Last Updated:
ಒಂದು ಅಥವಾ ಎರಡು ಬಾರಿ ಫೇಲ್ ಆದ್ರೆ ಧೈರ್ಯ ಕಳೆದುಕೊಳ್ಳುವವರು ಅಥವಾ ಆಸಕ್ತಿ ಕಳೆದುಕೊಳ್ಳುವವರು ಈ ಸುದ್ದಿ ಓದಬೇಕು. ಇಲ್ಲಿ ವಿಜಯ್ ವರ್ಧನ್ ಕೇವಲ ಒಂದು ಅಥವಾ ಎರಡು ಬಾರಿ ಅಲ್ಲ, 35 ಪರೀಕ್ಷೆಗಳಲ್ಲಿ ಅನುತ್ತೀರ್ಣರಾದ ನಂತರ ಕೂಡ ತಮ್ಮ ಹಠ ಬಿಡದೇ ಐಎಎಸ್ ಅಧಿಕಾರಿಯಾಗಿದ್ದಾರೆ.
ಒಂದು ಅಥವಾ ಎರಡು ಬಾರಿ ಫೇಲ್ (Fail) ಆದ್ರೆ ಧೈರ್ಯ ಕಳೆದುಕೊಳ್ಳುವವರು ಅಥವಾ ಆಸಕ್ತಿ ಕಳೆದುಕೊಳ್ಳುವವರು ಈ ಸುದ್ದಿ ಓದಬೇಕು. ಯಾವುದೇ ದೊಡ್ಡ ಯಶಸ್ಸಿನ ಹಿಂದೆ (Success) ಲೆಕ್ಕವಿಲ್ಲದಷ್ಟು ವೈಫಲ್ಯಗಳು ಇರುತ್ತೆ ಎಂಬುದಕ್ಕೆ ಇದು ಸಾಕ್ಷಿ. ಉತ್ತಮ ಉದಾಹರಣೆ ಎಂದರೆ ಹರಿಯಾಣದ ಸಿರ್ಸಾ ಜಿಲ್ಲೆಯ ವಿಜಯ್ ವರ್ಧನ್. ಯುಪಿಎಸ್ಸಿ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಐಎಎಸ್ ಅಧಿಕಾರಿಯಾಗುವ ಮುನ್ನ ಇವರು 35 ಸರ್ಕಾರಿ ಪರೀಕ್ಷೆಗಳಲ್ಲಿ ಫೇಲ್ ಆಗಿದ್ದರು.
ಹೌದು, 35 ಬಾರಿ ಅನುತೀರ್ಣರಾದರೂ ಎದೆಗುಂದದ ವಿಜಯ್ ವರ್ಧನ್, ಅವರ ದೃಢ ನಿಶ್ಚಯದಿಂದ ಕೊನೆಗೂ ಪಾಸ್ ಆಗಿ ಯಶಸ್ಸು ಕಂಡಿದ್ದಾರೆ. ಮೊದಲು IPS, ನಂತರ IAS ಆಗಿ ಸಾಧನೆ ಮಾಡಿದ್ದಾರೆ. ಇವರ ಕಥೆ ಎಷ್ಟೋ ಯುವಕರಿಗೆ ಸ್ಪೂರ್ತಿ.
ವಿಜಯ್ ವರ್ಧನ್ ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಪದವಿ ಪಡೆದ ನಂತರ ದೆಹಲಿಗೆ ಬಂದು ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಆರಂಭಿಸಿದರು. ಆದರೆ ಯಶಸ್ಸು ಸುಲಭವಾಗಿ ಸಿಗಲಿಲ್ಲ. ಹರಿಯಾಣ ಪಿಸಿಎಸ್, ಉತ್ತರ ಪ್ರದೇಶ ಪಿಸಿಎಸ್, ಎಸ್ಎಸ್ಸಿ ಸೇರಿದಂತೆ 35 ವಿವಿಧ ಸರ್ಕಾರಿ ಪರೀಕ್ಷೆಗಳನ್ನು ಬರೆದರು, ಆದರೆ ಅವರು ಎಲ್ಲದರಲ್ಲೂ ಫೇಲ್ ಆದರು. ಸಾಮಾನ್ಯ ವ್ಯಕ್ತಿಯಾಗಿದ್ರೆ ಇಷ್ಟು ವೈಫಲ್ಯಗಳ ನಂತರ ತನ್ನ ಕನಸನ್ನು ಬಿಟ್ಟುಬಿಡುತ್ತಿದ್ದ. ಆದರೆ ವಿಜಯ್ ಪ್ರತಿ ವೈಫಲ್ಯವನ್ನು ಪಾಠವಾಗಿ ತೆಗೆದುಕೊಂಡು, ತಮ್ಮ ತಪ್ಪುಗಳನ್ನು ಸರಿಪಡಿಸುತ್ತಾ ಮುಂದೆ ಸಾಗಿದರು.
