Last Updated:
ಐಪಿಎಲ್ 2025 ಫೈನಲ್ ನಂತರ ಅವರು ಯಾವುದೇ ಕ್ರಿಕೆಟ್ ಆಡಿಲ್ಲ. ಪೋಕ್ಸೊ ಪ್ರಕರಣದ ಹಿನ್ನೆಲೆಯಲ್ಲಿ ಯಶ್ ದಯಾಳ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಿಂದ ಆರ್ಸಿಬಿ ಹೊರಗಿಟ್ಟಿತ್ತು.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಬೌಲರ್ ಯಶ್ ದಯಾಳ್ ತಮ್ಮ ದೇಶೀಯ ತಂಡವನ್ನು ಬದಲಾಯಿಸಿದ್ದಾರೆ. ಮುಂಬರುವ 2026-27ರ ದೇಶೀಯ ಕ್ರಿಕೆಟ್ ಋತುವಿನಲ್ಲಿ ಉತ್ತರ ಪ್ರದೇಶದ ಬದಲಿಗೆ ಅವರು ಛತ್ತೀಸ್ಗಢ ಪರ ಆಡಲು ಸಜ್ಜಾಗಿದ್ದಾರೆ. ಪೋಕ್ಸೊ ಪ್ರಕರಣ ಸೇರಿದಂತೆ ಹಲವಾರು ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿರುವ ಯಶ್ ದಯಾಳ್ ಅವರನ್ನು ಉತ್ತರ ಪ್ರದೇಶ ಕ್ರಿಕೆಟ್ ಸಂಸ್ಥೆ (UPCA) ವಜಾಗೊಳಿಸಿದೆ. ಆದ್ದರಿಂದ ಅವರು ತಂಡಗಳನ್ನು ಬದಲಾಯಿಸಲು ನಿರ್ಧರಿಸಿದ್ದಾರೆ.
ಇಎಸ್ಪಿಎನ್ ಕ್ರಿಕ್ಇನ್ಫೋ ಪ್ರಕಾರ, ಯುಪಿ ಕ್ರಿಕೆಟ್ ಅಸೋಸಿಯೇಷನ್ ಇನ್ನೂ ಯಶ್ ದಯಾಳ್ ಅವರಿಗೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿಲ್ಲ. ಸದ್ಯ ನಿರಾಕ್ಷೇಪಣಾ ಪತ್ರ ಪ್ರಕ್ರಿಯೆ ನಡೆಯುತ್ತಿರುವಂತೆಯೇ, ಯಶ್ ದಯಾಳ್ ಛತ್ತೀಸ್ ಗಢದಲ್ಲಿ ನಡೆದ ಪೂರ್ವ ಋತುವಿನ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಛತ್ತೀಸ್ಗಢದ ಹೊಸ ತರಬೇತುದಾರ ಅಮೆ ಖುರೇಸಿಯಾ ಅವರ ಮೇಲ್ವಿಚಾರಣೆಯಲ್ಲಿ ಯಶ್ ದಯಾಳ್ ಕೂಡ ತರಬೇತಿ ಪ್ರಾರಂಭಿಸಿದ್ದಾರೆ. ಪೋಕ್ಸೊ ಪ್ರಕರಣದಿಂದಾಗಿ ಯಶ್ ದಯಾಳ್ ದೀರ್ಘಕಾಲದಿಂದ ವೃತ್ತಿಪರ ಕ್ರಿಕೆಟ್ನಿಂದ ದೂರವಿದ್ದಾರೆ.
