Last Updated:
ಧುಲಿಯನ್ ಗಂಗಾ ಘಾಟ್ನಿಂದ ಮಾಲ್ಡಾದ ಪರ್ಲಾಲ್ಪುರ ಘಾಟ್ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ದೋಣಿ 25 ರಿಂದ 30 ಪ್ರಯಾಣಿಕರನ್ನು ಹೊತ್ತೊಯ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ.
ಮಾಲ್ಡಾ: ಗಂಗಾ ನದಿಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರ ದೋಣಿಯೊಂದಕ್ಕೆ ತೀವ್ರ ಸಿಡಿಲು ಬಡಿದ ಪರಿಣಾಮ ನಾಲ್ವರು ( Lightning Strikes Passenger Boat) ಸಾವನ್ನಪ್ಪಿ, 15 ಮಂದಿಗೆ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುರ್ಷಿಯಾಬಾದ್ನಲ್ಲಿ ನಡೆದಿದೆ.
ಮಂಗಳವಾರ ಮಧ್ಯಾಹ್ನ ಮಾಲ್ಡಾದ ಪರ್ಲಾಲ್ಪುರ ದೋಣಿ ಘಾಟ್ನಲ್ಲಿ ಗಂಗಾ ನದಿಯಲ್ಲಿ ಪ್ರಯಾಣಿಕರ ದೋಣಿಯೊಂದಕ್ಕೆ ತೀವ್ರ ಸಿಡಿಲು ಬಡಿದು ನಾಲ್ವರು ಸಾವನ್ನಪ್ಪಿದ್ದಾರೆ. ಇದಲ್ಲದೆ, ಕನಿಷ್ಠ 15 ಜನರು ಸಿಡಿಲಿನಿಂದ ಗಂಭೀರವಾಗಿ ಗಾಯಗೊಂಡಿದ್ದಾರೆ. ಸ್ಥಳೀಯರ ಪ್ರಕಾರ, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎಂದು ತಿಳಿದು ಬಂದಿದೆ.
ಮುರ್ಷಿದಾಬಾದ್ನ ಧುಲಿಯನ್ ಗಂಗಾ ಘಾಟ್ನಿಂದ ಮಾಲ್ಡಾದ ಪರ್ಲಾಲ್ಪುರ ಘಾಟ್ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ದೋಣಿ 25 ರಿಂದ 30 ಪ್ರಯಾಣಿಕರನ್ನು ಹೊತ್ತೊಯ್ದ ಸಂದರ್ಭದಲ್ಲಿ ಈ ದುರಂತ ಸಂಭವಿಸಿದೆ. ಪೊಲೀಸರ ಪ್ರಕಾರ, ಮೃತರನ್ನು ಅಸದುಲ್ಲಾ ಶೇಖ್, ಅನ್ಸಾರ್ ಶೇಖ್, ಎಕ್ರಮುಲ್ ಶೇಖ್ ಮತ್ತು ಕೊಚ್ಚಿ ಶೇಖ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಮಾಲ್ಡಾದ ವೈಷ್ಣವನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪರ್ಲಾಲ್ಪುರ ಪ್ರದೇಶದ ನಿವಾಸಿಗಳಾಗಿದ್ದರು.
ಘಟನೆ ತಿಳಿದ ಬೆನ್ನಲ್ಲೇ, ಶಂಶೇರ್ಗಂಜ್ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ದೋಣಿಯು ನದಿಗೆ ಇಳಿದ ಕೆಲವೇ ಕ್ಷಣಗಳಲ್ಲಿ, ಆಕಾಶವು ಇದ್ದಕ್ಕಿದ್ದಂತೆ ಗುಡುಗುಗಳಿಂದ ಕತ್ತಲೆಯಾಯಿತು, ಆಗ ಮಿಂಚಿನೊಂದಿಗೆ ಭಾರೀ ಮಳೆ ಪ್ರಾರಂಭವಾಯಿತು. ಬಳಿಕ ಸಿಡಿಲು ಬಡಿದು ಭೀಕರ ವಿಪತ್ತು ಸಂಭವಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಮಾಲ್ಡಾದ ವೈಷ್ಣವನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪರ್ಲಾಲ್ಪುರದ ಶಿಬ್ಪುರ ಘಾಟ್ನಲ್ಲಿ ಈ ಘಟನೆ ನಡೆದಿದೆ. ಮೃತರು ಮುರ್ಷಿದಾಬಾದ್ನ ಧುಲಿಯನ್ನಿಂದ ದೋಣಿಯಲ್ಲಿ ಪರ್ಲಾಲ್ಪುರಕ್ಕೆ ಹಿಂತಿರುಗುತ್ತಿದ್ದ ಗುಂಪು ಎಂದು ಪೊಲೀಸರು ತಿಳಿಸಿದ್ದಾರೆ.
ಸ್ಥಳೀಯ ನಿವಾಸಿಗಳು ಮತ್ತು ರಕ್ಷಣಾ ಸಿಬ್ಬಂದಿಯ ಜಂಟಿ ಪ್ರಯತ್ನದಿಂದ ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ಪ್ರಾರಂಭಿಸಲಾಯಿತು. ಗಾಯಾಳುಗಳಲ್ಲಿ ಕೆಲವರನ್ನು ಮಾಲ್ಡಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಹೆಚ್ಚಿನವರನ್ನು ಶಂಶೇರ್ಗಂಜ್ನ ಅನುಪ್ನಗರ ಬ್ಲಾಕ್ ಆಸ್ಪತ್ರೆಗೆ ದಾಖಲಿಸಲಾಯಿತು.
Murshidabad,West Bengal
Jun 24, 2026 12:08 PM IST













