Last Updated:
Pakistan: ಪಾಕಿಸ್ತಾನದ ಕ್ವೆಟ್ಟಾದ ಚಮನ್ ಫಾಟಕ್ ಬಳಿ ಕ್ಯಾಂಟ್ ಕಡೆಗೆ ಸಾಗುತ್ತಿದ್ದ ಪ್ರಯಾಣಿಕ ರೈಲನ್ನು ಗುರಿಯಾಗಿಸಿ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 23 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, 47ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.
ಇಸ್ಲಾಮಾಬಾದ್ (ಪಾಕಿಸ್ತಾನ): ಒಂದೆಡೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಮಾತುಕತೆಯ ಪ್ರಸ್ತಾಪದ ನೆಪದಲ್ಲಿ ಆಟವಾಡುತ್ತಿರುವ ಪಾಕಿಸ್ತಾನ, ಮತ್ತೊಂದೆಡೆ ಆಫ್ಘಾನಿಸ್ತಾನದ ಜೊತೆಗೆ ಆವಾಗಾವಾಗ ದಾಳಿಮಾಡುವ ಪಾಕಿಸ್ತಾನಕ್ಕೆ (Pakistan) ತನ್ನ ನೆಲದಲ್ಲಿಯೇ ನಡೆಯುತ್ತಿರುವ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನ (Separatist Activity) ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಅದರಂತೆ, ಪಾಕಿಸ್ತಾನದ ಆಡಳಿತದ ಮೇಲೆ ಬಲೂಚಿಸ್ತಾನ ಲಿಬರೇಷನ್ ಆರ್ಮಿಯ (Balochistan Liberation Army) ಅಟ್ಟಾಹಾಸ ಮುಂದುವರೆದಿದೆ. ಅದರಂತೆ, ಇಂದು ನಡೆದ ದಾಳಿಯಲ್ಲಿ ಕನಿಷ್ಠ 23 ಜನರು ಸಾವನ್ನಪ್ಪಿದ್ದು, 47ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
ಪಾಕಿಸ್ತಾನದ ಬಲೂಚಿಸ್ತಾನ ಪ್ರಾಂತ್ಯದ ರಾಜಧಾನಿ ಕ್ವೆಟ್ಟಾದ ಚಮನ್ ಫಾಟಕ್ ಬಳಿ ಕ್ಯಾಂಟ್ ಕಡೆಗೆ ಸಾಗುತ್ತಿದ್ದ ಪ್ರಯಾಣಿಕ ರೈಲನ್ನು ಗುರಿಯಾಗಿಸಿ ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ಕನಿಷ್ಠ 23 ಪ್ರಯಾಣಿಕರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇನ್ನು, 47ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ ಎನ್ನಲಾಗುತ್ತಿದೆ.