ಐಪಿಎಲ್ 2025 ಫೈನಲ್ ನಂತರ ಅವರು ಯಾವುದೇ ಕ್ರಿಕೆಟ್ ಆಡಿಲ್ಲ. ಪೋಕ್ಸೊ ಪ್ರಕರಣದ ಹಿನ್ನೆಲೆಯಲ್ಲಿ ಯಶ್ ದಯಾಳ್ ಅವರನ್ನು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಿಂದ ಆರ್ಸಿಬಿ ಹೊರಗಿಟ್ಟಿತ್ತು. ಟೂರ್ನಿ ಆರಂಭಕ್ಕೂ ಮುನ್ನ ಆರ್ಸಿಬಿ ಕ್ರಿಕೆಟ್ ನಿರ್ದೇಶಕ ಮೊ ಬೊಬಾಟ್ ಅವರು ದಯಾಳ್ “ವೈಯಕ್ತಿಕ ಕಾರಣಗಳಿಂದ” ಆಡುತ್ತಿಲ್ಲ ಎಂದು ಅಧಿಕೃತವಾಗಿ ಹೇಳಿದ್ದರು. ಆದರೆ ನಂತರ ಸ್ವತಃ ಯಶ್ ದಯಾಳ್ ಅವರೇ ಹೇಳಿಕೆ ನೀಡಿ, “ಐಪಿಎಲ್ 2026 ತಪ್ಪಿಸಿಕೊಳ್ಳುತ್ತಿರುವುದು ನನ್ನ ವೈಯಕ್ತಿಕ ನಿರ್ಧಾರವಲ್ಲ, ಉನ್ನತ ಅಧಿಕಾರಿಗಳು ಹಾಗೂ ಮ್ಯಾನೇಜ್ಮೆಂಟ್ ತೆಗೆದುಕೊಂಡ ನಿರ್ಧಾರ” ಎಂದು ಸ್ಪಷ್ಟಪಡಿಸಿದ್ದರು.
ಆದರೆ ಯುಪಿ ಟಿ20 ಲೀಗ್ ನಲ್ಲಿ ಯಶ್ ದಯಾಳ್ ಅವರನ್ನು ಗೋರಖ್ ಪುರ ಲಯನ್ಸ್ ಉಳಿಸಿಕೊಂಡಿದೆ. ಅವರು ಫ್ರ್ಯಾಂಚೈಸಿಗಾಗಿ ತರಬೇತಿಯನ್ನು ಸಹ ಪ್ರಾರಂಭಿಸಿದ್ದರು. ಆದರೆ ಹರಾಜಿನ ನಂತರ, ಫ್ರಾಂಚೈಸಿ ಯಶ್ ದಯಾಳ್ ಅವರ ಹೆಸರಿಲ್ಲದೆ ತಂಡವನ್ನು ಘೋಷಿಸಿತು. ಯುಪಿ ಕ್ರಿಕೆಟ್ ಅಸೋಸಿಯೇಷನ್ ಸೂಚನೆಯ ಮೇರೆಗೆ ಅವರನ್ನು ಲೀಗ್ ನಿಂದ ತೆಗೆದುಹಾಕಲಾಗಿತ್ತು. ಆದರೆ ಅವರ ವಜಾದ ಬಗ್ಗೆ ಪ್ರತಿಕ್ರಿಯಿಸಲು ಯುಪಿಸಿಎ ನಿರಾಕರಿಸಿತ್ತು.
