Last Updated:
ಕ್ಷುಲ್ಲಕ ಕಾರಣಗಳಿಂದ ಕೆಲುವೊಮ್ಮೆ ದೊಡ್ಡ ದೊಡ್ಡ ದುರಂತಗಳು ಸಂಭವಿಸುತ್ತದೆ. ಇಲ್ಲೂ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ. ಊಟ ಬಡಿಸಲು ವಿಳಂಬ ಮಾಡಿದ್ದಕ್ಕೆ ತನ್ನ ಅತ್ತಿಗೆಯ ತಲೆಯನ್ನೇ ಕಡಿದು ಮರಕ್ಕೆ ನೇಣು ಹಾಕಿರುವ ಘೋರ ಕೃತ್ಯ ನಡೆದಿದೆ.
ಕ್ಷುಲ್ಲಕ ಕಾರಣಗಳಿಂದ ಕೆಲುವೊಮ್ಮೆ ದೊಡ್ಡ ದೊಡ್ಡ ದುರಂತಗಳು ಸಂಭವಿಸುತ್ತದೆ. ಇಲ್ಲೂ ಕೂಡ ಅಂಥದ್ದೇ ಒಂದು ಘಟನೆ ನಡೆದಿದೆ. ಊಟ (Dinner) ಬಡಿಸಲು ವಿಳಂಬ ಮಾಡಿದ್ದಕ್ಕೆ ತನ್ನ ಅತ್ತಿಗೆಯ ತಲೆಯನ್ನೇ ಕಡಿದು ಮರಕ್ಕೆ ನೇಣು ಹಾಕಿರುವ ಘೋರ ಕೃತ್ಯ ನಡೆದಿದೆ. ಬಿಹಾರದ ಜೆಹಾನಾಬಾದ್ ಜಿಲ್ಲೆಯಲ್ಲಿ ಈ ಭೀಕರ ಕೃತ್ಯ ನಡೆದಿದೆ. ಪಾರ್ಸಾ ಬಿಘಾ ಪೊಲೀಸ್ ಠಾಣೆ ವ್ಯಾಪ್ತಿಯ ಇಮಾದ್ಪುರ ಗ್ರಾಮದಲ್ಲಿ 25 ವರ್ಷದ ಮಹಿಳೆಯನ್ನು ಆಕೆಯ ಮೈದುನ ಕೊಡಲಿಯಿಂದ ಕಡಿದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಊಟ ಬಡಿಸುವಲ್ಲಿ ವಿಳಂಬವಾದ್ದಕ್ಕೆ ಜಗಳವಾಗಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ. ತನ್ನ ಅತ್ತಿಗೆಯನ್ನೇ ಕೊಡಲಿಯಿಂದ ಕಡಿದು ತಲೆಯನ್ನು ಆಲದ ಮರಕ್ಕೆ ನೇತು ಹಾಕಲಾಗಿದೆ.
ಮೃತರನ್ನು ಧರ್ಮೇಂದ್ರ ಕುಮಾರ್ ಅವರ ಪತ್ನಿ ಅಂಶು ದೇವಿ ಎಂದು ಗುರುತಿಸಲಾಗಿದೆ. ಆಕೆಯ ಮೈದುನ ಕುನಾಲ್ ಕುಮಾರ್ ಈ ಕೊಲೆಗೆ ಆರೋಪಿ ಎಂದು ಪೊಲೀಸರು ಹೇಳಿದ್ದಾರೆ. ಘಟನೆಯ ನಂತರ ಆರೋಪಿ ಆಕೆಯ ತಲೆಯನ್ನು ಕತ್ತರಿಸಿ ಗ್ರಾಮದ ಹೊರವಲಯದ ಆಲದ ಮರಕ್ಕೆ ನೇತು ಹಾಕಿದ್ದಾನೆ ಎಂದು ತಿಳಿದುಬಂದಿದೆ.
