Last Updated:
Dharmendra Pradhan Resigned: ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ವಿದ್ಯಾರ್ಥಿಗಳ ಪ್ರತಿಭಟನೆಗೆ ಕೊನೆಗೂ ಜಯ ಸಿಕ್ಕಿದೆ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ನವದೆಹಲಿ: ನೀಟ್ ಪರೀಕ್ಷೆಯಲ್ಲಿನ (NEET Protest) ಅಕ್ರಮಗಳನ್ನು ಖಂಡಿಸಿ ನಡೆಯುತ್ತಿರುವ ವಿದ್ಯಾರ್ಥಿಗಳ ಭಾರೀ ಪ್ರತಿಭಟನೆಗೆ ಬಹುದೊಡ್ಡ ಗೆಲುವು ಸಿಕ್ಕಿದೆ. ಸಿಜೆಪಿ ನೇತೃತ್ವದಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಮಹತ್ವದ ಬೇಡಿಕೆಗಳಲ್ಲಿ ಒಂದಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ (Dharmendra Pradhan Resigned) ಬೇಡಿಕೆ ಕೊನೆಗೂ ಈಡೇರಿದೆ.
ಹೌದು.. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂಬಂಧ ಎಕ್ಸ್ ಖಾತೆಯಲ್ಲಿ ರಾಜೀನಾಮೆ ಪತ್ರವನ್ನು ಪೋಸ್ಟ್ ಮಾಡಿರುವ ಧರ್ಮೇಂದ್ರ ಪ್ರಧಾನ್ ಅವರು, ಸುದೀರ್ಘವಾದ ಪತ್ರದಲ್ಲಿ ರಾಜೀನಾಮೆಗೆ ಕಾರಣವನ್ನು ತಿಳಿಸಿದ್ದಾರೆ.
ತಮ್ಮ ರಾಜೀನಾಮೆ ಪತ್ರದಲ್ಲಿ ಧರ್ಮೇಂದ್ರ ಪ್ರಧಾನ್ ಅವರು, ‘ಕಳೆದ 10 ದಿನಗಳ ಬೆಳವಣಿಗೆಗಳನ್ನು ನೋಡಿ ನನ್ನ ಮನಸ್ಸು ದುಃಖಿತವಾಗಿದೆ. ಇದು ನನಗೆ ವೈಯಕ್ತಿಕ ಪ್ರತಿಷ್ಠೆಯ ವಿಷಯವಲ್ಲ. ಭಾರತದ ಯುವಶಕ್ತಿಯೇ ಈ ದೇಶದ ನಿಜವಾದ ಶಕ್ತಿ. ದೇಶದ ಯುವಶಕ್ತಿಯನ್ನು ಭ್ರಮೆಯ ಕುಚಕ್ರದಲ್ಲಿ ಸಿಲುಕಿಸುವುದಿಲ್ಲ, ಇದೇ ನನ್ನ ಸಂಕಲ್ಪ’ ಎಂದು ಹೇಳಿದ್ದಾರೆ.
ಮುಂದುವರಿದು, ‘ಜಂತರ್-ಮಂತರ್ ಮತ್ತು ದೇಶದಲ್ಲಿ ಉಂಟಾಗಿರುವ ಪರಿಸ್ಥಿತಿಯಿಂದ ರಾಷ್ಟ್ರವಿರೋಧಿ ಶಕ್ತಿಗಳು ಪ್ರಯೋಜನ ಪಡೆಯದಂತೆ, ದೇಶದ ಏಕತೆ ಕಾಯ್ದುಕೊಳ್ಳಲು, ಭಾರತದ ಯಾವುದೇ ವಿದ್ಯಾರ್ಥಿಯ ಭವಿಷ್ಯ ಕಾನೂನು ಜಟಿಲತೆಗಳಲ್ಲಿ ಸಿಲುಕದಂತೆ, ನಮ್ಮ ಮಕ್ಕಳು ತಮ್ಮ ಸಮಯವನ್ನು ಓದಿಗೆ ಮೀಸಲಿಡಲು ಮತ್ತು ವೃತ್ತಿ ನಿರ್ಮಾಣದ ಮೇಲೆ ಗಮನ ಹರಿಸುವ ಬಗ್ಗೆ ಯೋಚಿಸಿ ನಾನು ನನ್ನ ರಾಜೀನಾಮೆ ಪತ್ರವನ್ನು ಗೌರವಾನ್ವಿತ ಪ್ರಧಾನಮಂತ್ರಿ ಅವರಿಗೆ ಕಳುಹಿಸಿದ್ದೇನೆ’ ಎಂದು ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
