Last Updated:
ಕೇತನ್ ಅಗರ್ವಾಲ್ ಸಾವಿನ ಕೇಸ್ ಬಗ್ಗೆ ಇದೀಗ ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ಮಾಡುತ್ತಿದ್ದಾರೆ. ಕೇತನ್ ಭಾವಿ ಪತ್ನಿ ಸಿಯಾ ಮತ್ತು ಆಕೆಯ ಪ್ರಿಯಕರ ಇಬ್ಬರನ್ನೂ ಕಸ್ಟಡಿಗೆ ತೆಗೆದುಕೊಂಡು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು, ತನಿಖೆಯಲ್ಲಿ ಮಹತ್ವದ ವಿಚಾರಗಳು ಬಯಲಾಗುತ್ತಿದೆ.
ಪುಣೆಯ ಗಹುಂಜೆಯ 26 ವರ್ಷದ ಯುವ ಉದ್ಯಮಿ ಕೇತನ್ ವಿಶಾಲ್ ಅಗರ್ವಾಲ್ (Ketan Agarwal) ಅವರ ಸಾವಿನ ಪ್ರಕರಣ ಬಗೆದಷ್ಟು ಬದಲಾಗುತ್ತಿದೆ. ಕೇತನ್ ಸಾವು ಮೊದಲು ಸಾಮಾನ್ಯ ಅಪಘಾತ (Accident) ಎನ್ನಲಾಗಿದ್ದರೂ ಆತನ ಭಾವಿ ಪತ್ನಿ ಮತ್ತು ಪ್ರಿಯಕರ ಸೇರಿ ಮಾಡಿದ್ದ ಹೊಂಚು ಒಂದೊಂದೇ ಬಯಲಾಗುತ್ತಿದೆ. ಜೂನ್ 18 ರಂದು ಲೋಹಗಢ ಕೋಟೆಯ ಆಳವಾದ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದ ಕೇತನ್ ಕೊಲೆಗೆ ಈ ಆರೋಪಿಗಳು ಪ್ಲಾನ್ ಮಾಡಿದ್ದು ಯಾಕೆ ಎಂಬುದು ಬಯಲಾಗಿದೆ.
ಪೊಲೀಸ್ ತನಿಖೆಯಲ್ಲಿ ಇದು ಸಂಪೂರ್ಣ ಯೋಜಿತ ಭಯಾನಕ ಕೊಲೆ ಎಂದು ಬಯಲಾಗಿದ್ದು, ಕೇತನ್ ನಿಶ್ಚಿತಾರ್ಥ ಪತ್ನಿ ಸಿಯಾ ಗೋಯಲ್ (20) ಮತ್ತು ಅವಳ ಪ್ರೇಮಿ ಚೇತನ್ ಚೌಧರಿ (22) ಈ ಪಿತೂರಿಯ ಮುಖ್ಯ ಆರೋಪಿಗಳು ಎಂದು ಬಯಲಾಗಿದೆ. ಇದೀಗ ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ವಿಚಾರಗಳು ಬಯಲಾಗಿದೆ.
ಪೊಲೀಸ್ ವಿಚಾರಣೆಯಲ್ಲಿ ಒಂದು ಮುಖ್ಯ ಪ್ರಶ್ನೆಗೆ ಚೇತನ್ ನೀಡಿದ ಉತ್ತರ ಎಲ್ಲರನ್ನೂ ಆಘಾತಗೊಳಿಸಿದೆ. ಪ್ರೀತಿ ಮಾಡಿದ್ದರೆ, ಓಡಿ ಹೋಗುವ ಬದಲು ಯಾಕೆ ಕೊಲೆ ಮಾಡಿದ್ರಿ ಎಂದು ಪೊಲೀಸರು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ಸಿಯಾಗೆ ಈ ಮದುವೆ ಇಷ್ಟವಿರಲಿಲ್ಲ ಎಂದರೆ ನಿಶ್ಚಿತಾರ್ಥ ಮುರಿದು ಓಡಿಹೋಗಬಹುದಿತ್ತು ಅಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಇದಕ್ಕೆ ಚೇತನ್ ನೀಡಿದ ಉತ್ತರ ಕಂಡು ಪೊಲೀಸರೇ ಶಾಕ್ ಆಗಿದ್ದಾರೆ.