ಗ್ರಾಮಸ್ಥರು ಈ ಭೀಕರ ದೃಶ್ಯವನ್ನು ನೋಡಿ ಆತಂಕಗೊಂಡು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸ್ ತಂಡ ಸ್ಥಳಕ್ಕೆ ಧಾವಿಸಿ ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದೆ. ಆರೋಪಿ ಕುನಾಲ್ ಕುಮಾರ್ ಅವರನ್ನು ಗ್ರಾಮಸ್ಥರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಘಟನೆಯ ದಿನ ಅಂಶು ದೇವಿ ಮನೆಯಲ್ಲಿ ಒಬ್ಬಂಟಿಯಾಗಿದ್ದಳು. ಕುಟುಂಬದ ಇತರ ಸದಸ್ಯರು ಭತ್ತದ ನಾಟಿ ಮಾಡಲು ಹೊಲಕ್ಕೆ ಹೋಗಿದ್ದರು. ಆ ಸಮಯದಲ್ಲಿ ಕುನಾಲ್ ಕುಮಾರ್ ಕೆಲಸದಿಂದ ಹಿಂತಿರುಗಿ ಊಟ ಕೇಳಿದ್ದಾನೆ. ಊಟ ತಡವಾಗಿ ಬಡಿಸಿದ್ದಕ್ಕೆ ಇಬ್ಬರ ನಡುವೆ ಜಗಳವಾಗಿದೆ. ಈ ವಾದದ ವೇಳೆ ಕುನಾಲ್ ಕುಮಾರ್ ಕೋಪದಿಂದ ಅಂಶು ದೇವಿ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದಾರೆ. ಪಾರ್ಸಾ ಬಿಘಾ ಪೊಲೀಸ್ ಠಾಣೆಯ ಎಸ್ಎಚ್ಓ ಸರ್ವ್ ನಾರಾಯಣ್ ಅವರು, ‘ಆಹಾರ ತಡವಾಗಿ ಬಡಿಸಿದ್ದಕ್ಕೆ ಜಗಳವಾಗಿ ಆರೋಪಿ ತನ್ನ ಅತ್ತಿಗೆಯ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ಪ್ರಾಥಮಿಕವಾಗಿ ಕಂಡುಬಂದಿದೆ. ಆದರೆ ನಿಖರ ಕಾರಣವನ್ನು ತಿಳಿಯಲು ಎಲ್ಲಾ ಕೋನಗಳಿಂದ ತನಿಖೆ ನಡೆಸುತ್ತಿದ್ದೇವೆ’ ಎಂದು ಹೇಳಿದ್ದಾರೆ. ಪೊಲೀಸರು ಆರೋಪಿಗೆ ಬಳಸಿದ ಆಯುಧವನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಸ್ಥಳದಲ್ಲಿ ತನಿಖೆ ನಡೆಯುತ್ತಿದೆ.
ಈ ಘಟನೆ ಗ್ರಾಮಸ್ಥರಲ್ಲಿ ಆತಂಕ ಮತ್ತು ಕೋಪವನ್ನು ಹುಟ್ಟುಹಾಕಿದೆ. ಆಹಾರದಂತಹ ಸಣ್ಣ ವಿಷಯಕ್ಕೆ ಇಂತಹ ಭೀಕರ ಕೊಲೆ ನಡೆಯುವುದು ಅತ್ಯಂತ ಖಂಡನೀಯ ಎಂದು ಹೇಳಿದ್ದಾರೆ. ಮಹಿಳೆಯರ ಮೇಲಿನ ಹಲ್ಲೆ ಮತ್ತು ಕುಟುಂಬದಲ್ಲಿ ಉದ್ವಿಗ್ನತೆ ಹೆಚ್ಚಾಗುತ್ತಿರುವುದು ಕಳವಳಕ್ಕೆ ಕಾರಣವಾಗಿದೆ. ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ಈ ಪ್ರಕರಣದಲ್ಲಿ ಇನ್ನಷ್ಟು ವಿವರಗಳು ಬರುವ ಸಾಧ್ಯತೆಯಿದೆ.














