Last Updated:
ಬೆಂಗಳೂರು ಹೆಬ್ಬಾಳದಿಂದ ಮೇಕ್ರಿ ಸರ್ಕಲ್ವರೆಗೆ 2.2 ಕಿಮೀ ಟನಲ್ ರೋಡ್ಗೆ ಸಿಎಂ ಡಿಕೆ ಶಿವಕುಮಾರ್ ಶಂಕುಸ್ಥಾಪನೆ, 1086 ಕೋಟಿ ವೆಚ್ಚ, 18 ತಿಂಗಳಲ್ಲಿ ಟೋಲ್ಫ್ರೀ ಪೂರ್ಣಗೊಳಿಸುವ ಗುರಿ
ಬೆಂಗಳೂರು: ರಾಜ್ಯದ ಚೊಚ್ಚಲ ಸುರಂಗ ಮಾರ್ಗ (Tunnel Road) ಎಂಬ ಹೆಗ್ಗಳಿಕೆ ಪಡೆದುಕೊಂಡಿರುವ ಬೆಂಗಳೂರಿನ 3 ಪಥದ ಜೋಡಿ ಸುರಂಗ ಮಾರ್ಗ ಕಾಮಗಾರಿಗೆ ಸಿಎಂ ಡಿಕೆ ಶಿವಕುಮಾರ್ (CM DK Shivakumar), ಇಂದು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಹೆಬ್ಬಾಳ ಜಂಕ್ಷನ್ನಿಂದ ಮೇಖ್ರಿ ವೃತ್ತದವರೆಗೆ (Hebbal to Mekhri Circle) 1,086 ಕೋಟಿ ರೂಪಾಯಿ ವೆಚ್ಚದಲ್ಲಿ 2.2 ಕಿ.ಮೀ ಉದ್ದದ 3 ಪಥದ ಸುರಂಗ ರಸ್ತೆ ಕಾಮಗಾರಿ ನಡೆಯಲಿದೆ.
ಇಂದು ಬೆಳಗ್ಗೆ 9:30ಕ್ಕೆ ಹೆಬ್ಬಾಳದ ವೆಟರ್ನರಿ ವಿಶ್ವವಿದ್ಯಾಲಯದ ಬಳಿ ನಡೆದ ಶಂಕುಸ್ಥಾಪನ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ಭೈರತಿ ಸುರೇಶ್, ಇಂಧನ ಸಚಿವ ಕೆ.ಜೆ.ಜಾರ್ಜ್, ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಭೈರೇಗೌಡ, ಬಿಡಿಎ ಅಧ್ಯಕ್ಷ ಎನ್.ಎ.ಹ್ಯಾರಿಸ್ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಏರ್ಪೋರ್ಟ್, ಯಲಹಂಕ, ಹೆಬ್ಬಾಳ, ಬ್ಯಾಟರಾಯನಪುರ ಹೋಗುವ ಸವಾರರಿಗೆ ಈ ಸುರಂಗ ಮಾರ್ಗದಿಂದ ಅನುಕೂಲ ಆಗಲಿದ್ದು, 1,199 ಕೋಟಿ ವೆಚ್ಚದಲ್ಲಿ ಕೇವಲ 18 ತಿಂಗಳಲ್ಲಿ ಕಾಮಗಾರಿ ಮುಗಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಜಿಬಿಎ ಅಧೀನ ಸಂಸ್ಥೆ ಬಿಸ್ಮೈಲ್ ನೇತೃತ್ವದಲ್ಲಿ ಮಿನಿ ಸುರಂಗ ಮಾರ್ಗ ಕಾಮಗಾರಿ ನಡೆಯಲಿದೆ.
ಈ ವೇಳೆ ಮಾತನಾಡಿದ ಬೆಂಗಳೂರು ಉಸ್ತುವಾರಿ ಸಚಿವ ಕೃಷ್ಣ ಭೈರೇಗೌಡ ಅವರು, ಎಸ್ಟಿ ಮಾಲ್ನಿಂದ ಮೇಕ್ರಿ ಸರ್ಕಲ್ವರೆಗೆ ಟನಲ್ ರೋಡ್ ನಿರ್ಮಾಣ ಆಗಲಿದೆ. ಮುಂದಿನ ಐವತ್ತು ವರ್ಷಗಳ ಗುರಿಯೊಂದಿಗೆ ಈ ಯೋಜನೆ ಮಾಡಲಾಗುತ್ತಿದೆ. ಭವಿಷ್ಯದ ಬೆಂಗಳೂರು ದೂರ ದೃಷ್ಟಿಯ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಸಿಎಂ ಡಿಕೆಶಿಯಿಂದ ಶಂಕುಸ್ಥಾಪನೆ
ಅಲ್ಲದೇ, ಬೆಂಗಳೂರು ಅಂದರೆ ಟ್ರಾಫಿಕ್ ಟ್ರಾಫಿಕ್ ಜಾಮ್ ಅಂತ ಹೇಳಲಾಗುತ್ತಿತ್ತು. ಹೆಬ್ಬಾಳ ಫ್ಲೈ ಓವರ್ನಿಂದ ಸಿಬಿಐ ಸರ್ಕಲ್ವರೆಗೂ ಜಾಮ್ ಆಗ್ತಿತ್ತು. ಅದನ್ನ ತಕ್ಷಣ ಪರಿಹರಿಸಲು ಈ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಎಸ್ಟಿ ಮಾಲ್ನಿಂದ ಚಾಲುಕ್ಯ ಸರ್ಕಲ್, ಹೈಗ್ರೌಂಡ್ಸ್, ಮೇಕ್ರಿ ವರೆಗೆ ಎಲಿವೇಟೆಡ್ ರಸ್ತೆಯನ್ನ ಈ ಹಿಂದೆ ಜಾರ್ಜ್ ಅವರು ರೂಪಿಸಿದ್ದರು. ಹತ್ತು ವರ್ಷಗಳ ಹಿಂದೆಯೇ ಅವರು ರೂಪಿಸಿದ್ದ ಯೋಜನೆ ಕಾರ್ಯರೂಪಕ್ಕೆ ಬಂದಿದ್ದರೆ ಇವತ್ತು ಬೆಂಗಳೂರು ಉತ್ತರ ಟ್ರಾಫಿಕ್ ಮುಕ್ತವಾಗುತ್ತಿತ್ತು. ಆದರೆ ಇದನ್ನ ಕೆಲವರು ಅಂದು ವಿರೋಧ ಮಾಡಿದ್ದರು. ಸುಖಾ ಸುಮ್ಮನೆ ಟೀಕೆ ಮಾಡಲು ವಿರೋಧ ಮಾಡ್ತಾರೆ. ಏನೂ ಕೆಲಸ ಮಾಡಿಲ್ಲ ಅಂದರೆ ಒಳ್ಳೆಯವರು, ಏನೂ ಮಾಡಿಲ್ಲ ಅಂದರೆ ದಿನದಿಂದ ದಿನಕ್ಕೆ ಸಮಸ್ಯೆ ಹೆಚ್ಚಳ ಆಗುತ್ತೆ. ಎಲಿವೇಟೆಡ್ ರಸ್ತೆ ವಿರೋಧ ಮಾಡಿದ ಪರಿಣಾಮ ಇವತ್ತು ಟ್ರಾಫಿಕ್ ಜಾಮ್ ಆಗ್ತಿದೆ. ಏನು ಅರ್ಥ ಮಾಡಿಕೊಳ್ಳದೆ ವಿರೋಧ ಮಾಡೋದು ಅಭಿವೃದ್ಧಿಯ ವಿರೋಧಿಗಳು. ನೀವು ನಾಲ್ಕು ವರ್ಷ ಅಧಿಕಾರದಲ್ಲಿದ್ದಾಗ ಟ್ರಾಫಿಕ್ ಜಾಮ್ ತಪ್ಪಿಸಲು ಏನು ಮಾಡಿದ್ದೀರಿ, ಒಂದು ಇಟ್ಟಿಗೆ ಕಲ್ಲು ಇಡೋಕೆ ಆಗಲಿಲ್ಲ. ಇಂದು ಡಿಕೆಶಿ ನೇತೃತ್ವದಲ್ಲಿ ಬೆಂಗಳೂರಿಗೆ ದೀರ್ಘ ಕಾಲದ ಪರಿಹಾರಕ್ಕೆ ಮುಂದಾಗಿದ್ದೇವೆ ಎಂದು ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ಮಾಡಿದ್ದಾರೆ.
ಬೆಂಗಳೂರಿನ ಹಸಿರು ಅಭಿಯಾನಕ್ಕೆ ಜಾಗತಿಕ ಗಿನ್ನಿಸ್ ಮನ್ನಣೆ!
