ಬಿಹಾರದ ನಳಂದ ಜಿಲ್ಲೆಯಲ್ಲಿ ಇಂತಹುದೊಂದು ಅಮಾನವೀಯ ಕೃತ್ಯ ನಡೆದಿದ್ದು, ಮಂಗಳವಾರ (ಜೂನ್ 30, 2026) ಚಾಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 35 ವರ್ಷದ ದಲಿತ ವಿಧವೆಯ ಮೇಲೆ ಮೂವರು ಕಾಮುಕರು ಈ ಕೃತ್ಯ ಎಸಗಿದ್ದಾರೆ. ಸಂತ್ರಸ್ತೆ ನಾಗರ್ನೌಸಾ ಪೊಲೀಸ್ ಠಾಣಾ ಪ್ರದೇಶದ ನಿವಾಸಿ ಎಂದು ತಿಳಿದು ಬಂದಿದೆ.
ಕಾಮುಕರು ಕೃತ್ಯ ಎಸಗಿದ ನಂತರ ಸಂತ್ರಸ್ತ ಮಹಿಳೆ ಆಘಾತಗೊಂಡು ಮಾನಸಿಕವಾಗಿ ಜರ್ಝರಿತಗೊಂಡು ದಿಗ್ಭ್ರಮೆಗೊಂಡ ಸ್ಥಿತಿಯಲ್ಲಿದ್ದರು, ಆದರೆ ಕತ್ತಲಾದ ನಂತರ ಮನೆಗೆ ಮರಳಲು ಪ್ರಯತ್ನಿಸುತ್ತಿದ್ದರು. ಈ ವೇಳೆ ಕೆಲವು ದಾರಿಹೋಕರು ಆಕೆಯ ಸ್ಥಿತಿಯನ್ನು ಗಮನಿಸಿ ಒಬ್ಬ ಮಹಿಳೆ ಆಕೆಗೆ ಸಲ್ವಾರ್ (ಮಹಿಳೆಯರು ಧರಿಸುವ ಸಡಿಲವಾದ ಪೈಜಾಮದಂತಹ ಸಾಂಪ್ರದಾಯಿಕ ಉಡುಗೆ) ನೀಡಿದರೆ, ಒಬ್ಬ ಪುರುಷ ಆಕೆಗೆ ಗಮ್ಚಾ (ತೆಳುವಾದ ಟವಲ್) ನೀಡಿದ್ದಾರೆ ಎಂದು ತಿಳಿದು ಬಂದಿದೆ.
ನಂತರ ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದು, ಗಸ್ತು ವಾಹನವೊಂದು ಅಲ್ಲಿಗೆ ಬಂದು ಮಹಿಳೆಯನ್ನು ಚಾಂಡಿ ಪೊಲೀಸ್ ಠಾಣೆಗೆ ಕರೆದೊಯ್ದಿತು. ಆಕೆಯ ಹೇಳಿಕೆಯ ಆಧಾರದ ಮೇಲೆ ಕಾಮುಕ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಿಸಲಾಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಬುಧವಾರ ಮುಂಜಾನೆ ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ ಕಾಮುಕರನ್ನು ಬಂಧಿಸುವಲ್ಲಿ ಯಶಸ್ವಿಯಾದರು ಎಂದು ತಿಳಿದು ಬಂದಿದೆ.
ಪೊಲೀಸರಿಗೆ ಘಟನೆ ಬಗ್ಗೆ ಮಾಹಿತಿ ನೀಡಿರುವ ಸಂತ್ರಸ್ತೆ, ‘ಆರೋಪಿಗಳಲ್ಲಿ ಒಬ್ಬನಾದ ವಿಕಾಸ್ ನನಗೆ ಪರಿಚಯವಾಗಿದ್ದ. ನನ್ನ ಮೊಬೈಲ್ ಫೋನ್ಗೆ ರೀಚಾರ್ಜ್ ಮಾಡುವುದಾಗಿ ಮತ್ತು ನನಗೆ ಅಗತ್ಯವಿರುವ ಕೆಲವು ಔಷಧಿಗಳನ್ನು ಒದಗಿಸುವುದಾಗಿ ಭರವಸೆ ನೀಡಿ ಮಂಗಳವಾರ ಸಂಜೆ ರಾಂಪುರ ರೈಲ್ವೆ ನಿಲ್ದಾಣಕ್ಕೆ ಬರುವಂತೆ ಕರೆ ಮಾಡಿದ. ನಾನು ಅಲ್ಲಿಗೆ ಹೋದೆ. ಅವನು ನನ್ನನ್ನು ತನ್ನ ಮೋಟಾರ್ ಸೈಕಲ್ನಲ್ಲಿ ನಿರ್ಜನ ಸ್ಥಳಕ್ಕೆ ಕರೆದೊಯ್ದು ನಂತರ ತನ್ನ ಇತರ ಇಬ್ಬರು ಸ್ನೇಹಿತರಿಗೆ ಕರೆ ಮಾಡಿದ. ಅವರು ನನ್ನ ಮೇಲೆ ಅತ್ಯಾಚಾರ ಎಸಗಿದರು, ಯಾರೊಂದಿಗಾದರೂ ಇದರ ಬಗ್ಗೆ ಹೇಳಿದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಬೆದರಿಸಿ ನನ್ನ ಬಟ್ಟೆ ಮತ್ತು ಮೊಬೈಲ್ ಅನ್ನು ತೆಗೆದುಕೊಂಡು ಪರಾರಿಯಾಗಿದ್ದಾರೆ’ ಎಂದು ಸಂತ್ರಸ್ತೆ ಹೇಳಿದ್ದಾರೆ.