‘ನಿಶ್ಚಿತಾರ್ಥವನ್ನು ಮುರಿದು ಓಡಿಹೋಗುವ ಬದಲು ಕೊಲೆ ಮಾಡುವುದನ್ನೇ ಏಕೆ ಆರಿಸಿಕೊಂಡಿರಿ?’ ಎಂದು ಪೊಲೀಸರು ಕೇಳಿದಾಗ ಚೇತನ್ ಹೇಳಿದ್ದು ಇಷ್ಟೇ. ಸಿಯಾ ನಿಶ್ಚಿತಾರ್ಥ ಮುರಿದು ಓಡಿಹೋಗುವುದನ್ನು ಬೆಂಬಲಿಸುತ್ತಿರಲಿಲ್ಲ. ಅಂತಹ ಕ್ರಮವು ತನ್ನ ಕುಟುಂಬಕ್ಕೆ ಸಮಾಜದಲ್ಲಿ ದೊಡ್ಡ ಅವಮಾನ ತರುತ್ತದೆ ಎಂದು ಅವಳು ಹೇಳಿದ್ದಳು. ಕುಟುಂಬದ ಖ್ಯಾತಿ ಮತ್ತು ಗೌರವ ಉಳಿಸಿಕೊಳ್ಳಲು ಕೇತನ್ ಜೀವ ತೆಗೆದುಕೊಳ್ಳುವುದು ಸುಲಭ ಎಂದು ಹೇಳಿದ್ದಳು ಎಂದು ವಿವರಿಸಿದ್ದಾನೆ.
ಜೂನ್ 18 ರಂದು ಘಟನೆ ನಡೆದ ವಿಧಾನವೂ ತುಂಬಾ ಕ್ರೂರವಾಗಿತ್ತು. ಕೇತನ್ ಮತ್ತು ಸಿಯಾ ಕೋಟೆಯ ಏಕಾಂತ ಪ್ರದೇಶದಲ್ಲಿ ನಿಂತು ಕಣಿವೆಗಳ ಸುಂದರ ದೃಶ್ಯ ನೋಡುತ್ತಿದ್ದಾಗ. ಅಲ್ಲೇ ಹೊಂಚು ಹಾಕಿ ಮಲಗಿದ್ದ ಚೇತನ್ ಇದ್ದಕ್ಕಿದ್ದಂತೆ ಎದ್ದು ಕೇತನ್ ಅವರ ತಲೆಗೆ ಭಾರವಾದ ವಸ್ತುವಿನಿಂದ ಹೊಡೆದಿದ್ದಾನೆ. ನಂತರ ಆತನನ್ನು ಆಳವಾದ ಕಂದಕಕ್ಕೆ ತಳ್ಳಿದ್ದಾನೆ. ಈ ಯೋಜನೆಯಲ್ಲಿ ಸಿಯಾ ಪೂರ್ಣ ಪಾಲುದಾರಳಾಗಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ಈ ಪ್ರಕರಣ ಈಗ ರೋಚಕ ಹಂತ ತಲುಪಿದೆ. ಮೊದಲು ಅಪಘಾತ ಎಂದು ತೋರಿದ್ದು ಈಗ ದಿನೇ ದಿನೇ ಹೊಸ ಹೊಸ ಸಂಗತಿಗಳು ಬಯಲಾಗುತ್ತಿವೆ. ಸಿಯಾ ಮತ್ತು ಚೇತನ್ ನಡುವೆ ದೀರ್ಘಕಾಲದ ಪ್ರೇಮ ಸಂಬಂಧವಿತ್ತು. ಅವರು 2204 ಕರೆಗಳು ಮತ್ತು 238 ಗಂಟೆಗಳ ಸಂಭಾಷಣೆ ನಡೆಸಿದ್ದಾರೆ. ಕೊಲೆಯ ದಿನಗಳಲ್ಲಿ ಅವರು ರಾತ್ರಿ ಇಡೀ ವೀಡಿಯೋ ಕರೆಗಳಲ್ಲಿ ಯೋಜನೆ ಹಾಕಿದ್ದರು. ಸಿಸಿಟಿವಿ ದೃಶ್ಯಗಳು, ಫೋನ್ ದತ್ತಾಂಶಗಳು, ಪಾಸ್ಪೋರ್ಟ್ ಕಣ್ಮರೆ, ಹೂಡಿ ಧರಿಸಿದ ಸಂದೇಹಾಸ್ಪದ ವ್ಯಕ್ತಿ, 15 ದಿನಗಳಲ್ಲಿ ನಾಲ್ಕು ಬಾರಿ ಕೋಟೆಗೆ ಭೇಟಿ ಒತ್ತಾಯ ಮತ್ತು ಸಹೋದರಿಯ ಪ್ರಶ್ನೆಗಳಿಗೆ ಸಿಕ್ಕ ಸುಳ್ಳು ಉತ್ತರಗಳು ಇವುಗಳು ಅವರ ತಪ್ಪುಗಳಾಗಿ ಪೊಲೀಸರ ಕೈಗೆ ಸಿಕ್ಕಿಸಿವೆ.
ಪ್ರಸ್ತುತ ಪುಣೆಯ ವಡ್ಗಾಂವ್ ನ್ಯಾಯಾಲಯವು ಇಬ್ಬರೂ ಆರೋಪಿಗಳನ್ನು ಜೂನ್ 29 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಿದೆ. ಪೊಲೀಸರು ಇಬ್ಬರನ್ನೂ ವಿಚಾರಣೆ ಮಾಡುತ್ತಿದ್ದಾರೆ. ಇನ್ನೂ ಹಲವು ಸ್ಫೋಟಕ ಮಾಹಿತಿಗಳು ಬಯಲಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸುತ್ತವೆ. ಈ ಪ್ರಕರಣವು ಪ್ರೀತಿಯ ಹೆಸರಿನಲ್ಲಿ ನಡೆಯುವ ವಂಚನೆ ಮತ್ತು ಕ್ರೌರ್ಯದ ಭಯಾನಕ ಮುಖವನ್ನು ತೋರಿಸುತ್ತಿದೆ. ಕುಟುಂಬದ ಗೌರವ ಉಳಿಸುವ ಹೆಸರಿನಲ್ಲಿ ಒಬ್ಬರ ಜೀವ ತೆಗೆಯುವುದು ಸರಿ ಎಂದು ಯಾರಾದರೂ ಭಾವಿಸುವುದು ಎಷ್ಟು ಅಪಾಯಕಾರಿ ಎಂಬುದನ್ನು ಈ ಘಟನೆ ಎಚ್ಚರಿಸುತ್ತಿದೆ. ಡಿಜಿಟಲ್ ಪುರಾವೆಗಳು, ಸಿಸಿಟಿವಿ ಮತ್ತು ಸೂಕ್ಷ್ಮ ತನಿಖೆಯಿಂದಾಗಿ ಇಂತಹ ಯೋಜಿತ ಕೊಲೆಗಳು ಸುಲಭವಾಗಿ ಬಯಲಾಗುತ್ತಿವೆ ಎಂಬುದು ಈಗ ಸ್ಪಷ್ಟವಾಗಿದೆ. ಕೇತನ್ ಅವರ ಕುಟುಂಬಕ್ಕೆ ನ್ಯಾಯ ಸಿಗುವುದು ಮತ್ತು ಸತ್ಯ ಪೂರ್ಣವಾಗಿ ಬೆಳಕಿಗೆ ಬರುವುದನ್ನು ಎಲ್ಲರೂ ಆಶಿಸುತ್ತಿದ್ದಾರೆ.
Pune,Maharashtra
Jun 24, 2026 12:30 PM IST













