Last Updated:
ಯಶ್ ಸಿನಿ ಪಯಣದ ಆರಂಭಿಕ ದಿನಗಳ ಕುರಿತು ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಜಯಣ್ಣ (Producer Jayanna) ಇತ್ತೀಚಿನ ಸಂದರ್ಶನದಲ್ಲಿ ಹಲವು ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ (Rocking star Yash) ಇಂದು ಭಾರತೀಯ ಚಿತ್ರರಂಗದ ಅತ್ಯಂತ ಜನಪ್ರಿಯ ನಟರಲ್ಲಿ ಒಬ್ಬರು. ಕೆಜಿಎಫ್ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಖ್ಯಾತಿ ಪಡೆದಿರುವ ಯಶ್ (Yash) ಯಶಸ್ಸಿನ ಹಿಂದೆ ಸಾಕಷ್ಟು ಶ್ರಮ, ತ್ಯಾಗ ಮತ್ತು ಹೋರಾಟ ಅಡಗಿದೆ. ಯಶ್ ಸಿನಿ ಪಯಣದ ಆರಂಭಿಕ ದಿನಗಳ ಕುರಿತು ಸ್ಯಾಂಡಲ್ವುಡ್ನ ಖ್ಯಾತ ನಿರ್ಮಾಪಕ ಜಯಣ್ಣ (Producer Jayanna) ಇತ್ತೀಚಿನ ಸಂದರ್ಶನದಲ್ಲಿ ಹಲವು ಅಪರೂಪದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ವಿಶೇಷವಾಗಿ ಜಾನು ಸಿನಿಮಾ ಹೇಗೆ ಆರಂಭವಾಯಿತು, ಗಜಕೇಸರಿ ಚಿತ್ರದ ವೇಳೆ ಯಶ್ ತೋರಿದ ಡೆಡಿಕೇಶನ್ ಹಾಗೂ ಅವರೊಂದಿಗೆ ಬೆಳೆದು ಬಂದ ಸಿನಿ ಪಯಣದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.
ಹೌದು ಚಂದನ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ ನಿರ್ಮಾಪಕ ಜಯಣ್ಣ ,ನಿರ್ದೇಶಕ ಪ್ರೀತಂ ಗುಬ್ಬಿ ಹೊಸ ಕಥೆಯೊಂದನ್ನು ಸಿದ್ಧಪಡಿಸಿಕೊಂಡು ಅವರ ಬಳಿ ಬಂದಾಗ ಜಾನು ಸಿನಿಮಾದ ಕಲ್ಪನೆ ಹುಟ್ಟಿಕೊಂಡಿತು. ಅಲ್ಲಿಂದಲೇ ಯಶ್ ಮತ್ತು ಜಯಣ್ಣ-ಭೋಗೇಂದ್ರ ನಿರ್ಮಾಣ ಸಂಸ್ಥೆಯ ಸಿನಿ ಪಯಣ ಆರಂಭವಾಯಿತು. ಆ ನಂತರ ರಾಜಾಹುಲಿ, ಡ್ರಾಮಾ, ಗೂಗ್ಲಿ, ಗಜಕೇಸರಿ, ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಸೇರಿದಂತೆ ಹಲವು ಯಶಸ್ವಿ ಸಿನಿಮಾಗಳು ಈ ಜೋಡಿಯಿಂದ ಮೂಡಿಬಂದವು.
ಈ ಸಿನಿಮಾಗಳು ಕೇವಲ ಬಾಕ್ಸ್ ಆಫೀಸ್ನಲ್ಲಿ ಮಾತ್ರವಲ್ಲ, ಯಶ್ ಅವರ ವೃತ್ತಿಜೀವನಕ್ಕೂ ಹೊಸ ತಿರುವು ನೀಡಿದ ಚಿತ್ರಗಳಾಗಿ ಗುರುತಿಸಿಕೊಂಡವು ಎಂದು ಜಯಣ್ಣ ಹೇಳಿದ್ದಾರೆ.