ಯುಪಿಸಿಎಯಲ್ಲಿ ತನಗೆ ಅವಕಾಶ ಸಿಗುವುದಿಲ್ಲ ಎಂದು ಯಶ್ ದಯಾಳ್ ಭಾವಿಸಿದ್ದಾರೆ. ಹಾಗಾಗಿ ಅವರು ನೆರೆಯ ರಾಜ್ಯ ಸಂಘಗಳಿಗೆ ಆಡಲು ಆಸಕ್ತಿ ತೋರುತ್ತಿದ್ದಾರೆ. ಬಿಸಿಸಿಐ ನಿಯಮಗಳ ಪ್ರಕಾರ, ನೀವು ಎನ್ಒಸಿ ಪಡೆದು ನೆರೆಹೊರೆಯ ಸಂಘಗಳನ್ನು ಪ್ರತಿನಿಧಿಸುತ್ತಿದ್ದರೂ ಸಹ, ನಿಮ್ಮ ತವರು ರಾಜ್ಯದಲ್ಲಿ ನೀವು ಫ್ರ್ಯಾಂಚೈಸ್ ಲೀಗ್ ಆಡಬಹುದು. ಯಶ್ ದಯಾಳ್ ಈಗಾಗಲೇ ಛತ್ತೀಸ್ ಗಢದಲ್ಲಿ ನಡೆದ ಪ್ರಿ-ಸೀಸನ್ ಶಿಬಿರದಲ್ಲಿ ಭಾಗವಹಿಸಿದ್ದಾರೆ. ಜಯಂತ್ ಯಾದವ್ ಮತ್ತು ಅನುಭವಿ ಆಲ್ರೌಂಡರ್ ಧರ್ಮೇಂದ್ರ ಸಿಂಗ್ ಜಡೇಜಾ ಅವರೊಂದಿಗೆ ತರಬೇತಿ ಆರಂಭಿಸಿದ್ದಾರೆ.
ಯಶ್ ದಯಾಳ್ ವಿರುದ್ಧ ಸದ್ಯ ಎರಡು ಕ್ರಿಮಿನಲ್ ಪ್ರಕರಣಗಳಿವೆ. ಗಾಜಿಯಾಬಾದ್ ಮೂಲದ ಮಹಿಳೆಯೊಬ್ಬಳು ಯಶ್ ದಯಾಳ್ ವಿರುದ್ಧ ಮದುವೆಯ ನೆಪದಲ್ಲಿ ಅತ್ಯಾಚಾರ ಎಸಗಿದ ಆರೋಪ ಮಾಡಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈ ಪ್ರಕರಣದಲ್ಲಿ ಅಲಹಾಬಾದ್ ಹೈಕೋರ್ಟ್ ಅವರಿಗೆ ಜಾಮೀನು ನೀಡಿತ್ತು. ಬಿಎನ್ ಎಸ್ ಸೆಕ್ಷನ್ 69ರ ಅಡಿಯಲ್ಲಿ ಎಫ್ ಐಆರ್ ದಾಖಲಿಸಲಾಗಿದೆ. ಯಶ್ ದಯಾಳ್ ಪರ ವಕೀಲರು ಈ ಆರೋಪವನ್ನು ನಿರಾಕರಿಸಿದ್ದಾರೆ. ಈ ದೂರಿನ ಮೂಲಕ ಯಶ್ ದಯಾಳ್ ಅವರನ್ನು ಬ್ಲ್ಯಾಕ್ ಮೇಲ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದರು.
ಅಪ್ರಾಪ್ತ ಬಾಲಕಿಯ ಮೇಲೆ ಪ್ರೀತಿಯ ಹೆಸರಿನಲ್ಲಿ ಅತ್ಯಾಚಾರ ಎಸಗಿದ ಆರೋಪದ ಮೇಲೆ ಜೈಪುರದಲ್ಲಿ ಯಶ್ ದಯಾಳ್ ವಿರುದ್ಧ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣದ ಗಂಭೀರತೆಯನ್ನು ಗಮನದಲ್ಲಿಟ್ಟುಕೊಂಡು ಯಶ್ ದಯಾಳ್ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ವಿಶೇಷ ಪೋಕ್ಸೊ ನ್ಯಾಯಾಲಯ ತಿರಸ್ಕರಿಸಿತ್ತು. ಆದರೆ, ರಾಜಸ್ಥಾನ ಹೈಕೋರ್ಟ್ ಅವರಿಗೆ ಬಂಧನದಿಂದ ಮಧ್ಯಂತರ ರಕ್ಷಣೆ (Interim Protection/Stay on Arrest) ನೀಡಿದ್ದು, ತನಿಖೆಗೆ ಸಂಪೂರ್ಣವಾಗಿ ಸಹಕರಿಸುವಂತೆ ಆದೇಶಿಸಿದೆ.