‘ಸಂಜೆ ಗಸ್ತು ಅಧಿಕಾರಿ ಸ್ಥಳಕ್ಕೆ ತಲುಪಿ, ಮಹಿಳೆ ಮತ್ತು ಮಾಹಿತಿದಾರರ ಹೇಳಿಕೆಯನ್ನು ಪಡೆದರು. ಭಾರತೀಯ ನ್ಯಾಯ ಸಂಹಿತಾ (ಬಿಎನ್ಎಸ್) ಸೆಕ್ಷನ್ಗಳು 70(1) (ಸಾಮೂಹಿಕ ಅತ್ಯಾಚಾರ), 303(2) (ಕಳ್ಳತನ), ಮತ್ತು 352 (ಸಾರ್ವಜನಿಕ ಸ್ಥಳದಲ್ಲಿ ಶಾಂತಿ ಭಂಗವನ್ನು ಪ್ರಚೋದಿಸಲು ಉದ್ದೇಶಪೂರ್ವಕ ಅವಮಾನ), ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ಗಳ ಅಡಿಯಲ್ಲಿ ಚಾಂಡಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ’ ಎಂದು ಭರತ್ ಸೋನಿ ಹೇಳಿದರು.
‘ಅಪರಾಧದ ಗಂಭೀರತೆಯನ್ನು ಪರಿಗಣಿಸಿ, ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಯಿತು ಮತ್ತು ಘಟನೆ ನಡೆದ ಆರು ಗಂಟೆಗಳಲ್ಲಿ ಮೂವರು ಆರೋಪಿಗಳನ್ನು ಬಂಧಿಸಲಾಯಿತು. ಪ್ರಕರಣದಲ್ಲಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಎಸ್ಪಿ ಹೇಳಿದರು.
ಬಂಧಿತ ಆರೋಪಿಗಳನ್ನು ವಿಕಾಸ್ ಗೋಪೆ, ನಿತೀಶ್ ಕುಮಾರ್ ಮತ್ತು ಶೈಲೇಶ್ ಕುಮಾರ್ ಎಂದು ಪೊಲೀಸರು ಗುರುತಿಸಿದ್ದಾರೆ. ಇವರೆಲ್ಲರೂ ಚಾಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಲಕ್ಷ್ಮಿಬಿಘಾ ಗ್ರಾಮದ ನಿವಾಸಿಗಳು. ಸಂತ್ರಸ್ತೆಯ ಮೊಬೈಲ್ ಫೋನ್ ಅನ್ನು ಸಹ ಅವರಿಂದ ವಶಪಡಿಸಿಕೊಳ್ಳಲಾಗಿದೆ.
ಸಾಮೂಹಿಕ ಅತ್ಯಾಚಾರದ ಎಲ್ಲಾ ಆರೋಪಿಗಳನ್ನು ತ್ವರಿತವಾಗಿ ಬಂಧಿಸಿದ ಎಸ್ಐಟಿಯಲ್ಲಿ ಇನ್ಸ್ಪೆಕ್ಟರ್ ಚಂದನ್ ಕುಮಾರ್ ಸಿಂಗ್, ಚಾಂಡಿ ಸ್ಟೇಷನ್ ಹೌಸ್ ಆಫೀಸರ್ ಅಖಿಲೇಶ್ ಝಾ, ಸಬ್-ಇನ್ಸ್ಪೆಕ್ಟರ್ಗಳಾದ ಶ್ವೇತಾ ಕುಮಾರಿ, ಪ್ರಿನ್ಸ್ದೀಪ್ ಕುಮಾರ್ ಮತ್ತು ಲಾಲನ್ ಸಿಂಗ್ ಮತ್ತು ಹಲವಾರು ಇತರ ಪೊಲೀಸ್ ಅಧಿಕಾರಿಗಳು ಸೇರಿದ್ದಾರೆ.












