Last Updated:
ಕೇತನ್ ಅಗರ್ವಾಲ್ ಕೊಲೆ ಪ್ರಕರಣದ ಪೊಲೀಸ್ ತನಿಖೆ ಹಲವಾರು ಆಘಾತಕಾರಿ ಸಂಗತಿಗಳನ್ನು ಬಹಿರಂಗಪಡಿಸಿದೆ. ಸಿಯಾ ಗೋಯಲ್ ಮತ್ತು ಚೇತನ್ ಚೌಧರಿ ಕೊಲೆಯನ್ನು ಪಕ್ಕಾ ಪ್ಲಾನ್ ಮಾಡಿ, ಕೋಟೆ ಪರಿಶೀಲನೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಮಹಾರಾಷ್ಟ್ರದ ಪುಣೆಯ (Pune) ಐತಿಹಾಸಿಕ ಲೋಹಗಡ್ ಕೋಟೆ ಈಗ ಭಯಾನಕ ಕೊಲೆ ಪ್ರಕರಣದ (Murder Case) ವಿಚಾರವಾಗಿ ಸುದ್ದಿಯಾಗಿದೆ. ಉದ್ಯಮಿ ವಿಶಾಲ್ ಅಗರವಾಲ್ (Vishal Agarwal) ಅವರ ಪುತ್ರ ಕೇತನ್ ಅಗರವಾಲ್ (ketan Agarwal) ಸಾವು ಆತ್ಮಹತ್ಯೆ ಎಂದು ಆರಂಭದಲ್ಲಿ ವರದಿಯಾದರೂ, ಪೊಲೀಸ್ ತನಿಖೆಯು ಈಗ ಇದನ್ನು ಕೊಲೆಯ ಸಂಚು ಎಂದು ದೃಢಪಡಿಸಿದೆ. ಪೊಲೀಸರ ಪ್ರಕಾರ, ಕೇತನ್ ನನ್ನು ಕೊಲ್ಲಲು ಆತನ ಭಾವಿ ಪತ್ನಿ ಸಿಯಾ ಗೋಯಲ್ ಮತ್ತು ಆಕೆಯ ಪ್ರಿಯಕರ ಚೇತನ್ ಚೌಧರಿ ಒಟ್ಟಾಗಿ ಯೋಜನೆ ರೂಪಿಸಿದ್ದರು ಎಂದು ತಿಳಿದುಬಂದಿದೆ.
ಚೇತನ್ ಮತ್ತು ಸಿಯಾ ಮೇ ತಿಂಗಳಲ್ಲೇ ಲೋಹಗಡ್ ಕೋಟೆಗೆ ಹಲವು ಬಾರಿ ಭೇಟಿ ನೀಡಿ ಸ್ಥಳವನ್ನು ಪರಿಶೀಲಿಸಿದ್ದರು. ಕೊಲೆಗೆ ಸೂಕ್ತ ಸ್ಥಳವಾಗಿ ಕೋಟೆಯನ್ನು ಆಯ್ಕೆ ಮಾಡಿಕೊಂಡು ಸಂಪೂರ್ಣ ಯೋಜನೆ ಹಾಕಿಕೊಂಡಿದ್ದರು ಎಂದು ತನಿಖೆಯಲ್ಲಿ ಬಯಲಾಗಿದೆ.
ಜೂನ್ 18 ರಂದು ಕೇತನ್, ಸಿಯಾ ಮತ್ತು ಚೇತನ್ ಕೋಟೆಗೆ ಭೇಟಿ ನೀಡಿದ್ದರು. ಆರಂಭದಲ್ಲಿ ಕೇತನ್ ಕಂದಕಕ್ಕೆ ಬಿದ್ದು ಸಾವನ್ನಪ್ಪಿದ್ದಾನೆ ಎಂದು ವರದಿಯಾಯಿತು. ಆದರೆ ಪೊಲೀಸರಿಗೆ ಸಂಶಯ ಬಂದು ತನಿಖೆ ಆರಂಭಿಸಿದ್ದು, ಸಿಯಾ ಮತ್ತು ಚೇತನ್ ಅವರ ಪಾತ್ರ ಬೆಳಕಿಗೆ ಬಂದಿತು. ಇಬ್ಬರೂ ಈ ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ. ಅಲ್ಲದೇ ಇಬ್ಬರು ಸೇರಿ ಪಕ್ಕಾ ಪ್ಲಾನ್ ಮಾಡಿರುವುದು ಬಯಲಾಗಿದೆ.
ತನಿಖೆಯ ವೇಳೆ ಆರೋಪಿಗಳು ತಮ್ಮ ಮೊಬೈಲ್ ಫೋನ್ಗಳಿಂದ ಹಲವು ಚಾಟ್ ಮತ್ತು ಕರೆ ದಾಖಲೆಗಳನ್ನು ಅಳಿಸಿಹಾಕಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಎರಡು ಫೋನ್ಗಳನ್ನು ವಶಪಡಿಸಿಕೊಂಡು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಿದ್ದಾರೆ. ಅಳಿಸಲಾದ ಸಂದೇಶಗಳನ್ನು ಮರುಪಡೆಯುವ ಪ್ರಯತ್ನ ನಡೆಯುತ್ತಿದೆ.
