Last Updated:
ಮೈಸೂರಿನ ಎನ್.ಆರ್.ಮೊಹಲ್ಲಾದ ನವೀನ್ ಎಂಬ ಅಭಿಮಾನಿಯೊಬ್ಬರು ಒಂದು ಬಾರಿ ಮನೆಗೇ ಕರೆದಿದ್ದಕ್ಕೆ, ಎಸ್ ಜಾನಕಿ ಅವರು ದೂರದ ಚೆನ್ನೈ ನಿಂದ ಮಗನ ಮನೆಗೇ ಬಂದಂತೆ ಬಂದಿದ್ದರು. ಕಳೆದ ಎರಡೂ ದಶಕಗಳಿಂದ ಬರುತ್ತಿದ್ದರು. ಅದೆಷ್ಟು ಆ ಅಭಿಮಾನಿ ಮನೆಯವರೊಂದಿಗೆ ಹೊಂದಿಕೊಂಡಿದ್ದರೆಂದರೆ, ತಿಂಗಳುಗಟ್ಟಲೆ ಅವರ ಮನೆಯಲ್ಲೇ ನೆಂಟರಂತೆ ಇರುತ್ತಿದ್ದರು.
ಮೈಸೂರು: ಗಾನ ಕೋಗಿಲೆ ಎಸ್. ಜಾನಕಿ (S Janaki) ನಿಧನರಾಗಿದ್ದಾರೆ. ಸುಮಾರು 20ಕ್ಕೂ ಹೆಚ್ಚು ಭಾಷೆಗಳಲ್ಲಿ ತನ್ನದೇ ಛಾಪು ಮೂಡಿಸಿದ್ದ ಕನ್ನಡಿಗರ ಪ್ರೀತಿಯ ಜಾನಕಮ್ಮ ಮೈಸೂರಿನ (Mysuru) ಅಪೊಲೋ ಆಸ್ಪತ್ರೆಯಲ್ಲಿ ವಿಧಿವಶರಾಗಿದ್ದಾರೆ. 48 ಸಾವಿರಕ್ಕೂ ಹೆಚ್ಚು ಹಾಡು ಹಾಡಿದ ಕಂಠ ಇನ್ಮುಂದೆ ಮೌನವಾಗಿದೆ. 60 ವರ್ಷ ಸಂಗೀತ (Music) ಪ್ರಿಯರಿಗೆ ಗಾನ ಸುಧೆ ಉಣಿಸಿದ್ದ ಗಾನ ಕೋಗಿಲೆ ಹಾಡು ನಿಲ್ಲಿಸಿದೆ.
ಮೈಸೂರಿನ ಎನ್.ಆರ್.ಮೊಹಲ್ಲಾದ ನವೀನ್ ಎಂಬ ಅಭಿಮಾನಿಯೊಬ್ಬರು ಒಂದು ಬಾರಿ ಮನೆಗೇ ಕರೆದಿದ್ದಕ್ಕೆ, ಎಸ್ ಜಾನಕಿ ಅವರು ದೂರದ ಚೆನ್ನೈ ನಿಂದ ಮಗನ ಮನೆಗೇ ಬಂದಂತೆ ಬಂದಿದ್ದರು. ಕಳೆದ ಎರಡೂ ದಶಕಗಳಿಂದ ಬರುತ್ತಿದ್ದರು. ಅದೆಷ್ಟು ಆ ಅಭಿಮಾನಿ ಮನೆಯವರೊಂದಿಗೆ ಹೊಂದಿಕೊಂಡಿದ್ದರೆಂದರೆ, ತಿಂಗಳುಗಟ್ಟಲೆ ಅವರ ಮನೆಯಲ್ಲೇ ನೆಂಟರಂತೆ ಇರುತ್ತಿದ್ದರು.
