Last Updated:
ಎಲ್ಎಸಿಯ ನಮ್ಮ ಭಾಗದಲ್ಲಿ ಚೀನೀಯರು ಇಲ್ಲ ಎಂದು ಪ್ರಧಾನಿ ಹೇಳಿದ್ದು ನಮ್ಮ ಸೇನಾ ಪಡೆಯ ಧೈರ್ಯಶಾಲಿತನದ ಪರಿಣಾಮದಿಂದ ಆದ ಪರಿಸ್ಥಿತಿ ಕುರಿತು ಅಷ್ಟೇ. ಆದರೆ, ಈ ಹೇಳಿಕೆಯನ್ನ ಕೆಲವರು ತಿರುಚುತ್ತಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಹೇಳಿದೆ.
ನವದೆಹಲಿ(ಜೂನ್ 20): ಲಡಾಖ್ನ ಭಾರತ ಮತ್ತು ಚೀನಾ ಗಡಿ ಭಾಗದಲ್ಲಿ ಕಳೆದ 5 ದಶಕದಲ್ಲೇ ಅತಿದೊಡ್ಡ ಸಂಘರ್ಷ ನಡೆದು 20 ಭಾರತೀಯ ಯೋಧರು ಹುತಾತ್ಮರಾದರು. ಈ ಘಟನೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಸರ್ವಪಕ್ಷಗಳ ಸಭೆಯಲ್ಲಿ ಪ್ರಸ್ತಾಪ ಮಾಡಿ, ಗಾಲ್ವನ್ ಕಣಿವೆಯಲ್ಲಿ ಭಾರತೀಯ ಪ್ರದೇಶಕ್ಕೆ ಯಾರೂ ಒಳನುಸುಳಿಲ್ಲ, ಯಾವುದೇ ಮಿಲಿಟರಿ ಪೋಸ್ಟನ್ನು ವಶಪಡಿಸಿಕೊಂಡಿಲ್ಲ ಎಂದು ಹೇಳಿದ್ದರು. ಅವರ ಈ ಹೇಳಿಕೆ ದೇಶದೆಲ್ಲೆಡೆ ಆಕ್ರೋಶಕ್ಕೆ ಕಾರಣವಾಗಿತ್ತು. ಆದರೆ, ಶುಕ್ರವಾರ ಪ್ರಧಾನಿ ಹೇಳಿದ ಮಾತುಗಳನ್ನ ಕೆಲವರು ದುರುದ್ದೇಶಪೂರ್ವಕವಾಗಿ ತಿರುಚುತ್ತಿದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ಸ್ಪಷ್ಟಪಡಿಸಿದೆ.
“ವಾಸ್ತವ ಗಡಿ ನಿಯಂತ್ರಣ ರೇಖೆಯ ನಮ್ಮ ಭಾಗದಲ್ಲಿ ಚೀನೀಯರು ಇಲ್ಲ ಎಂದು ಪ್ರಧಾನಿ ಹೇಳಿದ್ದು ನಮ್ಮ ಸೇನಾ ಪಡೆಯ ಧೈರ್ಯಶಾಲಿತನದ ಪರಿಣಾಮದಿಂದ ಆದ ಪರಿಸ್ಥಿತಿ ಕುರಿತು” ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ.
“ಕಟ್ಟಡಗಳನ್ನ ನಿರ್ಮಿಸಲು ಚೀನೀಯರು ಮಾಡುತ್ತಿದ್ದ ಪ್ರಯತ್ನ ಹಾಗೂ ಆ ದಿನ ಎಲ್ಎಸಿಯೊಳಗೆ ಚೀನೀಯರು ಅತಿಕ್ರಮಣಕ್ಕೆ ಮಾಡಿದ ಪ್ರಯತ್ನವನ್ನ 16ನೇ ಬಿಹಾರ್ ರೆಜಿಮೆಂಟ್ ತುಕಡಿಗಳ ಸೈನಿಕರು ವಿಫಲಗೊಳಿಸಿದರು” ಎಂದು ಪಿಎಂಒ ಹೇಳಿದೆ.
ನಮ್ಮ ನೆಲವನ್ನು ಅತಿಕ್ರಮಿಸಲು ಪ್ರಯತ್ನಿಸಿದವರಿಗೆ ನಮ್ಮ ರಾಷ್ಟ್ರದ ವೀರಪುತ್ರರು ಸರಿಯಾದ ಪಾಠ ಕಲಿಸಿದ್ದಾರೆ ಎಂದು ಪ್ರಧಾನಿ ಅವರು ಹೇಳಿದ್ದು ನಮ್ಮ ಸಶಸ್ತ್ರ ಪಡೆಗಳ ಮೌಲ್ಯವನ್ನು ಎತ್ತಿತೋರಿಸುತ್ತದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಭಾರತ-ಚೀನಾ ಗಡಿಬಿಕ್ಕಟ್ಟಿನ ಸಂಬಂಧ ಸರ್ವಪಕ್ಷ ಸಭೆಯಲ್ಲಿ ಪ್ರಧಾನಿ ನೀಡಿದ ಹೇಳಿಕೆ ಬಗ್ಗೆ ಹಲವರು ಆಕ್ಷೇಪ ವ್ಯಕ್ತಪಡಿಸಿದ್ಧಾರೆ. ಗಾಲ್ವನ್ ಕಣಿವೆಯಲ್ಲಿ ಚೀನೀಯರು ಅತಿಕ್ರಮಣ ಮಾಡಲಿಲ್ಲ ಎಂದು ಹೇಳುವ ಮೂಲಕ ಭಾರತೀಯ ಸೇನೆ ಬಗ್ಗೆ ಮತ್ತು ಸೈನಿಕರ ಬಲಿದಾನದ ಬಗ್ಗೆ ಪ್ರಧಾನಿ ಹಗುರವಾಗಿ ಮಾತನಾಡಿದ್ದಾರೆ. ಚೀನಾಗೆ ಮೋದಿಯೇ ಕ್ಲೀನ್ ಚಿಟ್ ನೀಡಿದ್ದಾರೆ. ಚೀನಾ ಅತಿಕ್ರಮಣ ಮಾಡಲಿಲ್ಲವೆಂದರೆ ಸಂಘರ್ಷ ನಡೆದದ್ದಾದರೂ ಹೇಗೆ? ಎಂದು ವಿಪಕ್ಷಗಳು ಪ್ರಶ್ನಿಸಿವೆ.













