Last Updated:
ಪಾಕಿಸ್ತಾನ ಪದೇ ಪದೆ ಗಡಿ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದು, 2019ರ ಒಂದೇ ವರ್ಷದಲ್ಲಿ 2 ಸಾವಿರಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಪಾಕಿಸ್ತಾನದ ಈ ವರ್ತನೆಗೆ ಭಾರತದ 21 ಜನರು ಬಲಿಯಾಗಿದ್ದರು
ಶ್ರೀನಗರ್: ಪಾಕಿಸ್ತಾನ ಮತ್ತೆ ಭಾರತದ ವಿರುದ್ಧ ಕದನ ವಿರಾಮ ಉಲ್ಲಂಘನೆ ಮಾಡಿರುವ ಬಗ್ಗೆ ಉನ್ನತ ಮೂಲಗಳು ನ್ಯೂಸ್18ಗೆ ಮಾಹಿತಿ ತಿಳಿಸಿವೆ. ಒಂದೆಡೆ ಚೀನಾ ಪದೇ ಪದೇ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ಸಂದರ್ಭದಲ್ಲಿ ಪಾಕಿಸ್ತಾನ ಕೂಡ ಕದನ ವಿರಾಮ ಉಲ್ಲಂಘನೆ ಮಾಡಿದೆ.
ಸೇನಾ ಮೂಲದ ಪ್ರಕಾರ ಪಾಕಿಸ್ತಾನ ಕತುವಾ ಜಿಲ್ಲೆಯ ಹೀರಾನಗರ ಸಮೀಪ ಭಾರತ ಸೇನೆಯ ವಿರುದ್ಧ ದಾಳಿ ಆರಂಭಿಸಿದೆ. ದಾಳಿಯಾದ ಬೆನ್ನಲ್ಲೇ ಭಾರತ ಸೇನೆ ತಕ್ಕ ಉತ್ತರ ಕೊಡುತ್ತಿದ್ದು, ಇನ್ನೂ ಹೆಚ್ಚಿನ ಮಾಹಿತಿಗಾಗಿ ಕಾಯಬೇಕಿದೆ.
ತನ್ನ ಮಿಲಿಟರಿ ಮತ್ತು ತಂತ್ರಜ್ಞಾನ ಸಾಮರ್ಥ್ಯದಿಂದ ಇಡೀ ವಿಶ್ವವನ್ನ ಹತೋಟಿಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ಚೀನಾಗೆ ಭಾರತ ಒಂದು ಪ್ರಬಲ ಗುದ್ದು ಕೊಟ್ಟಿತ್ತು. ಲಡಾಖ್ನ ಗಡಿಭಾಗದಲ್ಲಿ ಭಾರತೀಯ ಭೂಭಾಗವನ್ನು ಅತಿಕ್ರಮಿಸಿಕೊಂಡು 20 ಭಾರತೀಯ ಸೈನಿಕರನ್ನ ಬಲಿತೆಗೆದುಕೊಂಡ ಚೀನಾ ದೇಶಕ್ಕೆ ಭಾರತ ಡಿಜಿಟಲ್ ಸ್ಟ್ರೈಕ್ ಸೇರಿದಂತೆ ವಿವಿಧ ಕ್ರಮಗಳ ಮೂಲಕ ಚೀನಾದ ಆಯಕಟ್ಟಿನ ಕ್ಷೇತ್ರಗಳಿಗೆ ಪೆಟ್ಟು ನೀಡಿತ್ತು.
ಟಿಕ್ ಟಾಕ್ ಸೇರಿದಂತೆ 59 ಚೀನೀ ಆ್ಯಪ್ಗಳನ್ನ ಭದ್ರತಾ ಅಪಾಯದ ಕಾರಣವೊಡ್ಡಿ ನಿಷೇಧಿಸಿತ್ತು. ಬಿಎಸ್ಎಲ್ಎಲ್ ಮತ್ತು ಎಂಟಿಎನ್ಎಲ್ನ 4ಜಿ ಉನ್ನತೀಕರಣದಲ್ಲಿ ಚೀನಾದ ಕಂಪನಿಗಳನ್ನ ಹೊರಗಿಡಲಾಗುವಂತೆ ಟೆಂಡರ್ಗಳನ್ನ ರದ್ದುಗೊಳಿಸಲಾಗಿತ್ತು. ಹೆದ್ದಾರಿ ಯೋಜನೆಗಳಲ್ಲಿ ಚೀನೀ ಕಂಪನಿಗಳನ್ನ ಹೊರಗಿಟ್ಟಿತ್ತು. ಸಂದರ್ಭ ಬಂದರೆ ಭಾರತ ಕ್ಷಿಪ್ರವಾಗಿ ನಿರ್ಣಯಗಳನ್ನ ತೆಗೆದುಕೊಳ್ಳಬಲ್ಲದು ಎಂಬ ಸಂದೇಶವನ್ನು ಚೀನಾಗೆ ಭಾರತ ಈ ಮೂಲಕ ಮಾಡಿತ್ತು
ಪಾಕಿಸ್ತಾನ ಪದೇ ಪದೆ ಗಡಿ ನಿಯಮವನ್ನು ಉಲ್ಲಂಘನೆ ಮಾಡುತ್ತಿದ್ದು, 2019ರ ಒಂದೇ ವರ್ಷದಲ್ಲಿ 2 ಸಾವಿರಕ್ಕೂ ಅಧಿಕ ಬಾರಿ ಕದನ ವಿರಾಮ ಉಲ್ಲಂಘನೆ ಮಾಡಿತ್ತು. ಪಾಕಿಸ್ತಾನದ ಈ ವರ್ತನೆಗೆ ಭಾರತದ 21 ಜನರು ಬಲಿಯಾಗಿದ್ದರು ಎಂದು ವಿದೇಶಾಂಗ ಸಚಿವಾಲಯದ ಅಧಿಕೃತ ಮಾಹಿತಿ ಹೇಳುತ್ತದೆ. ಪ್ರತಿ ಬಾರಿಯೂ ಪಾಕಿಸ್ತಾನ ತಾನಾಗಿಯೇ ಕದನ ವಿರಾಮ ಉಲ್ಲಂಘನೆ ಮಾಡುತ್ತ ಬಂದಿರುವುದು ತಿಳಿದಿರುವ ವಿಚಾರ, ಆದರೆ ಅದೇ ಹೊತ್ತಿನಲ್ಲಿ ಗಾಲ್ವಾನ್ ಕಣಿವೆಯಿಂದ ಚೀನಾ ಒಂದು ಹೆಜ್ಜೆ ಹಿಂದೆ ತೆಗೆಯುವುದಕ್ಕೂ ಮತ್ತು ಪಾಕಿಸ್ತಾನದ ಈ ಕೃತ್ಯಕ್ಕೂ ಸಂಬಂಧವಿರುವ ಬಗ್ಗೆಯೂ ಚರ್ಚೆಯಾಗುತ್ತಿದೆ.
Jul 11, 2020 12:27 AM IST













