Last Updated:
India-China Conflict: ಲೇಹ್ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ 18 ಸೈನಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು 15 ದಿನಗಳಲ್ಲಿ ಕೆಲಸಕ್ಕೆ ವಾಪಾಸಾಗಲಿದ್ದಾರೆ. ಬೇರೆ ಆಸ್ಪತ್ರೆಗಳಲ್ಲಿರುವ 58 ಸೈನಿಕರು ಇನ್ನೊಂದು ವಾರದಲ್ಲಿ ಕೆಲಸಕ್ಕೆ ವಾಪಾಸಾಗಬೇಕೆಂದು ಸೂಚಿಸಲಾಗಿದೆ.
ನವದೆಹಲಿ (ಜೂ. 19): ಲಡಾಖ್ ಗಡಿಯಲ್ಲಿರುವ ಗಾಲ್ವಾನ್ ನದಿ ಕಣಿವೆ ಪ್ರದೇಶದಲ್ಲಿ ಸೋಮವಾರ ರಾತ್ರಿಯಿಂದ ಮಂಗಳವಾರದವರೆಗೆ ನಡೆದ ಸಂಘರ್ಷದಲ್ಲಿ ಭಾರತದ 20 ಯೋಧರು, ಚೀನಾದ 40ಕ್ಕೂ ಹೆಚ್ಚು ಸೈನಿಕರು ಸಾವನ್ನಪ್ಪಿದ್ದರು. ಈ ದಾಳಿಯ ವೇಳೆ ಭಾರತದ 18 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಲೇಹ್ನಲ್ಲಿರುವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 18 ಯೋಧರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹಾಗೇ, ಬೇರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 58 ಯೋಧರು ಇನ್ನು ಒಂದು ವಾರದೊಳಗೆ ಕೆಲಸಕ್ಕೆ ಹಾಜರಾಗಬೇಕು ಎಂದು ಭಾರತೀಯ ಸೇನೆ ತಿಳಿಸಿದೆ.
ಭಾರತ- ಚೀನಾ ನಡುವೆ ನಡೆದ ದಾಳಿಯಿಂದ ಭಾರತದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ನಮ್ಮ ದೇಶದ ಸುಮಾರು 20 ಯೋಧರು ಹುತಾತ್ಮರಾಗಿದ್ದಾರೆ. ಸದ್ಯದ ಸ್ಥಿತಿಯ ಬಗ್ಗೆ ವರದಿ ಮಾಡಿರುವ ಎಎನ್ಐ ಸಂಸ್ಥೆ, ಸದ್ಯಕ್ಕೆ ಭಾರತದ ಎಲ್ಲ ಸೈನಿಕರೂ ಚೇತರಿಸಿಕೊಂಡಿದ್ದಾರೆ. ಯಾರೂ ಗಂಭೀರ ಸ್ಥಿತಿಯಲ್ಲಿಲ್ಲ. ಲೇಹ್ನಲ್ಲಿರುವ ಸೇನಾ ಆಸ್ಪತ್ರೆಯಲ್ಲಿ 18 ಸೈನಿಕರು ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು 15 ದಿನಗಳಲ್ಲಿ ಕೆಲಸಕ್ಕೆ ವಾಪಾಸಾಗಲಿದ್ದಾರೆ. ಬೇರೆ ಆಸ್ಪತ್ರೆಗಳಲ್ಲಿರುವ 58 ಸೈನಿಕರು ಇನ್ನೊಂದು ವಾರದಲ್ಲಿ ಕೆಲಸಕ್ಕೆ ವಾಪಾಸಾಗಬೇಕೆಂದು ಸೂಚಿಸಲಾಗಿದೆ ಎಂದು ಸೇನೆಯ ಮೂಲಗಳು ತಿಳಿಸಿವೆ.
18 ಸೈನಿಕರಿಗೆ ತೀವ್ರ ಗಾಯಗಳಾಗಿತ್ತು. 58 ಯೋಧರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಹೀಗಾಗಿ, ಆ 58 ಯೋಧರು ಮುಂದಿನ ವಾರದೊಳಗೆ ಕೆಲಸ ಶುರು ಮಾಡಲಿದ್ದಾರೆ. ಭಾರತದ ಸೈನಿಕರನ್ನು ಚೀನೀ ಸೈನಿಕರು ವಶದಲ್ಲಿಟ್ಟುಕೊಂಡಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಮಾಡಲಾಗಿತ್ತು. ಆದರೆ, ಈ ಬಗ್ಗೆ ವಿದೇಶಾಂಗ ಸಚಿವಾಲಯದ ವಕ್ತಾರ ಅನುರಾಗ್ ಶ್ರೀವಾಸ್ತವ್ ಹೇಳಿಕೆ ನೀಡಿದ್ದು, ಚೀನಾ ವಿರುದ್ಧದ ಸಂಘರ್ಷದಲ್ಲಿ ಯಾವುದೇ ಭಾರತೀಯ ಸೈನಿಕರೂ ನಾಪತ್ತೆಯಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.