ವರ್ಷಗಳ ಕಠಿಣ ಪರಿಶ್ರಮದ ನಂತರ 2018ರಲ್ಲಿ ವಿಜಯ್ ವರ್ಧನ್ ಯುಪಿಎಸ್ಸಿ ಪರೀಕ್ಷೆಯಲ್ಲಿ 104ನೇ ಅಖಿಲ ಭಾರತ ರ್ಯಾಂಕ್ ಗಳಿಸಿ ಉತ್ತೀರ್ಣರಾದರು. ಇದರೊಂದಿಗೆ ಅವರು ಐಪಿಎಸ್ ಅಧಿಕಾರಿಯಾದರು. ಆದರೆ ಅವರ ಕನಸು ಐಎಎಸ್ ಅಧಿಕಾರಿಯಾಗುವುದಾಗಿತ್ತು. ಆದ್ದರಿಂದ ಐಪಿಎಸ್ ಕೆಲಸ ಮುಂದುವರಿಸುತ್ತಾ ಮತ್ತೆ ಪರೀಕ್ಷೆಗೆ ತಯಾರಿ ಆರಂಭಿಸಿದರು.
2021ರಲ್ಲಿ ಅವರು ಮತ್ತೊಮ್ಮೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ತಮ್ಮ ಬಯಕೆಯಂತೆ ಐಎಎಸ್ ಅಧಿಕಾರಿಯಾದರು. ಒಬ್ಬ ವ್ಯಕ್ತಿಯ ಅತ್ಯುತ್ತಮ ಶಿಕ್ಷಕ ಅವನ ವೈಫಲ್ಯಗಳೇ ಎಂದು ಅವರು ಹೇಳಿದ್ದಾರೆ. ಪ್ರತಿ ವೈಫಲ್ಯದಿಂದ ಕಲಿತು ಮುಂದುವರಿಯುವುದು ಯಶಸ್ಸಿನ ರಹಸ್ಯ ಎಂದು ವಿಜಯ್ ತೋರಿಸಿದ್ದಾರೆ.
ವಿಜಯ್ ವರ್ಧನ್ ಅವರು ಸದ್ಯ ಹಿಮಾಚಲ ಪ್ರದೇಶ ಕೇಡರ್ ಅಧಿಕಾರಿಯಾಗಿದ್ದಾರೆ. ಹಿಂದೆ ರೋಹ್ರುವಿನ ಎಸ್ಡಿಎಂ ಆಗಿ ಸೇವೆ ಸಲ್ಲಿಸಿದ್ದಾರೆ. ಈಗ ಅವರನ್ನು ಶಿಮ್ಲಾದಲ್ಲಿ ಹಿಮಾಚಲ ಪ್ರದೇಶ ಸರ್ಕಾರದ ಸಾರ್ವಜನಿಕ ಹಣಕಾಸು ಮತ್ತು ಸಾರ್ವಜನಿಕ ಉದ್ಯಮಗಳ ನಿರ್ದೇಶಕರಾಗಿ ಮತ್ತು ವಿಶೇಷ ಕಾರ್ಯದರ್ಶಿ (ಹಣಕಾಸು) ಆಗಿ ನೇಮಿಸಲಾಗಿದೆ. ಅವರಿಗೆ ಖಜಾನೆಗಳು, ಖಾತೆಗಳು ಮತ್ತು ಲಾಟರಿಗಳ ನಿರ್ದೇಶಕರ ಹೆಚ್ಚುವರಿ ಜವಾಬ್ದಾರಿಯನ್ನೂ ನೀಡಲಾಗಿದೆ.
ವಿಜಯ್ ವರ್ಧನ್ ಅವರ ಕಥೆ ಲಕ್ಷಾಂತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ. ಒಮ್ಮೆ ಅಥವಾ ಎರಡು ಬಾರಿ ವಿಫಲರಾದ ನಂತರ ಖಿನ್ನತೆಗೊಳಗಾಗುವುದು ಸಹಜ. ಆದರೆ ವೈಫಲ್ಯ ಪ್ರಯಾಣದ ಅಂತ್ಯವಲ್ಲ, ಅದು ಯಶಸ್ಸಿನತ್ತ ಒಂದು ಹೆಜ್ಜೆ ಎಂದು ಅವರು ಸಾಬೀತುಪಡಿಸಿದ್ದಾರೆ. ಪರಿಶ್ರಮ, ಆತ್ಮವಿಶ್ವಾಸ ಮತ್ತು ಎಂದಿಗೂ ಬಿಟ್ಟುಕೊಡದ ಮನೋಭಾವ ಇದ್ದರೆ ಯಾವುದೂ ಅಸಾಧ್ಯವಲ್ಲ.
ವಿಜಯ್ ವರ್ಧನ್ ಅವರ ಜೀವನ ಯಶಸ್ಸು ಮತ್ತು ವೈಫಲ್ಯಗಳ ನಡುವಿನ ಸಂಬಂಧವನ್ನು ತೋರಿಸುತ್ತದೆ. ಅವರು ತಮ್ಮ ಕನಸನ್ನು ಬಿಡದೆ ಮುಂದುವರಿದ್ದಾರೆ. ಇದು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ದೊಡ್ಡ ಸಂದೇಶವಾಗಿದೆ. ‘ವೈಫಲ್ಯಗಳು ನಿಮ್ಮನ್ನು ತಡೆಯಲಾರವು, ಅವು ನಿಮ್ಮನ್ನು ಬಲಪಡಿಸುತ್ತವೆ’ ಎಂಬುದನ್ನು ವಿಜಯ್ ವರ್ಧನ್ ತಮ್ಮ ಜೀವನದ ಮೂಲಕ ಸಾಬೀತುಪಡಿಸಿದ್ದಾರೆ.
Jul 15, 2026 12:10 PM IST












