Last Updated:
ಆಗಸ್ಟ್ 29ರಿಂದೀಚೆ ಪೂರ್ವ ಲಡಾಖ್ನ ಚೀನಾ ಗಡಿಭಾಗದಲ್ಲಿ ಪಾಂಗಾಂಗ್ ಸರೋವರ ಸೇರಿದಂತೆ ಸುತ್ತಮುತ್ತಲಿರುವ ಆರು ಪ್ರಮುಖ ಎತ್ತರದ ಪ್ರದೇಶಗಳನ್ನ ಭಾರತೀಯ ಸೇನಾ ಪಡೆಗಳು ವಶಪಡಿಸಿಕೊಂಡಿವೆ.
ನವದೆಹಲಿ(ಸೆ. 21): ಪೂರ್ವ ಲಡಾಖ್ ಭಾಗದಲ್ಲಿ ಚೀನಾದೊಂದಿಗೆ ನಡೆಯುತ್ತಿರುವ ಗಡಿ ಸಂಘರ್ಷದಲ್ಲಿ ಕಳೆದ 3 ವಾರಗಳಲ್ಲಿ ಭಾರತೀಯ ಸೇನೆ ಆರು ಗುಡ್ಡಗಳನ್ನ ವಶಪಡಿಸಿಕೊಂಡಿದೆ. ಪಾಂಗಾಂಗ್ ಸರೋವರ ಬಳಿಯ ಫಿಂಗರ್ 4ನ ಬೆಟ್ಟಗಳ ಸಾಲಿನಲ್ಲಿ ಆಯಕಟ್ಟಿನ ಎತ್ತರ ಜಾಗದಲ್ಲಿ ಈ ಆರು ಗುಡ್ಡಗಳಿವೆ. ಮಗರ್, ಗುರುಂಗ್ , ರೇಚೆನ್ ಲಾ, ರೆಜಾಂಗ್ ಲಾ, ಮೋಕಿಪಾರಿ ಗುಡ್ಡಗಳು ಸೇರಿ ಒಟ್ಟು ಆರು ಪ್ರಮುಖ ಜಾಗಗಳನ್ನ ಆಗಸ್ಟ್ 29ರಿಂದೀಚೆ ಭಾರತದ ಸೈನಿಕರು ತಮ್ಮ ಸುಪರ್ದಿಯಲ್ಲಿರಿಸಿಕೊಂಡಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದರೊಂದಿಗೆ ಈ ಪ್ರದೇಶದಲ್ಲಿ ಭಾರತದ ಸೇನೆಗೆ ಅನುಕೂಲಕರ ಸ್ಥಿತಿ ಸಿಕ್ಕಿದಂತಾಗಿದೆ. ಈ ಆರು ಗುಡ್ಡಗಳು ಚೀನೀ ಸೈನಿಕರ ವಶವಾಗುವ ಮುನ್ನ ಭಾರತೀಯ ಸೈನಿಕರು ಸಮಯಪ್ರಜ್ಞೆ ತೋರಿ ಆಕ್ರಮಿಸಿಕೊಂಡಿದ್ದಾರೆ.
ಅದಾಗ್ಯೂ ಚೀನಾದ ಪಿಎಲ್ಎ ಸೈನಿಕರು ಪೂರ್ವ ಲಡಾಖ್ ಭಾಗದಲ್ಲಿ ತಮ್ಮ ಉದ್ಧಟತನ ಮುಂದುವರಿಸಿದ್ದಾರೆ. ಕಳೆದ ಮೂರು ವಾರಗಳಲ್ಲಿ ಇಲ್ಲಿ ಚೀನೀ ಸೈನಿಕರಿಂದ ಭಾರತದ ಸೈನಿಕರನ್ನು ಹಿಮ್ಮೆಟ್ಟಿಸಲು ಕನಿಷ್ಠ 3 ಪ್ರಯತ್ನಗಳಾದರೂ ಆಗಿವೆ ಎನ್ನಲಾಗಿದೆ. ಇದರಿಂದ ಪಾಂಗಾಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯ ಪ್ರದೇಶಗಳು ಸೇರಿದಂತೆ ಪೂರ್ವ ಲಡಾಖ್ನಲ್ಲಿ ಉದ್ವಿಘ್ನ ಸ್ಥಿತಿ ಮುಂದುವರಿದಿದೆ. ಚೀನೀ ಸೈನಿಕರ ಗುಂಡಿನ ಸಪ್ಪಳ ಕೂಡ ಇಲ್ಲಿ ಕೇಳಿಸಿದೆ. ಕಳೆದ 45 ವರ್ಷಗಳಲ್ಲಿ ಗಡಿಭಾಗದಲ್ಲಿ ಗುಂಡಿನ ಸದ್ದು ಕೇಳುತ್ತಿರುವುದು ಇದೇ ಮೊದಲಾಗಿದೆ.