ಜೂನ್ 27ರಂದು ಕೆಂಪೇಗೌಡ ಜಯಂತಿಯ ಶುಭ ಸಂದರ್ಭದಲ್ಲಿ ನಡೆದ ಬೃಹತ್ ಹಸಿರು ಅಭಿಯಾನದಲ್ಲಿ, “ಅತಿ ಕಡಿಮೆ ಅವಧಿಯಲ್ಲಿ (12 ಗಂಟೆಗಳಲ್ಲಿ) ವಿವಿಧ ಸ್ಥಳಗಳಲ್ಲಿ ತಂಡವೊಂದರಿಂದ ಅತಿ ಹೆಚ್ಚು ಸಸಿಗಳನ್ನು ನೆಟ್ಟ” ಐತಿಹಾಸಿಕ ಸಾಧನೆಗಾಗಿ ಜಾಗತಿಕ ಮನ್ನಣೆಯ ‘ಗಿನ್ನಿಸ್ ವರ್ಲ್ಡ್… pic.twitter.com/pqlDqQe5nV— DK Shivakumar (@DKShivakumar) June 28, 2026
ಸಿಎಂ ಡಿಕೆಶಿ ಮಾತನಾಡಿ, ಈಗಾಗಲೇ ಸಿಲ್ಕ್ಬೋರ್ಡ್ವರೆಗೆ ಹದಿನೇಳು ಕಿಮೀ ಟನಲ್ ಪ್ರಸ್ತಾವನೆಯನ್ನ ಕೊಡ್ತಿದ್ದೇನೆ. ಟ್ರಾಫಿಕ್ ದಿನದಿಂದ ದಿನಕ್ಕೆ ಬೆಳೆಯುತ್ತಿದೆ. ಬೆಂಗಳೂರಿಗೆ ಹೆಬ್ಬಾಳ ಹೆಬ್ಬಾಗಿಲಾಗಿದೆ. ಈ ಸುರಂಗ ಮಾರ್ಗ ಟೋಲ್ಫ್ರೀ ಟನಲ್, ಬಿಡಿಎ ಅವರೇ ತಮ್ಮ ಸಂಪನ್ಮೂಲದಲ್ಲಿ ಕಾಮಗಾರಿ ಮಾಡ್ತಿದ್ದಾರೆ ಎಂದು ತಿಳಿಸಿದರು.
ಸಚಿವ ಕೃಷ್ಣ ಬೈರೇಗೌಡ
ಇನ್ನು, ರಾಜಧಾನಿ ಬೆಂಗಳೂರಿನ ಮೊದಲ ಸುರಂಗ ಮಾರ್ಗ ಯೋಜನೆ ಎನಿಸಿಕೊಂಡಿರುವ ಈ ಮಾರ್ಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ಕೈಗೆತ್ತಿಕೊಳ್ಳಲಾಗುತ್ತಿದೆ. ಈ ಮಹತ್ವಾಕಾಂಕ್ಷಿ ಯೋಜನೆ 18 ತಿಂಗಳಲ್ಲಿ ಪೂರ್ಣಗೊಳ್ಳುವ ಗುರಿ ಹೊಂದಿದೆ. ಹೈದರಾಬಾದ್ ಮೂಲದ ಖಾಸಗಿ ಕಂಪನಿಗೆ ಗುತ್ತಿಗೆ ನೀಡಲಾಗಿದ್ದು, ಈ ಸುರಂಗ ಮಾರ್ಗದ ಒಟ್ಟು ಉದ್ದ 2.228 ಕಿಲೋಮೀಟರ್ ಆಗಿದೆ. 6 ಪಥಗಳನ್ನು ಒಳಗೊಂಡಿರುವ ರಸ್ತೆಯ ಎರಡೂ ಬದಿಗಳಲ್ಲಿ ನಿರ್ವಹಣಾ ಪಥಗಳನ್ನು ನಿರ್ಮಿಸಲಾಗುತ್ತದೆ.
ವಾಹನಗಳು ಗರಿಷ್ಠ 60 ಕಿಲೋಮೀಟರ್ ವೇಗದಲ್ಲಿ ಸಂಚರಿಸಲು ಅವಕಾಶವಿರಲಿದೆ. ಪ್ರತಿ ಪಥದ ಅಗಲ 3.3 ಮೀಟರ್ ಆಗಿದ್ದು, ಕಟ್ ಅಂಡ್ ಕವರ್ ತಂತ್ರಜ್ಞಾನದಲ್ಲಿ ಟನಲ್ ನಿರ್ಮಾಣವಾಗಲಿದೆ. ಓಪನ್ ಕಟ್ ರ್ಯಾಂಪ್ಗಳ ವ್ಯವಸ್ಥೆಯೂ ಇರಲಿದೆ. ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಗಿದ್ದು, ತುರ್ತು ನಿರ್ಗಮನ ವ್ಯವಸ್ಥೆ, ಪ್ರತಿ 100 ಮೀಟರ್ಗೊಮ್ಮೆ ಸಿಸಿಟಿವಿ ಕ್ಯಾಮೆರಾಗಳು ಹಾಗೂ ದಿಕ್ಕು ಸೂಚಿಸುವ ನಾಮಫಲಕಗಳನ್ನು ಅಳವಡಿಸಲಾಗುತ್ತದೆ. (ವರದಿ: ಹೆಬ್ಬಾಕ ತಿಮ್ಮೇಗೌಡ, ಪೊಲಿಟಿಕಲ್ ಬ್ಯೂರೋ, ನ್ಯೂಸ್18 ಕನ್ನಡ)
Bangalore [Bangalore],Bangalore,Karnataka
Jun 28, 2026 12:14 PM IST













