Last Updated:
ದುರಂತದಲ್ಲಿ 9 ಅಯ್ಯಪ್ಪ ಮಾಲಾಧಾರಿಗಳಿಗೆ ಗಂಭೀರ ಗಾಯಗಳಾಗಿದ್ದು, ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾತ್ರಿ ಸಿಲಿಂಡರ್ನಿಂದ ಗ್ಯಾಸ್ ಲೀಕ್ ಆಗಿ ದೀಪದ ಬೆಂಕಿ ಹೊತ್ತಿ ಏಕಾಏಕಿ ಗ್ಯಾಸ್ ಬ್ಲಾಸ್ಟ್ ಆಗಿದೆ.
ಹುಬ್ಬಳ್ಳಿ: ತಂಪಾದ ವಾತಾವರಣದಲ್ಲಿ ನಿದ್ರಾವಸ್ಥೆಯಲ್ಲಿದ್ದವರನ್ನು ಆವರಿಸಿದ ಬೆಂಕಿ (Fire Accident). ಕ್ಷಣಾರ್ಧದಲ್ಲಿ ಇಡೀ ಕೋಣೆಯನ್ನು ವ್ಯಾಪಿಸಿದ ಬೆಂಕಿ. ದೇಹ ಸುಡಲಾರಂಭಿಸುತ್ತಿದ್ದಂತೆಯೇ ಕೋಣೆಯಲ್ಲಿದ್ದವರ ಕಿರುಚಾಟ, ನರಳಾಟ. ಮಧ್ಯರಾತ್ರಿಯಲ್ಲಿಯೂ ಓಡಿ ಬಂದ ಅಕ್ಕಪಕ್ಕದವರಿಂದ ಗಾಯಾಳುಗಳ (Ayyappa Devotees) ರಕ್ಷಣೆ. ಇಷ್ಟಕ್ಕೂ ಹುಬ್ಬಳ್ಳಿಯಲ್ಲಿ (Hubballi) ಮಧ್ಯರಾತ್ರಿ ಏನು ನಡೆಯಿತು ಹೇಳ್ತೀವಿ ಓದಿ.
ಸಿಲಿಂಡರ್ ಸೋರಿಕೆಯಾಗಿ ಬೆಂಕಿ ಹೊತ್ತಿಕೊಂಡು ಅಯ್ಯಪ್ಪ ಮಾಲಾಧಾರಿಗಳು ತೀವ್ರವಾಗಿ ಗಾಯಗೊಂಡಿರೋ ಘಟನೆ ಹುಬ್ಬಳ್ಳಿ ನಗರದ ಉಣಕಲ್ ನ ಸಾಯಿ ನಗರದಲ್ಲಿ ನಡೆದಿದೆ. ಘಟನೆಯಲ್ಲಿ ಒಂಬತ್ತು ಜನರಿಗೆ ಗಾಯಗಳಾಗಿದ್ದು, ಈ ಪೈಕಿ ಎಂಟು ಜನರ ಸ್ಥಿತಿ ಚಿಂತಾಜನಕವಾಗಿದೆ. ಸಾವು ಬದುಕಿನ ನಡುವೆ ಹೋರಾಟ ಮಾಡ್ತಿರೋ ಅಯ್ಯಪ್ಪ ಮಾಲಾಧಾರಿಗಳಿಗೆ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಮುಂದುವರೆಸಲಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಸೇರಿ ಹಲವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಗಳ ಆರೋಗ್ಯ ವಿಚಾರಿಸಿದ್ದಾರೆ.
ಸಾಯಿನಗರದಲ್ಲಿನ ಈಶ್ವರ ದೇವಸ್ಥಾನದಲ್ಲಿ ಮೊದಲನೇ ಮಹಡಿಯಲ್ಲಿ ಒಂಬತ್ತು ಜನ, ಕೆಳಗೆ ಐವರು ಅಯ್ಯಪ್ಪ ಮಾಲಾಧಾರಿಗಳು ಮಲಗಿದ್ದರು. ಅಯ್ಯಪ್ಪ ಸ್ವಾಮಿಗಾಗಿ ಸಾಲಾಗಿ ದೀಪಗಳನ್ನು ಹಚ್ಚಲಾಗಿತ್ತು. ಮಧ್ಯರಾತ್ರಿ ವೇಳೆಗೆ ಗ್ಯಾಸ್ ಪೈಪ್ ಲೀಕ್ ಆಗಿ ಬೆಂಕಿ ಹೊತ್ತಿಕೊಂಡಿದೆ. ಕೆಲವೇ ಹೊತ್ತಲ್ಲಿ ಬೆಂಕಿ ಇಡೀ ಕೋಣೆಯನ್ನು ವ್ಯಾಪಿಸಿದೆ. ಮಲಗಿದ್ದವರು ಎಚ್ಚರಗೊಳ್ಳುವುದರೊಳಗಾಗಿ ಬೆಂಕಿ ಮತ್ತು ದಟ್ಟ ಹೊಗೆ ಆವರಿಸಿ, ಅಲ್ಲಿದ್ದವರು, ನರಳಾಟ, ಕಿರುಚಾಟ ನಡೆಸಿದ್ದಾರೆ. ಕಿರುಚಾಟ ಕೇಳಿಸಿಕೊಂಡು ಎಚ್ಚರಗೊಂಡ ಅಕ್ಕಪಕ್ಕದವರು ಬೆಂಕಿಯನ್ನು ನಂದಿಸಿ, ಅಲ್ಲಿದ್ದವರನ್ನು ರಕ್ಷಿಸಲು ಯತ್ನಿಸಿದ್ದಾರೆ. ಗಾಯಗೊಂಡ ಒಂಬತ್ತೂ ಜನರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಕಿಮ್ಸ್ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆಸಲಾಗಿದ್ದು, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶಾಸಕರಾದ ಪ್ರಸಾದ್ ಅಬ್ಬಯ್ಯ, ಮಹೇಶ್ ಟೆಂಗಿನಕಾಯಿ, ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದರು. ಗಾಯಾಳುಗಳು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಹಾರೈಸಿದರು.
ಒಬ್ಬರನ್ನು ಹೊರತುಪಡಿಸಿದರೆ, ಉಳಿದವರಿಗೆ ಶೇಕಡಾ 70 ರಿಂದ 90 ರಷ್ಟು ಸುಟ್ಟ ಗಾಯಗಳಾಗಿವೆ. ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಪೊಲೀಸರ ಆಯುಕ್ತ ಎನ್.ಶಶಿಕುಮಾರ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ಮಾಡಿದರು. ಕಿಮ್ಸ್ ನಲ್ಲಿ ಅಗತ್ಯ ಚಿಕಿತ್ಸೆ ಕೊಡಲಾಗುತ್ತಿದೆ. ಬೇರೆ ಆಸ್ಪತ್ರೆಗೆ ಸ್ಥಳಾಂತಿರುಸುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗಾಯಾಳುಗಳ ಚಿಕಿತ್ಸೆಗಾಗಿ ಪ್ರತ್ಯೇಕ ವಾರ್ಡ್ ಮಾಡಲಾಗಿದ್ದು, ವೈದ್ಯರ ತಂಡ ಚಿಕಿತ್ಸೆ ಮುಂದುವರಿಸಿದೆ ಎಂದು ಕಿಮ್ಸ್ ನಿರ್ದೇಶಕ ಡಾ.ಎಫ್.ಎಸ್.ಕಮ್ಮಾರ ತಿಳಿಸಿದ್ದಾರೆ.
Hubli-Dharwad (Hubli),Dharwad,Karnataka













