Last Updated:
ಗಾನಕೋಗಿಲೆ ಎಸ್. ಜಾನಕಿ ಅವರಿಗೆ ಮಂಡ್ಯದ ಅಭಿಮಾನಿಯೊಬ್ಬರು ಸಲ್ಲಿಸಿರುವ ಗೌರವ ಈಗ ಎಲ್ಲರ ಮನ ಗೆದ್ದಿದೆ. ಕರಿಘಟ್ಟ ಬೆಟ್ಟದಲ್ಲಿ ಗಿಡ ನೆಟ್ಟು ಹಸಿರಿನ ಮೂಲಕ ಅವರ ನೆನಪನ್ನು ಶಾಶ್ವತಗೊಳಿಸುವ ಈ ವಿಶೇಷ ಅಭಿಯಾನದ ಸಂಪೂರ್ಣ ಕಥೆ ಓದಿ.
ಮಂಡ್ಯ: ಒಬ್ಬ ಮಹಾನ್ ಗಾಯಕಿ (Singer) ನಮ್ಮನ್ನು ಅಗಲಬಹುದು. ಆದರೆ ಅವರ ನೆನಪು ಕೂಡ ಕಣ್ಮರೆಯಾಗುವುದು ಅಸಾಧ್ಯ! ಮಂಡ್ಯದ ಪರಿಸರ ಪ್ರೇಮಿಯೊಬ್ಬರು ಎಸ್. ಜಾನಕಿ ( S Janaki) ಅಮ್ಮನವರಿಗೆ ಸಲ್ಲಿಸುತ್ತಿರುವ ಗೌರವದ ರೀತಿ ಈಗ ಸಾವಿರಾರು ಜನರ ಮನಸ್ಸು ಗೆಲ್ಲುತ್ತಿದೆ. ಅಷ್ಟಕ್ಕೂ ಅವರು ಮಾಡುತ್ತಿರುವ ವಿಶೇಷ ಕೆಲಸ ಏನು ಗೊತ್ತಾ?
ಹಾಡು ಮುಗಿಯಬಹುದು, ಆದರೆ ಆ ಧ್ವನಿ ಜನರ ಮನಸ್ಸಿನಲ್ಲಿ ಎಂದಿಗೂ ಮಾಯವಾಗುವುದಿಲ್ಲ. ಭಾರತೀಯ ಸಂಗೀತ ಲೋಕಕ್ಕೆ ಅನೇಕ ಅಮರ ಗೀತೆಗಳನ್ನು ಕೊಟ್ಟ ಗಾನಕೋಗಿಲೆ ಎಸ್. ಜಾನಕಿ ಅಮ್ಮನವರ ನಿಧನ, ಲಕ್ಷಾಂತರ ಅಭಿಮಾನಿಗಳಿಗೆ ನೋವು ತಂದಿದೆ. ಆದರೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ, ಒಬ್ಬ ಅಭಿಮಾನಿ ಆ ನೋವನ್ನು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಿದ್ದಾರೆ. ಅವರ ಹೆಸರು ರಮೇಶ್.
ಹೂವಿನ ಹಾರವಲ್ಲ, ಪ್ರತಿಮೆಯಲ್ಲ ಬದಲಾಗಿ ಪ್ರಕೃತಿಯ ಮೂಲಕವೇ ಜಾನಕಿ ಅಮ್ಮನವರ ನೆನಪನ್ನು ಶಾಶ್ವತಗೊಳಿಸುವ ಸಂಕಲ್ಪ ಮಾಡಿದ್ದಾರೆ. ಕರಿಘಟ್ಟ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಎಸ್. ಜಾನಕಿ ಅಮ್ಮನವರ ಹೆಸರಿನಲ್ಲಿ ಗಿಡಗಳನ್ನು ನೆಡುವ ಅಭಿಯಾನ ಆರಂಭಿಸಿದ್ದಾರೆ. ಅಮ್ಮನವರ ನೆನಪು ಹಸಿರಿನ ರೂಪದಲ್ಲಿ ಮುಂದಿನ ಪೀಳಿಗೆಗೂ ಉಳಿಯಬೇಕು ಎನ್ನುವುದು ಅವರ ಆಶಯ. ಅವರ ವಯಸ್ಸಿಗೆ ಅನುಗುಣವಾಗಿ ಗಿಡಗಳನ್ನು ನೆಡುವ ಚಿಂತನೆಯನ್ನೂ ವ್ಯಕ್ತಪಡಿಸಿದ್ದಾರೆ. ಈ ಸೇವೆಯ ಮತ್ತೊಂದು ವಿಶೇಷತೆ ಕೇಳಿದರೆ ಇನ್ನಷ್ಟು ಆಶ್ಚರ್ಯವಾಗುತ್ತದೆ.
ಈ ಗಿಡಗಳನ್ನು ಖರೀದಿಸಿ ನೆಟ್ಟು ಬಿಡುವುದಷ್ಟೇ ಅಲ್ಲ… ಸಾರ್ವಜನಿಕರಿಂದ ಒಂದೊಂದು ಗಿಡವನ್ನು ದಾನವಾಗಿ ಪಡೆದು, ಅವುಗಳನ್ನು ಸ್ವತಃ ನೆಡುತ್ತಾರೆ. ಅಲ್ಲಿಗೇ ಅವರ ಜವಾಬ್ದಾರಿ ಮುಗಿಯುವುದಿಲ್ಲ. ಪ್ರತಿದಿನ ಗಿಡಗಳಿಗೆ ನೀರುಣಿಸಿ, ಅವು ಚೆನ್ನಾಗಿ ಬೆಳೆಯುವಂತೆ ಆರೈಕೆ ಮಾಡುತ್ತಾರೆ. ಗಿಡಗಳ ನಿರ್ವಹಣೆಗೆ ಬೇಕಾಗುವ ಸಣ್ಣಪುಟ್ಟ ವೆಚ್ಚಗಳನ್ನೂ ತಮ್ಮ ಸ್ವಂತ ಹಣದಿಂದಲೇ ಭರಿಸುತ್ತಿದ್ದಾರೆ.
ರಮೇಶ್ ಅವರ ಈ ಪರಿಸರ ಸೇವೆ ಈಗ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಕಲಾವಿದರನ್ನು ನೆನಪಿಸಿಕೊಳ್ಳುವುದು ಎಂದರೆ ಕೇವಲ ಶ್ರದ್ಧಾಂಜಲಿ ಸಲ್ಲಿಸುವುದಲ್ಲ… ಸಮಾಜಕ್ಕೂ, ಪ್ರಕೃತಿಗೂ ಉಪಯೋಗವಾಗುವ ಕೆಲಸ ಮಾಡಬಹುದು ಎಂಬ ಸಂದೇಶವನ್ನು ಅವರು ತಮ್ಮ ಕಾರ್ಯದ ಮೂಲಕ ಸಾರುತ್ತಿದ್ದಾರೆ.
ರಮೇಶ್ ಅವರ ವಿಶಿಷ್ಟ ಅಭಿಯಾನ
Mandya,Mandya,Karnataka













