Last Updated:
ಪುಣೆಯ ಕೇತನ್ ಸಾವು ಇಡೀ ದೇಶದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಇದೀಗ ಕೇತನ್ ತಂದೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾಗಿದ್ದು, ಇದಾದ ನಂತರ ಕೇತನ್ ತಂದೆ ಮತ್ತೊಂದು ಅಚ್ಚರಿ ಹೇಳಿಕೆ ನೀಡಿದ್ದಾರೆ. ಈ ಕಾರಣಕ್ಕೆ ನನ್ನ ಮಗನನ್ನು ಕೊಂದಿರಬಹುದು ಎಂದು ಹೇಳಿದ್ದಾರೆ.
ಪುಣೆಯ ಲೋಹಗಡ್ ಕೋಟೆಯಿಂದ ತಳ್ಳಿ ಕೊಲೆ ಮಾಡಲಾಗಿರುವ ಉದ್ಯಮಿ ಕೇತನ್ ಅಗರ್ವಾಲ್ (Ketan Agarwal) ಪ್ರಕರಣ ಇಡೀ ದೇಶಾದ್ಯಂತ ಭಾರೀ ಚರ್ಚೆಯಾಗುತ್ತಿದೆ. ಅತ್ತ ಕೇತನ್ ಕುಟುಂಬಸ್ಥರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಇತ್ತ ಕೇತನ್ ಭಾವಿ ಪತ್ನಿ ಸಿಯಾ (Siya Goyal) ಮತ್ತು ಚೇತನ್ರನ್ನು (Chethan) ಪೊಲೀಸರು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಮಧ್ಯೆ ಕೇತನ್ ಅವರ ತಂದೆ ವಿಶಾಲ್ ಅಗರ್ವಾಲ್ ಮತ್ತೊಂದು ಅಚ್ಚರಿ ಹೇಳಿಕೆ ನೀಡಿದ್ದಾರೆ.
ಕೇತನ್ ತಂದೆ ತಮ್ಮ ಮಗನ ಸಾವಿಗೆ ಇದೇ ಕಾರಣವಾಗಿರಬಹುದು ಎಂದು ಒಂದು ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿಯಾದ ಬಳಿಕೆ ಮಾತನಾಡಿದ ವಿಶಾಲ್ ಅಗರ್ವಾಲ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಕೇತನ್ ಸಾವಿನ ಬಗ್ಗೆ ಮಾತನಾಡುತ್ತಾ ತಂದೆ ವಿಶಾಲ್ ಅಗರ್ವಾಲ್, ತಮ್ಮ ಮಗನ ತಲೆಯ ಮೇಲಿದ್ದ ಸಣ್ಣ ಕೂದಲ ಪ್ಯಾಚ್ (ವಿಗ್ ಪ್ಯಾಚ್) ಅನ್ನು ಕಾರಣವಾಗಿಟ್ಟುಕೊಂಡು ಅವನನ್ನು ಕೊಂದಿರಬಹುದು ಎಂದು ಆರೋಪಿಸಿದ್ದಾರೆ. ಹೌದು, ವಿಶಾಲ್ ಅಗರ್ವಾಲ್ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಭೇಟಿ ಮಾಡಿ ಮಾತನಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದಾರೆ. ‘ನಾವು ಸಿಯಾ ಗೋಯಲ್ ಕುಟುಂಬಕ್ಕೆ ಕೇತನ್ ವಿಗ್ ಬಳಸುತ್ತಿದ್ದಾನೆ ಎಂದು ಈಗಾಗಲೇ ತಿಳಿಸಿದ್ದೆವು. ಇಂತಹ ಕ್ಷುಲ್ಲಕ ವಿಷಯಕ್ಕಾಗಿ ಯಾರನ್ನಾದರೂ ಕೊಲ್ಲುವುದು ಸರಿಯೇ? ಇದು ಯಾರ ಜೀವ ತೆಗೆಯಲು ಸೂಕ್ತ ಕಾರಣವೇ?’ ಎಂದು ಪ್ರಶ್ನಿಸಿದ್ದಾರೆ.