ಆ ಅಭಿಮಾನಿ ನವೀನ್ ಮೈಸೂರಿನ ಬೋಗಾದಿ ರಸ್ತೆಯಲ್ಲಿ ಜಾನಕಮ್ಮನ ಹೆಸರಿನಲ್ಲಿ ಫರ್ನಿಚರ್ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲೇ ಸಮೀಪ ನವೀನ್ ತೋಟ ಇದೆ. ಅಲ್ಲೇ ಈಗ ಜಾನಕಮ್ಮನ ಅಂತ್ಯ ಕ್ರಿಯೆ ನಡೆಯುತ್ತಿದೆ. ಹೀಗೇ ಆ ಮೈಸೂರಿನ ಅಭಿಮಾನಿ ನವೀನ್ ಮನೆಯಲ್ಲಿ ಇತ್ತೀಚಿಗೆ ಜಾನಕಮ್ಮ ಬಂದು ಇರುವಾಗಲೇ ಅವರ ಕಾಲಿಗೆ ಆದ ಗಾಯ ಗ್ಯಾಂಗ್ರಿನ್ ರೂಪ ತಾಳಿ, ಚಿಕಿತ್ಸೆ ಪಡೆಯುತ್ತಿದ್ದರು. ದೇಹಾರೋಗ್ಯದಲ್ಲಿ ಅಸ್ವಸ್ಥತೆ ಕಾಣಿಸಿಕೊಂಡಿದ್ದರಿಂದ ಇಂದು ಬೆಳಗ್ಗೆ ಮೈಸೂರಿನ ಅಪೋಲೋ ಆಸ್ಪತ್ರೆಗೇ ದಾಖಲಿಸಿದರೂ, ಪ್ರಯೋಜನವಾಗದೆ ನಿಧನರಾಗಿದ್ದಾರೆ.
ಎಸ್.ಜಾನಕಿ ಮಗನ ಮಗಳು ಅಪ್ಸರಾ ಅವರು ಎಸ್ ಜಾನಕಿ ಅವರ ಅಂತ್ಯ ಸಂಸ್ಕಾರ ನೆರವೇರಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಎಸ್.ಜಾನಕಿ ಮಗ ಇದೇ ವರ್ಷ ಜನವರಿಯಲ್ಲಿ ಮೃತ ಪಟ್ಟಿದ್ದರು, ಹೀಗಾಗಿ ಮಗನ ಮಗಳಾದ ಅಪ್ಸರಾಳಿಂದ ತೆಲುಗು ಬ್ರಾಹ್ಮಣ ಸಂಪ್ರದಾಯದಂತೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಕುಟುಂಬ ಮೂಲಗಳಿಂದ ನ್ಯೂಸ್ 18ಗೆ ಮಾಹಿತಿ ಲಭ್ಯವಾಗಿದೆ.
ಎಸ್ ಜಾನಕಿ ಅವರು ತಾವು ಹಾಡಿದ ಪ್ರತಿಯೊಂದು ಪ್ರಕಾರದಲ್ಲೂ ಅಳಿಸಲಾಗದ ಛಾಪನ್ನು ಮೂಡಿಸಿದ್ದಾರೆ. ಅವರ ಹಾಡುಗಳು ಭಾಷೆ ಮತ್ತು ಪ್ರಾದೇಶಿಕ ಗಡಿಗಳನ್ನು ಮೀರಿ ಲಕ್ಷಾಂತರ ಜನರನ್ನು ಒಂದುಗೂಡಿಸಿದವು. ಸಂಗೀತ ಲೋಕ ಹಾಗೂ ದೇಶದ ಕಲಾತ್ಮಕ ಪರಂಪರೆಗೆ ತುಂಬಲಾರದ ನಷ್ಟವಾಗಿದೆ. ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ. ಕಲಾವಿದರು ಮತ್ತು ಸಂಗೀತ ಪ್ರೇಮಿಗಳಿಗೆ ಎಂದೆಂದಿಗೂ ಸ್ಫೂರ್ತಿ. ಅವರ ಕುಟುಂಬಸ್ಥರು, ಅಭಿಮಾನಿಗಳು ಮತ್ತು ಇಡೀ ಸಂಗೀತ ಲೋಕಕ್ಕೆ ನನ್ನ ಹೃತ್ಪೂರ್ವಕ ಸಂತಾಪಗಳು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಓಂ ಶಾಂತಿ ಎಂದು ಉಪರಾಷ್ಟ್ರಪತಿ ಸಿ ಪಿ ರಾಧಾಕೃಷ್ಣನ್ ಸಂತಾಪ ಸೂಚಿಸಿದ್ದಾರೆ.
(ವರದಿ: ಆನಂದ್, ನ್ಯೂಸ್18 ಕನ್ನಡ, ಮೈಸೂರು)
Mysore,Karnataka
Jul 11, 2026 10:59 PM IST














