Last Updated:
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಸ್ಥಾನವನ್ನು ಗೆದ್ದಿದ್ದ ನಿತಿನ್ ನಬಿನ್ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಹೆಚ್ಚುವರಿಯಾಗಿ ರಾಜ್ಯಸಭೆಗೆ ಅವರನ್ನ ನಾಮನಿರ್ದೇಶನ ಮಾಡಿದ್ದರಿಂದ ಅವರು ವಿಧಾನಸಭೆಗೆ ರಾಜೀನಾಮೆ ನೀಡಿದ್ದ ಉಪಚುನಾವಣೆ ನಡೆದಿತ್ತು.
ಚುನಾವಣಾ ಚಾಣಕ್ಯ ಮತ್ತು ಜನ ಸುರಾಜ್ (Jan Suraaj Party) ಪಕ್ಷದ ಸಂಸ್ಥಾಪಕ ಪ್ರಶಾಂತ್ ಕಿಶೋರ್ (Prashant Kishor) ಬಿಜೆಪಿಗೆ ಬಿಗ್ ಶಾಕ್ ನೀಡಿದ್ದಾರೆ. ಬಿಜೆಪಿಯ ಭದ್ರಕೋಟೆಯಾದ ಬಿಹಾರದ ಬಂಕಿಪುರ ವಿಧಾನಸಭಾ (Bankipur Bypoll) ಕ್ಷೇತ್ರದ ಉಪಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಮೊದಲ ಸುತ್ತಿನಿಂದಲೇ ಮುನ್ನಡೆ ಕಾಯ್ದುಕೊಂಡ ಅವರು, ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ (Neeraj Kumar Sinha) ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ. ಸುಮಾರು 30 ವರ್ಷಗಳ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ (Nitin Nabin) ಅವರ ಭದ್ರಕೋಟೆ ಎಂದು ಕರೆಯಲ್ಪಡುವ ಈ ಕ್ಷೇತ್ರದಲ್ಲಿ ಬಿಜೆಪಿ ಸೋಲು ಅನುಭವಿಸಿರುವುದು ದೊಡ್ಡ ಆಶ್ಚರ್ಯವಾಗಿದೆ.
ಹಿಂದಿನ ವಿಧಾನಸಭಾ ಚುನಾವಣೆಯಲ್ಲಿ ಈ ಸ್ಥಾನವನ್ನು ಗೆದ್ದಿದ್ದ ನಿತಿನ್ ನಬಿನ್ ನಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದರು. ಹೆಚ್ಚುವರಿಯಾಗಿ ರಾಜ್ಯಸಭೆಗೆ ಅವರನ್ನ ನಾಮನಿರ್ದೇಶನ ಮಾಡಿದ್ದರಿಂದ ಅವರು ವಿಧಾನಸಭೆಗೆ ರಾಜೀನಾಮೆ ನೀಡಿದ್ದರು. ಇದರಿಂದಾಗಿ ಬಂಕಿಪುರದಲ್ಲಿ ಉಪಚುನಾವಣೆ ಅನಿವಾರ್ಯವಾಯಿತು. ಜುಲೈ 30 ರಂದು ಚುನಾವಣೆ ನಡೆದಿತ್ತು. ಇಂದು ಮತ ಎಣಿಕೆಯ ನಂತರ, ಪ್ರಶಾಂತ್ ಕಿಶೋರ್ ಈ ಬಿಜೆಪಿ ಭದ್ರಕೋಟೆಯಲ್ಲಿ ವಿಜಯಶಾಲಿಯಾಗಿದ್ದಾರೆ.
