Last Updated:
ಭಾರೀ ಚರ್ಚೆಯ ಬಳಿಕ ಟಿಟಿಡಿ ಕನ್ನಡಿಗರಿಗೆ ತಿರುಪತಿಯ ಪ್ರಥಮ ಆರತಿಗೆ ಅಸ್ತು ಎಂದಿದ್ದು, ಆದ್ರೆ ಈ ಒಂದು ಷರತ್ತು ವಿಧಿಸಿದೆ.
ಬೆಂಗಳೂರು (ಜು.15): ಕಲಿಯುಗ ವೈಕುಂಠ, ತಿರುಪತಿ ಶ್ರೀವೆಂಕಟ ರಮಣನ ಪ್ರಥಮ ಆರತಿ ವಿಚಾರ ಭಾರೀ ಚರ್ಚೆ ಆಗ್ತಿದೆ. ಮಹಾರಾಜರ ಕಾಲದಿಂದಲೂ ಕರ್ನಾಟಕದವರಿಗೆ (Karnataka) ತಿರುಪತಿ ದೇವಾಲಯದ ಪ್ರಥಮ ಆರತಿಯ ಸೌಭಾಗ್ಯ ಸಿಕ್ಕಿದೆ. ಇದನ್ನ ರಾಜಕಾರಣಿಗಳು ಹಾಗೂ ಉನ್ನತ ಅಧಿಕಾರಿಗಳಿಗೂ ಸಿಗುವಂತೆ ಮಾಡಲು ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಪ್ರಸ್ತಾಪ ಮುಂದಿಟ್ಟಿದ್ರು. ಭಾರೀ ಚರ್ಚೆಯ ಬಳಿಕ ಟಿಟಿಡಿ ಕನ್ನಡಿಗರಿಗೆ ತಿರುಪತಿಯ ಪ್ರಥಮ ಆರತಿಗೆ ಅಸ್ತು ಎಂದಿದ್ದು, ಆದ್ರೆ ಈ ಒಂದು ಷರತ್ತು ವಿಧಿಸಿದೆ.
ಮಹಾರಾಜರ ಕಾಲದಲ್ಲಿ ತಿರುಪತಿಗೆ ಕನ್ನಡಿಗರು ನೀಡಿದ ಕೊಡುಗೆ ಆಧಾರಿಯೇ ಶ್ರೀವೆಂಕಟೇಶ್ವರನ ಮೊದಲ ಆರತಿ ಭಾಗ್ಯ ಕರ್ನಾಟಕಕ್ಕೆ ಸಿಕ್ಕಿದೆ. ಇದೀಗ ಪ್ರಥಮ ಪೂಜೆಗೆ ಸಂಬಂಧಿಸಿದಂತೆ ತಿರುಮಲ ತಿರುಪತಿ ದೇವಸ್ಥಾನಂ (TTC) ಮಹತ್ವದ ಸ್ಪಷ್ಟನೆಯನ್ನ ನೀಡಿದೆ. ಕರ್ನಾಟಕ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆ ಸ್ವಾಗತಾರ್ಹ ಎಂದಿರುವ ಟಿಟಿಡಿ, ಈ ಒಂದು ಕಂಡೀಷನ್ ಹಾಕಿದೆ.
ಡಿಕೆ ಶಿವಕುಮಾರ್ ಅವರ ಪ್ರಸ್ತಾವನೆಯ ಬಗ್ಗೆ ಸಭೆ ನಡೆಸಿ ಚರ್ಚಿಸಿ ಬಳಿಕ ಮಾತಾಡಿದ ಟಿಟಿಡಿ ಸದಸ್ಯ ನರೇಶ್ ಕುಮಾರ್ ಅವರು ಕರ್ನಾಟಕದ ಮುಖ್ಯಮಂತ್ರಿಗಳು ಹೊಸ ಶಿಷ್ಟಾಚಾರ ವ್ಯವಸ್ಥೆಗೆ ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆ. ಆದ್ರೆ, ಈ ಗೌರವ ಕೇವಲ ರಾಜಕಾರಣಿಗಳಿಗೆ ಮಾತ್ರ ಸೀಮಿತವಾಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಇದು ಶ್ರೀವೆಂಕಟೇಶ್ವರನ ಭಕ್ತರಿಗೆ ಸಿಗುವ ಮಹಾ ಸೌಭಾಗ್ಯವಾಗಿದ್ದು, ಈ ಭಾಗ್ಯ ಎಲ್ಲರಿಗೂ ಸಿಗುವಂತಾಗಲಿ. ಇದು ಕೇವಲ ರಾಜಕೀಯ ನಾಯಕರಿಗೆ ಮಾತ್ರ ಸೀಮಿತವಾಗಬಾರದು. ಆ ದಿನ ತಿರುಮಲ ದೇವಾಲಯದಲ್ಲಿರುವ ಕರ್ನಾಟಕದ ಪ್ರಮುಖ ಗಣ್ಯರಿಗೆ ಈ ಅವಕಾಶ ಸಿಗಬೇಕು ಎಂದು ನರೇಶ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ. ಟಿಟಿಡಿ ಸ್ಪಷ್ಟನೆಗೆ ಮುಖ್ಯಮಂತ್ರಿ ಕಚೇರಿಯಿಂದ ಇನ್ನಷ್ಟೇ ಪ್ರತಿಕ್ರಿಯೆ ಬರಬೇಕಿದೆ ಎಂದು ವಿಜಯ ಕರ್ನಾಟಕ ವರದಿ ಮಾಡಿದೆ.
ಪ್ರಥಮ ಆರತಿ ಗೊಂದಲದ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿದ ಟಿಟಿಡಿ ಸದಸ್ಯ ನರೇಶ್ ಕುಮಾರ್ ಅವ್ರು, ವಿಜಯನಗರ ಸಾಮ್ರಾಜ್ಯದ ನಂತರ ಮೈಸೂರು ಮಹಾರಾಜರು ತಿರುಪತಿ ದೇವಾಲಯಕ್ಕೆ ಅಪಾರ ದೇಣಿಗೆ ನೀಡಿದ್ದಾರೆ. ಇದರ ಸ್ಮರಣಾರ್ಥವಾಗಿಯೇ ಟಿಡಿಡಿ ಸುಪ್ರಭಾತ ಸೇವೆಯಲ್ಲಿ ಪ್ರಥಮ ಆರತಿ ಸ್ವೀಕರಿಸುವ ಗೌರವವನ್ನು ಮೈಸೂರು ಮಹಾರಾಜರಿಗೆ ನೀಡಿತ್ತು. ಮೈಸೂರು ಸಂಸ್ಥಾನದ ಆಡಳಿತ ಮುಕ್ತಾಯಗೊಂಡ ಬಳಿಕ, ಈ ಗೌರವವು, ಕರ್ನಾಟಕ ರಾಜ್ಯದ ಹೆಸರಿನಲ್ಲಿ ಮುಂದುವರಿದಿದೆ ಎಂದಿದ್ದಾರೆ.
Jul 15, 2026 12:23 PM IST














