Last Updated:
ಚೀನಾದ ಸಂಸದೀಯ ಅಧಿವೇಶನದ ವೇಳೆ ಪಿಎಲ್ಎ ಸೇನಾ ಪಡೆ ಹಾಗೂ ಪಿಎಪಿಎಫ್ ಪೊಲೀಸ್ ಪಡೆಯ ನಿಯೋಗದೊಂದಿಗೆ ನಡೆದ ಸಭೆ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಈ ಸಮರತಯಾರಿಯ ಸೂಚನೆ ನೀಡಿದ್ದಾರೆ.
ಬೀಜಿಂಗ್(ಮೇ 27): ಇಡೀ ಜಗತ್ತು ನಳನಳಿಸುತ್ತಿದ್ದಾಗ ಚೀನಾದವರು ಕೊರೋನಾವೈರಸ್ ಪಿಡುಗಿಗೆ ಸಿಕ್ಕು ಲಾಕ್ ಡೌನ್ ಆಗಿತ್ತು. ಈಗ ಇಡೀ ಜಗತ್ತು ಲಾಕ್ಡೌನ್ ಆಗಿರುವಾಗ ಚೀನಾ ತಂಟೆ ತಕರಾರುಗಳ ಕೆಲಸ ಶುರು ಹಚ್ಚಿದೆ. ಇದೀಗ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ತನ್ನ ಸೇನಾಪಡೆಗಳಿಗೆ ಸಮರಕ್ಕೆ ಸನ್ನದ್ಧಗೊಳ್ಳುವಂತೆ ಸೂಚಿಸಿದ್ದಾರೆ. ದೇಶದ ಸಾರ್ವಭೌಮತ್ವವನ್ನು ರಕ್ಷಿಸಿಕೊಳ್ಳಲು ಬದ್ಧರಾಗಬೇಕೆಂದು ತಮ್ಮ ಸೈನಿಕರಿಗೆ ಅಧ್ಯಕ್ಷರು ನಿನ್ನೆ ರಾತ್ರಿ ಸಂದೇಶ ರವಾನಿಸಿದ್ದಾರೆ. ಲಡಾಕ್ನಲ್ಲಿ ಭಾರತ ಮತ್ತು ಚೀನಾ ಮಧ್ಯೆ ಉದ್ಭವಿಸಿರುವ ಗಡಿಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಚೀನಾ ಅಧ್ಯಕ್ಷರ ಈ ನಡೆ ಸಾಕಷ್ಟು ಕುತೂಹಲ ಮೂಡಿಸಿದೆ.
ಎಂಥ ಪರಿಸ್ಥಿತಿಗೂ ಅಣಿಗೊಂಡಿರಬೇಕು; ಸಮರಕ್ಕೆ ತಯಾರಿ ಹಾಗೂ ತರಬೇತಿಯ ತೀವ್ರತೆ ಹೆಚ್ಚಿಸಬೇಕು; ಎಲ್ಲಾ ರೀತಿಯ ಸಂಕೀರ್ಣ ಸಂದರ್ಭಗಳು ಎದುರಾದರೂ ಸಮರ್ಪಕವಾಗಿ ನಿಭಾಯಿಸಿ ದೇಶದ ಸಾರ್ವಭೌಮತ್ವವನ್ನು ರಕ್ಷಿಸಬೇಕು ಎಂದು ಸೇನಾ ಪಡೆಗಳಿಗೆ ಕ್ಸಿ ಜಿನ್ಪಿಂಗ್ ಆದೇಶಿಸಿದ್ದಾರೆ ಎಂದು ಚೀನಾದ ಕ್ಸಿನ್ಹುಆ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಚೀನಾದ ಸಂಸದೀಯ ಅಧಿವೇಶನದ ವೇಳೆ ಪಿಎಲ್ಎ ಸೇನಾ ಪಡೆ ಹಾಗೂ ಪಿಎಪಿಎಫ್ ಪೊಲೀಸ್ ಪಡೆಯ ನಿಯೋಗದೊಂದಿಗೆ ನಡೆದ ಸಭೆ ವೇಳೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರು ಈ ಸಮರತಯಾರಿಯ ಸೂಚನೆ ನೀಡಿದ್ದಾರೆ.
ಚೀನಾದ ಈ ಆಕ್ರಮಣಕಾರಿ ವರ್ತನೆಯಿಂದಾಗಿ ಎಲ್ಲರ ಕಣ್ಣು ಈಗ ಭಾರತದ ಗಡಿಭಾಗಗಳತ್ತ ನೆಟ್ಟಿದೆ. ಸಿಕ್ಕಿಮ್ ಮತ್ತು ಲಡಾಕ್ನಲ್ಲಿ ಗಡಿತಕರಾರು ಮಾಡುತ್ತಿರುವ ಚೀನಾ ಮುಂದೇನು ಹೆಜ್ಜೆ ಇಡುತ್ತದೆ ಯಾರಿಗೂ ಅಂದಾಜು ಮಾಡಲು ಸಾಧ್ಯವಿಲ್ಲ. ಭಾರತವಷ್ಟೇ ಅಲ್ಲ, ಅಮೆರಿಕದೊಂದಿಗೂ ಚೀನಾ ಸಂಘರ್ಷಕ್ಕಿಳಿಯುವ ಸಾಧ್ಯತೆ ಇಲ್ಲದಿಲ್ಲ. ಸೌತ್ ಚೀನಾ ಸಾಗರದಲ್ಲಿ ಅಮೆರಿಕದ ನೌಕಾಪಡೆ ಪಹರೆ ನಡೆಸುತ್ತಿರುವುದು ಚೀನಾದ ಕೆಂಗಣ್ಣಿಗೆ ಕಾರಣವಾಗಿದೆ. ಕೊರೋನಾ ವೈರಸ್ ಸಂಬಂಧ ತಿಕ್ಕಾಟದಲ್ಲಿರುವ ಈ ಎರಡು ದೇಶಗಳು ಸೌತ್ ಚೀನಾ ವಿಚಾರಕ್ಕೆ ಎದುರುಬದುರಾದರೆ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.
ಹಾಗೆಯೇ, ತೈವಾನ್ ವಿಚಾರಕ್ಕೂ ಚೀನಾ ತಲೆಕೆಡಿಸಿಕೊಂಡಿದೆ. ತೈವಾನ್ ತನ್ನ ಪ್ರಾಂತ್ಯ ಎಂದು ಹೇಳುತ್ತಲೇ ಬಂದಿರುವ ಚೀನಾ, ಅಲ್ಲಿಯೂ ಏನಾದರೂ ಮಿಲಿಟರಿ ಕ್ರಮ ಕೈಗೊಳ್ಳುವ ಸಾಧ್ಯತೆ ಇಲ್ಲದಿಲ್ಲ.