ಬಿಜೆಪಿಯ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಈ ಕ್ಷೇತ್ರದಲ್ಲಿ, ಪ್ರಶಾಂತ್ ಕಿಶೋರ್ ಅವರು ಬಿಜೆಪಿ ಅಭ್ಯರ್ಥಿ ನೀರಜ್ ಕುಮಾರ್ ಅವರನ್ನು 18,953 ಮತಗಳ ಅಂತರದಿಂದ ಸೋಲಿಸಿದ್ದಾರೆ. ಪಿಕೆ ಅವರಿಗೆ ಒಟ್ಟು 63,203 ಮತಗಳು ಲಭಿಸಿದ್ದರೆ, ನೀರಜ್ ಕುಮಾರ್ ಅವರು 44,250 ಮತಗಳನ್ನು ಪಡೆದಿದ್ದಾರೆ. ಮುಖ್ಯ ವಿರೋಧ ಪಕ್ಷವಾದ ಆರ್ಜೆಡಿಯ ಅಭ್ಯರ್ಥಿ ರೇಖಾ ಗುಪ್ತಾ ಈ ಉಪಚುನಾವಣೆಯಲ್ಲಿ 14,085 ಮತಗಳನ್ನು ಪಡೆಯುವ ಮೂಲಕ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. ಪಿಕೆ ಅವರ ಈ ಗೆಲುವಿನೊಂದಿಗೆ ಬಂಕಿಪುರ ಕ್ಷೇತ್ರವು ಬಿಜೆಪಿಯ ಕೈಯಿಂದ ಜಾರಿದೆ, ಕಳೆದ ಮೂರು ದಶಕಗಳಿಂದ ಈ ಕ್ಷೇತ್ರವು ಬಿಜೆಪಿಯ ವಶದಲ್ಲಿತ್ತು. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ನಿತಿನ್ ನವೀನ್ ಇಲ್ಲಿಂದ 51,936 ಮತಗಳ ಅಂತರದಿಂದ ಗೆದ್ದಿದ್ದರು, ಆಗ ಆರ್ಜೆಡಿ ಅಭ್ಯರ್ಥಿ ರೇಖಾ ಗುಪ್ತಾ ಎರಡನೇ ಸ್ಥಾನದಲ್ಲಿದ್ದರು.
ಗೆಲುವಿನ ಬಳಿಕ ಮಾತನಾಡಿದ ಪ್ರಶಾಂತ್ ಕಿಶೋರ್, ಬಂಕಿಪುರ ಕ್ಷೇತ್ರವು ಕಳೆದ ಮೂರು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿತ್ತು. ಈ ಕ್ಷೇತ್ರದಲ್ಲಿ ಜನ್ ಸುರಾಜ್ ಸಾಧಿಸಿರುವ ಗೆಲುವು ಬಿಜೆಪಿಗೆ ಜನಸಾಮಾನ್ಯರು ನೀಡಿದ ಬಲವಾದ ಸಂದೇಶ ಎಂದು ಕಿಶೋರ್ ಬಣ್ಣಿಸಿದ್ದಾರೆ. ಅಪರಾಧ ಹಿನ್ನೆಲೆ ಅಥವಾ ವಿವಾದಾತ್ಮಕ ನಡವಳಿಕೆಯ ಚಾರಿತ್ರ್ಯ ಹೊಂದಿರುವ ನಾಯಕರು ಬಿಹಾರವನ್ನು ಮುನ್ನಡೆಸುವುದನ್ನು ಜನರು ಬಯಸುತ್ತಿಲ್ಲ ಎಂಬುದನ್ನು ಈ ಫಲಿತಾಂಶ ಸಾಬೀತುಪಡಿಸಿದೆ ಎಂದಿದ್ದಾರೆ.
ಚುನಾವಣೆಯಲ್ಲಿ ಗೆಲ್ಲಲು ಜಾತಿ ಮತ್ತು ಧರ್ಮದ ಆಧಾರಿತ ರಾಜಕೀಯ ಮಾಡುವುದನ್ನು ಬಿಡಬೇಕು. ನಾಯಕರು ಸದಾ ಜನರೊಂದಿಗೆ ಸಂಪರ್ಕದಲ್ಲಿರಬೇಕು, ತಳಮಟ್ಟದಲ್ಲಿ ನಿರಂತರವಾಗಿ ಕೆಲಸ ಮಾಡಬೇಕು ಮತ್ತು ಸಾರ್ವಜನಿಕರ ನೈಜ ಸಮಸ್ಯೆಗಳ (ಉದ್ಯೋಗ, ಶಿಕ್ಷಣ) ಮೇಲೆ ಗಮನ ಹರಿಸಬೇಕು ಎಂದು ಭವಿಷ್ಯದ ರಾಜಕಾರಣಿಗಳಿಗೆ ಸಲಹೆ ನೀಡಿದ್ದಾರೆ.