ವಿಶಾಲ್ ಅಗರ್ವಾಲ್ ಅವರು ಮುಖ್ಯಮಂತ್ರಿಯಲ್ಲಿ ಆರೋಪಿಗಳಿಗೆ ಕನಿಷ್ಠ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ‘ಈ ಪ್ರಕರಣವನ್ನು ತ್ವರಿತವಾಗಿ ವಿಚಾರಣೆಗೆ ಒಳಪಡಿಸಿ, ನ್ಯಾಯ ಒದಗಿಸುವಂತೆ’ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ ಎಂದು ಹೇಳಿದ್ದಾರೆ. ಈಗಾಗಲೇ ವಿಶೇಷ ತನಿಖಾ ತಂಡ (ಎಸ್ಐಟಿ) ರಚಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಜೂನ್ 18ರಂದು ಲೋಹಗಡ್ ಕೋಟೆಯಿಂದ ಕೇತನ್ ಅವರನ್ನು ತಳ್ಳಿ ಕೊಲ್ಲಲಾಗಿದೆ ಎಂದು ಪೊಲೀಸರು ಈಗ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಪ್ರಮುಖ ಆರೋಪಿ ಸಿಯಾ ಗೋಯಲ್ಗೆ ಕೇತನ್ ಅವರನ್ನು ಮದುವೆಯಾಗುವ ಇಷ್ಟವಿರಲಿಲ್ಲ. ಆದರೆ ಕುಟುಂಬದ ಒತ್ತಡದಿಂದ ನಿಶ್ಚಿತಾರ್ಥ ನಡೆದಿತ್ತು ಎಂದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ಕೂದಲ ಪ್ಯಾಚ್ (ವಿಗ್) ವಿಷಯವೂ ಕೊಲೆಗೆ ಒಂದು ಕಾರಣವಾಗಿರಬಹುದು ಎಂದು ಕೇತನ್ ಅವರ ಕುಟುಂಬ ಶಂಕಿಸುತ್ತಿದೆ.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಈ ಘಟನೆಯನ್ನು ‘ಅತ್ಯಂತ ಆಘಾತಕಾರಿ ಮತ್ತು ಕಲ್ಪನೆಗೂ ಮೀರಿದ’ ಘಟನೆ ಎಂದು ವಿವರಿಸಿದ್ದಾರೆ. ಇದು ಸಮಾಜಕ್ಕೆ ದೊಡ್ಡ ಪ್ರಶ್ನೆಯನ್ನು ಎತ್ತುತ್ತಿದೆ. ವಿದ್ಯಾವಂತ ಮತ್ತು ಉತ್ತಮ ಕುಟುಂಬದ ಮಕ್ಕಳಲ್ಲಿ ಇಂತಹ ಕ್ರೂರ ಚಿಂತನೆ ಹೇಗೆ ಬೆಳೆಯುತ್ತದೆ? ಇದಕ್ಕೆ ಕಾರಣಗಳೇನು? ಎಂದು ಅವರು ಪ್ರಶ್ನಿಸಿದ್ದಾರೆ. ಈ ಪ್ರಕರಣವನ್ನು ಕೇವಲ ಕ್ರಿಮಿನಲ್ ಪ್ರಕರಣವಾಗಿ ನೋಡಬಾರದು. ಸಾಮಾಜಿಕ ದೃಷ್ಟಿಕೋನದಿಂದಲೂ ನೋಡಬೇಕು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಮಕ್ಕಳಲ್ಲಿ ಸೇಡು ಮತ್ತು ಕ್ರೂರತೆ ಬೆಳೆಯದಂತೆ ಸಮಾಜವು ಸರಿಯಾದ ವಾತಾವರಣವನ್ನು ಸೃಷ್ಟಿಸಬೇಕು ಎಂದು ಮುಖ್ಯಮಂತ್ರಿ ಫಡ್ನವೀಸ್ ಹೇಳಿದ್ದಾರೆ.
Pune,Maharashtra













