Last Updated:
ಇತ್ತೀಚೆಗೆ ನಡೆದ ಸ್ಯಾನ್ ಡಿಯೇಗೊ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ರಣಬೀರ್ ಕಪೂರ್, ರಾಮಾಯಣ ಚಿತ್ರದ ಕ್ಲೈಮ್ಯಾಕ್ಸ್ ಸೇರಿದಂತೆ ರಾಮ ಮತ್ತು ರಾವಣ ಮುಖಾಮುಖಿಯಾಗುವ ಪ್ರಮುಖ ದೃಶ್ಯಗಳ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ ಎಂದು ತಿಳಿಸಿದ್ದಾರೆ.
ಬಾಲಿವುಡ್ನ ಬಹುನಿರೀಕ್ಷಿತ ರಾಮಾಯಣ (Ramayana) ಚಿತ್ರದ ಬಗ್ಗೆ ದಿನದಿಂದ ದಿನಕ್ಕೆ ನಿರೀಕ್ಷೆ ಹೆಚ್ಚುತ್ತಲೇ ಇದೆ. ಭಾರೀ ಬಜೆಟ್, ಅದ್ಧೂರಿ ತಾರಾಗಣ ಹಾಗೂ ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣವಾಗುತ್ತಿರುವ ಈ ಸಿನಿಮಾ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿದೆ. ಈಗ ಚಿತ್ರದ ಕುರಿತು ರಣಬೀರ್ ಕಪೂರ್ (Ranbir Kapoor) ನೀಡಿರುವ ಹೊಸ ಮಾಹಿತಿ ಸಿನಿಪ್ರಿಯರ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.
ಇತ್ತೀಚೆಗೆ ನಡೆದ ಸ್ಯಾನ್ ಡಿಯೇಗೊ ಕಾಮಿಕ್-ಕಾನ್ ಕಾರ್ಯಕ್ರಮದಲ್ಲಿ ಮಾತನಾಡಿದ ರಣಬೀರ್ ಕಪೂರ್, ರಾಮಾಯಣ ಚಿತ್ರದ ಕ್ಲೈಮ್ಯಾಕ್ಸ್ ಸೇರಿದಂತೆ ರಾಮ ಮತ್ತು ರಾವಣ ಮುಖಾಮುಖಿಯಾಗುವ ಪ್ರಮುಖ ದೃಶ್ಯಗಳ ಚಿತ್ರೀಕರಣ ಇನ್ನೂ ಆರಂಭವಾಗಿಲ್ಲ ಎಂದು ತಿಳಿಸಿದ್ದಾರೆ.
ಹಾಗೆಯೇ ಕಥೆಯ ಮಧ್ಯಭಾಗದಲ್ಲಿ ಒಮ್ಮೆ ಹಾಗೂ ಕೊನೆಯಲ್ಲಿ ಮತ್ತೊಮ್ಮೆ ರಾಮ ಮತ್ತು ರಾವಣ ಎದುರಾಗಲಿದ್ದಾರೆ. ಆದರೆ ಆ ದೃಶ್ಯಗಳನ್ನು ಇನ್ನೂ ಚಿತ್ರೀಕರಿಸದ ಕಾರಣ, ಯಶ್ ಅವರೊಂದಿಗೆ ಒಂದೇ ಫ್ರೇಮ್ನಲ್ಲಿ ನಟಿಸುವ ಅವಕಾಶ ಇದುವರೆಗೆ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಯಶ್ ಬಗ್ಗೆ ಮಾತನಾಡಿದ ರಣಬೀರ್, ತಾವು ಅವರ ಅಭಿನಯದ ದೊಡ್ಡ ಅಭಿಮಾನಿ ಎಂದು ಹೇಳಿದರು. ರಾವಣನಂತಹ ಪ್ರಭಾವಶಾಲಿ ಪಾತ್ರಕ್ಕೆ ವಿಶಿಷ್ಟ ವ್ಯಕ್ತಿತ್ವ, ಪ್ರಬಲ ಪರದೆ ಸಾನ್ನಿಧ್ಯ ಹಾಗೂ ಹೊಸ ದೃಷ್ಟಿಕೋನ ಹೊಂದಿರುವ ನಟನ ಅಗತ್ಯವಿತ್ತು. ಆ ಎಲ್ಲ ಗುಣಗಳು ಯಶ್ ಅವರಲ್ಲಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ವೇಳೆ ಮಾತನಾಡಿದ ಯಶ್, ಒಂದು ಸಿನಿಮಾ ಯಶಸ್ವಿಯಾಗಬೇಕಾದರೆ ಅದರ ಹಿಂದಿರುವ ಉದ್ದೇಶ ಅತ್ಯಂತ ಮುಖ್ಯ ಎಂದು ಹೇಳಿದರು. ಸರಿಯಾದ ದೃಷ್ಟಿಕೋನ ಮತ್ತು ಪ್ರತಿಭಾವಂತ ತಾಂತ್ರಿಕ ತಂಡ ಒಟ್ಟಿಗೆ ಕೆಲಸ ಮಾಡಿದರೆ ಉತ್ತಮ ಫಲಿತಾಂಶ ಸಿಗುತ್ತದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ, ಯಶ್ ರಾವಣನಾಗಿ, ಸಾಯಿ ಪಲ್ಲವಿ ಸೀತೆಯಾಗಿ ನಟಿಸುತ್ತಿದ್ದಾರೆ. ಹನುಮಂತನ ಪಾತ್ರದಲ್ಲಿ ಸನ್ನಿ ಡಿಯೋಲ್ ಹಾಗೂ ಲಕ್ಷ್ಮಣನಾಗಿ ರವಿ ದುಬೆ ಕಾಣಿಸಿಕೊಳ್ಳಲಿದ್ದಾರೆ.
ಇದರ ಜೊತೆಗೆ ಅರುಣ್ ಗೋವಿಲ್, ಕುನಾಲ್ ಕಪೂರ್, ಆದಿನಾಥ್ ಕೊಠಾರೆ, ಶೀಬಾ ಚಡ್ಡಾ ಮತ್ತು ಇಂದಿರಾ ಕೃಷ್ಣನ್ ಸೇರಿದಂತೆ ಹಲವು ಖ್ಯಾತ ಕಲಾವಿದರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
ರಾಮಾಯಣ: ಭಾಗ 1 ಮುಂಬರುವ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಜಾಗತಿಕ ಮಟ್ಟದಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗವನ್ನು 2027ರ ದೀಪಾವಳಿಗೆ ಬಿಡುಗಡೆ ಮಾಡುವ ಯೋಜನೆ ಚಿತ್ರತಂಡದ್ದಾಗಿದೆ. ಈಗಾಗಲೇ ಚಿತ್ರದ ಮೊದಲ ನೋಟ ಹಾಗೂ ಕಲಾವಿದರ ಪಾತ್ರಗಳು ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ರಾಮ ಮತ್ತು ರಾವಣ ಮುಖಾಮುಖಿಯಾಗುವ ದೃಶ್ಯಕ್ಕಾಗಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
Bangalore [Bangalore],Bangalore,Karnataka














