ಮುಂದಿನ 24 ರಿಂದ 48 ಗಂಟೆಗಳಲ್ಲಿ ಹಲವು ರಾಜ್ಯಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಹೀಗಾಗಿ ಭಾರತೀಯ ಹವಾಮಾನ ಇಲಾಖೆಯ (ಐಎಂಡಿ) 10ಕ್ಕೂ ಹೆಚ್ಚು ರಾಜ್ಯಗಳಿಗೆ ಭಾರಿ ಮಳೆಯ ಎಚ್ಚರಿಕೆ ನೀಡಿದೆ. ಈ ಅಲರ್ಟ್ ಅನ್ನು ಆಧರಿಸಿ ಕೆಲ ರಾಜ್ಯಗಳ ಅನೇಕ ಜಿಲ್ಲೆಗಳಲ್ಲಿ ಶಾಲಾಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಒಡಿಶಾದಲ್ಲಿ ಸತತ ಮೂರನೇ ದಿನವೂ ಭಾರೀ ಮಳೆಯಾಗುತ್ತಿರುವುದರಿಂದ, ಹಲವಾರು ಜಿಲ್ಲೆಗಳಲ್ಲಿ ಶಾಲಾ-ಕಾಲೇಜುಗಳಲ್ಲಿ ತರಗತಿಗಳಿಗೆ ರಜೆ ನೀಡಲಾಗಿದೆ. ಜುಲೈ 7 ರವರೆಗೆ ಒಡಿಶಾದಲ್ಲಿ ಹೆಚ್ಚಿನ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ಸೂಚನೆ ನೀಡಿರುವುದರಿಂದ, ಒಡಿಶಾದ 6 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ನಾಳೆ ರಜೆ ನೀಡಲಾಗಿದೆ.
ಒಡಿಶಾ ರಾಜ್ಯ ಕಂದಾಯ ಇಲಾಖೆಯ ಪ್ರಕಾರ, ಮುನ್ನೆಚ್ಚರಿಕೆ ಕ್ರಮವಾಗಿ ಕಟಕ್, ಕಂಧಮಲ್, ಸಂಬಲ್ಪುರ, ಸೋನೆಪುರ ಮತ್ತು ಬರ್ಗಢ ಜಿಲ್ಲೆಗಳಲ್ಲಿ ಸೋಮವಾರ ಶಿಕ್ಷಣ ಸಂಸ್ಥೆಗಳು ಮುಚ್ಚಲ್ಪಟ್ಟವು. ಬಾರ್ಗಢ, ಸಂಬಲ್ಪುರ, ಅಂಗುಲ್, ಸೋನೆಪುರ, ಬೌಧ್, ನುವಾಪಾಡಾ ಮತ್ತು ಬೋಲಂಗೀರ್ ಜಿಲ್ಲೆಗಳಿಗೆ ಐಎಂಡಿ ಆರೆಂಜ್ ಅಲರ್ಟ್ ನೀಡಿದ್ದು, ನಾಳೆ ಕೂಡ ಈ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಶಾಲಾ ಕಾಲೇಜುಗಳಿಗೆ ರಜೆ ನೀಡಲಾಗಿದೆ.
ಕಟಕ್, ಸುಂದರ್ಗಢ, ಜಾರ್ಸುಗುಡ, ದಿಯೋಗಢ, ಧೆಂಕನಲ್, ಕಿಯೋಂಝಾರ್, ಕಲಹಂಡಿ, ಕಂಧಮಲ್, ನಬರಂಗ್ಪುರ ಮತ್ತು ನಯಾಗಢಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದ್ದು, ಯೆಲ್ಲೋ ಅಲರ್ಟ್ ನೀಡಲಾಗಿದೆ. ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಹಾಗೂ ಸಕ್ರಿಯ ಮಾನ್ಸೂನ್ ವ್ಯವಸ್ಥೆಯಿಂದಾಗಿ ನಿರಂತರ ಮಳೆಯಾಗುತ್ತಿದೆ ಎಂದು ಭುವನೇಶ್ವರದ ಹವಾಮಾನ ಕೇಂದ್ರದ ನಿರ್ದೇಶಕಿ ಮನೋರಮಾ ಮೊಹಂತಿ ಹೇಳಿದ್ದಾರೆ.
ಸೋಮವಾರ ಬೆಳಿಗ್ಗೆ 8:30 ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಒಡಿಶಾದಾದ್ಯಂತ 12 ಸ್ಥಳಗಳಲ್ಲಿ 200 ಮಿ.ಮೀ.ಗಿಂತ ಹೆಚ್ಚು ಮಳೆಯಾಗಿದೆ ಎಂದು ಐಎಂಡಿ ತಿಳಿಸಿದೆ. ಸೋನೆಪುರದಲ್ಲಿ ಅತಿ ಹೆಚ್ಚು 328.4 ಮಿ.ಮೀ ಮಳೆಯಾಗಿದ್ದು, ನಂತರ ಸೋನೆಪುರ ಜಿಲ್ಲೆಯ ಉಲ್ಲುಂಡದಲ್ಲಿ 290 ಮಿ.ಮೀ ಮಳೆಯಾಗಿದೆ.
ಭಾರೀ ಮಳೆಯಿಂದಾಗಿ ಸಾಮಾನ್ಯ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಹಲವಾರು ಜಿಲ್ಲೆಗಳಿಂದ ನೀರು ನುಗ್ಗುವಿಕೆ, ರಸ್ತೆಗಳು ಮತ್ತು ಸೇತುವೆಗಳು ಹಾನಿಗೊಳಗಾಗಿವೆ ಮತ್ತು ಮರಗಳು ಉರುಳಿಬಿದ್ದಿರುವ ವರದಿಗಳು ರಾಜ್ಯ ಕಂದಾಯ ಇಲಾಖೆಗೆ ಬಂದಿವೆ.
ಜುಲೈ 6 ಮತ್ತು 7 ರಂದು ಹೆಚ್ಚಿನ ಸ್ಥಳಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಜುಲೈ 8 ರಂದು ಪ್ರತ್ಯೇಕ ಸ್ಥಳಗಳಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ.
ದಕ್ಷಿಣ ಜಾರ್ಖಂಡ್ ಮತ್ತು ಉತ್ತರ ಒಳನಾಡಿನ ಒಡಿಶಾದಲ್ಲಿ ಉಂಟಾಗಿರುವ ವಾಯುಭಾರ ಕುಸಿತವು ಸತತ ಮೂರನೇ ದಿನವೂ ಪಶ್ಚಿಮ ಮತ್ತು ಉತ್ತರ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ.