ಗಜಕೇಸರಿ ಚಿತ್ರದ ಚಿತ್ರೀಕರಣದ ವೇಳೆ ಯಶ್ ತೋರಿದ ಬದ್ಧತೆಯನ್ನು ನೆನಪಿಸಿಕೊಂಡ ಜಯಣ್ಣ, ಆ ದಿನಗಳ ಅನುಭವವನ್ನು ಹಂಚಿಕೊಂಡಿದ್ದಾರೆ.
ಯಶ್ ಬಗ್ಗೆ ಮಾತನಾಡಿದ ಜಯಣ್ಣ, ಅವರು ಯಾವಾಗಲೂ ತಮ್ಮ ಕೆಲಸದ ಬಗ್ಗೆ ತುಂಬಾನೇ ಡೆಡಿಕೇಷನ್ ಹೊಂದಿದ್ದರು ಎಂದು ಹೇಳಿದ್ದಾರೆ. ಪ್ರತಿಯೊಂದು ಸಿನಿಮಾದ ಪಾತ್ರಕ್ಕಾಗಿ ಹೊಸದಾಗಿ ತಯಾರಾಗುತ್ತಿದ್ದರು. ಕಥೆಯನ್ನು ಅರ್ಥಮಾಡಿಕೊಂಡು ಅದಕ್ಕೆ ತಕ್ಕಂತೆ ತಮ್ಮನ್ನು ರೂಪಿಸಿಕೊಳ್ಳುತ್ತಿದ್ದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಯಶ್ ಅವರ ಸಿನಿ ಪಯಣ ಅಷ್ಟು ಸುಲಭವಾಗಿರಲಿಲ್ಲ. ಆರಂಭದಲ್ಲಿ ಧಾರಾವಾಹಿಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡ ಅವರು, ನಂತರ ಮೊಗ್ಗಿನ ಮನಸ್ಸು ಚಿತ್ರದ ಮೂಲಕ ನಾಯಕನಾಗಿ ಪರಿಚಯವಾದರು. ಆ ಸಿನಿಮಾ ಯಶಸ್ಸಿನ ಬಳಿಕ ಒಂದರ ಹಿಂದೆ ಒಂದರಂತೆ ಹಲವು ಹಿಟ್ ಸಿನಿಮಾಗಳನ್ನು ನೀಡಿದರು.
ಯಶ್ ಅವರ ವೃತ್ತಿಜೀವನದಲ್ಲಿ ಅತಿದೊಡ್ಡ ತಿರುವು ತಂದ ಸಿನಿಮಾ ಕೆಜಿಎಫ್. ಪ್ರಶಾಂತ್ ನೀಲ್ ನಿರ್ದೇಶನದ ಈ ಸಿನಿಮಾ ದೇಶದಾದ್ಯಂತ ದಾಖಲೆ ನಿರ್ಮಿಸಿ, ಯಶ್ ಅವರನ್ನು ಪ್ಯಾನ್ ಇಂಡಿಯಾ ಸೂಪರ್ಸ್ಟಾರ್ ಆಗಿ ಪರಿಚಯಿಸಿತು. ಬಳಿಕ ಕೆಜಿಎಫ್ ಚಾಪ್ಟರ್ 2 ಕೂಡ ವಿಶ್ವದಾದ್ಯಂತ ಭರ್ಜರಿ ಯಶಸ್ಸು ಕಂಡು, ಅವರ ಜನಪ್ರಿಯತೆಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿತು.
ಇದೀಗ ಟಾಕ್ಸಿಕ್ ಹಾಗೂ ರಾಮಾಯಣ ಸೇರಿದಂತೆ ಬಹುನಿರೀಕ್ಷಿತ ಸಿನಿಮಾಗಳ ಮೂಲಕ ಯಶ್ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ.
Bangalore [Bangalore],Bangalore,Karnataka














