ಬೆಳಗಾವಿ: ಕುಂದಾನಗರಿ ಬೆಳಗಾವಿ ಜನರ ಪಾಲಿಗೆ ಮಹಾರಾಷ್ಟ್ರ ಮಳೆ ವರದಾನವಾಗಿ ಮಾರ್ಪಟ್ಟಿದೆ. ಯಾಕಂದ್ರೆ, ಜಿಲ್ಲೆಯಲ್ಲಿ ಮಳೆಯೇ ಆಗದಿದ್ರೂ ಎಲ್ಲೆಡೆ ನೆರೆ ಸೃಷ್ಟಿಯಾಗ್ತಿದೆ. ಮಹಾರಾಷ್ಟ್ರದಲ್ಲಿ ಬಿಟ್ಟೂ ಬಿಡದೆ ಮಳೆಯಾಗ್ತಿರೋದ್ರಿಂದ ಬೆಳಗಾವಿಗೆ ಅಪಾರ ಪ್ರಮಾಣದ ನೀರು ಹರಿ ಬಿಡ್ತಿದ್ದಾರೆ. ಇದರ ಪರಿಣಾಮ ಬೆಳಗಾವಿಯಲ್ಲಿ ಸಾಲು ಸಾಲು ಅವಾಂತರಗಳು ಸೃಷ್ಟಿಯಾಗ್ತಿವೆ.
ಬೆಳಗಾವಿ: ಮಹಾರಾಷ್ಟ್ರ ಮಳೆಯಿಂದಾಗಿ ಬೆಳಗಾವಿಯ ಕೃಷ್ಣಾ, ದೂದಗಂಗಾ, ವೇದಗಂಗಾ ಘಟಪ್ರಭಾ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿವೆ. ಹೀಗಾಗಿ ಹತ್ತಾರು ಹಳ್ಳಿಗಳು ನಡುಗಡ್ಡೆಯಂತಾಗಿದ್ದು, ಚಿಕ್ಕೋಡಿ ತಾಲೂಕಿನ ಕಲ್ಲೋಳ-ಯಡೂರ ಸೇತುವೆ ಮುಳುಗಡೆಯಾಗಿದೆ. ಇದರ ಪರಿಣಾಮ 20 ಹಳ್ಳಿಯ ಜನ ಅಕ್ಷರಶಃ ಪರದಾಡ್ತಿದ್ದಾರೆ.
ಬೆಳಗಾವಿ: ಮಹಾರಾಷ್ಟ್ರ ಮಳೆಯಿಂದಾಗಿ ಬೆಳಗಾವಿ ರೈತರು ಕಣ್ಣೀರಿಡೋದಕ್ಕೆ ಶುರು ಮಾಡಿದ್ದಾರೆ. ನೂರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಉದ್ದು, ತೊಗರಿ, ಮೆಕ್ಕೆಜೋಳ, ಕಬ್ಬು ಬೆಳೆ ಹಾನಿಯಾಗಿದ್ದು, ಸಾಲ ಸೂಲ ಮಾಡಿದವ್ರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಕೂಡಲೆ ಸರ್ವೆ ನಡೆಸಿ ಪರಿಹಾರ ನೀಡಬೇಕು ಅಂತಾ ಆಗ್ರಹಿಸ್ತಿದ್ದಾರೆ.
ಉತ್ತರ ಕನ್ನಡ: ಇತ್ತ ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಇದರ ಪರಿಣಾಮ ಅಘನಾಶಿನಿ ನದಿ ಅಪಾಯದಮಟ್ಟ ಮೀರಿ ಹರಿಯುತ್ತಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಶಿರಸಿ-ಸಿದ್ದಾಪುರ ಗಡಿಭಾಗದ ಸರಕುಳಿ ಸೇತುವೆ ಮುಳುಗೋ ಹಂತಕ್ಕೆ ಬಂದಿದೆ. ಸ್ಥಳೀಯರಲ್ಲಿ ಕ್ಷಣಕ್ಷಣಕ್ಕೂ ಪ್ರವಾಹದ ಆತಂಕ ಜಾಸ್ತಿ ಆಗ್ತಿದ್ದು, ಉಂಚಳ್ಳಿ ಜಲಪಾತಕ್ಕೆ ಜೀವ ಕಳೆ ಬಂದಿದೆ.
