Last Updated:
ವೈಭವ್ ಸೂರ್ಯವಂಶಿ ಕ್ರಿಕೆಟ್ನಲ್ಲಿ ಭವಿಷ್ಯದ ಬಗ್ಗೆ ಅನೇಕ ಪ್ರಶ್ನೆಗಳು ಎದ್ದಿವೆ. ಸೂರ್ಯವಂಶಿಗೆ ತುಂಬಾ ಪ್ರತಿಭೆ ಇದ್ದರೂ, ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಟೀಮ್ ಇಂಡಿಯಾದಿಂದ ಹೊರಗಿಡುವ ಅಂತಿಮ ನಿರ್ಧಾರಕ್ಕೆ ಬಂದಿರುವುದ್ದೇಕೆ?
ಭಾರತ ಕ್ರಿಕೆಟ್ ತಂಡ ಐರ್ಲೆಂಡ್ ಮತ್ತು ಇಂಗ್ಲೆಂಡ್ ವಿರುದ್ಧ ಸತತ ಸೋಲು ಕಂಡಿದ್ದರಿಂದ ಈಗ ಬಹಳ ಟೀಕೆಗಳನ್ನು ಎದುರಿಸುತ್ತಿದೆ. ಪ್ರಯೋಗಗಳ ಹೆಸರಿನಲ್ಲಿ ತಂಡವನ್ನು ಹಾಳು ಮಾಡಲಾಗುತ್ತಿದೆ ಎಂದು ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಇದರ ನಡುವೆ, ಬಿಸಿಸಿಐ ಹಿರಿಯ ಆಯ್ಕೆ ಸಮಿತಿಯ ಅಧ್ಯಕ್ಷ ಅಜಿತ್ ಅಗರ್ಕರ್ ಮತ್ತು ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಮಹತ್ವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಟಿವಿ 9 ತೆಲುಗು ವರದಿ ಮಾಡಿದೆ.
ಹೊಸ ನಾಯಕ ಶ್ರೇಯಸ್ ಅಯ್ಯರ್ ಅವರ ನಾಯಕತ್ವದಲ್ಲಿ ಟೀಮ್ ಇಂಡಿಯಾ ಇನ್ನೂ ಉತ್ತಮ ಸ್ಥಿತಿಗೆ ತಲುಪಿಲ್ಲ. ಸತತ ಸೋಲುಗಳಿಂದ ತುಂಬಾ ತೊಂದರೆಯಲ್ಲಿರುವ ಭಾರತ ತಂಡದ ಮ್ಯಾನೇಜ್ಮೆಂಟ್ ತೀವ್ರ ಟೀಕೆಗಳನ್ನು ಎದುರಿಸುತ್ತಿದೆ. ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಇಬ್ಬರೂ ಆರಂಭದಲ್ಲಿ ಸಂಜು ಸ್ಯಾಮ್ಸನ್ಗೆ ಸತತ ಆರು ಅವಕಾಶಗಳನ್ನು ಕೊಡಬೇಕು ಎಂದು ಒಂದೇ ಅಭಿಪ್ರಾಯ ಹೊಂದಿದ್ದರು.
ಭಾರತ ತಂಡದ ಮ್ಯಾನೇಜ್ಮೆಂಟ್ ಮೇಲೆ ಬಂದ ಪರೋಕ್ಷ ಒತ್ತಡದಿಂದ ಅವರ ಯೋಜನೆಯನ್ನು ಮಧ್ಯದಲ್ಲೇ ಬದಲಾಯಿಸಬೇಕಾಯಿತು. ಇಂಗ್ಲೆಂಡ್ ಪ್ರವಾಸದ ಮೊದಲ ಪಂದ್ಯದ ನಂತರ ಸಂಜು ಸ್ಯಾಮ್ಸನ್ ಅವರನ್ನು ತಂಡದಿಂದ ಹೊರಗಿಡಲಾಯಿತು. ಬದಲಿಗೆ ಮ್ಯಾಂಚೆಸ್ಟರ್ನಲ್ಲಿ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಅವರಿಗೆ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆಡುವ ಅವಕಾಶ ನೀಡಲಾಯಿತು.
ಐಪಿಎಲ್ 2026ರಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆಡಿದ ವೈಭವ್ ಸೂರ್ಯವಂಶಿ ತುಂಬಾ ಅದ್ಭುತ ಆಟವಾಡಿದ್ದು ಎಲ್ಲರಿಗೂ ತಿಳಿದಿದೆ. ಅವರು ಕೇವಲ 15 ಇನ್ನಿಂಗ್ಸ್ಗಳಲ್ಲಿ 237 ಸ್ಟ್ರೈಕ್ ರೇಟ್ನಲ್ಲಿ 776 ರನ್ ಗಳಿಸಿದರು. ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮ್ಮಿನ್ಸ್, ಕಾಗಿಸೋ ರಬಾಡ ಅಂತಹ ಸ್ಟಾರ್ ಬೌಲರ್ಗಳನ್ನು ಸಹ ಸುಲಭವಾಗಿ ಎದುರಿಸಿ ಬೆವರಿಳಿಸಿದ್ದರು. ಈ ಉತ್ತಮ ಪ್ರದರ್ಶನದಿಂದ ಅವರನ್ನು ಶ್ರೀಲಂಕಾ ಪ್ರವಾಸಕ್ಕೆ ಆಯ್ಕೆ ಮಾಡಲಾಯಿತು. ಬಳಿಕ ಹಿರಿಯ ಭಾರತ ತಂಡಕ್ಕೂ ಸೇರಿಸಲಾಯಿತು.