ಮೀಸಾ ಭಾರತಿ ಸೇರಿದಂತೆ ವಿರೋಧ ಪಕ್ಷಗಳ ನಾಯಕರು ಇವರನ್ನು “ಬಿಜೆಪಿಯ ಬಿ-ಟೀಮ್ ಅಥವಾ ಬಿಜೆಪಿ ಅಸಲಿ ಅಭ್ಯರ್ಥಿ” ಎಂದು ಟೀಕಿಸುತ್ತಿರುವುದಕ್ಕೆ ಪರೋಕ್ಷವಾಗಿ ಪ್ರತಿಕ್ರಿಯಿಸಿರುವ ಕಿಶೋರ್, ಸೋತಾಗ ಇಂತಹ ನೆಪಗಳನ್ನು ಹೇಳುವುದು ರಾಜಕೀಯದಲ್ಲಿ ಸಾಮಾನ್ಯ ಎಂದು ತಳ್ಳಿಹಾಕಿದ್ದಾರೆ. ಜನ್ ಸುರಾಜ್ ಪಕ್ಷವು ಬಿಹಾರದ ರಾಜಕೀಯ ವ್ಯವಸ್ಥೆಯನ್ನು ಬದಲಾಯಿಸಲು ಮತ್ತು ಜನರಿಗೆ ಮೂರನೇ ಪರ್ಯಾಯ ಶಕ್ತಿಯನ್ನು ನೀಡಲು ಪ್ರಾಮಾಣಿಕವಾಗಿ ಶ್ರಮಿಸುತ್ತಿದೆ ಎಂದು ಅವರು ಪುನರುಚ್ಚರಿಸಿದ್ದಾರೆ.
ಇನ್ನು ಗುಜರಾತ್ನ ಮಂಜಲ್ಪುರ ವಿಧಾನಸಭಾ ಸ್ಥಾನ ಮತ್ತು ಮಧ್ಯಪ್ರದೇಶದ ದಾಟಿಯಾ ಸ್ಥಾನಕ್ಕೂ ಉಪಚುನಾವಣೆಗಳು ನಡೆದವು. ಬಿಜೆಪಿ ಅಭ್ಯರ್ಥಿ ಸತೀಶ್ ಪಟೇಲ್ ಮಂಜಲ್ಪುರ ಉಪಚುನಾವಣೆಯಲ್ಲಿ ಜಯಗಳಿಸಿದರು. ಅವರು ಕಾಂಗ್ರೆಸ್ ಅಭ್ಯರ್ಥಿ ಬಿಕಾಭಾಯ್ ರಬಾರಿ ವಿರುದ್ಧ 30,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿ ಶಾಸಕ ಯೋಗೇಶ್ ಪಟೇಲ್ ಅವರ ಹಠಾತ್ ನಿಧನದ ನಂತರ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಿತು.
ಕಾಂಗ್ರೆಸ್ ಪಕ್ಷವು ದಾಟಿಯಾ ವಿಧಾನಸಭಾ ಸ್ಥಾನವನ್ನು ಮರಳಿ ಪಡೆದುಕೊಂಡಿತು. ಕೈ ಅಭ್ಯರ್ಥಿ ಘನಶ್ಯಾಮ್ ಸಿಂಗ್ ವಿಜಯಶಾಲಿಯಾದರು. ಅವರು ತಮ್ಮ ಪ್ರತಿಸ್ಪರ್ಧಿ ಬಿಜೆಪಿ ಅಭ್ಯರ್ಥಿ ಅಶುತೋಷ್ ತಿವಾರಿ ಅವರನ್ನು 6,016 ಮತಗಳ ಅಂತರದಿಂದ ಸೋಲಿಸಿದರು. ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಏಪ್ರಿಲ್ನಲ್ಲಿ ದೆಹಲಿ ನ್ಯಾಯಾಲಯವು ಕಾಂಗ್ರೆಸ್ ಶಾಸಕ ರಾಜೇಂದ್ರ ಭಾರ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು, ಇದರಿಂದ ಅವರ ಶಾಸಕಾಂಗ ಸದಸ್ಯತ್ವವನ್ನು ರದ್ದುಗೊಂಡಿದ್ದರಿಂದ ಉಪಚುನಾವಣೆ ನಡೆಸಲಾಗಿತ್ತು.