‘ನಾನು ಗೌರವಾನ್ವಿತ ಪ್ರಧಾನಮಂತ್ರಿ ಅವರ ಮಾರ್ಗದರ್ಶನ, ನಂಬಿಕೆ ಮತ್ತು ನಿರಂತರ ಸಹಕಾರಕ್ಕಾಗಿ ಹೃತ್ಪೂರ್ವಕ ಕೃತಜ್ಞತೆ ವ್ಯಕ್ತಪಡಿಸುತ್ತೇನೆ’ ಎಂದಿರುವ ಧರ್ಮೇಂದ್ರ ಪ್ರಧಾನ್, ಜೊತೆಗೆ ಮಂತ್ರಿಮಂಡಲದ ನನ್ನ ಎಲ್ಲಾ ಗೌರವಾನ್ವಿತ ಸಹೋದ್ಯೋಗಿಗಳು, ಅಧಿಕಾರಿಗಳು ಮತ್ತು ನೌಕರರು ಹಾಗೂ ನನಗೆ ಕೆಲಸ ಮಾಡುವ ಅವಕಾಶ ಕಲ್ಪಿಸಿದ ಎಲ್ಲಾ ವ್ಯಕ್ತಿಗಳಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ರಾಷ್ಟ್ರಸೇವೆಯೇ ನನ್ನ ಜೀವನದ ಅತ್ಯುನ್ನತ ಆದ್ಯತೆ. ರಾಷ್ಟ್ರಸೇವೆಗಾಗಿ ನಾನು ಸದಾ ಸಮರ್ಪಿತನಾಗಿರುತ್ತೇನೆ’ ಎಂದು ಹೇಳಿದ್ದಾರೆ.
ಈ ಚಳುವಳಿಯ ನಿಜವಾದ ಕಾರಣ 2026ರ NEET-UG ಪರೀಕ್ಷೆ ಹಗರಣ. ಮೇ 3, 2026ರಂದು 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಆದರೆ ಆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು (ಸುಮಾರು 120 ಪ್ರಶ್ನೆಗಳು ವಾಟ್ಸಾಪ್ ಮೂಲಕ ಹರಡಿದ್ದವು). ಇದು ಸಿಕ್ಕಾಪಟ್ಟೆ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆ ಎಚ್ಚೆತ್ತ ಕೇಂದ್ರ ಸರ್ಕಾರ, ಮೇ 12ರಂದು ಪರೀಕ್ಷೆಯನ್ನು ರದ್ದುಪಡಿಸಲು ಸೂಚನೆ ನೀಡಿತು. ನಂತರ ಜೂನ್ 21ರಂದು ಮರು ಪರೀಕ್ಷೆ ನಡೆಯಿತು.
ಈ ಗೊಂದಲ, ಒತ್ತಡ ಮತ್ತು ನಿರಾಶೆಯಿಂದ ಕನಿಷ್ಠ 12 ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾದರು. ಅವರ ಕುಟುಂಬಗಳು ತುಂಬಾ ನೋವು ಅನುಭವಿಸಿದವು. ವಿದ್ಯಾರ್ಥಿಗಳು ವರ್ಷಗಳ ಕಾಲ ಓದಿ, ಹಣ ವ್ಯಯಿಸಿ ಪರೀಕ್ಷೆಗೆ ಸಿದ್ಧರಾಗಿದ್ದರು. ಆದರೆ ಈ ವ್ಯವಸ್ಥೆಯ ವೈಫಲ್ಯದಿಂದ ನಮ್ಮ ಮಕ್ಕಳು ಪ್ರಾಣ ಕಳೆದುಕೊಂಡರು ಎಂದು ನೊಂದುಕೊಂಡರು. ಇದಲ್ಲದೆ, CBSE ಮತ್ತು ಇತರ ಸಾರ್ವಜನಿಕ ಪರೀಕ್ಷೆಗಳಲ್ಲಿ ಪದೇಪದೇ ಸೋರಿಕೆಗಳು ಆಗುತ್ತಿರುವುದು ಜನರ ಆಕ್ರೋಶವನ್ನು ಹೆಚ್ಚಿಸಿದೆ.
New Delhi,Delhi