ಅಲ್ಲದೇ ಚೇತನ್ ಚೌಧರಿ ತನ್ನ ಸ್ಥಳವನ್ನು ಮರೆಮಾಡಲು ತಂತ್ರ ಬಳಸಿದ್ದಾನೆ ಎಂದು ತನಿಖೆಯಲ್ಲಿ ಬಯಲಾಗಿದೆ. ತನ್ನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ನೀರಜ್ ಕುಮಾರ್ ಎಂಬುವರೊಂದಿಗೆ ಮೊಬೈಲ್ ಫೋನ್ ವಿನಿಮಯ ಮಾಡಿಕೊಂಡಿದ್ದಾನೆ. ನೀರಜ್ ಅವರ ಫೋನ್ ತನ್ನ ಬಳಿ ಇಟ್ಟುಕೊಂಡು, ಪುಣೆಯಲ್ಲಿರುವಂತೆ ಕಾಣಿಸುವಂತೆ ಮಾಡಿದ್ದಾನೆ. ಆದರೆ ಪೊಲೀಸರ ತಾಂತ್ರಿಕ ತನಿಖೆಯು ಲೋಹಗಡ್ ಪ್ರದೇಶದಲ್ಲಿ ನೀರಜ್ ಫೋನ್ ಸಕ್ರಿಯವಾಗಿದ್ದುದನ್ನು ಪತ್ತೆ ಹಚ್ಚಿದೆ. ಇದು ಚೇತನ್ ಅಲ್ಲಿಯೇ ಇದ್ದನೆಂಬುದನ್ನು ಸಾಬೀತುಪಡಿಸಿದೆ. ಕೋಟೆಗೆ ಟಿಕೆಟ್ ಖರೀದಿಸದೆಯೇ ಚೇತನ್ ಒಳಗೆ ನುಸುಳಿದ್ದಾನೆ ಎಂದೂ ತಿಳಿದುಬಂದಿದೆ.
ಜೂನ್ 18ರ ಸಿಸಿಟಿವಿ ದೃಶ್ಯಗಳು ಚೇತನ್ ಅವರ ಚಲನವಲನಗಳನ್ನು ಅನುಮಾನಾಸ್ಪದವಾಗಿ ತೋರಿಸಿವೆ. ಕೋಟೆ ಹತ್ತಲು ಸುಮಾರು 25 ನಿಮಿಷ ಮತ್ತು ಇಳಿಯಲು 15 ನಿಮಿಷ ಬೇಕಾಗುತ್ತದೆ. ಆದರೆ ಚೇತನ್ ಸುಮಾರು 40-45 ನಿಮಿಷಗಳ ನಂತರ ಹಿಂತಿರುಗಿದ್ದಾನೆ. ಸುಮಾರು 8 ನಿಮಿಷಗಳ ಕಾಲ ನಿರ್ಜನ ಪ್ರದೇಶದಲ್ಲಿ ಕಾಯುತ್ತಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಿಯಾ ಚೇತನ್ ಹಿಂಬಾಲಿಸುತ್ತಿದ್ದಾನೆಯೇ ಎಂದು ಪರಿಶೀಲಿಸುತ್ತಿದ್ದ ದೃಶ್ಯಗಳೂ ದೊರೆತಿವೆ.
ತನಿಖೆಯ ಪ್ರಕಾರ, ಮೇ 31 ರಂದು ಸಿಯಾ ಮತ್ತು ಕೇತನ್ ಕೋಟೆಗೆ ಭೇಟಿ ನೀಡಿದ್ದರು. ಕೇತನ್ ಅಪಾಯಕಾರಿ ಸ್ಥಳದಲ್ಲಿ ಕುಳಿತಿದ್ದಾಗ ಸಿಯಾ ಅವನನ್ನು ತಳ್ಳುವ ಆಲೋಚನೆ ಹೊಂದಿದ್ದಳು ಎಂದು ಆರೋಪವಿದೆ. ಇದಕ್ಕೂ ಮುಂಚೆಯೂ ತಳ್ಳುವ ಪ್ರಯತ್ನ ನಡೆದಿದ್ದು, ಕೇತನ್ ತಪ್ಪಿಸಿಕೊಂಡಿದ್ದನು ಎಂದು ತಿಳಿದುಬಂದಿದೆ. ಪೊಲೀಸರು ಈಗ ಸಿಸಿಟಿವಿ ದೃಶ್ಯಗಳು, ಡಿಜಿಟಲ್ ಪುರಾವೆಗಳು ಮತ್ತು ಸಾಕ್ಷಿಗಳನ್ನು ಒಟ್ಟುಗೂಡಿಸುತ್ತಿದ್ದಾರೆ. ಇಡೀ ಸಂಚು ಹೇಗೆ ರೂಪುಗೊಂಡಿತು, ಯಾರ್ಯಾರು ಭಾಗಿಯಾಗಿದ್ದಾರೆ ಎಂಬುದನ್ನು ಕಂಡುಹಿಡಿಯುವಲ್ಲಿ ತನಿಖೆ ಮುಂದುವರಿದಿದೆ.
Pune,Maharashtra
Jun 27, 2026 11:18 AM IST