ಪಿಎಲ್ಎ ಸೈನಿಕರ ಆಕ್ರಮಣಕಾರಿ ವರ್ತನೆ ಮಧ್ಯೆಯೂ ದೃತಿಗೆಡದ ಭಾರತೀಯ ಸೈನಿಕರು ತಮ್ಮ ಗಡಿರಕ್ಷಣೆಯ ಕಾರ್ಯವನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಆಯಕಟ್ಟಿನ ಪ್ರದೇಶಗಳನ್ನ ಆಕ್ರಮಿಸಿಕೊಳ್ಳುವ ಚೀನೀ ಸೈನಿಕರ ಅನೇಕ ಪ್ರಯತ್ನಗಳನ್ನ ಭಾರತೀಯರು ವಿಫಲಗೊಳಿಸಿದ್ದಾರೆ. ಚೀನೀ ಸೈನಿಕರು ಗುಂಡು ಹಾರಿಸಿ ಬೆದರಿಸುವ ಯಾವ ಪ್ರಯತ್ನವೂ ಸಫಲವಾಗಿಲ್ಲ. ಈಗ ಚೀನಾ ಸೇನೆ ರೇಜಂಗ್ ಲಾ ಮತ್ತು ರೇಚೇನ್ ಲಾ ಎತ್ತರ ಪ್ರದೇಶ ಬಳಿ 3 ಸಾವಿರ ಸೈನಿಕರನ್ನು ನಿಯೋಜಿಸಿದ್ದು, ಇಲ್ಲಿ ಸೂಕ್ಷ್ಮ ಪರಿಸ್ಥಿತಿ ನೆಲಸಿದೆ.
ಕಳೆದ ಆರೇಳು ತಿಂಗಳುಗಳಿಂದಲೂ ಚೀನಾ ಪೂರ್ವ ಲಡಾಖ್ನಲ್ಲಿ ಅತಿಕ್ರಮಣಕ್ಕೆ ಪ್ರಯತ್ನಿಸುತ್ತಲೇ ಇದೆ. ಭಾರತದ ಸೇನಾ ಪಡೆಗಳು ಗಸ್ತು ತಿರುಗುವ ವೇಳೆ ಚೀನೀಯರ ಈ ಕಿತಾಪತಿಯ ಬಯಲಿಗೆ ಬಂದಿತ್ತು. ಭಾರತೀಯ ಸೈನಿಕರು ಪ್ರಬಲ ಪ್ರತಿರೋಧ ಒಡ್ಡಿದ ಬಳಿಕ ಕೆಲ ಸ್ಥಳಗಳಲ್ಲಿ ಎರಡೂ ಕಡೆ ಸೈನಿಕರ ಸಂಘರ್ಷವಾಗಿದೆ. ಇಂಥ ಒಂದು ಸಂಘರ್ಷದಲ್ಲಿ 20 ಭಾರತೀಯ ಸೈನಿಕರ ಬಲಿದಾನವಾಗಿದೆ. ಆದರೂ ಚೀನಾ ಹೆಚ್ಚು ಮುಂದುವರಿಯಲು ಸಾಧ್ಯವಾಗಿಲ್ಲ. ಈ ವರ್ಷದ ಏಪ್ರಿಲ್ಗಿಂತ ಮುಂಚೆ ಇದ್ದ ಎಲ್ಎಸಿಯ ಗಡಿಭಾಗವಿದ್ದ ರೀತಿಯಲ್ಲಿ ಯಥಾಸ್ಥಿತಿ ಮರಳಿಸಲು ಭಾರತ ಪ್ರಯತ್ನ ನಡೆಸಿದೆ. ಈ ಸಂಬಂಧ ಭಾರತ ಮತ್ತು ಚೀನಾ ಮಧ್ಯೆ ವಿವಿಧ ಸ್ತರಗಳಲ್ಲಿ ಮಾತುಕತೆಗಳು ನಡೆಯುತ್ತಿವೆ. ಚೀನೀಯರು ಹಿಂದಕ್ಕೆ ಸರಿಯಲು ಬಾಯಲ್ಲಿ ಹೇಳಿದರೂ ಅದು ಕೃತಿಯಲ್ಲಿ ಮೂಡಿಲ್ಲ. ಹೀಗಾಗಿ, ಭಾರತ ಎಲ್ಎಸಿ ಗಡಿಭಾಗದಾದ್ಯಂತ ಕಡು ಎಚ್ಚರ ವಹಿಸಿದೆ.
Sep 21, 2020 12:32 PM IST













