Last Updated:
ಕೇತನ್ ಭಾವಿ ಪತ್ನಿ ಸಿಯಾ, ಪೊಲೀಸ್ ವಿಚಾರಣೆಯ ಸಮಯದಲ್ಲಿ ಹಲವಾರು ಆಘಾತಕಾರಿ ರಹಸ್ಯಗಳನ್ನು ಬಹಿರಂಗಪಡಿಸಿದ್ದಾರೆ. ಕೇತನ್ ತನ್ನ ಮತ್ತು ಚೇತನ್ ಬಗ್ಗೆ ಎಲ್ಲವನ್ನೂ ತಿಳಿದಿದ್ದ ಎಂದು ಆಘಾತಕಾರಿ ವಿಚಾರ ಬಾಯಿಬಿಟ್ಟಿದ್ದಾಳೆ.
ಪುಣೆಯ ಪ್ರಸಿದ್ಧ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಅವರ ಕೊಲೆ ಪ್ರಕರಣ ದಿನೇ ದಿನೇ ಹೊಸ ತಿರುವುಗಳನ್ನು ಪಡೆಯುತ್ತಿದೆ. ಪೊಲೀಸ್ ಕಸ್ಟಡಿಯಲ್ಲಿ (Police Custody) ನಡೆದ ವಿಚಾರಣೆಯಲ್ಲಿ ಆರೋಪಿ ಸಿಯಾ ಗೋಯಲ್ (Siya Goyal) ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ (Chethan Chowdari) ಕೊಲೆಯನ್ನು ಮುಂಚಿತವಾಗಿ ಯೋಜಿಸಿದ್ದ ಬಗ್ಗೆ ಬಹಿರಂಗಪಡಿಸಿದ್ದಾರೆ. ಇದು ಹಠಾತ್ ನಡೆದ ಘಟನೆಯಲ್ಲ, ಬದಲಿಗೆ ಹಲವು ದಿನಗಳಿಂದ ರೂಪಿಸಲ್ಪಟ್ಟ ಸಂಚು ಎಂದು ತನಿಖೆಯಿಂದ ತಿಳಿದುಬಂದಿದೆ.
ಸಿಯಾ ಗೋಯಲ್ ಕೇತನ್ ಅವರೊಂದಿಗೆ ಮದುವೆಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಳು ಎಂಬುದು ತನಿಖೆ ವೇಳೆ ಬಾಯಿಬಿಟ್ಟಿದ್ದಾಳೆ. ಆದರೂ ಆತ ಮದುವೆ ನಿಲ್ಲಿಸಲಿಲ್ಲ ಎಂದು ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾಳೆ.
ಪೊಲೀಸ್ ಕಸ್ಟಡಿಯಲ್ಲಿರುವ ಸಿಯಾ ಮತ್ತು ಚೇತನ್ನನ್ನು ಪೊಲೀಸರು ಎಲ್ಲಾ ಆಯಾಮಗಳಲ್ಲೂ ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ಸಿಯಾ ಕೇತನ್ ಬಗ್ಗೆ ಕೆಲವು ಅಚ್ಚರಿ ಹೇಳಿಕೆಗಳನ್ನು ನೀಡಿದ್ದಾಳೆ. ನಾನು ಮೊದಲೇ ಕೇತನ್ಗೆ ಮದುವೆಯಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೆ ಎಂದು ಸಿಯಾ ಹೇಳಿದ್ದಾಳೆ. ಆದರೆ ಕೇತನ್ ಅವಳ ಮಾತು ಕೇಳಲಿಲ್ಲ. ಕೇತನ್ ಶ್ರೀಮಂತ ಕುಟುಂಬದಿಂದ ಬಂದವನಾದ್ದರಿಂದ ಮದುವೆಯನ್ನು ಮುಂದುವರಿಸಲು ಒತ್ತಾಯಿಸುತ್ತಿದ್ದ ಎಂದು ಹೇಳಿದ್ದಾಳೆ.
