Last Updated:
ಕೃಷಿ ಮನೆಯಲ್ಲೇ ಉದ್ಯಮಿ ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಅನ್ನೋ ಅನುಮಾನವಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಇದೇ ವೇಳೆ ನಟಿ ಕೃಷಿ ತಾಪಂಡ ಕೆಲ ಮಹತ್ವದ ವಿಚಾರಗಳನ್ನ ಪೊಲೀಸರಿಗೆ ತಿಳಿಸಿದ್ದಾರೆ. ವೈಶಾಕ್ ಸಾವಿಗೆ ಈ ಒಂದು ವಿಚಾರವೇ ಕಾರಣನಾ?
ಬೆಂಗಳೂರು (ಜು.06): ನಟಿ ಕೃಷಿ ತಾಪಂಡ (Krishi Thapanda) ಮನೆಯಲ್ಲಿ ಸ್ನೇಹಿತ ಹಾಗೂ ಉದ್ಯಮಿ ವೈಶಾಕ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ರಾಜ್ಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ನಟಿಯ ಮನೆಯಲ್ಲೇ ವೈಶಾಕ್ ಆತ್ಮಹತ್ಯೆ (Vaishak Suicide) ಮಾಡಿಕೊಂಡಿದ್ದು ಯಾಕೆ ಎನ್ನುವ ಪ್ರಶ್ನೆ ನಾನಾ ಅನುಮಾನಗಳನ್ನ ಹುಟ್ಟು ಹಾಕಿತ್ತು. ಈ ಸಂಬಂಧ ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದು, ವೈಶಾಕ್ ಸಾವಿನ ಹಿಂದಿನ ಕಾರಣ ಪತ್ತೆ ಹಚ್ಚಲು (Police Case) ಮುಂದಾಗಿದ್ದಾರೆ. ತನಿಖೆ ವೇಳೆ ಕೆಲ ಮಹತ್ವದ ವಿಚಾರಗಳು ಬಯಲಾಗಿದೆ.
ಹೆಂಡ್ತಿ-ಮಕ್ಕಳು, ಅಪ್ಪ-ಅಮ್ಮ ಇದ್ರೂ ಉದ್ಯಮಿ ವೈಶಾಕ್ ಸ್ನೇಹಿತೆ ಕೃಷಿ ತಾಪಂಡ ಮನೆಯಲ್ಲೇ ನೆಲೆಸಿದ್ದ ಎನ್ನಲಾಗ್ತಿದೆ. ವಾರಗಳಿಂದ ನಟಿ ಮನೆಯಲ್ಲೇ ಇದ್ದ ವೈಶಾಕ್ ಬಳಿ ಕೂಡ ಮನೆಯ ಒಂದು ಕೀ ಇತ್ತು. ಮನೆಯಲ್ಲಿ ನಟಿ ಕೃಷಿ ಇಲ್ಲದ ವೇಳೆ ವೈಶಾಕ್ ಸಾವಿಗೆ ಶರಣಾಗಿದ್ದು, ಬಳಿಕ ಮನೆಗೆ ಬಂದು ನೋಡಿ ನಟಿಯೇ ಸೀರೆ ಕಟ್ ಮಾಡಿ ಆತನ ಮೃತದೇಹವನ್ನ ಕೆಳಗೆ ಇಳಿಸಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ಸಹ ನೀಡಿದ್ರು. ಕೃಷಿ ಮನೆಯಲ್ಲೇ ಉದ್ಯಮಿ ಆತ್ಮಹತ್ಯೆ ಮಾಡಿಕೊಳ್ಳಲು ಏನು ಕಾರಣ ಅನ್ನೋ ಅನುಮಾನವಿದೆ.
ಪೊಲೀಸರು ವೈಶಾಕ್ ಸಾವಿನ ಬಗ್ಗೆ ತನಿಖೆ ನಡೆಸಿದ್ದು, ಈ ವೇಳೆ ನಟಿ ಕೃಷಿ ತಾಪಂಡ ಅವರಿಂದ ಕೆಲ ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ ಉದ್ಯಮಿ ವೈಶಾಕ್ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ. ಅಲ್ಲದೇ ಆರ್ಥಿಕ ಸಂಕಷ್ಟದಿಂದಲೇ ವೈಶಾಕ್ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗ್ತಿದೆ. ಈ ಒಂದು ವಿಚಾರಕ್ಕೆ ವೈಶಾಕ್ ಆತ್ಮಹತ್ಯೆ ಮಾಡಿಕೊಂಡಿರಬೇಕು ಎನ್ನುವ ಅನುಮಾನ ದಟ್ಟವಾಗಿದೆ.
ಆರ್ಥಿಕ ಸ್ಥಿತಿಗತಿ ಕೆಟ್ಟಿದ್ದ ಹಿನ್ನೆಲೆ ಸ್ನೇಹಿತ ವೈಶಾಕ್ಗೆ ಆಗಾಗ ನಟಿ ಕೃಷಿ ತಾಪಂಡ ಅವರೇ ಹಣ ನೀಡುತ್ತಿದ್ದರಂತೆ. ಒಮ್ಮೊಮ್ಮೆ 40-50 ಸಾವಿರ ಹಣ ವರ್ಗಾವಣೆ ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ನಟಿಯೇ ಕೆಲ ದಾಖಲೆಗಳನ್ನ ಸಹ ತೋರಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಳ್ಳೋ ಕೆಲ ದಿನಗಳಿಂದಲೂ ಕೃಷಿ ತಾಪಂಡ ಫ್ಲಾಟ್ ನಲ್ಲಿಯೇ ವೈಶಾಕ್ ವಾಸವಾಗಿದ್ದ ಎನ್ನಲಾಗ್ತಿದೆ. ಸದ್ಯ ಈ ಸಂಬಂಧ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Jul 06, 2026 10:28 AM IST