ಸ್ಥಳೀಯ ಭದ್ರತಾ ಪಡೆಗಳು ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟಣೆ ಪ್ರಕಾರ ಈ ದಾಳಿಯನ್ನು ಬಲೂಚ್ ಲಿಬರೇಶನ್ ಆರ್ಮಿ ಅಂದರೆ ಬಿಎಲ್ಎ ನಡೆಸಿದೆ ಎಂದು ಶಂಕಿಸಲಾಗಿದೆ. ಇತ್ತೀಚೆಗೆ ಬಲೂಚಿಸ್ತಾನದಾದ್ಯಂತ ಪಾಕಿಸ್ತಾನಿ ಭದ್ರತಾ ಪಡೆಗಳು ನಡೆಸಿದ ತೀವ್ರ ಕಣ್ಗಾವಲು ಮತ್ತು ಪ್ರತಿದಾಳಿ ಕಾರ್ಯಾಚರಣೆಯಲ್ಲಿ ಬಿಎಲ್ಎ ಭಾರೀ ನಷ್ಟ ಅನುಭವಿಸಿದೆ. ಸೇನೆಯ ಕೈಯಲ್ಲಿ ಸತತ ಸೋಲು ಕಂಡು ಹತಾಶೆಗೊಂಡ ಭಯೋತ್ಪಾದಕರು ತಮ್ಮ ಉಪಸ್ಥಿತಿ ತೋರಿಸಲು ಮತ್ತು ಸೇಡು ತೀರಿಸಿಕೊಳ್ಳಲು ಮುಗ್ಧ ನಾಗರಿಕರನ್ನು ಗುರಿಯಾಗಿಸಿ ಈ ದುಷ್ಕೃತ್ಯ ಎಸಗಿದ್ದಾರೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಅಪಘಾತದ ಮಾಹಿತಿ ತಿಳಿದ ತಕ್ಷಣ ತುರ್ತು ವಿಪತ್ತು ನಿರ್ವಹಣಾ ತಂಡಗಳು ಮತ್ತು ಆಂಬ್ಯುಲೆನ್ಸ್ಗಳು ಸ್ಥಳಕ್ಕೆ ಧಾವಿಸಿವೆ. ಪಾಕಿಸ್ತಾನಿ ಸೇನೆ ಮತ್ತು ಅರೆಸೈನಿಕ ಪಡೆಗಳು ಇಡೀ ಪ್ರದೇಶವನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು ಸುತ್ತುವರಿದಿವೆ. ಬೋಗಿಗಳಲ್ಲಿ ಸಿಲುಕಿದ್ದ ಗಾಯಾಳುಗಳನ್ನು ಹೊರತೆಗೆದು ಸಿಎಂಎಚ್ ಮತ್ತು ಕ್ವೆಟ್ಟಾದ ಇತರ ಪ್ರಮುಖ ಆಸ್ಪತ್ರೆಗಳಿಗೆ ರವಾನಿಸಲಾಗಿದೆ. ಆಸ್ಪತ್ರೆಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಹಲವು ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಏತನ್ಮಧ್ಯೆ, ಬಲೂಚಿಸ್ತಾನದಲ್ಲಿ ರೈಲು ದಾಳಿಗಳು ಹೊಸದೇನಲ್ಲ. ಈ ಹಿಂದೆ, ಈ ಪ್ರದೇಶದಲ್ಲಿ ರೈಲು ಹಳಿಗಳ ಮೇಲೆ ಹಲವಾರು ಸ್ಫೋಟಗಳು ಸಂಭವಿಸಿವೆ. ಇವುಗಳಲ್ಲಿ ಅತ್ಯಂತ ಪ್ರಸಿದ್ಧವಾದದ್ದು ಮಾರ್ಚ್ 11, 2025 ರಂದು ಪಾಕಿಸ್ತಾನವನ್ನು ಬೆಚ್ಚಿಬೀಳಿಸಿದ ಜಾಫರ್ ಎಕ್ಸ್ಪ್ರೆಸ್ ಅಪಹರಣ. ಈ ದಾಳಿಯಲ್ಲಿ, ಹಳಿಗಳ ಮೇಲೆ ಐಇಡಿ ಸ್ಫೋಟಿಸಿ ರೈಲನ್ನು ನಿಲ್ಲಿಸಲಾಯಿತು ಮತ್ತು ಇಡೀ ರೈಲನ್ನು ಅಪಹರಿಸಲಾಯಿತು. ಹೆಚ್ಚಿನ ಪ್ರಯಾಣಿಕರು ಪಾಕಿಸ್ತಾನಿ ಸೇನಾ ಸಿಬ್ಬಂದಿಯಾಗಿದ್ದರು. ಹಲವಾರು ಸಾವುಗಳಿಗೆ ಕಾರಣವಾದ ಈ ಘಟನೆಯ ಹೊಣೆಯನ್ನು ಬಿಎಲ್ಎ ಹೊತ್ತುಕೊಂಡಿತು. ದೀರ್ಘ ಕಾರ್ಯಾಚರಣೆಯ ನಂತರವೇ ಬದುಕುಳಿದವರನ್ನು ಅಂತಿಮವಾಗಿ ರಕ್ಷಿಸಲಾಯಿತು.