ಸಿಯಾ ಮತ್ತು ಚೇತನ್ ನಡುವೆ ಈಗಾಗಲೇ ಪ್ರೀತಿಯಿತ್ತು. ಆದರೆ ಸಿಯಾ ಕುಟುಂಬ ಚೇತನ್ ಅವರ ಆರ್ಥಿಕ ಪರಿಸ್ಥಿತಿ ಅಷ್ಟು ಉತ್ತಮವಾಗಿರದ ಕಾರಣ ಈ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸಿತ್ತು. ಕೇತನ್ನೊಂದಿಗೆ ಮದುವೆಯಾದರೆ ಜೀವನ ಸುರಕ್ಷಿತವಾಗುತ್ತದೆ ಎಂದು ಸಿಯಾ ಕುಟುಂಬ ನಂಬಿತ್ತು ಎಂದು ತಿಳಿದುಬಂದಿದೆ.
ಪೊಲೀಸ್ ತನಿಖೆ ಪ್ರಕಾರ, ಸಿಯಾ ಈ ಕೊಲೆಯ ಮುಖ್ಯ ಆರೋಪಿ. ಆಕೆಯೇ ಚೇತನ್ ನನ್ನು ಪ್ರೇರೇಪಿಸಿ, ಇಡೀ ಯೋಜನೆಯನ್ನು ರೂಪಿಸಿದ್ದಾಳೆ ಎಂದು ತಿಳಿದುಬಂದಿದೆ. ಜೂನ್ 18ರಂದು ಲೋಹ್ಗಢ ಕೋಟೆಯಲ್ಲಿ ಕೊಲೆ ನಡೆದಿದೆ. ಸಿಯಾ ಮತ್ತು ಚೇತನ್ ಮೊದಲೇ ಈ ಕೊಲೆ ಪ್ಲಾನ್ ಮಾಡಿದ್ದರು. ಸಿಯಾ ಕೇತನ್ ಮುಂದೆ ಬಾಗಿದ ಕೂಡಲೇ ಚೇತನ್ಗೆ ಕಂದಕಕ್ಕೆ ತಳ್ಳಲು ಸಜ್ಜಾಗಿದ್ದರು. ಅದೇ ರೀತಿ ಮಾಡಿದರು ಎಂದು ತಿಳಿದುಬಂದಿದೆ.
ಇದಕ್ಕೂ ಮುನ್ನ ಜೂನ್ 14ರಂದು ಮೊದಲ ಪ್ರಯತ್ನ ನಡೆದಿತ್ತು. ಆಗ ಕೇತನ್ ಮರವನ್ನು ಹಿಡಿದು ತನ್ನ ಜೀವ ಉಳಿಸಿಕೊಂಡಿದ್ದ. ಸಿಯಾ ಆಗ “ಹಾವು ಬಂದಿತ್ತು, ರಕ್ಷಿಸಲು ತಳ್ಳಿದೆ” ಎಂದು ಸುಳ್ಳು ಹೇಳಿ ವಿಷಯವನ್ನು ಮುಚ್ಚಿಡಲು ಪ್ರಯತ್ನಿಸಿದ್ದಳು. ತನಿಖೆಯಲ್ಲಿ ಸಿಯಾ ಮತ್ತು ಚೇತನ್ ಕೇತನ್ ಅವರನ್ನು ಕೊಲ್ಲಲು ಮೂರು ಪ್ರತ್ಯೇಕ ಯೋಜನೆಗಳನ್ನು ಮಾಡಿಕೊಂಡಿದ್ದರು ಎಂದು ಬಯಲಾಗಿದೆ. ಮೇ 31ರಂದು ಲೋಹ್ಗಢ ಕೋಟೆಗೆ ಹೋಗಿ ಕಂದಕದ ಬಳಿ “ಸಾವಿನ ಸ್ಥಳ”ವನ್ನು ಗುರುತಿಸಿದ್ದರು. ಜೂನ್ 18ರ ಯೋಜನೆ ಯಶಸ್ವಿಯಾದರೂ, ಮೂರನೇ ಯೋಜನೆ ವಿಫಲವಾದರೆ ರಸ್ತೆ ಅಪಘಾತದ ಮೂಲಕ ಕೊಲ್ಲುವ ಯೋಜನೆಯೂ ಇತ್ತು ಎಂಬುದು ಬಯಲಾಗಿದೆ.