ಐಪಿಎಲ್ ಮತ್ತು ಅಂತಾರರಾಷ್ಟ್ರೀಯ ಕ್ರಿಕೆಟ್ ನಡುವಿನ ದೊಡ್ಡ ವ್ಯತ್ಯಾಸವು ಇಂಗ್ಲೆಂಡ್ನಲ್ಲಿ ವೈಭವ್ ಸೂರ್ಯವಂಶಿಗೆ ಸ್ಪಷ್ಟವಾಗಿ ತಿಳಿಯಿತು. ಸೂರ್ಯವಂಶಿ ಆಡಿದ ಮೂರು ಟಿ20 ಪಂದ್ಯಗಳಲ್ಲಿ ಸರಾಸರಿ ಕೇವಲ 14 ರನ್ಗಳಿಗೆ ಒಟ್ಟು 42 ರನ್ ಮಾತ್ರ ಗಳಿಸಿದರು. ಶಾರ್ಟ್ ಪಿಚ್ ಬಾಲ್ಗಳನ್ನು ಎದುರಿಸುವಲ್ಲಿ ಅವರ ದೌರ್ಬಲ್ಯ ಎಲ್ಲರಿಗೂ ಸ್ಪಷ್ಟವಾಗಿ ಕಾಣಿಸಿಕೊಂಡಿತು. ಇದರಿಂದಾಗಿ, ಅವರನ್ನು ತುಂಬಾ ಬೇಗ ರಾಷ್ಟ್ರೀಯ ತಂಡಕ್ಕೆ ಕರೆದುಕೊಂಡು ಬಂದುದು ತಪ್ಪು ಎಂದು ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಈಗ ಭಾವಿಸುತ್ತಿದೆ.
ಅಪಾರ ಪ್ರತಿಭೆ ಇದ್ದರೂ, ಕೇವಲ 15 ವರ್ಷದ ವೈಭವ್ಗೆ ಅಂತಾರಾಷ್ಟ್ರೀಯ ಕ್ರಿಕೆಟ್ನ ಒತ್ತಡವನ್ನು ತಡೆದುಕೊಳ್ಳುವುದು ಬಹಳ ಕಷ್ಟವಾಗಿದೆ. ಭವಿಷ್ಯದಲ್ಲಿ ಉತ್ತಮ ಆಟಗಾರನಾಗುವ ಎಲ್ಲಾ ಗುಣಗಳಿದ್ದರೂ, ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ ಅವರು ಅವನನ್ನು ಟೀಮ್ ಇಂಡಿಯಾದ ದೀರ್ಘಕಾಲೀನ ಯೋಜನೆಯಿಂದ ಹೊರಗಿಡುವ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಸೂರ್ಯವಂಶಿ ಮಾನಸಿಕವಾಗಿ ಸಿದ್ಧನಾದ ನಂತರ ಸರಿಯಾದ ಸಮಯ ಬಂದಾಗ ಮತ್ತೊಂದು ಅವಕಾಶ ಸಿಗುವ ಸೂಚನೆಗಳಿವೆ ಟಿವಿ 9 ತೆಲುಗು ವರದಿ ಮಾಡಿದೆ.
ಇಂಗ್ಲೆಂಡ್ ಪ್ರವಾಸ ಮುಗಿದ ನಂತರ ವೈಭವ್ ಈಗ ಮುಂದಿನ ಸರಣಿಗೆ ತಯಾರಿ ನಡೆಸುತ್ತಿದ್ದಾರೆ. ರಾಜಸ್ಥಾನ್ ರಾಯಲ್ಸ್ ತಂಡವು ತನ್ನ ಸೋಶಿಯಲ್ ಮೀಡಿಯಾದಲ್ಲಿ ಒಂದು ವೀಡಿಯೋ ಹಂಚಿಕೊಂಡಿದೆ. ಆ ವೀಡಿಯೋದಲ್ಲಿ ವೈಭವ್ ನಾಗ್ಪುರದಲ್ಲಿರುವ ತಂಡದ ಹೈ ಪರ್ಫಾರ್ಮೆನ್ಸ್ ಸೆಂಟರ್ನಲ್ಲಿ ಅಭ್ಯಾಸ ಮಾಡುತ್ತಿರುವುದು ಕಂಡು ಬಂದಿದೆ. ಇಂಗ್ಲೆಂಡ್ನಲ್ಲಿ ಮಾಡಿದ ತಪ್ಪುಗಳನ್ನು ಸರಿಪಡಿಸುವ ಕೆಲಸ ಮಾಡುತ್ತಿದ್ದಾರೆ. ವಿಶೇಷವಾಗಿ ಶಾರ್ಟ್ ಬಾಲ್ಗಳ ವಿರುದ್ಧ ತಮ್ಮ ಬ್ಯಾಟಿಂಗ್ ಅನ್ನು ಇನ್ನಷ್ಟು ಬಲಪಡಿಸಲು ಪ್ರಯತ್ನಿಸುತ್ತಿದ್ದಾರೆ.