ಜೋಯಿಡಾ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನಲ್ಲೂ ಭಾರೀ ಮಳೆಯಾಗ್ತಿದೆ. ಇದರ ಪರಿಣಾಮ ಹತ್ತಾರು ಹಳ್ಳಿಗರು ನಾನಾ ಅವಾಂತರ ಅನುಭವಿಸ್ತಿದ್ದಾರೆ. ಡಿಗ್ಗಿ, ಬಜಾರಕೊಣಂಗ್, ಸಿಸೈ ಸೇರಿದಂತೆ ಹಲವು ಗ್ರಾಮಗಳು ಸಂಪರ್ಕವೇ ಬಂದ್ ಆಗಿದ್ದು, ಊರೂರಲ್ಲೂ ನರಕ ಅನುಭವಿಸ್ತಿದ್ದಾರೆ. ರಸ್ತೆಗಳೆಲ್ಲಾ ಕೊಚ್ಚಿ ಹೋಗಿದ್ದು, ಹಳ್ಳಕೊಳ್ಳಗಳಿಗೆ ಹಾಕಿದ್ದ ಸಂಕಗಳು ದಿಕ್ಕಾಪಾಲಾಗಿವೆ. ಹೀಗಾಗಿ ಕೆಸರು ಗದ್ದೆಯಂತಾದ ರಸ್ತೆಗಳಲ್ಲೇ ಜನ ಓಡಾಡ್ತಿದ್ದು, ಸ್ಥಳೀಯರ ಸಮಸ್ಯೆಯನ್ನ ಕೇಳೋರೇ ಇಲ್ಲದಂತಾಗಿದೆ.
ಕೈಕೊಟ್ಟ ಮಳೆ, ಬೆಳೆ ನಾಶ ಮಾಡಿದ ರೈತ
ಶಹಾಪುರ, ಯಾದಗಿರಿ: ಬೆಳಗಾವಿ ಹಾಗೂ ಉತ್ತರ ಕನ್ನಡದಲ್ಲಿ ಭರ್ಜರಿ ಮಳೆಯಾಗ್ತಿದ್ರೆ, ಉಳಿದೆಲ್ಲಾ ಜಿಲ್ಲೆಗಳಲ್ಲಿ ಹೇಳತೀರದ ಬರಗಾಲ ಆವರಿಸಿದೆ. ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನಲ್ಲಿ ಮಳೆ ಮಂಗಮಾಯವಾಗಿದೆ. ಇದರ ಬೆನ್ನಲ್ಲೇ ರೈತರ ಬೋರ್ವೆಲ್ಗೆ ಸರಿಯಾದ ಕರೆಂಟ್ ಸಹ ಕೊಡ್ತಿಲ್ಲ. ಹೀಗಾಗಿ ರೈತರು ಬೆಳೆದ ಬೆಳೆಗಳೆಲ್ಲಾ ಒಣಗೋದಕ್ಕೆ ಶುರುವಾಗಿದೆ. ಇದ್ರಿಂದ ಬೇಸತ್ತ ರೈತರು ತಾವು ಬೆಳೆದಿದ್ದ ಪಪ್ಪಾಯ ಬೆಳೆಯನ್ನ ತಮ್ಮ ಕೈಯಾರೆ ನಾಶ ಪಡಿಸಿದ್ದಾರೆ.
ಬಾಣಾಪುರ: ಕೊಪ್ಪಳದಲ್ಲೂ ವರುಣದೇವ ಚೆಲ್ಲಾಟವಾಡ್ತಿದ್ದಾನೆ. ಎರಡು ತಿಂಗಳಿನಿಂದ ಮಳೆಯ ಸುಳಿವೇ ಇಲ್ಲದಂತಾಗಿದ್ದು, ಸಾಲ ಸೂಲ ಮಾಡಿ ಬಿತ್ತನೆ ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ದಿಕ್ಕು ಕಾಣದಂತಾದ ಅನ್ನದಾತರು ಕುಕನೂರು ತಾಲೂಕಿನ ಬಾಣಾಪುರದಲ್ಲಿ ಈಶ್ವರ ದೇವರಿಗೆ 101 ಕೊಡ ಜಲಾಭಿಷೇಕ ಮಾಡಿ ಮಳೆಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು.
ಆವರಿಸಿದ ಭೀಕರ ಬರ, ಸಭೆ ನಡೆಸಿದ ಸಿಎಂ
ಚಿತ್ರದುರ್ಗ: ರಾಜ್ಯದಲ್ಲಿ ಭೀಕರ ಬರ ತಾಂಡವವಾಡ್ತಿದೆ. ಹೀಗಾಗಿ ಸಿಎಂ ಡಿ.ಕೆ. ಶಿವಕುಮಾರ್ ಮಹತ್ವದ ಸಭೆ ನಡೆಸಿದ್ದಾರೆ. ಈ ವೇಳೆ ಡಿಸಿಎಂ ಪರಮೇಶ್ವರ್ ಸೇರಿದಂತೆ 9 ಜಿಲ್ಲೆಗಳ ಶಾಸಕರು, ಸಂಸದರು, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು ಭಾಗಿಯಾಗಿದ್ದರು. ಸಭೆ ಬಳಿಕ ವದ್ದಿಕೆರೆ ಗ್ರಾಮಕ್ಕೆ ತೆರಳಿದ ಸಿಎಂ ಡಿ.ಕೆ. ಶಿವಕುಮಾರ್, ರೈತರ ಸಮಸ್ಯೆ ಆಲಿಸಿದ್ದಾರೆ.