ವಿಚಾರಣೆಯಲ್ಲಿ ಸಿಯಾ ಮತ್ತು ಚೇತನ್ ಇಬ್ಬರೂ ಮದ್ಯಪಾನ ಮತ್ತು ಮಾದಕ ವ್ಯಸನಿಗಳಾಗಿದ್ದರು ಎಂದು ಒಪ್ಪಿಕೊಂಡಿದ್ದಾರೆ. ಸಿಯಾ 12ನೇ ತರಗತಿ ನಂತರ ಶಾಲೆ ಬಿಟ್ಟಿದ್ದಳು. ಆಕೆಯ ಪೋಷಕರು ಅವಳ ಅಭ್ಯಾಸಗಳ ಬಗ್ಗೆ ಚಿಂತಿತರಾಗಿ ಶೀಘ್ರ ಮದುವೆ ಮಾಡುವ ಮೂಲಕ ಜೀವನ ಸ್ಥಿರಗೊಳಿಸಲು ಬಯಸಿದ್ದರು.
ಕೇತನ್ ಸಾವಿನ ನಂತರ ಅವನ ಕುಟುಂಬದವರು ಸಿಯಾ ಮೇಲೆ ಅನುಮಾನ ವ್ಯಕ್ತಪಡಿಸಿದ್ದು, ಸಾಂತ್ವನಕ್ಕೆ ಬಂದ ಸಿಯಾ ನಡವಳಿಕೆ ಅನುಮಾನಾಸ್ಪದವಾಗಿತ್ತು. ಎರಡು ಕುಟುಂಬಗಳ ನಡುವೆ 35 ವರ್ಷಗಳಿಂದ ಆಳವಾದ ಸ್ನೇಹವಿತ್ತು. ಕೇತನ್ ಅಜ್ಜ ರಾಮ್ವಿಲಾಸ್ ಅಗರ್ವಾಲ್ ಅವರು ‘ನಮ್ಮ ಭಾವಿ ಸೊಸೆಯಿಂದ ಇಂತಹ ಸಂಚು ನಡೆಯುತ್ತದೆ ಎಂದು ಎಂದಿಗೂ ಊಹಿಸಿರಲಿಲ್ಲ’ ಎಂದು ದುಃಖ ವ್ಯಕ್ತಪಡಿಸಿದ್ದಾರೆ.
ಕೇತನ್ ತಂದೆ ವಿಷನ್ ಅಗರ್ವಾಲ್ ‘ನಮ್ಮ ಏಕೈಕ ಮಗನನ್ನು ಕಳೆದುಕೊಂಡಿದ್ದೇವೆ. ಅವನು ತಪ್ಪು ಮಾಡಿಲ್ಲ. ಸರ್ಕಾರ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದ್ದಾರೆ. ಪ್ರಸ್ತುತ ಪೊಲೀಸರು ಇಬ್ಬರು ಆರೋಪಿಗಳನ್ನು ನಿರಂತರ ವಿಚಾರಣೆ ನಡೆಸುತ್ತಿದ್ದಾರೆ. ಕೊಲೆಯ ಹಿಂದಿನ ಪಿತೂರಿ, ಇತರ ಸಂಭಾವ್ಯ ಸಂಚುಗಳ ಬಗ್ಗೆ ತನಿಖೆ ಮುಂದುವರಿದಿದೆ. ಈ ಪ್ರಕರಣ ಪ್ರೇಮ, ಹಣ ಮತ್ತು ಕುಟುಂಬ ಒತ್ತಡಗಳ ನಡುವಿನ ಸಂಕೀರ್ಣತೆಯನ್ನು ಬಯಲು ಮಾಡುತ್ತಿದೆ.
Pune,Maharashtra
Jun 25, 2026 11:27 AM IST













