಮುಷ್ಠಿಯಲ್ಲಿದೆ ಅನ್ನೋದು ನಾನು ಮೊದಲಿಂದ ಹೇಳುತ್ತಿದ್ದೆ ಅದು ಈಗ ಸಾಬೀತು ಆಗಿದೆ. ಅದರಿಂದ ಬಿಜೆಪಿ ಇನ್ನೂ ಹೊರಬಂದಿಲ್ಲ. ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಅನ್ನೋದು ಹೋಗಿಬಿಟ್ಟಿದೆ. ರಾಜ್ಯ ಬಿಜೆಪಿ ಲೀಡರ್ ಲೆಸ್ ಪಾರ್ಟಿ ಎಂದು ಬಿಜೆಪಿ ವಿರುದ್ಧ ವ್ಯಂಗ್ಯವಾಡಿದರು.
ಇನ್ನು ಪ್ರತಿಪಕ್ಷದ ನಾಯಕನಿಲ್ಲದೆ ಅಧಿವೇಶನ ನಡೆಸುವ ಶೋಚನೀಯ ಪರಿಸ್ಥಿತಿ ಬಿಜೆಪಿಗೆ ಬಂದಿದೆ. ಒಂದು ರಾಷ್ಟ್ರೀಯ ಪಕ್ಷಕ್ಕೆ ವಿಪಕ್ಷ ನಾಯಕನಿಲ್ಲದರುವುದು ನಾನು ಯಾವತ್ತೂ ನೋಡಿಲ್ಲ. ಇದು ಬಿಜೆಪಿ ಲೀಡರ್ ಲೇಸ್ ಕರ್ನಾಟಕ ಅನ್ನೋದು ತೋರಿಸಿಕೊಟ್ಟಿದೆ. ಇದರಿಂದಾಗಿ ದಿನ ದಿಂದ ದಿನಕ್ಕೆ ರಾಜ್ಯದಲ್ಲಿ ಬಿಜೆಪಿ ಕುಸಿಯುತ್ತಿದೆ ಕಾಂಗ್ರೆಸ್ ಬಲಿಷ್ಠವಾಗುತ್ತಿದೆ. ಇದರಿಂದ ಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅತೀ ಸೀಟು ಗೆಲ್ಲುತ್ತದೆ ಎಂದು ಅವರು ಭರವಸೆ ವ್ಯಕ್ತಪಡಿಸಿದರು.
ನಂದಿನಿ ಹಾಲಿನ ದರ ಏರಿಕೆ ವಿಚಾರವಾಗಿ ಮಾತನಾಡಿದ ಅವರು, ಹಾಲಿನ ದರ ಏರಿಕೆ ಬಹಳಷ್ಟು ದಿನದಿಂದ ಇತ್ತು. ಈ ಬಗ್ಗೆ ರೈತ ಮತ್ತು ಸರಬರಾಜು ಮಾಡುವವರ ಜೊತೆಗೆ ಚರ್ಚೆ ನಡೆಯುತ್ತಿದೆ. ಎಲ್ಲಾ ಅಗತ್ಯ ವಸ್ತುಗಳ ದರ ಏರಿಕೆಯಾಗಿದೆ. ಏನಾದರೂ ಯೋಜನೆ ಜಾರಿ ಮಾಡಬೇಕಾದರೆ ದರ ಏರಿಕೆ ಅನಿವಾರ್ಯವಾಗುತ್ತದೆ. ಇನ್ನೂ ಜಾರಿಯಾಗಿಲ್ಲ ಇನ್ನೂ ಸಮಯ ಇದೆ. ನೋಡೋಣ ಇನ್ನೂ ಯಾವ ರೂಪದಲ್ಲಿ ಏರಿಕೆ ಆಗಲಿದೆ ಅಂತ ಎಂದರು.
English summary
BJP is leaderless party says Congress Legislative Council member Jagadish Shettar sarcasm against BJP. Know more.
Story first published: Saturday, July 22, 2023, 16:07 [IST]